Heavy Rain in Bengaluru: ನಗರದಲ್ಲಿ ಮಳೆರಾಯನ ಆರ್ಭಟ: ಯೆಲ್ಲೋ ಅಲರ್ಟ್

By Kannadaprabha NewsFirst Published Sep 5, 2022, 7:49 AM IST
Highlights
  • ಮಳೆರಾಯನ ಆರ್ಭಟ: ನಗರದಲ್ಲಿ ಯೆಲ್ಲೋ ಅಲರ್ಟ್
  •  ನಗರದಲ್ಲಿ ಮುಂದಿನ ಮೂರ್ನಾಲ್ಕು ದಿನ ಭರ್ಜರಿ ಮಳೆಯಾಗುವ ಸಾಧ್ಯತೆ
  • ದೇವರಜೀವನಹಳ್ಳಿ, ಆರ್‌ಟಿನಗರ, ಕೋರಮಂಗಲ ಸೇರಿದಂತೆ ವಿವಿಧ ಕಡೆ 10ಕ್ಕೂ ಅಧಿಕ ಮರ ಮುರಿದು ಬಿದ್ದಿವೆ.

ಬೆಂಗಳೂರು ಸೆ.5 : ನಗರದಲ್ಲಿ ಭಾನುವಾರವೂ ಮಳೆರಾಯನ ಅರ್ಭಟ ಮುಂದುವರೆದಿದ್ದು, ಹತ್ತಕ್ಕೂ ಅಧಿಕ ಕಡೆ ಮರ ಹಾಗೂ ಮರದ ರೆಂಬೆ ಕೊಂಬೆಗಳು ಧರೆಗುರುಳಿದ ವರದಿಯಾಗಿದೆ. ಉಳಿದಂತೆ ರಸ್ತೆ, ಅಂಡರ್‌ ಪಾಸ್‌ ಹಾಗೂ ಮೇಲ್ಸೇತುವೆಗಳ ಮೇಲೆ ನೀರು ನಿಂತು ವಾಹನ ಸಂಚಾರಕ್ಕೆ ತೊಂದರೆ ಉಂಟಾಯಿತು. ಕಳೆದೊಂದು ವಾರದಿಂದ ನಗರದಲ್ಲಿ ಸಂಜೆಯ ನಂತರ ನಿರಂತವಾಗಿ ಮಳೆಯಾಗುತ್ತಿದ್ದು, ಭಾನುವಾರ ಬೆಳಗ್ಗೆಯಿಂದ ಸಂಜೆವರೆಗೆ ಮಳೆ ಸೂರ್ಯನ ದರ್ಶನವಾಯಿತು. ಸಂಜೆ 7 ಗಂಟೆ ಸುಮಾರಿಗೆ ಮೋಡ ಕವಿದ ವಾತಾವರಣ ಸೃಷ್ಟಿಯಾಗಿ ಒಮ್ಮೆಲೇ ಧಾರಾಕಾರವಾಗಿ ಮಳೆ ಸುರಿಯಿತು. ದೇವರಜೀವನಹಳ್ಳಿ, ಆರ್‌ಟಿನಗರ, ಕೋರಮಂಗಲ ಸೇರಿದಂತೆ ನಗರದ ವಿವಿಧ ಕಡೆ 10ಕ್ಕೂ ಅಧಿಕ ಮರ ಹಾಗೂ ಮರದ ರಂಬೆ ಕೊಂಬೆಗಳು ಮುರಿದು ಬಿದ್ದಿವೆ.

ರಸ್ತೆಗಳು ಜಲಾವೃತ: ನಗರದ ಕಸ್ತೂರಿ ಬಾ ರಸ್ತೆ, ರಿಚ್‌ಮಂಡ್‌ ರಸ್ತೆ ಸಂಪೂರ್ಣವಾಗಿ ಜಲಾವೃತವಾಗಿದ್ದವು. ತುಮಕೂರು ರಸ್ತೆ, ಮಲ್ಲೇಶ್ವರ, ಎಂಜಿ ರಸ್ತೆ, ಡಬ್ಬಲ್‌ ರೋಡ್‌, ಆನಂದ್‌ ರಾವ್‌ ವೃತ್ತ ಸೇರಿದಂತೆ ನಗರದ ಪ್ರಮುಖ ರಸ್ತೆಗಳು ಹಾಗೂ ಅಂಡರ್‌ ಪಾಸ್‌ನಲ್ಲಿ ನೀರು ನಿಂತುಕೊಂಡ ಪರಿಣಾಮ ವಾಹನ ಸಂಚಾರಕ್ಕೆ ಸಮಸ್ಯೆ ಎದುರಾಯಿತು. ಶಿವಾನಂದ ವೃತ್ತದ ಬಳಿ ಮ್ಯಾನ್‌ ಹೋಲ್‌ನಿಂದ ನೀರು ಹೊರ ಬಂದು ಸಮಸ್ಯೆ ಉಂಟಾಯಿತು.

Bengaluru Rain: ಸಂಜೆ 4 ಗಂಟೆಗೆ ಸಿಎಂ ಬೊಮ್ಮಾಯಿ‌ ಸಿಟಿ ರೌಂಡ್ಸ್

ಯೆಲ್ಲೋ ಅಲರ್ಟ್: ನಗರದಲ್ಲಿ ಮುಂದಿನ ಮೂರ್ನಾಲ್ಕು ದಿನ ಭರ್ಜರಿ ಮಳೆಯಾಗುವ ಸಾಧ್ಯತೆಯಿದೆ. ಬುಧವಾರ ಬೆಳಗ್ಗೆ 8.30ರ ತನಕ ನಗರಕ್ಕೆ ‘ಯೆಲ್ಲೋ ಅಲರ್ಚ್‌’ (6.45 ಸೆಂ. ಮೀ ನಿಂದ 11.55 ಸೆಂ.ಮೀ) ಎಚ್ಚರಿಕೆ ನೀಡಲಾಗಿದೆ.ರಾಜಮಹಲ್‌ ಗುಟ್ಟಹಳ್ಳಿ 8ಸೆಂ.ಮೀ, ಬಾಣಸವಾಡಿ ಮತ್ತು ವಿದ್ಯಾಪೀಠ 7.2, ಸಂಪಂಗಿರಾಮನಗರ 6.8, ಸೆಂ.ಮೀ, ಬೆಳ್ಳಂದೂರು 6.7 ಸೆಂ.ಮೀ, ವರ್ತೂರು 5.8, ಮಾರತಹಳ್ಳಿ 5.6, ಹಂಪಿನಗರ 4.4 ಸೆಂ.ಮೀ

ಬಾಗಲಕುಂಟೆ ಮತ್ತು ರಾಜರಾಜೇಶ್ವರಿ ನಗರ (2), ಎಚ್‌ಎಎಲ್‌ ತಲಾ 6.4, ದೊಡ್ಡನೆಕ್ಕುಂದಿ 5.4, ಹೆಮ್ಮಿಗೆಪುರ 3.3, ಕೊನೇನ ಅಗ್ರಹಾರ 4.9, ದೊಡ್ಡಬಿದಿರಕಲ್ಲು 2.8, ದಯಾನಂದನಗರ 2.5, ಕಮ್ಮನಹಳ್ಳಿ ಮತ್ತು ಎಚ್‌.ಗೊಲ್ಲಹಳ್ಳಿ ತಲಾ 2.3, ಮನೋರಾಯನಪಾಳ್ಯ ಮತ್ತು ಶೆಟ್ಟಿಹಳ್ಳಿ ತಲಾ 2.1 ಸೆಂ.ಮೀ ಮಳೆಯಾಗಿದೆ. 

 

 

click me!