
ಬೆಂಗಳೂರು (ಜ.30): ಮುಸ್ಲಿಂ ಶಾಸಕರು ಸಮುದಾಯದ ಅಭಿವೃದ್ಧಿಗೆ ಯೋಜನೆ ರೂಪಿಸಿದ್ದು, ಮುಂಬರುವ ರಾಜ್ಯ ಬಜೆಟ್ನಲ್ಲಿ ಶಿಕ್ಷಣ ಮತ್ತು ಆರೋಗ್ಯಕ್ಕೆ ಒತ್ತು ನೀಡಿ 4,990 ಕೋಟಿ ರೂ.ಗಳನ್ನು ಮೀಸಲಿಡುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಮನವಿ ಸಲ್ಲಿಸಿದ್ದಾರೆ.
ಕಲಬುರಗಿ ಶಾಸಕಿ ಕನೀಜ್ ಫಾತಿಮಾ, ಶಾಂತಿನಗರ ಶಾಸಕ ಎನ್.ಎ.ಹ್ಯಾರೀಸ್, ಎಂಎಲ್ ಸಿ ಹಾಗೂ ಸಿಎಂ ರಾಜಕೀಯ ಕಾರ್ಯದರ್ಶಿ ನಸೀರ್ ಅಹ್ಮದ್, ಮಾಜಿ ಶಾಸಕ ಫಿರೋಜ್ ಸೇಠ್ ಸೇರಿದಂತೆ ಮುಖಂಡರು ಸಚಿವ ಬಿ.ಝಡ್.ಜಮೀರ್ ಅಹಮದ್ ಖಾನ್ ಮೂಲಕ ಸಿಎಂಗೆ ಮನವಿ ಪತ್ರ ಸಲ್ಲಿಸಿದ್ದಾರೆ.
ಗ್ಯಾರಂಟಿ ಯೋಜನೆಗಳಿಂದ ದಿವಾಳಿಯಾಗಿಲ್ಲ, ಈ ಬಾರಿಯ ಬಜೆಟ್ ಗಾತ್ರ ₹3.80 ಲಕ್ಷ ಕೋಟಿ: ಸಿಎಂ ಸಿದ್ದರಾಮಯ್ಯ
ಸಮುದಾಯಕ್ಕೆ ಶೈಕ್ಷಣಿಕ ಅವಕಾಶಗಳು, ಹೆಚ್ಚಿನ ಪದವಿ ಕಾಲೇಜುಗಳ ಹಂಚಿಕೆ, ವಿದ್ಯಾರ್ಥಿವೇತನ ಮತ್ತು ಆರೋಗ್ಯ ಸೌಲಭ್ಯಗಳನ್ನು ಸಮುದಾಯದ ಮುಖಂಡರು ಸರ್ವಾನುಮತದಿಂದ ಕೇಳಿದ್ದಾರೆ.
ಎಂಎಲ್ಸಿ ನಸೀರ್ ಅಹಮದ್ ಮಾತನಾಡಿ, ಸಮುದಾಯದ ಸರ್ವಾಂಗೀಣ ಅಭಿವೃದ್ಧಿ ಕುರಿತು ಇತ್ತೀಚೆಗೆ ಸಭೆ ನಡೆಸಿ ಮುಖಂಡರು ತೀರ್ಮಾನಿಸಿದ್ದಾರೆ. “ನಾವು 4,990 ಕೋಟಿ ರೂಪಾಯಿಗಳ ಬಜೆಟ್ ಯೋಜನೆಯನ್ನು ರಚಿಸಿದ್ದೇವೆ. ಅತ್ಯುತ್ತಮ ಶೈಕ್ಷಣಿಕ ಅವಕಾಶಗಳನ್ನು ಒದಗಿಸುವ ಮೂಲಕ ಸಮುದಾಯವನ್ನು ಉನ್ನತೀಕರಿಸುವುದರತ್ತ ಮುಖ್ಯವಾಗಿ ಗಮನ ಹರಿಸುತ್ತಿದ್ದೇವೆ. ವಿದ್ಯಾರ್ಥಿ ವೇತನೆಕ್ಕೆ ವ್ಯವಸ್ಥೆ ಮಾಡಲೂ ಸಿಎಂಗೆ ಮನವಿ ಮಾಡಿದ್ದೇವೆ’ ಎಂದು ಹೇಳಿದರು.
ರಾಜ್ಯಾದ್ಯಂತ ಅಲ್ಪಸಂಖ್ಯಾತರು ಹೆಚ್ಚಾಗಿ ವಾಸಿಸುವ ಕೊಳೆಗೇರಿಗಳನ್ನು ಅಭಿವೃದ್ಧಿಪಡಿಸಲು 800 ಕೋಟಿ ರೂಪಾಯಿಗಳ ಮುಖ್ಯಮಂತ್ರಿ ವಿಶೇಷ ಅಭಿವೃದ್ಧಿ ಯೋಜನೆಯನ್ನು ಪುನಶ್ಚೇತನಗೊಳಿಸಬೇಕೆಂದು ಸಮುದಾಯದ ಮುಖಂಡರು ಇದೇ ವೇಳೆ ಒತ್ತಾಯಿಸಿದ್ದಾರೆ.
2013 ರಿಂದ 2018 ರ ನಡುವಿನ ಮೊದಲ ಅಧಿಕಾರಾವಧಿಯಲ್ಲಿ ಸಿಎಂ ಸಿದ್ದರಾಮಯ್ಯ ಅವರು 800 ಕೋಟಿ ರೂ ಮೊತ್ತದ ಮೂಲಭೂತ ಸೌಕರ್ಯಗಳನ್ನು ಒದಗಿಸುವ ಮೂಲಕ ಕೊಳೆಗೇರಿ ಪ್ರದೇಶಗಳಲ್ಲಿ ವಾಸಿಸುವ ಜನರ ಜೀವನದ ಗುಣಮಟ್ಟವನ್ನು ಸುಧಾರಿಸಲು ಸಾಧ್ಯವಾಗಿತ್ತು ಎಂದು ಅಹ್ಮದ್ ಹೇಳಿದ್ದಾರೆ.
ಫೆ.16ರ ಶಿಕ್ಷಕರ ಕ್ಷೇತ್ರಕ್ಕೆ ಚುನಾವಣೆ ದಿನವೇ ರಾಜ್ಯ ಬಜೆಟ್ ಮಂಡನೆ: ಸರ್ಕಾರದ ಮರ್ಮವನ್ನರಿತ ಬಿಜೆಪಿ ನಾಯಕರು!
ಇತ್ತೀಚೆಗಷ್ಟೇ ನಡೆದ ಸಭೆಯಲ್ಲಿ ಮುಸ್ಲಿಂ ವಿದ್ಯಾರ್ಥಿಗಳು ಮತ್ತಿತರ ಸಮಸ್ಯೆಗಳ ಕುರಿತು ಚರ್ಚಿಸಲಾಗಿದೆ ಎಂದು ಶಾಸಕ ಹ್ಯಾರಿಸ್ ತಿಳಿಸಿದರು. ಮೊರಾರ್ಜಿ ದೇಸಾಯಿ ವಸತಿ ಶಾಲೆಗಳ ಅಡಿಯಲ್ಲಿ ಜಿಲ್ಲೆಗಳಲ್ಲಿ ಹೆಚ್ಚಿನ ಕಾಲೇಜುಗಳನ್ನು ಒತ್ತಾಯಿಸಿದ್ದೇವೆ ಎಂದು ಫಿರೋಜ್ ಸೇಠ್ ಹೇಳಿದ್ದಾರೆ. "ಉನ್ನತ ಅಧ್ಯಯನಕ್ಕಾಗಿ ವಿದೇಶಗಳಿಗೆ ಪ್ರಯಾಣಿಸುವ ವಿದ್ಯಾರ್ಥಿಗಳಿಗೆ ನಾವು ಹೆಚ್ಚಿನ ವಿದ್ಯಾರ್ಥಿವೇತನ ಮತ್ತು ಹಣಕಾಸಿನ ನೆರವು ಕೇಳಿದ್ದೇವೆ ಎಂದು ಅವರು ತಿಳಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ