
ಬೆಂಗಳೂರು *ಮೇ.4) ನಾಗರಹೊಳೆ ಅರಣ್ಯ ವ್ಯಾಪ್ತಿಯ ಆದಿವಾಸಿಗಳ ಮೂಲಭೂತಹಕ್ಕುಗಳ ಅನುಷ್ಠಾನಕ್ಕೆ ಅರಣ್ಯ ಇಲಾಖೆ ಅಡ್ಡಿಪಡಿಸುತ್ತಿದ್ದು, ದೌರ್ಜನ್ಯ ನಡೆಸಲಾಗುತ್ತಿದೆ ಎಂದು ನಾಗರಹೊಳೆ ಆದಿವಾಸಿ ಜಮ್ಮ-ಪಾಳೆ ಹಕ್ಕು ಸ್ಥಾಪನಾ ಸಮಿತಿಯ ಅಧ್ಯಕ್ಷ ಜೆ.ಕೆ.ತಿಮ್ಮಾ ಆರೋಪಿಸಿದರು.
ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಿವೃತ್ತ ಅರಣ್ಯ ಅಧಿಕಾರಿಗಳು ಹಾಗೂ ಕೆಲವು ಪರಿಸರ ಸಂರಕ್ಷಣಾವಾದಿಗಳು ಅರಣ್ಯ ಸಂರಕ್ಷಣೆಯ ನೆಪದಲ್ಲಿ ಆದಿವಾಸಿಗಳ ಮೂಲ ಹಕ್ಕುಗಳನ್ನು ಮೊಟಕುಗೊಳಿಸುವ ಕಾರ್ಯ ಮಾಡುತ್ತಿದ್ದಾರೆ. ನಾಗರಹೊಳೆಯ ತುಂಡುಮುಂಡಗೆ, ಕೊಲ್ಲಿ ಗದ್ದೆಹಾಡಿ, ಕಾಂತೂರು ಹಾಡಿ, ಕರಡಿ ಕಲ್ಲು, ಹತ್ತುರು ಕೊಲ್ಲಿ ಹಾಡಿ ಮತ್ತು ಬಾಳೆಕಾವು ಹಾಡಿ ಜನರು ವೈಯಕ್ತಿಕ ಅರಣ್ಯ ಹಕ್ಕು, ಸಾಮುದಾಯಿಕ ಅರಣ್ಯ ಹಕ್ಕು ಮತ್ತು ಸಾಮುದಾಯಿಕ ಅರಣ್ಯ ಸಂಪನ್ಮೂಲ ಹಕ್ಕಿಗಾಗಿ ಅರ್ಜಿ ಸಲ್ಲಿಸಿದ್ದಾರೆ. ಪಂಚಾಯತ್ ರಾಜ್ , ಬುಡಕಟ್ಟು ಕಲ್ಯಾಣ, ಕಂದಾಯ ಇಲಾಖೆಗಳು ಸಮೀಕ್ಷೆ ನಡೆಸಿವೆ. ಆದರೆ, ನಾಲ್ಕು ವರ್ಷವಾದರೂ ಮಾನ್ಯತೆ ನೀಡದೆ ಸತಾಯಿಸಲಾಗುತ್ತಿದೆ ಎಂದು ದೂರಿದರು.
ಇದನ್ನೂ ಓದಿ: ಹತ್ತು ದಿನಗಳಲ್ಲಿ ಐದು ಜಾನುವಾರುಗಳ ಕೊಂದ ಹುಲಿ: ಅರಣ್ಯ ಇಲಾಖೆ ಕಾರ್ಯಾಚರಣೆ
ಅರಣ್ಯ ಅಧಿಕಾರಿಗಳು ಅರಣ್ಯ ಇಲಾಖೆ ಮತ್ತು ನಾಗರಹೊಳೆ ಹುಲಿ ಮೀಸಲು ಪ್ರದೇಶದ ನಿರ್ವಹಣೆ ಹಕ್ಕುಗಳನ್ನು ಗುರುತಿಸುವ ವಿಚಾರದಲ್ಲಿ ಸಹಕರಿಸುತ್ತಿಲ್ಲ. ಇದರಿಂದ ಅರಣ್ಯ ವಾಸಿಗಳ ಮೂಲ ಹಕ್ಕುಗಳ ಉಲ್ಲಂಘನೆ ಆಗುತ್ತಿದೆ ಎಂದು ಆರೋಪಿಸಿದರು.
ಬಲವಂತವಾಗಿ ಒಕ್ಕಲೆಬ್ಬಿಸಿದವರಿಗೆ ಪುನರ್ವಸತಿ ಹೆಸರಿನಲ್ಲಿ, ಅರಣ್ಯ ಹಕ್ಕು ಕಾಯ್ದೆ 2006ರ ಅಡಿ ಮೂಲ ವಸತಿ ಸ್ಥಾನದ ಎಲ್ಲ ಹಕ್ಕು ನೀಡಬೇಕು. ನಿವೃತ್ತ ಅರಣ್ಯಾಧಿಕಾರಿಗಳು ಆದಿವಾಸಿಗಳ ಅರಣ್ಯ ಮೂಲಭೂತ ಹಕ್ಕಿಗೆ ಧಕ್ಕೆ ತರದಂತೆ ಸರ್ಕಾರ ಕ್ರಮ ವಹಿಸಬೇಕು ಎಂದು ಅವರು ಆಗ್ರಹಿಸಿದರು.
ಇದನ್ನೂ ಓದಿ: ಬಡವರನ್ನು ಬಗೆದಿದ್ದಾಯ್ತು, ಪ್ರಕೃತಿಯ ಒಡಲನ್ನೂ ಬಗೆದ ಕಾಂಗ್ರೆಸ್ ಸರ್ಕಾರ!
ಸುದ್ದಿಗೋಷ್ಠಿಯಲ್ಲಿ ಸಮಿತಿಯ ಸದಸ್ಯರಾದ ಪಿ.ಆರ್.ಉದಯ್, ಪಿ.ಸಿ.ರಾಮು, ಜೆ.ಎ.ಶಿವು ಇದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ