
ಬೆಂಗಳೂರು (ಮಾ.22): ನ್ಯಾಯಾಂಗ ವ್ಯವಸ್ಥೆಯಲ್ಲಿ ಕೃತಕ ಬುದ್ಧಿಮತ್ತೆ (ಎಐ) ಅಳವಡಿಸಿಕೊಳ್ಳುವಾಗ ಅದು ವ್ಯವಸ್ಥೆಯನ್ನು ಮತ್ತಷ್ಟು ಸದೃಢವಾಗಿಸುವಂತೆ ನೋಡಿಕೊಳ್ಳಬೇಕೇ ಹೊರತು ನ್ಯಾಯಾಂಗ ವ್ಯವಸ್ಥೆ ಮೇಲೆಯೇ ಸವಾರಿ ಮಾಡುವಂತಾಗಬಾರದು ಎಂದು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ಅಭಿಪ್ರಾಯಪಟ್ಟರು.
ಬಾರ್ ಅಸೋಸಿಯೇಷನ್ ಆಫ್ ಇಂಡಿಯಾ, ಕರ್ನಾಟಕ ನ್ಯಾಯಾಂಗ ಅಕಾಡೆಮಿ ಸೇರಿ ಇನ್ನಿತರ ಸಂಸ್ಥೆಗಳ ಸಹಯೋಗದಲ್ಲಿ ಶನಿವಾರ ಕರ್ನಾಟಕ ನ್ಯಾಯಾಂಗ ಅಕಾಡೆಮಿ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ಕೃತಕ ಬುದ್ಧಿಮತ್ತೆ-ವ್ಯಾಜ್ಯಗಳ ತಡೆಗಟ್ಟುವಿಕೆ ಮತ್ತು ಇತ್ಯರ್ಥ ವಿಷಯದ ಕುರಿತ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿದರು.
ಅಗಾಧ ಪ್ರಮಾಣದ ದತ್ತಾಂಶ, ದಾಖಲೆಗಳನ್ನು ನಿರ್ವಹಿಸಲು, ಪ್ರಕ್ರಿಯೆಗಳ ವಿಳಂಬ ತಗ್ಗಿಸಲು ಎಐ ಸಹಾಯಕವಾಗಬೇಕು. ಆದರೆ, ನ್ಯಾಯಾಂಗ ವ್ಯವಸ್ಥೆಯ ಪ್ರಧಾನ ಕಾರ್ಯವಾದ ತೀರ್ಪು ಪ್ರಕಟಿಸುವಿಕೆಯನ್ನೇ ಅದು ಅತಿಕ್ರಮಿಸುವಂತಾಗಬಾರದು. ತೀರ್ಪು ಪ್ರಕಟಿಸುವುದರಲ್ಲಿ ಎಐ ಹಿಡಿತ ಸಾಧಿಸಲು ಆಸ್ಪದ ಮಾಡಿಕೊಟ್ಟರೆ ಪಾರದರ್ಶಕತೆ ಮತ್ತು ಉತ್ತರದಾಯಿತ್ವ ಇಲ್ಲದಂತಾಗುತ್ತದೆ. ಹೀಗಾಗಿ ಆ ಬಗ್ಗೆ ಎಚ್ಚರದಿಂದಿರಬೇಕು ಎಂದರು.
ನ್ಯಾಯಾಲಯಗಳು ತೀರ್ಪು ಪ್ರಕಟಿಸುವಲ್ಲಿ ಮನುಷ್ಯರೇ ನಿರ್ಣಾಯಕ ಪಾತ್ರ ವಹಿಸುವಂತಿರಬೇಕು. ನ್ಯಾಯಮೂರ್ತಿಗಳು ಮತ್ತು ನ್ಯಾಯಾಧೀಶರೇ ತರ್ಕ ಶಕ್ತಿ ಹಾಗೂ ಅನುಭವಗಳ ವಿಶ್ಲೇಷಣೆ ಮೂಲಕ ತೀರ್ಪು ಪ್ರಕಟಿಸಬೇಕು. ಹೀಗಾಗಿ ನ್ಯಾಯಾಂಗ ವ್ಯವಸ್ಥೆಯಲ್ಲಿ ಪ್ರಯೋಜನಗಳಿಗಾಗಿ ಮಾತ್ರವೇ ಎಐ ಬಳಕೆಯಾಗಬೇಕು. ಆದರೆ, ಎಐ ಬಳಕೆಯ ದಿಕ್ಕನ್ನು ಮನುಷ್ಯನ ಬುದ್ಧಿಯೇ ನಿರ್ಧರಿಸಬೇಕು ಎಂದು ಹೇಳಿದರು.
ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ವಿಭು ಬಖ್ರು ಮಾತನಾಡಿ, ನ್ಯಾಯಾಂಗ ವ್ಯವಸ್ಥೆಯನ್ನು ಎಐ ಪ್ರವೇಶಿಸುತ್ತಿರುವ ಸಂದರ್ಭದಲ್ಲಿ ಹಲವು ಪ್ರಶ್ನೆಗಳು ಎದುರಾಗುತ್ತಿವೆ. ಮನುಷ್ಯ ನಿರ್ಧಾರ ತೆಗೆದುಕೊಳ್ಳುವಲ್ಲಿ ಎಐ ಸಹಾಯಕನಂತೆ ವರ್ತಿಸುತ್ತಿದೆಯೇ ಅಥವಾ ಮನುಷ್ಯನ ಉಪಸ್ಥಿತಿ ಅಗತ್ಯವೇ ಇಲ್ಲದ ರೀತಿಯಲ್ಲಿ ಪರ್ಯಾಯದಂತಾಗುತ್ತಿದೆಯೇ ಎಂಬುದನ್ನು ಪರಿಶೀಲಿಸಬೇಕು. ಅದರ ಜತೆ ಎಐ ಬಳಕೆ ನಂತರವೂ ನ್ಯಾಯಿಕ ವ್ಯವಸ್ಥೆ ಜನರಿಗೆ ಸುಲಭವಾಗಿ ಲಭ್ಯವಾಗಿಸುತ್ತದೆಯೇ ಅಥವಾ ಹೊಸ ಸ್ವರೂಪದ ಅಸಮಾನತೆಗಳನ್ನು ಸೃಷ್ಟಿಸುತ್ತಿದೆಯೇ ಎಂಬುದನ್ನೂ ನೋಡಬೇಕಿದೆ ಎಂದರು.
ಎಐನಿಂದ ಕೆಲ ಪ್ರಯೋಜನಗಳೂ ಇವೆ. ಪ್ರಕರಣಗಳ ಮಾದರಿ ವಿಶ್ಲೇಷಿಸುವ ಮೂಲಕ ಭವಿಷ್ಯದಲ್ಲಿ ತಲೆದೋರಬಹುದಾದ ವ್ಯಾಜ್ಯಗಳನ್ನು ಮುಂಚಿತವಾಗಿಯೇ ಊಹಿಸಲು ಸಾಧ್ಯವಾಗುತ್ತದೆ. ಅದರಿಂದ ನ್ಯಾಯಾಂಗ ವ್ಯವಸ್ಥೆಯ ದಕ್ಷತೆ ಹೆಚ್ಚಲಿದೆ. ಹೀಗಾಗಿ ಎಐ ಬಳಕೆ ಕುರಿತು ಸ್ಪಷ್ಟ ನಿಯಮ ಮತ್ತು ಸೂಕ್ತ ರಕ್ಷಣೆಗಳನ್ನು ಮಾಡಬೇಕಿದೆ. ವಕೀಲರು ಕೂಡ ಎಐ ಟೂಲ್ಗಳ ಮಿತಿ ಅರ್ಥ ಮಾಡಿಕೊಳ್ಳುವುದು ಅಗತ್ಯ ಎಂದು ತಿಳಿಸಿದರು.
ಸುಪ್ರೀಂ ಕೋರ್ಟ್ ವಿಶ್ರಾಂತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ, ಬಾರ್ ಅಸೋಸಿಯೇಷನ್ ಆಫ್ ಇಂಡಿಯಾ ಅಧ್ಯಕ್ಷ ಪ್ರಶಾಂತ್ ಕುಮಾರ್, ಕರ್ನಾಟಕದ ಅಡ್ವೋಕೇಟ್ ಜನರಲ್ ಕೆ.ಶಶಿಕರಣ ಶೆಟ್ಟಿ, ಯುಐಎ ಇಂಡಿಯಾ ಅಧ್ಯಕ್ಷ ಎ.ಕೆ. ಗಂಗೂಲಿ, ಹಿರಿಯ ವಕೀಲರಾದ ಕೃಷ್ಣನ್ ವೇಣುಗೋಪಾಲ್, ಮಮತಾ ತಿವಾರಿ ಇದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ