ಕೊರೋನಾ ಸೋಂಕಿತ ಶವಕ್ಕೆ ಸಂಸ್ಕಾರ ನೆರವೇರಿಸುವ ಆಶಾಗೆ ಕುಮಾರಸ್ವಾಮಿ ಮೆಚ್ಚುಗೆ

By Suvarna NewsFirst Published Jul 9, 2020, 8:34 PM IST
Highlights

ಕೊರೋನಾ ಸಾಂಕ್ರಾಮಿಕ ರೋಗದಿಂದ ಮೃತಪಟ್ಟವರನ್ನು ಅವರ ಸಂಬಂಧಿಕರೆ ಮುಟ್ಟಲು ಹಿಂದೇಟು ಹಾಕುತ್ತಿದ್ದಾರೆ. ಅದೆಷ್ಟೋ ಸೋಂಕಿತರು ಬೀದಿ ಹೆಣವಾಗುತ್ತಿದ್ದರೆ, ಇತ್ತೀಚೆಗೆ ಅಮಾನವೀಯವಾಗಿ ಗುಂಡಿಗೆ ಶವಗಳನ್ನು ಎಸೆಯಲಾಗುತ್ತಿದೆ. ಆದರೆ ಇಲ್ಲೊಂದು ಮಹಿಳಾ ತಂಡ ಇಂತಹ ಅನಾಥ ಶವಗಳನ್ನು ವಿಧಿವಿಧಾನ ಮೂಲಕ ಶವಸಂಸ್ಕಾರ ಮಾಡಿ ನೈಜ ಮನುಷ್ಯತ್ವ ಮೆರೆಯುತ್ತಿದೆ

ರಾಮನಗರ, (ಜುಲೈ.09): ಕೊರೋನಾ ಮಾಹಾಮಾರಿಗೆ ಬಲಿಯಾದವರನ್ನ ಮುಟ್ಟಲು ಕುಟುಂಬದ ಸಂಬಧಿಕರೇ ಹಿಂಜರಿಯುತ್ತಿದ್ದನ್ನು ನಾವು ನೋಡುತ್ತಿದ್ದೇವೆ. 

ಆದ್ರೆ, ರಾಮನಗರ ಜಿಲ್ಲೆ ಚನ್ನಪಟ್ಟಣದ ಆಶಾ ಎನ್ನುವ ಹೆಣ್ಣುಮಗಳು ಕೊರೋನಾ ಸೋಂಕಿತ ಶವಗಳನ್ನೂ ಸಹ ವಿಧಿವಿಧಾನ ಮೂಲಕ ಅಂತ್ಯಸಂಸ್ಕಾರ ಮಾಡುತ್ತಾರೆ. ಇದಕ್ಕೆ ಮಾಜಿ ಸಿಎಂ ಎಚ್‌.ಡಿ.ಕುಮಾರಸ್ವಾಮಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಅವು ಬೀದಿ ಬದಿ ಹೆಣಗಳೇ ಆಗಲೀ, ರೈಲಿಗೆ ಸಿಲುಕಿ ಆತ್ಮಹತ್ಯೆ ಮಾಡಿಕೊಂಡ ಜೀವಗಳೇ ಆಗಲೀ, ವಾರಸುದಾರರಿಲ್ಲದ ಶವಗಳಿಗೆ ಆಶಾ, ಕಳೆದ ಮೂರು ವರ್ಷಗಳಿಂದ ಮುಕ್ತಿಕೊಡುವ ಕೆಲಸ ನಿರ್ವಹಿಸುತ್ತಾ ಬರುತ್ತಿದ್ದಾರೆ.

ಬಳ್ಳಾರಿ: ಅಮಾನವೀಯ ಘಟನೆ, ಮಳೆಯ ನಡುವೆಯೇ ಅನಾಥವಾಗಿದ್ದ ಮೃತದೇಹ
 
ಆಶಾ ಇತರೆ ಮೂವರ ಜೊತೆ ಸೇರಿಕೊಂಡು ಜೀವರಕ್ಷಾ ಚಾರಿಟೇಬಲ್ ಟ್ರಸ್ಟ್ ಹೆಸರಿನಲ್ಲಿ ಚನ್ನಪಟ್ಟಣದಲ್ಲಿ ಈ ಕಾಯಕದಲ್ಲಿ ತೊಡಗಿದ್ದಾರೆ. ಪೊಲೀಸರಿಂದ ಬಂದ ಕರೆಯೋ ಅಥವಾ ಇತರೆ ಯಾರೇ ಈ ರೀತಿ ಶವದ ಮಾಹಿತಿ ನೀಡಿದ ತಕ್ಷಣ ಈ ಜೀವರಕ್ಷಾ ಚಾರಿಟೇಬಲ್ ಟ್ರಸ್ಟ್ ಹಾಜರಾಗುತ್ತದೆ. 

ಈ ರೀತಿ ಅನಾಥಶವಗಳಿಗೆ ಅಂತ್ಯಸಂಸ್ಕಾರ ಮಾಡಲು ಪ್ರೇರಣೆ ಒಂದು ಕರೆಯಂತೆ. ಮೂರು ವರ್ಷದ ಹಿಂದೆ ಆಶಾ ತನ್ನ ಭಾವರೊಂದಿಗೆ ರೈಲ್ವೆ ಹಳಿ ಮೇಲೆ ಅನಾಥವಾಗಿ ರಕ್ತಸಿಕ್ತವಾಗಿ ಬಿದ್ದಿದ್ದ ಶವವನ್ನು ಮುಟ್ಟಲು ಯಾರೂ ಹತ್ತಿರ ಬಾರದಿರುವುದನ್ನು ಕಂಡು ಅವರ ಮನಸು ಕರಗಿಹೋಯಿತಂತೆ. ಅಂದಿನಿಂದ ಇಂತಹ ಅನಾಥ ಶವಗಳಿಗೆ ಅಂತ್ಯಸಂಸ್ಕಾರ ಮಾಡಬೇಕೆಂದು ನಿರ್ಧರಿಸಿ ಈ ಟ್ರಸ್ಟ್ ನಿರ್ಮಿಸಿರುವುದಾಗಿ ಆಶಾ ಹೇಳುತ್ತಾರೆ. 

ಆಶಾ ಸೇವೆ ಮಾಜಿ ಸಿಎಂ ಎಚ್‌ಡಿಕೆ ಮೆಚ್ಚುಗೆ

ಹೌದು.. ಆಶಾ ಸೇವೆ ಮೆಚ್ಚುಗೆ ಪಡೆದಿದ್ದು, ಮಾಜಿ ಮುಖ್ಯಮಂತ್ರಿ ರಾಮನಗರ ಶಾಸಕ ಎಚ್‌.ಡಿ.ಕುಮಾರಸ್ವಾಮಿ ಸಹ ಶ್ಲಾಘಿಸಿ ಟ್ವೀಟ್ ಮಾಡಿದ್ದಾರೆ. ಕೊರೋನಾ ಭೀತಿಯ ಈ ದಿನಗಳಲ್ಲಿ ಶವಸಂಸ್ಕಾರ ಮಾಡಲು ಜನರು ಹಿಂದೆ ಸರಿಯುತ್ತಿದ್ದಾರೆ. ಆದರೆ ಚನ್ನಪಟ್ಟಣದ ಆಶಾ ಮತ್ತವರ ತಂಡ ಅನಾಥ ಶವಗಳಿಗೆ ಸಂಸ್ಕಾರ ಮಾಡುತ್ತ ಇತರರಿಗೆ ಮಾದರಿ ಆಗಿದ್ದಾರೆ. ಅವರ ಕಾರ್ಯ ಜನಮೆಚ್ಚುವಂಥದ್ದು ಎಂದಿದ್ದಾರೆ.
 

click me!