
ಬೆಂಗಳೂರು (ಸೆ.15): ರಾಜ್ಯದ ಬಡ ಜನರಿಗೆ ಆಹಾರ ಭದ್ರತೆ ಒದಗಿಸುವ ‘ಅನ್ನಭಾಗ್ಯ’ ಯೋಜನೆಯ ಪಡಿತರ ವಿತರಣೆಯಲ್ಲಿ ಎದುರಾಗುತ್ತಿದ್ದ ದೊಡ್ಡ ತಾಂತ್ರಿಕ ಸಮಸ್ಯೆಗೆ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಮಹತ್ವದ ಪರಿಹಾರ ಕಂಡುಕೊಂಡಿದೆ. ಬೆರಳಚ್ಚು (Biometric) ಸರಿಯಾಗಿ ಹೊಂದಾಣಿಕೆಯಾಗದೆ ನ್ಯಾಯಬೆಲೆ ಅಂಗಡಿಗಳಿಂದ ಬರಿಗೈಯಲ್ಲಿ ವಾಪಸ್ ಹೋಗುತ್ತಿದ್ದ ಹಿರಿಯ ನಾಗರಿಕರು ಮತ್ತು ದುಡಿಯುವ ವರ್ಗದ ಜನರಿಗೆ ಸರ್ಕಾರ ಸಿಹಿಸುದ್ದಿ ನೀಡಿದ್ದು, ಬೆರಳಚ್ಚು ನೀಡುವ ನಿಯಮದಿಂದ ವಿನಾಯಿತಿ ನೀಡಲು ಮುಂದಾಗಿದೆ.
ಅಲ್ಲದೆ, 75 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರಿಗೆ ಮನೆ ಬಾಗಿಲಿಗೇ ಪಡಿತರ ತಲುಪಿಸುವ ‘ಅನ್ನ ಸುವಿಧಾ’ ಯೋಜನೆಯ ಕಠಿಣ ನಿಯಮಗಳನ್ನು ಸರಳೀಕರಣಗೊಳಿಸಲಾಗಿದೆ.
ಪಡಿತರ ವಿತರಣಾ ಪ್ರಕ್ರಿಯೆಯನ್ನು ಸುಲಭಗೊಳಿಸಲು ಆಹಾರ ಇಲಾಖೆಯು ಪ್ರತಿ ನ್ಯಾಯಬೆಲೆ ಅಂಗಡಿಯಲ್ಲಿ ಒಟ್ಟು ಫಲಾನುಭವಿಗಳ ಪೈಕಿ ಶೇಕಡಾ 2ರಷ್ಟು ಮಂದಿಗೆ ಬೆರಳಚ್ಚಿನಿಂದ ವಿನಾಯಿತಿ ನೀಡಲು ನಿರ್ಧರಿಸಿದೆ. ಈ ಸೌಲಭ್ಯವನ್ನು ದುರುಪಯೋಗಪಡಿಸಿಕೊಳ್ಳದಂತೆ ತಡೆಯಲು, ನಿಜವಾಗಿಯೂ ಬೆರಳಚ್ಚು ನೀಡಲು ಸಾಧ್ಯವಾಗದ ಅಸಹಾಯಕರ ಮತ್ತು ವೃದ್ಧರ ಅಧಿಕೃತ ಪಟ್ಟಿಯನ್ನು ಇಲಾಖೆ ಸಿದ್ಧಪಡಿಸುತ್ತಿದೆ.
ರೇಖೆ ಸವೆಯುವ ಸಮಸ್ಯೆ: ವಯಸ್ಸಾದಂತೆ ಹಿರಿಯ ನಾಗರಿಕರಲ್ಲಿ ಕೈಬೆರಳುಗಳ ರೇಖೆಗಳು ಸವೆದುಹೋಗುತ್ತವೆ. ಇದರಿಂದ ಬಯೋಮೆಟ್ರಿಕ್ ಯಂತ್ರಗಳಲ್ಲಿ ಬೆರಳಚ್ಚು ಮ್ಯಾಚ್ ಆಗುವುದಿಲ್ಲ.
ಶ್ರಮಿಕ ವರ್ಗದ ಸಂಕಷ್ಟ: ಕಟ್ಟಡ ನಿರ್ಮಾಣ ಕಾರ್ಮಿಕರು, ಕೃಷಿ ಕೂಲಿ ಕಾರ್ಮಿಕರು ಸೇರಿದಂತೆ ದಿನವಿಡೀ ಕಠಿಣ ಕಾಯಕ ಮಾಡುವ ಜನರ ಕೈಬೆರಳುಗಳು ಸವೆದಿರುತ್ತವೆ. ಇವರಿಗೂ ಯಂತ್ರದಲ್ಲಿ ಬೆರಳಚ್ಚು ನೀಡುವುದು ಸವಾಲಾಗಿತ್ತು.
ಸರ್ವರ್ & ನೆಟ್ವರ್ಕ್ ಸಮಸ್ಯೆ: ಹಲವು ಗ್ರಾಮೀಣ ಮತ್ತು ನಗರ ಭಾಗದ ನ್ಯಾಯಬೆಲೆ ಅಂಗಡಿಗಳಲ್ಲಿ ಇ-ಪಿಒಎಸ್ (e-POS) ಯಂತ್ರಗಳಿಗೆ ಸರಿಯಾದ ನೆಟ್ವರ್ಕ್ ಸಿಗದೆ ಗಂಟೆಗಟ್ಟಲೆ ಕ್ಯೂ ನಿಲ್ಲಬೇಕಾದ ಸ್ಥಿತಿ ಇತ್ತು.
ಐರಿಸ್ (Iris) ಸ್ಕ್ಯಾನಿಂಗ್: ವಯಸ್ಸಾದವರು, ಹಾಸಿಗೆ ಹಿಡಿದವರು ಅಥವಾ ಕೈಬೆರಳಿನ ಸಮಸ್ಯೆ ಇರುವವರಿಗೆ ಕಣ್ಣಿನ ಪಾಪೆ (Iris) ಸ್ಕ್ಯಾನ್ ಮಾಡುವ ಮೂಲಕ ಪಡಿತರ ನೀಡಲಾಗುತ್ತದೆ. ಒಂದು ವೇಳೆ ಅನಾರೋಗ್ಯ, ದೃಷ್ಟಿದೋಷ ಅಥವಾ ಇತರ ಕಾರಣಗಳಿಂದ ಐರಿಸ್ ಸ್ಕ್ಯಾನ್ ಕೂಡ ಸಾಧ್ಯವಾಗದ ಅತ್ಯಂತ ಅಸಹಾಯಕ ಫಲಾನುಭವಿಗಳಿಗೆ ಬೆರಳಚ್ಚು ಮತ್ತು ಐರಿಸ್ ಎರಡರಿಂದಲೂ ಸಂಪೂರ್ಣ ವಿನಾಯಿತಿ ನೀಡಿ ಪಡಿತರ ವಿತರಿಸಲಾಗುತ್ತದೆ.
75 ವರ್ಷ ಮೇಲ್ಪಟ್ಟ ಒಂಟಿ ಹಿರಿಯ ನಾಗರಿಕರಿಗೆ ಅನುಕೂಲವಾಗಲೆಂದು ಸರ್ಕಾರ ‘ಅನ್ನ ಸುವಿಧಾ’ ಮೂಲಕ ಮನೆಗೇ ರೇಷನ್ ತಲುಪಿಸುವ ಯೋಜನೆ ಜಾರಿಗೆ ತಂದಿತ್ತು. ಆದರೆ ಇದಕ್ಕೆ ಮೊಬೈಲ್ನಲ್ಲಿ ಆ್ಯಪ್ ಡೌನ್ಲೋಡ್ ಮಾಡಿ, ಸ್ವತಃ ನೋಂದಣಿ (Registration) ಮಾಡಿಕೊಳ್ಳುವುದು ಕಡ್ಡಾಯವಾಗಿತ್ತು. ಸ್ಮಾರ್ಟ್ಫೋನ್ ಇಲ್ಲದ ಹಾಗೂ ತಂತ್ರಜ್ಞಾನದ ಅರಿವಿಲ್ಲದ ಒಂಟಿ ವೃದ್ಧರಿಗೆ ಇದು ತೀವ್ರ ತಲೆನೋವಾಗಿ ಪರಿಣಮಿಸಿತ್ತು.
ಈ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿರುವ ಸರ್ಕಾರ, ಈಗ ಆ್ಯಪ್ ನೋಂದಣಿಯ ತೊಡಕನ್ನು ನಿವಾರಿಸಿ, ಹಿರಿಯರಿಗೆ ಸುಲಭವಾಗಿ ಮತ್ತು ನೇರವಾಗಿ ಪಡಿತರ ಮನೆ ಬಾಗಿಲಿಗೆ ತಲುಪುವಂತೆ ಪ್ರಕ್ರಿಯೆಯನ್ನು ಸರಳೀಕರಣಗೊಳಿಸಿದೆ. ಸರ್ಕಾರದ ಈ ನಿರ್ಧಾರದಿಂದಾಗಿ ರಾಜ್ಯದ ಲಕ್ಷಾಂತರ ಹಿರಿಯ ಜೀವಗಳು ಮತ್ತು ಬಡ ಕೂಲಿ ಕಾರ್ಮಿಕರಿಗೆ ದೊಡ್ಡ ನೆಮ್ಮದಿ ಸಿಕ್ಕಂತಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ