ಅಂಗನವಾಡಿ ಜಾಗ ಅಕ್ರಮ ಒತ್ತುವರಿ :  ಅಧಿಕಾರಿಗಳ ನಿರ್ಲಕ್ಷ್ಯ ಖಂಡಿಸಿ ಗ್ರಾಮ ಪಂಚಾಯಿತಿ ಸದಸ್ಯರ ಪ್ರತಿಭಟನೆ

By Ravi JanekalFirst Published Sep 23, 2023, 4:59 PM IST
Highlights

ಅಂಗನವಾಡಿ ಕೇಂದ್ರಕ್ಕೆ ಮಂಜೂರಾದ ಜಾಗವನ್ನು ಖಾಸಗಿ ವ್ಯಕ್ತಿಯೊಬ್ಬರು ಅಕ್ರಮವಾಗಿ ಬೇಲಿ ಹಾಕಿಕೊಂಡು ತೊಂದರೆ ನೀಡುತ್ತಿದ್ದಾರೆ. ಕಂದಾಯ ಇಲಾಖೆ ಅಧಿಕಾರಿಗಳು ಈ ಜಾಗವನ್ನು ತೆರವುಗೊಳಿಸಿ ಅಂಗನವಾಡಿ ಕಟ್ಟಡ ನಿರ್ಮಾಣಕ್ಕೆ ಅನುವು ಮಾಡಿಕೊಡಬೇಕು ಎಂದು ಆಗ್ರಹಿಸಿ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲ್ಲೂಕಿನ ಬಾಳೂರು ಗ್ರಾಮ ಪಂಚಾಯಿತಿ ಅಧ್ಯಕ್ಷ, ಉಪಾಧ್ಯಕ್ಷ ಮತ್ತು ಸದಸ್ಯರು ಸ್ಥಳದಲ್ಲಿ ಕೆಲ ಕಾಲ ಧರಣಿ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು. 

ವರದಿ : ಆಲ್ದೂರು ಕಿರಣ್ ಏಷ್ಯಾನೆಟ್ ಸುವರ್ಣ ನ್ಯೂಸ್ ಚಿಕ್ಕಮಗಳೂರು 

ಚಿಕ್ಕಮಗಳೂರು (ಸೆ.23) : ಅಂಗನವಾಡಿ ಕೇಂದ್ರಕ್ಕೆ ಮಂಜೂರಾದ ಜಾಗವನ್ನು ಖಾಸಗಿ ವ್ಯಕ್ತಿಯೊಬ್ಬರು ಅಕ್ರಮವಾಗಿ ಬೇಲಿ ಹಾಕಿಕೊಂಡು ತೊಂದರೆ ನೀಡುತ್ತಿದ್ದಾರೆ. ಕಂದಾಯ ಇಲಾಖೆ ಅಧಿಕಾರಿಗಳು ಈ ಜಾಗವನ್ನು ತೆರವುಗೊಳಿಸಿ ಅಂಗನವಾಡಿ ಕಟ್ಟಡ ನಿರ್ಮಾಣಕ್ಕೆ ಅನುವು ಮಾಡಿಕೊಡಬೇಕು ಎಂದು ಆಗ್ರಹಿಸಿ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲ್ಲೂಕಿನ ಬಾಳೂರು ಗ್ರಾಮ ಪಂಚಾಯಿತಿ ಅಧ್ಯಕ್ಷ, ಉಪಾಧ್ಯಕ್ಷ ಮತ್ತು ಸದಸ್ಯರು ಸ್ಥಳದಲ್ಲಿ ಕೆಲ ಕಾಲ ಧರಣಿ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು. 

ಅಂಗನವಾಡಿ ಜಾಗ ಅಕ್ರಮ ಒತ್ತುವರಿ : 

ಬಡ ಮಕ್ಕಳ ಅನುಕೂಲಕ್ಕಾಗಿ ಬಾಳೂರು ಗ್ರಾಮದಲ್ಲಿ ಅಂಗನವಾಡಿ ಕೇಂದ್ರ ತೆರೆಯುಲು ಜಾಗವನ್ನು ಮಂಜೂರು ಮಾಡಲಾಗಿದೆ. ಆದ್ರೆ  ಖಾಸಗಿ ವ್ಯಕ್ತಿಯೊಬ್ಬರು ಆ ಜಾಗಕ್ಕೆ ಅಕ್ರಮವಾಗಿ ಬೇಲಿ ಹಾಕಿ ತೊಂದರೆ ನೀಡುತ್ತಿದ್ದಾರೆ ಎಂದು ಆರೋಪಿಸಿ ಅಂಗನವಾಡಿಗೆಂದು ಮಂಜೂರಾಗಿರುವ ಬಾಳೂರಿನ ದರ್ಬಾರ್ ಪೇಟೆಯ ಸ್ಥಳದಲ್ಲಿ ಧರಣಿ ನಡೆಸಿದರು.ಈ ಸಂದರ್ಭದಲ್ಲಿ ಮಾತನಾಡಿದ ಬಾಳೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಬಿ.ಬಿ. ಮಂಜುನಾಥ್   ಮೂಡಿಗೆರೆ ತಾಲ್ಲೂಕಿನ ಬಾಳೂರು ಗ್ರಾಮದ ದರ್ಬಾರ್ ಪೇಟೆ ಅಂಗನವಾಡಿ ಕೇಂದ್ರಕ್ಕೆಂದು ಸ.ನಂ : 179ರಲ್ಲಿ 22 ಗುಂಟೆ ಜಾಗ ಮಂಜೂರಾಗಿದೆ. ಎಂ.ಆರ್ ಟಿ2/2023-24(ದಿನಾಂಕ 24-07-2023) ರಂತೆ ಅಂಗನವಾಡಿ ಕೇಂದ್ರದ ಹೆಸರಿಗೆ ಖಾತೆ ಸಹ ಆಗಿ ಪಹಣಿ ಬಂದಿದೆ. ಈ ಸ್ಥಳದಲ್ಲಿ ಅಂಗನವಾಡಿ ಕೇಂದ್ರ ನಿರ್ಮಾಣಕ್ಕೆ ಸರ್ಕಾರದಿಂದ 12.5 ಲಕ್ಷ ಅನುದಾನವು  ಮಂಜೂರಾಗಿದೆ. ಅಂಗನವಾಡಿ ಕಟ್ಟಡ ನಿರ್ಮಾಣಕ್ಕೆ ಈ ಜಾಗ ಮಂಜೂರು ಆದ ಮೇಲೆ ಪಕ್ಕದ ನಿವೇಶನ ಮಾಲೀಕರು ಈ ಜಾಗವನ್ನು ಒತ್ತುವರಿ ಮಾಡಿ ರಾತ್ರೋರಾತ್ರಿ ಅಕ್ರಮವಾಗಿ ಬೇಲಿ ನಿರ್ಮಾಣ ಮಾಡಿದ್ದಾರೆ ಎಂದಯ ಆರೋಪಿಸಿದ್ದಾರೆ. 

 

ಸಂಸ್ಕೃತ ಕಲಿಯಲು ಕಾಫಿನಾಡಿಗೆ ಬಂದ ಇಸ್ರೇಲ್ ವಿದ್ಯಾರ್ಥಿಗಳು!

ಜಿಲ್ಲಾಧಿಕಾರಿಗಳ ಆದೇಶವಿದ್ದರೂ ತೆರೆವು ಕಾರ್ಯವಿಲ್ಲ : 

ಕಳೆದ 15 ವರ್ಷಗಳಿಂದ ಗ್ರಾಮದಲ್ಲಿ ಅಂಗನವಾಡಿಗೆ ಸ್ವಂತ ಕಟ್ಟಡವಿಲ್ಲ.  ಸ್ವಂತ ಕಟ್ಟಡ ಇಲ್ಲದೇ ಖಾಸಗಿ ಕಟ್ಟಡದಲ್ಲಿ ಅಂಗನವಾಡಿ ನಡೆಸಲಾಗುತ್ತಿದೆ. ಅಂಗನವಾಡಿಯಲ್ಲಿ ಸುಮಾರು 15 ಮಕ್ಕಳು ಶಿಕ್ಷಣ ಪಡೆಯುತ್ತಿದ್ದಾರೆ. ಈಗ ಅಂಗನವಾಡಿ ನಡೆಸುತ್ತಿರುವ ಖಾಸಗಿ ಕಟ್ಟಡವು ಶಿಥಿಲವಾಗಿದೆ. ಅಲ್ಲಿಗೆ ತಮ್ಮ ಮಕ್ಕಳನ್ನು ಕಳುಹಿಸಲು ಪೋಷಕರು ಹಿಂದೇಟು ಹಾಕುತ್ತಿದ್ದಾರೆ. ಇದರಿಂದ ಮಕ್ಕಳ ಭವಿಷ್ಯಕ್ಕೆ ತೊಂದರೆಯಾಗುತ್ತಿದೆ. 

ಈ ಭಾಗದಲ್ಲಿ ಬಹುತೇಕರು ಕೂಲಿಕಾರ್ಮಿಕರು ಮತ್ತು ಕೃಷಿಕರು ಇದ್ದು ಅವರ ಮಕ್ಕಳು ಅಂಗನವಾಡಿಗೆ ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ.ಸದರಿ ಜಾಗವನ್ನು ತೆರವುಗೊಳಿಸಲು ನ್ಯಾಯಾಲಯದ ಮತ್ತು ಜಿಲ್ಲಾಧಿಕಾರಿಗಳ ಆದೇಶವಿದ್ದರೂ ಸ್ಥಳೀಯ ಅಧಿಕಾರಿಗಳು ಜಾಗ ತೆರವಿಗೆ ಹಿಂದೇಟು ಹಾಕುತ್ತಿದ್ದಾರೆ. ಶಾಸಕಿ ನಯನ ಮೋಟಮ್ಮ(Nayana motamma MLA) ನವರು ಸ್ಥಳಪರಿಶೀಲನೆ ನಡೆಸಿ ಬೇಲಿ ತೆರವುಗೊಳಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದ್ದರು. ಆದರೂ ಅಧಿಕಾರಿಗಳು ಕ್ರಮ ಜರುಗಿಸುತ್ತಿಲ್ಲ.ಇದನ್ನು ಖಂಡಿಸಿ ಗ್ರಾಮ ಪಂಚಾಯಿತಿ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು, ಪೋಷಕರು, ಗ್ರಾಮಸ್ಥರು ಆ ಜಾಗದಲ್ಲಿ ಧರಣಿ ನಡೆಸಲು ತೀರ್ಮಾನಿಸಿದ್ದೇವೆ. 

Chikkamagaluru: ಪ್ರಸಿದ್ಧ ಪ್ರವಾಸಿ ತಾಣ ವಸಿಷ್ಠ ತೀರ್ಥಕ್ಕೆ ಹೋಗಲುಬೇಕು ಡಬಲ್ ಗುಂಡಿಗೆ!

ಜಾಗ ತೆರವುಗೊಳಿಸುವ ವರೆಗೆ ಮುಷ್ಕರ ಮುಂದುವರಿಸುವುದಾಗಿ ಎಚ್ಚರಿಕೆ ನೀಡಿದರು. ತದನಂತರ ಸ್ಥಳಕ್ಕೆ ಆಗಮಿಸಿದ ಕಂದಾಯ ಇಲಾಖೆಯ ಅಧಿಕಾರಿಗಳು ಶೀಘ್ರವೇ ತೆರೆವುಗೊಳಿಸುವ ಭರವಸೆ ನೀಡಿದ ಮೇಲೆ ಪ್ರತಿಭಟನೆಯನ್ನು ಕೈಬಿಡಲಾಯಿತು. ಪ್ರತಿಭಟನೆಯಲ್ಲಿ ಗ್ರಾ.ಪಂ. ಉಪಾಧ್ಯಕ್ಷೆ ಗೀತಾ ಕೆ.ಆರ್., ಸದಸ್ಯರಾದ ಜಯಮ್ಮ, ಮನೋಜ್, ಪ್ರಕಾಶ್ ಮತ್ತು ಗ್ರಾಮಸ್ಥರು, ಪೋಷಕರು ಉಪಸ್ಥಿತರಿದ್ದರು.

click me!