ಬಿಎಸ್ವೈ ಅವಧಿ ಮುಗಿದ ಬಳಿಕ ನಮ್ಮ ಸಮಾಜಕ್ಕೆ ಸಿಎಂ ಸ್ಥಾನ ನೀಡಿ:ಜಯಮೃತ್ಯುಂಜಯ ಸ್ವಾಮೀಜಿ

By Suvarna NewsFirst Published Oct 10, 2020, 1:09 PM IST
Highlights

ಪಂಚಮಾಸಾಲಿ ಸಮುದಾಯದ ಶೇ. 70ರಷ್ಟು ಜನ ಬಿಜೆಪಿಗೆ ಬೆಂಬಲ| ಸಚಿವ ಸ್ಥಾನ‌ ಕೇಳುವುದಕ್ಕಿಂತ  ಮುಂದೆ ಸಿಎಂ ಸ್ಥಾನವನ್ನೇ ಕೊಡಲಿ| ಶಾಸಕ ಮಹೇಶ್ ಕುಮಟಹಳ್ಳಿ ಅವರಿಗೆ ಸಚಿವ ಸ್ಥಾನ ಕೊಡಬೇಕಿತ್ತು. ಆಗ ಕೊಡದಿದ್ದು ನಮಗೆ ಅಸಮಾಧಾನ ಇದೆ ಎಂದು ಜಯ ಮೃತುಂಜಯ ಸ್ವಾಮೀಜಿ| 

ಬೆಂಗಳೂರು(ಅ.10): ಲಿಂಗಾಯತ ಸಮುದಾಯದಲ್ಲಿ ಪಂಚಮಸಾಲಿ ಸಮಾಜ ದೊಡ್ಡ ಸಮಾಜವಾಗಿದೆ. ಕರ್ನಾಟಕ ಜಾತಿ ಪಟ್ಟಿಯಲ್ಲಿ ಪಂಚಮಸಾಲಿ ಸಮುದಾಯದ ಪ್ರಸ್ತಾಪವಾಗಿಲ್ಲ. ಕೃಷಿ ಆಧಾರಿತ ಪಂಚಮಸಾಲಿ ಸಮುದಾಯಕ್ಕೆ ಸರ್ಕಾರಿ ಸೌಲಭ್ಯಗಳು ಸಿಗುತ್ತಿಲ್ಲ. ಈ ಹಿಂದೆ ಸಿಎಂ ಆಗಿದ್ದ ವೀರಪ್ಪ ಮೊಯ್ಲಿ ಅವರಿಗೆ ಪಂಚಮಸಾಲಿ ಸಮುದಾಯಕ್ಕೆ ಮೀಸಲಾತಿ ಸಿಗಬೇಕು ಅಂತ ಮನವಿ ಕೊಡಲಾಗಿತ್ತು. ಸದ್ಯ ಪಂಚಮಸಾಲಿ ಸಮಾಜದ 16 ಶಾಸಕರು, 3 ಸಂಸದರು ಇದ್ದಾರೆ. ಅದರೂ ಕೂಡ ಪಂಚಮಸಾಲಿ ಸಮುದಾಯಕ್ಕೆ ಮೀಸಲಾತಿ ಸಿಕ್ಕಿಲ್ಲ ಹೀಗಾಗಿ ಮೀಸಲಾತಿ ನೀಡಬೇಕು ಎಂದು ಆಗ್ರಹಿಸಿ ಹೋರಾಟ ಮಾಡಲು ನಿರ್ಧರಿಸಲಾಗಿದೆ ಎಂದು ಕೂಡಲಸಂಗಮ ಲಿಂಗಾಯತ ಪಂಚಮಸಾಲಿ ಧರ್ಮಪೀಠದ ಬಸವ ಜಯಮೃತ್ಯುಂಜಯ ಸ್ವಾಮೀಜಿ ತಿಳಿಸಿದ್ದಾರೆ. 

ನಗರದಲ್ಲಿ ಇಂದು(ಶನಿವಾರ) ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಶ್ರೀಗಳು, ಪಂಚಮಸಾಲಿ ಸಮಾಜವನ್ನು ರಾಜ್ಯ ಸರ್ಕಾರದ ಪ್ರವರ್ಗ 2A ಗೆ ಸೇರ್ಪಡೆ ಮಾಡಬೆಕು. ಕೇಂದ್ರ ಸರ್ಕಾರದ OBC ಪಟ್ಟಿಯಲ್ಲಿ ಪಂಚಮಸಾಲಿ ಸಮಾಜವನ್ನು ಸೇರಿಸಬೇಕು. ಪ್ರವರ್ಗ 3B ನಲ್ಲಿರುವ ನಮ್ಮ ಸಮಾಜಕ್ಕೆ ಈಗ ಪ್ರತ್ಯೇಕ ಮೀಸಲಾತಿ ಅಗತ್ಯವಾಗಿದೆ. ಶಿಕ್ಷಣ ಮತ್ತು ಉದ್ಯೋಗದಲ್ಲಿ  ಮೀಸಲಾತಿಗಾಗಿ ಪ್ರವರ್ಗ 2A ಮೀಸಲಾತಿ ಬೇಕಾಗಿದೆ. ಅದಕ್ಕಾಗಿ ಹೋರಾಟ ಮಾಡಲು ತಿರ್ಮಾನ ಮಾಡಲಾಗಿದೆ ಎಂದು ಹೇಳಿದ್ದಾರೆ. 

ಪಂಚಮಸಾಲಿ ಸಮಾಜಕ್ಕೆ ಸಚಿವ ಸ್ಥಾನ ಸಿಗಲೇಬೇಕು: ಜಯಮೃತ್ಯುಂಜಯ ಸ್ವಾಮೀಜಿ

ಅ.28 ರಂದು ಬೆಳಗಾವಿಯ ಸುವರ್ಣ ಸೌಧದ ಮುಂದೆ ಒಂದು ದಿನದ ಉಪವಾಸ ಸತ್ಯಾಗ್ರಹವನ್ನು ಮಾಡಲಾಗುವುದು. ಕೋರೋನಾ ಕಾರಣಕ್ಕಾಗಿ ಸಾಮಾಜಿಕ ಅಂತರ ಕಾಪಾಡಿಕೊಂಡು ಹೋರಾಟ ಮಾಡ್ತೇವೆ ಎಂದು ತಿಳಿಸಿದ್ದಾರೆ. 
ಯಡಿಯೂರಪ್ಪ ಮುಖ್ಯಮಂತ್ರಿ ಅವಧಿ‌ ಮುಗಿದ ಬಳಿಕ ಸಿಎಂ ಸ್ಥಾನವನ್ನು ಪಂಚಮಸಾಲಿ ಸಮುದಾಯಕ್ಕೆ ನೀಡಬೇಕು. ಪಂಚಮಾಸಾಲಿ ಸಮುದಾಯದ ಶೇ. 70ರಷ್ಟು ಜನ ಬಿಜೆಪಿಯ‌ನ್ನ ಬೆಂಬಲಿಸಿಕೊಂಡು ಬರುತ್ತಿದ್ದಾರೆ. ಸಚಿವ ಸ್ಥಾನ‌ ಕೇಳುವುದಕ್ಕಿಂತ  ಮುಂದೆ ಸಿಎಂ ಸ್ಥಾನವನ್ನೇ ಕೊಡಲಿ. ಶಾಸಕ ಮಹೇಶ್ ಕುಮಟಹಳ್ಳಿ ಅವರಿಗೆ ಸಚಿವ ಸ್ಥಾನ ಕೊಡಬೇಕಿತ್ತು. ಆಗ ಕೊಡದಿದ್ದು ನಮಗೆ ಅಸಮಾಧಾನ ಇದೆ. ನಮ್ಮ ಸಮುದಾಯದ ಶಾಸಕರ ಸಂಖ್ಯೆಗೆ ಅನುಗುಣವಾಗಿ ಕನಿಷ್ಠ ಮೂವರು ಶಾಸಕರನ್ನಾದ್ರೂ‌ ಸಚಿವರನ್ನಾಗಿ ಮಾಡಬೇಕಿತ್ತು, ಅದನ್ನೂ ಮಾಡಲಿಲ್ಲ.ಆದರೆ ಈಗ ಸಚಿವ ಸ್ಥಾನಕ್ಕಿಂತಲೂ ಪಂಚಮಸಾಲಿ ಸಮುದಾಯಕ್ಕೆ ಮೀಸಲಾತಿ ಕೊಡಬೇಕು ಎಂಬ ಹೋರಾಟವೇ ಮುಖ್ಯವಾಗಿದೆ ಎಂದು ಶ್ರೀಗಳು ತಿಳಿಸಿದ್ದಾರೆ. 

ಯಡಿಯೂರಪ್ಪ ಅವಧಿ ಮೂರು ವರ್ಷ ಇರುತ್ತೋ..? ಇಲ್ವೋ ಮುಂದೆಯೂ ಅವರೇ ಆಗ್ತಾರೋ ಎಂಬುದು ಗೊತ್ತಿಲ್ಲ. ಅವರ ಅವಧಿ ಮುಗಿದ ಬಳಿಕ ನಮ್ಮ ಪಂಚಮಸಾಲಿ ಸಮಾಜಕ್ಕೆ ಸಿಎಂ ಸ್ಥಾನ  ಕೊಡಿ ಅಂತ ಒತ್ತಾಯ ಮಾಡುತ್ತೇವೆ. ನಮ್ಮಲ್ಲೂ ಮುಖ್ಯಮಂತ್ರಿ ಆಗಲು ಅರ್ಹತೆ ಇರೋರು ಅನೇಕರು ಇದ್ದಾರೆ. ಯಡಿಯೂರಪ್ಪ ಅವರ ಬಗ್ಗೆ ಗೌರವ ಇದೆ ಎಂದು ಜಯಮೃತ್ಯುಂಜಯ ಸ್ವಾಮೀಜಿ ಸ್ಪಷ್ಟನೆ ನೀಡಿದ್ದಾರೆ. 
 

click me!