
ಬೆಂಗಳೂರು (ಅ.21): ಬಿಜೆಪಿ ಸರ್ಕಾರಕ್ಕೆ ರಾಜ್ಯದ ಮೇಲೆ ತುಂಬಾ ಕೋಪ ಇದೆ ಅನಿಸುತ್ತದೆ. ನೈರುತ್ಯ ಮುಂಗಾರಿನಿಂದ ಸಾಕಷ್ಟು ಭಾಗಗಳಲ್ಲಿ ಪ್ರವಾಹ ಹಾನಿ ಉಂಟಾಗಿದ್ದರೂ, ಕೇಂದ್ರದಿಂದ ಸರಿಯಾದ ಪರಿಹಾರ ಕೊಟ್ಟಿಲ್ಲ ಎಂದು ಶಾಸಕ ಪ್ರದೀಪ್ ಈಶ್ವರ್ ಅವರು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.
ನೈರುತ್ಯ ಮುಂಗಾರಿನಿಂದ ಕರ್ನಾಟಕದಲ್ಲಿ ವ್ಯಾಪಕ ಪ್ರವಾಹ ಹಾನಿ ಉಂಟಾಗಿರುವ ನಡುವೆ, ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ ನೀಡಿರುವ ಪರಿಹಾರ ಕಡಿಮೆ ನೀಡಿರುವ ಕುರಿತು ಆಕ್ರೋಶ ವ್ಯಕ್ತಪಡಿಸಿದ ಶಾಸಕ ಪ್ರದೀಪ್ ಈಶ್ವರ್, ರಾಜ್ಯ ಸರ್ಕಾರ ಕೇಂದ್ರದ SDRF ನಿಂದ ಪರಿಹಾರ ನೀಡುವಂತೆ ಕೋರಿದೆ. ಆದರೆ, ಮಹಾರಾಷ್ಟ್ರಕ್ಕೆ 1556 ಕೋಟಿ ರೂಪಾಯಿಗಳನ್ನು ನೀಡಿದ್ದರೆ, ಕರ್ನಾಟಕಕ್ಕೆ ಕೇವಲ 384 ಕೋಟಿಗಳನ್ನು ಮಾತ್ರ ನೀಡಲಾಗಿದೆ. ಇದನ್ನು ದೊಡ್ಡ ಸಾಧನೆ ಎಂಬಂತೆ ಆರ್. ಅಶೋಕ ಅವರು ಟ್ವೀಟ್ ಮಾಡಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ನಾವು ಪರಿಹಾರ ಕೇಳಿದರೆ, ಅಶೋಕ್ ಅವರು ಕಾಂಗ್ರೆಸ್ ಸಂಸದರನ್ನು ಕೇಳಿ ಎಂದು ಹೇಳುತ್ತಾರೆ. ಹಾಗಾದ್ರೆ NDA ಗೆದ್ದಿರುವ 19 ಸಂಸದರು ಇಂಡಿಯಾ ಗೇಟ್ನಲ್ಲಿ ಕಾಯೋಕೆ ಇದ್ದಾರೆಯೇ? ಎಂದು ಟೀಕಿಸಿದರು. ನಾವು ಕಾಂಗ್ರೆಸ್ ಪಕ್ಷಕ್ಕಾಗಿ ಪರಿಹಾರ ಕೇಳುತ್ತಿಲ್ಲ, ರಾಜ್ಯಕ್ಕಾಗಿ ಕೇಳುತ್ತೇವೆ ಎಂದರು.
ಉತ್ತರ ಕರ್ನಾಟಕದ ಜನರಿಗೆ ಬಿಜೆಪಿ ಮೋಸ ಮಾಡುತ್ತಿದ್ದಾರೆ. ರಾಜ್ಯಕ್ಕೆ ಬಿಜೆಪಿ ಮೋಸ ಮಾಡಿದೆ. ನಿಮಗೆ ತಾಕತ್ತಿದ್ದರೆ ಕೇಂದ್ರ ಸರ್ಕಾರವನ್ನು ಕೇಳಿ ಪರಿಹಾರ ತಗೊಂಡುಬನ್ನಿ ಎಂದು ಸವಾಲು ಹಾಕಿದ ಪ್ರದೀಪ್ ಈಶ್ವರ್ ಅವರು ಮುಂದುವರಿದು, ಉತ್ತರ ಕರ್ನಾಟಕದಲ್ಲಿ ಪೈರ್ ಬ್ರ್ಯಾಂಡ್ ಗಳಾಗಿರುವ ಇಲಿಗಳು ಪರಿಹಾರಕ್ಕಾಗಿ ಯಾಕೆ ಕೇಂದ್ರವನ್ನು ಕೇಳುತ್ತಿಲ್ಲ? ಕರ್ನಾಟಕಕ್ಕೆ ಆನ್ಯಾಯ ಆಗಿದ್ದರೆ ಅವರಿಗೆ ಕೇಳುವ ಯೋಗ್ಯತೆ ಇಲ್ಲ. ಅಶೋಕ್ ಅವರಿಗೆ ತಾಕತ್ತಿದ್ದರೆ ಕೇಂದ್ರವನ್ನು ಕೇಳಲಿ ಎಂದು ಸವಾಲು ಹಾಕಿದರು.
ಆರೆಸ್ಸೆಸ್ ಕುರಿತು ಕುಮಾರಸ್ವಾಮಿ ನಿಲುವು ಏನು?
ಇದೇ ಸಂದರ್ಭದಲ್ಲಿ, ಪ್ರೀಯಾಂಕ್ ಖರ್ಗೆ ವಿರುದ್ಧ ಈಶ್ವರಪ್ಪ ಅವರ ಹೇಳಿಕೆಯ ವಿಚಾರಕ್ಕೆ ಈಶ್ವರ್ ಪ್ರತಿಕ್ರಿಯಿಸಿ, ಈಶ್ವರಪ್ಪ ಅವರು ಹಿರಿಯರು. ಅವರಿಗೆ ನಾವು ಆ ಪದ ಬಳಸಲ್ಲ. ಆ ಪದದ ಅರ್ಥದಲ್ಲೇ ಬಿಜೆಪಿ ಅವರನ್ನು ಪಕ್ಷದಿಂದ ಹೊರಹಾಕಿದೆ ಎಂದು ತಿರುಗೇಟು ನೀಡಿದರು. ಇದೇ ವೇಳೆ ಕುಮಾರಸ್ವಾಮಿ ಅವರಿಗೆ RSS ಬಗ್ಗೆ ಇರುವ ನಿಲುವು ಕುರಿತು ಪ್ರಶ್ನಿಸಿದ ಶಾಸಕ ಪ್ರದೀಪ್ ಈಶ್ವರ್, ನಿಮ್ಮ ನಿಲುವೇನೂ RSS ಬೈದು ಸಂಪಾದಕೀಯ ಕಾಲಂ ಬರೆದಿದ್ದ ನಿಮ್ಮ ನಿಲುವೇನೂ. RSS ಬಗ್ಗೆ JDS ನ ನಿಲುವೇನೂ ತಿಳಿಸಬೇಕು. JDS ನ S ಅಂದರೆ ಜಾತ್ಯಾತೀತವೋ, ಕೇಸರಿಯೋ ಹೇಳಬೇಕು. S ಅಂದರೆ ಅಧಿಕಾರ ಬೇಕು ಅಂದರೆ ಯಾರ ಜೊತೆಗೆ ಬೇಕಾದರೆ ಹೋಗುವುದೇನು? ಲೇವಡಿ ಮಾಡಿದರು.
ಆರೆಸ್ಸೆಸ್ಗೆ ಪಥಸಂಚಲ ಮಾಡುವ ಅರ್ಜೆಂಟ್ ಏನಿತ್ತು?
ಪಥ ಸಂಚಲನ ಮಾಡೋಕೆ RSS ಅವರಿಗೆ ಅಷ್ಟು ಅರ್ಜೆಂಟ್ ಏನಿತ್ತು? ಎಂದು ಪ್ರಶ್ನಿಸಿದ ಶಾಸಕ ಪ್ರದೀಪ್ ಈಶ್ವರ್, ಜಗದೀಶ್ ಶೆಟ್ಟರ್ ಸಿಎಂ ಆಗಿದ್ದಾಗ ಶಿಕ್ಷಣ ಇಲಾಖೆ ಅನುಮತಿ ಕೊಟ್ಟಿರಲಿಲ್ಲವಾ? ಶಿಕ್ಷಣ ಇಲಾಖೆ ಸಿಎಂ ಅವರ ಅಧೀನದಲ್ಲಿಯೇ ಇರುತ್ತದೆ. ಅವರು ಅಚಾನಕ್ ಸಿಎಂ ಆಗಿದ್ದಕ್ಕೆ ಮರೆತುಹೋಗಿದ್ದಾರೆ ಅನಿಸುತ್ತದೆ. ಇತ್ತೀಚಿಗೆ ನಮ್ಮ ಕಡೆಗೆ ಬಂದು MLC ಆದ ನಂತರ ಮತ್ತೆ ಬಿಜೆಪಿಗೆ ಹೋದರು. RSS ಭಾಷಣಕ್ಕೆ ಬಡ ಮಕ್ಕಳು ಬಲಿಯಾಗುತ್ತಿದ್ದಾರೆ. ಆದರೆ ಕೇಸ್ ಆದಾಗ ಯಾವ ಬಿಜೆಪಿ ನಾಯಕರು ಜಾಮೀನು ಕೊಡಿಸಲ್ಲ. ಬೆಂಗಳೂರಿಗೆ ಬಂದಾಗ ಬಿಜೆಪಿ ನಾಯಕರು ಅಟ್ಲಿಸ್ಟ್ ಕರೆದು ತಿಂಡಿ ಕೊಡಿಸಲ್ಲ ಎಂದು ವ್ಯಂಗ್ಯವಾಡಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ