ಬಿಟ್ ಕಾಯಿನ್ ಹಗರಣ ಬೆಳಕಿಗೆ ಬಂದಿದ್ದು ಹೇಗೆ? ಈಗ ಯಾಕೆ ದಾಳಿ ನಡೆಯುತ್ತಿದೆ ಗೊತ್ತಾ?

Published : Apr 21, 2026, 01:24 PM IST
Bengaluru Bitcoin scam ED raid

ಸಾರಾಂಶ

2020ರ ಡ್ರಗ್ಸ್ ಪ್ರಕರಣದಿಂದ ಆರಂಭವಾದ ಬಿಟ್‌ಕಾಯಿನ್ ಹಗರಣವು ಇದೀಗ ಜಾರಿ ನಿರ್ದೇಶನಾಲಯದ (ಇಡಿ) ದಾಳಿಯೊಂದಿಗೆ ಹೊಸ ತಿರುವು ಪಡೆದಿದೆ. ಹ್ಯಾಕರ್ ಶ್ರೀಕಿಯ ಪಾತ್ರ, ಸಿಸಿಬಿ ಮತ್ತು ಎಸ್‌ಐಟಿ ತನಿಖೆಗಳ ನಂತರ, ಇಡಿ ಅಕ್ರಮ ಹಣ ವರ್ಗಾವಣೆ ಆರೋಪದ ಮೇಲೆ ತನಿಖೆ ನಡೆಸುತ್ತಿದ್ದು, ಪ್ರಕರಣದ ದಿಕ್ಕೇ ಬದಲಾಗುವ ಸಾಧ್ಯತೆ ಇದೆ.

ಬೆಂಗಳೂರು: ರಾಜ್ಯ ರಾಜಕೀಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿರುವ ಬಿಟ್‌ಕಾಯಿನ್ ಹಗರಣವು ಇದೀಗ ಮತ್ತೆ ಹೊಸ ತಿರುವು ಪಡೆದಿದ್ದು, ಜಾರಿ ನಿರ್ದೇಶನಾಲಯ (ಇಡಿ) ದಾಳಿಗಳೊಂದಿಗೆ ಪ್ರಕರಣ ಮತ್ತೊಮ್ಮೆ ಬೆಳಕಿಗೆ ಬಂದಿದೆ. ಹಲವು ವರ್ಷಗಳಿಂದ ತನಿಖೆಯಲ್ಲಿದ್ದ ಈ ಪ್ರಕರಣದಲ್ಲಿ ಹೊಸ ಅಂಶಗಳು ಹೊರಬರುತ್ತಿರುವುದರಿಂದ ಕುತೂಹಲ ಹೆಚ್ಚಾಗಿದೆ.

ಹಗರಣ ಬೆಳಕಿಗೆ ಬಂದದ್ದು ಹೇಗೆ?

ಈ ಪ್ರಕರಣದ ಮೂಲ 2020ರಲ್ಲಿ ದಾಖಲಾಗಿದ್ದ ಡ್ರಗ್ಸ್ ಕೇಸ್‌ಗೆ ಸೇರಿದೆ. ಕೆಜಿ ನಗರ ಪೊಲೀಸ್ ಠಾಣೆಯಲ್ಲಿ ಇಂಟರ್‌ನ್ಯಾಷನಲ್ ಪೋಸ್ಟ್ ಆಫೀಸ್ ಮೂಲಕ ವಿದೇಶಗಳಿಂದ ಡ್ರಗ್ಸ್ ತರಲಾಗುತ್ತಿದೆ ಎಂಬ ಮಾಹಿತಿ ಮೇರೆಗೆ ಪ್ರಕರಣ ದಾಖಲಾಗಿತ್ತು. ತನಿಖೆ ವೇಳೆ ಸುಜಯ್, ಹೇಮಂತ್ ಮುದ್ದಪ್ಪ, ಸುನೀಶ್ ಹೆಗ್ಡೆ, ಪ್ರಸಿದ್ಧಿ ಶೆಟ್ಟಿ, ದರ್ಶನ ಲಮಾಣಿ, ಪಂಕಜ ಕೋಠಾರಿ, ಮದನ್, ಆಶೀಶ್ ಹಾಗೂ ಶ್ರೀಕಿ ಸೇರಿದಂತೆ ಹಲವರ ಹೆಸರುಗಳು ಹೊರಬಂದವು.

ವಿಚಾರಣೆ ಮುಂದುವರಿದಂತೆ, ಆರೋಪಿಗಳು ಬಿಟ್‌ಕಾಯಿನ್ ಸೇರಿದಂತೆ ವಿವಿಧ ಕ್ರಿಪ್ಟೋಕರೆನ್ಸಿಗಳನ್ನು ಬಳಸಿ ಡ್ರಗ್ಸ್ ಖರೀದಿ ಮಾಡುತ್ತಿದ್ದರೆಂಬುದು ಬಹಿರಂಗವಾಯಿತು. ಈ ಹಿನ್ನೆಲೆ ಬೆಂಗಳೂರು ಸಿಸಿಬಿ ಪೊಲೀಸರು ಪ್ರಮುಖ ಆರೋಪಿ ಶ್ರೀಕಿಯನ್ನು ಬಂಧಿಸಿ ವಿಚಾರಣೆ ನಡೆಸಿದರು.

ಶ್ರೀಕಿ ಹ್ಯಾಕಿಂಗ್ ಚಟುವಟಿಕೆ ಬಯಲು

ವಿಚಾರಣೆ ವೇಳೆ ಶ್ರೀಕಿ ಒಬ್ಬ ಕುಶಲ ಹ್ಯಾಕರ್ ಎಂಬುದು ಬೆಳಕಿಗೆ ಬಂದಿತು. ಸಿಸಿಬಿ ತನಿಖೆಯಲ್ಲಿ ಇ-ಪ್ರೊಕ್ಯೂರ್ಮೆಂಟ್ ಪೋರ್ಟಲ್, ಗೇಮಿಂಗ್ ಪ್ಲಾಟ್‌ಫಾರ್ಮ್‌ಗಳು, ಸರ್ಕಾರದ ಕಾವೇರಿ ಪೋರ್ಟಲ್ ಸೇರಿದಂತೆ ಹಲವು ಖಾಸಗಿ ಕಂಪನಿಗಳ ಡೇಟಾ ಹ್ಯಾಕ್ ಮಾಡಿರುವುದು ಪತ್ತೆಯಾಯಿತು. ಈ ಬೆಳವಣಿಗೆಯ ಹಿನ್ನೆಲೆಯಲ್ಲಿ ಸಿಐಡಿ ಮತ್ತು ಸಿಸಿಬಿ ಎರಡೂ ಸಂಸ್ಥೆಗಳು ತನಿಖೆ ಮುಂದುವರಿಸಿದವು.

ಕ್ರಿಪ್ಟೋ ವಾಲೆಟ್ ಗೊಂದಲ

ತನಿಖೆ ವೇಳೆ ಸಿಸಿಬಿ ಅಧಿಕಾರಿಗಳು ಶ್ರೀಕಿ ಬಳಿಯಿದ್ದ ಕ್ರಿಪ್ಟೋ ವಾಲೆಟ್‌ನ್ನು ಜಪ್ತಿ ಮಾಡಿದ್ದರು. ಅದರಲ್ಲಿ ಸುಮಾರು 31 ಬಿಟ್‌ಕಾಯಿನ್ ಇದ್ದು, ಒಟ್ಟು ಮೌಲ್ಯ ಸುಮಾರು 9 ರಿಂದ 10 ಕೋಟಿ ರೂಪಾಯಿ ಎಂದು ಅಂದಾಜಿಸಲಾಗಿತ್ತು. ಆದರೆ ಬಳಿಕ ನ್ಯಾಯಾಲಯದ ಪರಿಶೀಲನೆ ವೇಳೆ ಆ ವಾಲೆಟ್‌ನ್ನು ಮತ್ತೊಬ್ಬರು ಬಳಸಿಕೊಂಡು ಹಣ ವರ್ಗಾವಣೆ ಮಾಡಿರುವುದು ಬೆಳಕಿಗೆ ಬಂತು. ಇದರಿಂದ ಸಿಸಿಬಿಗೆ ವಂಚನೆ ನಡೆದಿರುವ ಸಾಧ್ಯತೆ ವ್ಯಕ್ತವಾಯಿತು.

ರಾಜಕೀಯ ಆರೋಪ–ಪ್ರತ್ಯಾರೋಪ

ಈ ಹಂತದಲ್ಲಿ ಕಾಂಗ್ರೆಸ್ ಪಕ್ಷವು ರಾಜ್ಯದಲ್ಲಿ ಬಿಟ್‌ಕಾಯಿನ್ ಹಗರಣ ನಡೆದಿದೆ ಎಂದು ಗಂಭೀರ ಆರೋಪ ಮಾಡಿತು. ಈ ಪ್ರಕರಣದ ತನಿಖೆ ನಡೆಯುತ್ತಿದ್ದ ವೇಳೆ ಸರ್ಕಾರ ಬದಲಾವಣೆಯಾಗಿದ್ದು, ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ವಿಶೇಷ ತನಿಖಾ ತಂಡ (ಎಸ್‌ಐಟಿ) ರಚಿಸಲಾಯಿತು.

ಎಸ್‌ಐಟಿ ತನಿಖೆ ಮತ್ತು ವಿವಾದ

ಡಿಐಜಿ ವಂಶಿ ಕೃಷ್ಣ ನೇತೃತ್ವದಲ್ಲಿ ಎಸ್‌ಐಟಿ ತನಿಖೆ ಆರಂಭವಾಯಿತು. ಈ ವೇಳೆ, ಮೊದಲು ಆರೋಪಿಗಳಾಗಿದ್ದ ಶ್ರೀಕಿ ಹಾಗೂ ಆತನ ಗ್ಯಾಂಗ್‌ನ್ನು ದೂರುದಾರರಂತೆ ಪರಿಗಣಿಸಲಾಗಿದ್ದು, ಹಿಂದಿನ ತನಿಖೆ ನಡೆಸಿದ್ದ ಪೊಲೀಸರನ್ನೇ ಆರೋಪಿಗಳಾಗಿ ನೋಡುವ ರೀತಿಯಲ್ಲಿ ತನಿಖೆ ಸಾಗಿದುದು ವಿವಾದಕ್ಕೆ ಕಾರಣವಾಯಿತು.

ಆದರೆ ಮೂರು ವರ್ಷ ಕಳೆದರೂ ಸಹ ಎಸ್‌ಐಟಿ ಇನ್ನೂ ನ್ಯಾಯಾಲಯಕ್ಕೆ ಚಾರ್ಜ್‌ಶೀಟ್ ಸಲ್ಲಿಸದಿರುವುದು ಪ್ರಶ್ನೆಗೆ ಕಾರಣವಾಗಿದೆ.

ಇಡಿ ದಾಳಿ – ಹೊಸ ತಿರುವು

ಇತ್ತೀಚೆಗೆ ಜಾರಿ ನಿರ್ದೇಶನಾಲಯ (ಇಡಿ) ಈ ಪ್ರಕರಣಕ್ಕೆ ಎಂಟ್ರಿ ನೀಡಿದ್ದು, ಮನಿ ಲಾಂಡರಿಂಗ್ ಆರೋಪದಡಿ ತನಿಖೆ ಆರಂಭಿಸಿದೆ. ನಲಪಾಡ್, ಹಾಕಿಬ್, ಒಮರ್ ಸೇರಿದಂತೆ ಹಲವರ ಮನೆಗಳ ಮೇಲೆ ದಾಳಿ ನಡೆಸಲಾಗಿದೆ.

ಇಡಿ ತನಿಖೆಯಲ್ಲಿ, ಶ್ರೀಕಿಯನ್ನು ಬಳಸಿಕೊಂಡು ಹ್ಯಾಕಿಂಗ್ ಕಾರ್ಯಗಳನ್ನು ನಡೆಸಿ ಅಕ್ರಮ ಹಣ ವರ್ಗಾವಣೆ ಮಾಡಿರುವ ಶಂಕೆ ವ್ಯಕ್ತವಾಗಿದ್ದು, ಈ ಕುರಿತು ಹೆಚ್ಚಿನ ಮಾಹಿತಿ ಸಂಗ್ರಹಿಸಲಾಗುತ್ತಿದೆ.

ಮುಂದಿನ ಹಾದಿ

ಪ್ರಸ್ತುತ, ಎಸ್‌ಐಟಿ ನಡೆಸಿದ್ದ ತನಿಖೆಯ ದಿಕ್ಕಿಗೆ ವಿರುದ್ಧವಾಗಿ ಇಡಿ ತನಿಖೆ ಸಾಗುತ್ತಿರುವುದು ಪ್ರಕರಣಕ್ಕೆ ಮತ್ತಷ್ಟು ತಿರುವು ನೀಡಿದೆ. ಬಿಟ್‌ಕಾಯಿನ್, ಡ್ರಗ್ಸ್, ಹ್ಯಾಕಿಂಗ್ ಮತ್ತು ಮನಿ ಲಾಂಡರಿಂಗ್— ಆಲ್‌ ಇನ್ ಒನ್—ಎಂಬ ರೀತಿಯಲ್ಲಿ ಈ ಪ್ರಕರಣ ಬೆಳೆಯುತ್ತಿರುವುದು ರಾಜ್ಯ ರಾಜಕೀಯ ಮತ್ತು ಕಾನೂನು ವಲಯದಲ್ಲಿ ದೊಡ್ಡ ಚರ್ಚೆಗೆ ಕಾರಣವಾಗಿದೆ.

ಒಟ್ಟಿನಲ್ಲಿ, ಬಿಟ್‌ಕಾಯಿನ್ ಹಗರಣದ ತನಿಖೆ ಇನ್ನೂ ಮುಂದುವರಿಯುತ್ತಿದ್ದು, ಮುಂದಿನ ದಿನಗಳಲ್ಲಿ ಮತ್ತಷ್ಟು ಸ್ಫೋಟಕ ಅಂಶಗಳು ಬಹಿರಂಗವಾಗುವ ಸಾಧ್ಯತೆ ಇದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

SSLC ಹಿಂದಿ ಗ್ರೇಡ್ ವಿವಾದ: ಹೈಕೋರ್ಟ್‌ನಿಂದ ಅಂತಿಮ ತೀರ್ಪು, ಸರ್ಕಾರಕ್ಕೆ ಚಾಟಿ ಬೀಸಿದ ನ್ಯಾಯಪೀಠ
ಮಳೆ-ಬಿಸಿಲಿನಾಟ: ರಾಜ್ಯದ 17 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್! ಕರಾವಳಿ ಜಿಲ್ಲೆಗಳಲ್ಲಿ ಹೀಟ್ ವೇವ್ ಎಚ್ಚರಿಕೆ