
ಬೆಂಗಳೂರು (ಮೇ.28): ರಾಜ್ಯ ಹಿಂದುಳಿದ ವರ್ಗಗಳ ಆಯೋಗ ರಾಜ್ಯ ಸರ್ಕಾರಕ್ಕೆ ಬುಧವಾರ ಸಲ್ಲಿಸಿದ ಜಾತಿ ಗಣತಿ(Caste Census)ಯ ಅಂತಿಮ ವರದಿಯಲ್ಲಿ ಹಿಂದುಳಿದ ವರ್ಗಗಳ ಮೀಸಲಾತಿ ಪ್ರಮಾಣವನ್ನು ಶೇಕಡಾ 32ರಿಂದ 42ಕ್ಕೆ ಹೆಚ್ಚಿಸಿ ಶಿಫಾರಸು ಮಾಡಿದೆ. ಅಲ್ಲದೆ, ಮುಸ್ಲಿಂ ಸಮುದಾಯ(Muslim community) ರಾಜ್ಯದಲ್ಲಿ ಅತಿ ಹೆಚ್ಚು ಅಂದರೆ, 80.14 ಲಕ್ಷ ಜನಸಂಖ್ಯೆ ಹೊಂದಿದೆ. ರಾಜ್ಯದ ಜನಸಂಖ್ಯೆಯಲ್ಲಿ ಶೇ. 14ರಷ್ಟು ಮುಸ್ಲಿಮರಿದ್ದಾರೆ ಎಂದು ವರದಿಯಲ್ಲಿ ಉಲ್ಲೇಖಿಸಿದೆ.
ವರದಿಯು 13 ಅಧ್ಯಾಯ ಒಳಗೊಂಡಿದ್ದು, ರಾಜ್ಯದ ಪ್ರತಿ ಜಾತಿ ಹೊಂದಿರುವ ಜನಸಂಖ್ಯೆ, ಸಾಮಾಜಿಕ, ಆರ್ಥಿಕ, ರಾಜಕೀಯ ಸ್ಥಿತಿ ಸೇರಿದಂತೆ ಸಮಗ್ರ ಮಾಹಿತಿಯನ್ನು ಉಲ್ಲೇಖಿಸಲಾಗಿದೆ. ಈ ವರದಿಯ ಪ್ರಕಾರ, ಮುಸ್ಲಿಂ ಸಮುದಾಯ ರಾಜ್ಯದಲ್ಲಿ ಅತಿ ಹೆಚ್ಚು ಅಂದರೆ ಶೇ. 14ರಷ್ಟಿದ್ದು, ನಂತರದ ಸ್ಥಾನದಲ್ಲಿ ವೀರಶೈವರು- ಲಿಂಗಾಯತರು ಹಾಗೂ ಕುರುಬ ಸಮುದಾಯ ಇದೆ ಎಂದು ತಿಳಿಸಿದೆ.
ಮುಸ್ಲಿಂ ಸಮುದಾಯದ ನಂತರ ವೀರಶೈವ/ಲಿಂಗಾಯತ ಸಮುದಾಯದ ಜನಸಂಖ್ಯೆ 65 ಲಕ್ಷ ಇದ್ದು, ಜನಸಂಖ್ಯೆಯಲ್ಲಿ ಶೇ.11ರಷ್ಟು ಪಾಲು ಹೊಂದಿದೆ. ಒಕ್ಕಲಿಗರು 60 ಲಕ್ಷ ಇದ್ದು, ಒಟ್ಟು ಜನಸಂಖ್ಯೆಯಲ್ಲಿ ಶೇ. 10ರಷ್ಟಿದೆ. ಕುರುಬರು 45 ಲಕ್ಷ ಇದ್ದು, ಜನಸಂಖ್ಯೆಯಲ್ಲಿ ಶೇ.8ರಷ್ಟಿದ್ದಾರೆ ಎಂದು ತಿಳಿಸಲಾಗಿದೆ.
ರಾಜ್ಯದ 6.14 ಕೋಟಿ ಜನರ ಪೈಕಿ 5.86 ಕೋಟಿ ಜನರು ಸಮೀಕ್ಷೆಯಲ್ಲಿ ಭಾಗವಹಿಸಿ ಮಾಹಿತಿ ನೀಡಿದ್ದರು. ಈ ಪೈಕಿ ಮುಸ್ಲಿಂ ಸಮುದಾಯದ ಸಂಖ್ಯೆ ಅತಿ ಹೆಚ್ಚುಇರುವುದು ಗಮನಾರ್ಹವಾಗಿದೆ.
ಕಳೆದ ವರ್ಷ ರಾಜ್ಯಾದ್ಯಂತ ನಡೆಸಿದ ಸಾಮಾಜಿಕ, ಶೈಕ್ಷಣಿಕ ಹಾಗೂ ಆರ್ಥಿಕ ಸಮೀಕ್ಷಾ ವರದಿಯನ್ನು (ಜಾತಿ ಗಣತಿ ವರದಿ) ಆಯೋಗದ ಅಧ್ಯಕ್ಷ ಮಧುಸೂದನ ನಾಯ್ಕ್ ಹಾಗೂ ಸದಸ್ಯರು ಬುಧವಾರ ವಿಧಾನಸೌಧದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸಲ್ಲಿಸಿದರು. ಈ ವೇಳೆ ಹಲವು ಸಚಿವರು, ಆಯೋಗದ ಸದಸ್ಯರು ಉಪಸ್ಥಿತರಿದ್ದರು.
ವರದಿಯಲ್ಲಿ ಹಿಂದುಳಿದ ವರ್ಗಗಳ ಮೀಸಲಾತಿ ಪ್ರಮಾಣವನ್ನು ಶೇಕಡಾ 32ರಿಂದ 42ಕ್ಕೆ ಹೆಚ್ಚಿಸಿ ಶಿಫಾರಸು ಮಾಡಿದೆ. ವರದಿಯು 13 ಅಧ್ಯಾಯ ಒಳಗೊಂಡಿದ್ದು, ರಾಜ್ಯದ ಪ್ರತಿ ಜಾತಿ ಹೊಂದಿರುವ ಜನಸಂಖ್ಯೆ, ಸಾಮಾಜಿಕ, ಆರ್ಥಿಕ, ರಾಜಕೀಯ ಸೇರಿದಂತೆ ಸಮಗ್ರ ಮಾಹಿತಿಯನ್ನು ಉಲ್ಲೇಖಿಸಲಾಗಿದೆ. ಹಲವಾರು ಶಿಫಾರಸುಗಳನ್ನು ಮಾಡಲಾಗಿದೆ.
ಪ್ರಮುಖವಾಗಿ ಪ್ರವರ್ಗ-1ರಲ್ಲಿನ ಜಾತಿಗಳನ್ನು ಎರಡು ಭಾಗ, ಪ್ರವರ್ಗ-2 ಹಾಗೂ ಪ್ರವರ್ಗ-3ರಲ್ಲಿನ ಜಾತಿಗಳನ್ನು ಮೂರು ಭಾಗಗಳಾಗಿ ವಿಂಗಡಿಸಿ ಮೀಸಲಾತಿ ನಿಗದಿ ಪಡಿಸಿದೆ.
ಸರ್ಕಾರ ಹಾಲಿ ಇರುವ ಮೀಸಲಾತಿ ಪ್ರಮಾಣವನ್ನು ಶೇ. 32ಕ್ಕೆ ಸೀಮಿತಗೊಳಿಸಲು ಉದ್ದೇಶಿಸಿದರೆ ಪ್ರವರ್ಗ-1ರ ಎರಡು ಭಾಗಗಳಿಗೆ ತಲಾ ಶೇ.3ರಷ್ಟು, ಪ್ರವರ್ಗ-2ಎಗೆ ಶೇ. 8, ಬಿಗೆ ಶೇ.4 ಹಾಗೂ 2ಸಿಗೆ ಶೇ.5 ರಷ್ಟು ಮೀಸಲಾತಿ ನೀಡಬೇಕು. ಪ್ರವರ್ಗ-3ಗೆ ಶೇ. 3ಬಿಗೆ ಶೇ. 4 ಹಾಗೂ 3ಸಿಗೆ ಶೇ. 2ರಷ್ಟು ಮೀಸಲಾತಿ ನೀಡಲು ಶಿಫಾರಸು ಮಾಡಿದೆ.
ಮೀಸಲಾತಿ ಪ್ರಮಾಣವನ್ನು ಶೇ. 42ಕ್ಕೆ ಹೆಚ್ಚಿಸಲು ನಿರ್ಧರಿಸಿದರೆ ಪ್ರವರ್ಗ 1ಎಗೆ ಶೇ. 4, 1ಬಿಗೆ ಶೇ. 4, 2ಎಗೆ ಶೇ.10, 2ಬಿಗೆ ಶೇ. 6, 2ಸಿಗೆ ಶೇ.6, 3ಎಗೆ ಶೇ.4, 3ಬಿಗೆ ಶೇ.5 ಹಾಗೂ 3ಸಿಗೆ ಶೇ.3ರಷ್ಟು ಮೀಸಲಾತಿ ನೀಡಲು ಆಯೋಗ ಸಲಹೆ ನೀಡಿದೆ ಎಂದು ತಿಳಿದು ಬಂದಿದೆ.
-ಮುಸ್ಲಿಮರು
80.14 ಲಕ್ಷ 14%
ವೀರಶೈವ-ಲಿಂಗಾಯತ
65 ಲಕ್ಷ 11%
ಒಕ್ಕಲಿಗರು
60 ಲಕ್ಷ 10%
ಕುರುಬರು
45 ಲಕ್ಷ 8%
ಸಂತೋಷದಿಂದ ವರದಿ ಸ್ವೀಕಾರ
ಇಂದು ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆಯ ವರದಿಯನ್ನು ಅತ್ಯಂತ ಸಂತೋಷದಿಂದ ಸ್ವೀಕರಿಸಿದ್ದೇನೆ. ಮುಂದಿನ ದಿನಗಳಲ್ಲಿ ಸಾಮಾಜಿಕ ನ್ಯಾಯದ ಅನುಷ್ಠಾನಕ್ಕೆ ಈ ವರದಿಯು ಮಾರ್ಗದರ್ಶಿಯಾಗಲಿ ಎಂದು ಆಶಿಸುತ್ತೇನೆ.
- ಸಿದ್ದರಾಮಯ್ಯ, ಮುಖ್ಯಮಂತ್ರಿ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ