ಸಮರ್ಪಕ ಚಿಕಿತ್ಸೆ ಸಿಗದೆ ಕೊರೋನಾ ಸೋಂಕಿತರ ಸಾವು: ತನಿಖೆಗೆ ಆದೇಶ

By Kannadaprabha NewsFirst Published Sep 6, 2020, 9:44 AM IST
Highlights

ಸಕಾಲದಲ್ಲಿ ಚಿಕಿತ್ಸೆ ದೊರೆಯದೆ ಅನೇಕ ಕೊರೋನಾ ಸೋಂಕಿತರ ಸಾವು| ಸಾವಿನ ಪ್ರಕರಣ ಕುರಿತು ವೈದ್ಯಾಧಿಕಾರಿಗಳು ಮೂರು ಆಸ್ಪತ್ರೆಗಳಿಗೆ ಭೇಟಿ ನೀಡಿ ನಡೆಸಿದ ವಿಚಾರಣೆಯ ವರದಿಯನ್ನು ಸರ್ಕಾರಿ ವಕೀಲರು ನ್ಯಾಯಪೀಠಕ್ಕೆ ಸಲ್ಲಿಕೆ|

ಬೆಂಗಳೂರು(ಸೆ.06): ಸಮರ್ಪಕವಾಗಿ ಚಿಕಿತ್ಸೆ ಲಭವಿಸದೆ ಇಬ್ಬರು ವ್ಯಕ್ತಿಗಳು ಸಾವನ್ನಪ್ಪಿದ ಪ್ರಕರಣಗಳನ್ನು ಹಿರಿಯ ಪೊಲೀಸ್‌ ಅಧಿಕಾರಿಯಿಂದ ತನಿಖೆ ನಡೆಸಿ ವರದಿ ಸಲ್ಲಿಸುವಂತೆ ಹೈಕೋರ್ಟ್‌ ಸರ್ಕಾರಕ್ಕೆ ನಿರ್ದೇಶಿಸಿದೆ.

ನಗರದಲ್ಲಿ ಸಕಾಲದಲ್ಲಿ ಚಿಕಿತ್ಸೆ ದೊರೆಯದೆ ಅನೇಕ ಕೊರೋನಾ ಸೋಂಕಿತರು ಸಾವನ್ನಪ್ಪಿದ್ದಾರೆ ಎಂದು ವಕೀಲರಾದ ಗೀತಾ ಮಿಶ್ರಾ, ಭಾರತ್‌ ಪುನರುತ್ಥಾನ ಟ್ರಸ್ವ್‌ ಸೇರಿ ಸಲ್ಲಿಸಿದ್ದ ಅರ್ಜಿಗಳು ಮತ್ತು ಚಿಕ್ಕನರಸಿಂಹಯ್ಯ ಎಂಬುವವರು ಹೈಕೋರ್ಟ್‌ಗೆ ಬರೆದ ಪತ್ರ ಆಧರಿಸಿ ದಾಖಲಿಸಿಕೊಂಡ ಸ್ವಯಂ ಪ್ರೇರಿತ ಅರ್ಜಿಗಳು ಮುಖ್ಯ ನ್ಯಾಯಮೂರ್ತಿ ಎ.ಎಸ್‌. ಓಕ ಅವರ ನೇತೃತ್ವದ ವಿಭಾಗೀಯ ನ್ಯಾಯಪೀಠದ ಮುಂದೆ ಶುಕ್ರವಾರ ವಿಚಾರಣೆಗೆ ಬಂದಿದ್ದವು.

ಕೇಳಿದವರಿಗೆಲ್ಲಾ ಕೊರೋನಾ ಟೆಸ್ಟ್‌ ಮಾಡಿ!

ವಿಚಾರಣೆ ವೇಳೆ ಡಾ.ಮಂಜುನಾಥ ಅವರ ಸಾವಿನ ಪ್ರಕರಣ ಕುರಿತು ವೈದ್ಯಾಧಿಕಾರಿಗಳು ಮೂರು ಆಸ್ಪತ್ರೆಗಳಿಗೆ ಭೇಟಿ ನೀಡಿ ನಡೆಸಿದ ವಿಚಾರಣೆಯ ವರದಿಯನ್ನು ಸರ್ಕಾರಿ ವಕೀಲರು ನ್ಯಾಯಪೀಠಕ್ಕೆ ಸಲ್ಲಿಸಿದರು. ಅದನ್ನು ಪರಿಶೀಲಿಸಿ ಅತೃಪ್ತಿ ವ್ಯಕ್ತಪಡಿಸಿದ ನ್ಯಾಯಪೀಠ, ತುಂಬಾ ಔಪಚಾರಿಕವಾಗಿ ತನಿಖೆ ನಡೆಸಲಾಗಿದೆ. 

ಇದು ತನಿಖಾ ವರದಿ ಎಂಬುದಾಗಿ ಹೇಳಲಾಗುವುದಿಲ್ಲ ಎಂದು ತಿಳಿಸಿತು. ನಂತರ ಚಿಕ್ಕ ನರಸಿಂಹಯ್ಯ ಹಾಗೂ ಡಾ.ಮಂಜುನಾಥ ಅವರ ಸಾವಿನ ಪ್ರಕರಣಗಳನ್ನು ಹಿರಿಯ ಪೊಲೀಸ್‌ ಅಧಿಕಾರಿಗಳಿಂದ ತನಿಖೆ ನಡೆಸಿ ವರದಿಯನ್ನು ಮುಂದಿನ ವಿಚಾರಣೆ ವೇಳೆ ಸಲ್ಲಿಸಬೇಕು ಎಂದು ಸರ್ಕಾರಕ್ಕೆ ಸೂಚಿಸಿ ವಿಚಾರಣೆಯನ್ನು ಸೆ.9ಕ್ಕೆ ಮುಂದೂಡಿತು.

click me!