
ಬೆಂಗಳೂರು: ರಾಜ್ಯ ಕಾಂಗ್ರೆಸ್ ಸಚಿವ ಸಂಪುಟ ವಿಸ್ತರಣೆಯ ಪ್ರಕ್ರಿಯೆಯು ತೀವ್ರ ಕುತೂಹಲ ಹಾಗೂ ರಾಜಕೀಯ ರಂಪಾಟಕ್ಕೆ ಕಾರಣವಾಗಿದೆ. ನೂತನ ಸಚಿವರ ಪಟ್ಟಿ ಅಂತಿಮಗೊಳ್ಳುವ ಹಂತದಲ್ಲಿ ನಡೆದ ದಿಢೀರ್ ಬೆಳವಣಿಗೆಗಳು ಹಾಗೂ ಹೈಕಮಾಂಡ್ ಮಟ್ಟದ ನಿರ್ಧಾರಗಳು ರಾಜ್ಯ ನಾಯಕರನ್ನು ಅಚ್ಚರಿಗೊಳಿಸಿರುವುದಲ್ಲದೆ, ಪಕ್ಷದ ಆಂತರಿಕ ಭಿನ್ನಾಭಿಪ್ರಾಯಗಳನ್ನು ಬೀದಿಗೆ ತಂದಿಟ್ಟಿವೆ.
ಸಚಿವ ಸಂಪುಟ ರಚನೆಯ ಅಂತಿಮ ಪಟ್ಟಿಯಲ್ಲಿ ಗಾಯಿತ್ರಿ ಶಾಂತೇಗೌಡ ಅವರ ಹೆಸರು ಸೇರ್ಪಡೆಯಾಗಿದ್ದು ಒಂದು ರೀತಿಯ 'ವೈಲ್ಡ್ ಕಾರ್ಡ್ ಎಂಟ್ರಿ' ಎಂದೇ ಬಿಂಬಿತವಾಗಿದೆ. ಮೂಲಗಳ ಪ್ರಕಾರ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಗೂ ಸಿದ್ದರಾಮಯ್ಯ ಇಬ್ಬರೂ ಸಿದ್ಧಪಡಿಸಿದ್ದ ನಾಯಕರ ಪಟ್ಟಿಯಲ್ಲಿ ಗಾಯಿತ್ರಿ ಶಾಂತೇಗೌಡ ಅವರ ಹೆಸರು ಇರಲಿಲ್ಲ. ಆದರೆ, ದೆಹಲಿ ಹಂತದಲ್ಲಿ ಅಂತಿಮಗೊಂಡ ಪಟ್ಟಿಯಲ್ಲಿ ಇವರ ಹೆಸರು ಪ್ರತ್ಯಕ್ಷವಾಗಿದ್ದು ರಾಜ್ಯ ನಾಯಕರಿಗೆ ತೀವ್ರ ಆಘಾತ ತಂದೊಡ್ಡಿದೆ.
ಹೈಕಮಾಂಡ್ ಮಟ್ಟದಲ್ಲಿ ಗಾಯಿತ್ರಿ ಶಾಂತೇಗೌಡ ಅವರ ಹೆಸರನ್ನು ಅಂತಿಮಗೊಳಿಸುವ ಹಿಂದೆ ಯಾವುದೋ ಕಾಣದ ಶಕ್ತಿಯ 'ಕೈ' ಕೆಲಸ ಮಾಡಿದೆ ಎಂಬ ಚರ್ಚೆ ಬಲವಾಗಿ ಕೇಳಿಬರುತ್ತಿದೆ. ಪಕ್ಷದ ಹೈಕಮಾಂಡ್, ಕುರುಬ ಸಮುದಾಯ ಹಾಗೂ ಮಹಿಳಾ ಕೋಟಾವನ್ನು ಒಟ್ಟಿಗೆ ಸರಿದೂಗಿಸುವ ತಂತ್ರದ ಭಾಗವಾಗಿ ಗಾಯಿತ್ರಿ ಅವರ ಹೆಸರನ್ನು ಫೈನಲ್ ಮಾಡಿತ್ತು ಎನ್ನಲಾಗಿದೆ.
ಹೈಕಮಾಂಡ್ನ ಈ ನಿರ್ಧಾರ ಸಿದ್ದರಾಮಯ್ಯ ಅವರ ತೀವ್ರ ಆಕ್ರೋಶಕ್ಕೆ ಕಾರಣವಾಯಿತು. ಕುರುಬ ಸಮುದಾಯದ ಕೋಟಾದಡಿ ತಮ್ಮ ಆಪ್ತ ಬಸವರಾಜ್ ಶಿವಣ್ಣನವರ್ ಅವರಿಗೆ ಸಚಿವ ಸ್ಥಾನ ನೀಡಬೇಕೆಂಬುದು ಸಿದ್ದರಾಮಯ್ಯ ಅವರ ಬಲವಾದ ಆಗ್ರಹವಾಗಿತ್ತು. ಆದರೆ ಬಸವರಾಜ್ ಶಿವಣ್ಣನವರ್ ಹೆಸರು ಅಂತಿಮ ಪಟ್ಟಿಯಿಂದ ಕೈಬಿಟ್ಟು, ಗಾಯಿತ್ರಿ ಶಾಂತೇಗೌಡ ಅವರಿಗೆ ಅವಕಾಶ ನೀಡಿದ್ದರಿಂದ ಸಿದ್ದರಾಮಯ್ಯ ಕೆಂಡಾಮಂಡಲರಾದರು.
ಈ ತೀವ್ರ ಅಸಮಾಧಾನದ ಹಿನ್ನೆಲೆಯಲ್ಲಿ, ಡಿ.ಕೆ. ಶಿವಕುಮಾರ್ ಅವರು ಗಾಯಿತ್ರಿ ಶಾಂತೇಗೌಡ ಅವರಿಗೆ ಪ್ರಮಾಣ ವಚನ ಸ್ವೀಕಾರ ಕಾರ್ಯಕ್ರಮಕ್ಕೆ ಆಗಮಿಸುವಂತೆ ಕರೆಯನ್ನೂ ನೀಡಲಿಲ್ಲ. ಮತ್ತೊಂದೆಡೆ ಸಿದ್ದರಾಮಯ್ಯ ಕೂಡ ಗಾಯಿತ್ರಿ ಅವರಿಗೆ ಪ್ರಮಾಣ ವಚನ ಸ್ವೀಕರಿಸದಂತೆ ಕಟ್ಟುನಿಟ್ಟಿನ ತಾಕೀತು ಮಾಡಿದರು ಎನ್ನಲಾಗಿದೆ. ಈ ಬೆಳವಣಿಗೆಗಳಿಂದ ಕೋಪಗೊಂಡ ಸಿದ್ದರಾಮಯ್ಯ ಅವರು ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೆ ಗೈರಾಗುವ ಮೂಲಕ ಹೈಕಮಾಂಡ್ಗೆ ತಮ್ಮ ತೀವ್ರ ಆಕ್ರೋಶದ ಸಂದೇಶ ರವಾನಿಸಿದರು.
ರಾಜ್ಯ ನಾಯಕರ ತೀವ್ರ ವಿರೋಧ ಹಾಗೂ ಆಂತರಿಕ ಅಸಮಾಧಾನದ ಪರಿಣಾಮವಾಗಿ, ಕೊನೆ ಕ್ಷಣದಲ್ಲಿ ಗಾಯಿತ್ರಿ ಶಾಂತೇಗೌಡ ಅವರ ಹೆಸರಿಗೆ ಕೊಕ್ ನೀಡಲಾಯಿತು. ಅಂತಿಮವಾಗಿ 19 ಮಂದಿ ಶಾಸಕರು ಮಾತ್ರ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು. ಗಾಯಿತ್ರಿ ಅವರ ಹೆಸರನ್ನು ಕೈಬಿಟ್ಟ ನಂತರ, ಆ ಜಾಗಕ್ಕೆ ಮತ್ತೊಬ್ಬ ಸೂಕ್ತ ಅಭ್ಯರ್ಥಿಯ ಸೇರ್ಪಡೆ ಇನ್ನೂ ಅಂತಿಮಗೊಂಡಿಲ್ಲ.
ಇದರ ಪರಿಣಾಮವಾಗಿ, ಪ್ರಸ್ತುತ ಸಚಿವ ಸಂಪುಟದಲ್ಲಿ ಯಾವುದೇ ಮಹಿಳಾ ಶಾಸಕಿಗೆ ಸ್ಥಾನ ಸಿಗದಂತಾಗಿದೆ. ಸಂಪುಟದಲ್ಲಿದ್ದ ಏಕೈಕ ಮಹಿಳಾ ಅಭ್ಯರ್ಥಿಯ ಹೆಸರನ್ನೂ ಕೊನೆ ಕ್ಷಣದಲ್ಲಿ ಕೈಬಿಟ್ಟಿರುವುದು ಮತ್ತು ಎರಡನೇ ಹಂತದ ಸಂಪುಟ ವಿಸ್ತರಣೆಯಲ್ಲೂ ಮಹಿಳೆಯರಿಗೆ ಅವಕಾಶ ಸಿಗದಿರುವುದು ತೀವ್ರ ಚರ್ಚೆಗೆ ಗ್ರಾಸವಾಗಿದೆ. ಮಹಿಳಾ ಕೋಟಾವೇ ಭರ್ತಿಯಾಗದೆ ಸಚಿವ ಸಂಪುಟ ವಿಸ್ತರಣೆ ಪೂರ್ಣಗೊಂಡಿರುವುದು ಈಗ ಕಾಂಗ್ರೆಸ್ ಒಳಗಿನ ಆಂತರಿಕ ಚರ್ಚೆಗೆ ಮುಖ್ಯ ಕಾರಣವಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ