
ರಾಮನಗರ[ಫೆ.05]: ಭೂಕಬಳಿಕೆಯ ಆರೋಪದ ಹಿನ್ನೆಲೆಯಲ್ಲಿ ರಾಮನಗರ ಜಿಲ್ಲೆ ಬಿಡದಿ ಸಮೀಪ ಇರುವ ಈಗಲ್ಟನ್ ರೆಸಾರ್ಟ್ಗೆ ವಿಧಾನಸಭಾ ಸಾರ್ವಜನಿಕ ಲೆಕ್ಕಪತ್ರ ಸಮಿತಿ ಮಂಗಳವಾರ ಭೇಟಿ ನೀಡಿ ಪರಿಶೀಲನೆ ನಡೆಸಿತು. ಜಿಲ್ಲಾಧಿಕಾರಿ, ತಹಸೀಲ್ದಾರ್, ಕಂದಾಯ ಅಧಿಕಾರಿಗಳಿಂದ ಮಾಹಿತಿ ಪಡೆದಿದ್ದಾರೆ.
ಸಮಿತಿಯ ಅಧ್ಯಕ್ಷರಾದ ಶಾಸಕ ಎಚ್.ಕೆ.ಪಾಟೀಲ್, ಸಮಿತಿಯ ಸದಸ್ಯರು, ಮಾಜಿ ಸ್ಪೀಕರ್ಗಳಾದ ಕೆ.ಜಿ.ಬೋಪಯ್ಯ ಮತ್ತು ಕೆ.ಆರ್.ರಮೇಶ್ ಕುಮಾರ್, ಶಾಸಕರಾದ ಎ.ಟಿ.ರಾಮಸ್ವಾಮಿ ಮತ್ತು ಟಿ.ಎ.ಶರವಣ ತಂಡದಲ್ಲಿದ್ದರು.
ಸ್ಥಳ ಪರಿಶೀಲನೆ ನಡೆಸಿ ಅಧಿಕಾರಿಗಳಿಂದ ಮಾಹಿತಿ ಪಡೆದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಮಿತಿ ಅಧ್ಯಕ್ಷ ಎಚ್.ಕೆ.ಪಾಟೀಲ್, ಈಗಲ್ಟನ್ ರೆಸಾರ್ಟ್ನ ಒಟ್ಟು ಪ್ರದೇಶ 508 ಎಕರೆ ಇದೆ. ಈ ಪೈಕಿ 208 ಎಕರೆ 33 ಗುಂಟೆ ಭೂಮಿ ಸರ್ಕಾರಕ್ಕೆ ಸೇರಿದೆ. ವ್ಯಾಜ್ಯ ಸುಪ್ರಿಂ ಕೋರ್ಟಿಗೂ ಹೋಗಿತ್ತು. ನ್ಯಾಯಾಲಯದ ಆದೇಶದಂತೆ 78 ಎಕರೆ ಭೂಮಿಗೆ ಮಾರುಕಟ್ಟೆಬೆಲೆ ಕಟ್ಟಿಕೊಡಬೇಕಾಗಿತ್ತು. ಈ ವಿಷಯಕ್ಕೆ ಸಂಬಂಧಿಸಿದಂತೆ ಸಂಪುಟ ಉಪಸಮಿತಿ ರಚನೆಯಾಗಿತ್ತು. ಒತ್ತುವರಿಯಾಗಿರುವ ಭೂಮಿಗೆ .980 ಕೋಟಿ ಮಾರುಕಟ್ಟೆಬೆಲೆ ನಿಗದಿ ಪಡಿಸಿ, ಪಾವತಿ ಮಾಡುವಂತೆ ನಿರ್ಣಯಿಸಲಾಗಿತ್ತು. ನಿಗದಿಪಡಿಸಿರುವ ಬೆಲೆ ಹೆಚ್ಚಾಗಿದೆ ಎಂದು ಈಗಲ್ಟನ್ ರೆಸಾರ್ಟ್ನವರು ಹೈಕೋರ್ಟ್ ಮೆಟ್ಟಿಲೇರಿದ್ದಾರೆ ಎಂದು ಮಾಹಿತಿ ನೀಡಿದರು.
78 ಎಕರೆ ಭೂಮಿಗೆ ಮಾತ್ರ ಕಿಮ್ಮತ್ತು:
ಜಿಲ್ಲಾಧಿಕಾರಿ ಎಂ.ಎಸ್.ಅರ್ಚನಾ ಮಾತನಾಡಿ, ಈಗಲ್ಟನ್ ರೆಸಾರ್ಟ್ ವತಿಯಿಂದ ಒತ್ತುವರಿಯಾಗಿದ್ದ 106 ಎಕರೆ ಭೂಮಿಯ ಪೈಕಿ 28 ಎಕರೆ ಭೂಮಿ ಹಿಂದಕ್ಕೆ ಪಡೆಯಲಾಗಿದೆ. ಉಳಿದ 78 ಎಕರೆ ಭೂಮಿಗೆ ಕಿಮ್ಮತ್ತು ಕಟ್ಟಿಸಿಕೊಳ್ಳಬೇಕಿದೆ ಎಂದು ಜಿಲ್ಲಾಧಿಕಾರಿ ಎಂ.ಎಸ್.ಅರ್ಚನಾ ಮಾಹಿತಿ ನೀಡಿದರು.
ಗೊಂದಲ ಮೂಡಿಸಿದ ಅಧ್ಯಕ್ಷರು, ಡಿಸಿ ಹೇಳಿಕೆ:
ಲೆಕ್ಕ ಪತ್ರ ಸಮಿತಿ ಅಧ್ಯಕ್ಷರು 208 ಎಕರೆ ಭೂಮಿ ಒತ್ತುವರಿಯಾಗಿದೆ ಎಂದು ಹೇಳಿದರೆ, ಜಿಲ್ಲಾಧಿಕಾರಿಗಳು 106 ಎಕರೆ ಒತ್ತುವರಿಯಾಗಿದೆ. ಇದರಲ್ಲಿ 78 ಎಕರೆಗೆ ಕಿಮ್ಮತ್ತು ಕಟ್ಟಿಸಿಕೊಳ್ಳಬೇಕು ಎಂದು ತಿಳಿಸಿದ್ದಾರೆ. ಈ ಇಬ್ಬರ ಹೇಳಿಕೆಯಲ್ಲಿ ವ್ಯತ್ಯಾಸವಿರುವುದು ಸಾಕಷ್ಟುಗೊಂದಲಕ್ಕೆ ಕಾರಣವಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ