
ಬೆಂಗಳೂರು (ಮಾ.3): ನಾನು ಇಲಾಖೆ ಸಚಿವನಾಗಿದ್ದಾಗ ಪುಸ್ತಕಗಳನ್ನು ನಿರಂತರವಾಗಿ ಖರೀದಿಸಲು ಗ್ರಂಥಾಲಯ ಇಲಾಖೆಯ ನಿವೃತ್ತ ನಿರ್ದೇಶಕ ಪಿ.ವೈ.ರಾಜೇಂದ್ರಕುಮಾರ್ ಇವರೇ ಭದ್ರ ಬುನಾದಿಯಾಗಿದ್ದರು. ಇದರಿಂದ ಲೇಖಕರಿಗೂ ಪ್ರೋತ್ಸಾಹ ದೊರೆಯುವಂತಾಯಿತು. ಈಗ ಸಮರ್ಪಕವಾಗಿ ಈ ಕಾರ್ಯ ಆಗುತ್ತಿಲ್ಲ. ಸರ್ಕಾರದ ಹಂತದಲ್ಲಿ ಮಾತನಾಡಿ ಪುಸ್ತಕ ಖರೀದಿಗೆ ಸೂಚನೆ ನೀಡುತ್ತೇನೆ ಎಂದು ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಭರವಸೆ ನೀಡಿದರು.
ನಗರದ ಕುಮಾರ ಪಾರ್ಕ್ನ ಗಾಂಧಿ ಭವನದಲ್ಲಿ ಕರ್ನಾಟಕ ಸಾರ್ವಜನಿಕ ಗ್ರಂಥಾಲಯ ಇಲಾಖೆಯ ನಿವೃತ್ತ ನಿರ್ದೇಶಕ ಡಾ.ಪಿ.ವೈ.ರಾಜೇಂದ್ರಕುಮಾರ್ ಬರೆದ ಗ್ರಾಮೀಣ ಜ್ಞಾನ ಸಮುಚ್ಚಯಗಳು: ಒಂದು ಪರಿಕಲ್ಪನೆ ಪುಸ್ತಕ ಬಿಡುಗಡೆಗೊಳಿಸಿ ಮಾತನಾಡಿದ ಅವರು, ಗ್ರಂಥಾಲಯ ಇಲಾಖೆ ಮೂಲಕ ಲೇಖಕರಿಂದ ಪ್ರತಿ ವರ್ಷ 300 ಪುಸ್ತಕ ನಿರಂತರವಾಗಿ ಖರೀದಿಸಲು ಸರ್ಕಾರ ವ್ಯವಸ್ಥೆ ಮಾಡಬೇಕು. 2006-07ರಲ್ಲಿ ನಾನು ಗ್ರಂಥಾಲಯ ಇಲಾಖೆ ಸಚಿವನಾಗಿದ್ದಾಗ ಲೇಖಕರಿಂದ 300 ಕನ್ನಡ ಪುಸ್ತಕ ಖರೀದಿಸುವ ಯೋಜನೆಯನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಲಾಗಿತ್ತು. ಆದರೆ, ಕೆಲ ವರ್ಷದಿಂದ ಕರ್ನಾಟಕ ಗ್ರಂಥಾಲಯ ಇಲಾಖೆ ಮೂಲಕ ಲೇಖಕರಿಂದ ಪ್ರತಿ ವರ್ಷವೂ ಸಮರ್ಪಕವಾಗಿ ಪುಸ್ತಕಗಳನ್ನು ಖರೀದಿಸುತ್ತಿಲ್ಲ ಎಂದು ದೂರಿದರು.
ಹಿರಿಯ ಸಾಹಿತಿ ಹಂಪ ನಾಗರಾಜಯ್ಯ ಮಾತನಾಡಿ, ರಾಜೇಂದ್ರ ಕುಮಾರ್ ಅವರ ಅವಧಿಯಲ್ಲಿ ಗ್ರಂಥಾಲಯ ಇಲಾಖೆಯ ನಿರ್ವಹಣೆಯು ಉತ್ತಮವಾಗಿತ್ತು. ಜೈನ ಸಾಹಿತ್ಯಕ್ಕೆ ಸಂಬಂಧಿಸಿದ ಕೃತಿಗಳ ಪ್ರಕಟಣೆಗೆ ಪ್ರೋತ್ಸಾಹ ದೊರೆತಿತ್ತು ಎಂದು ಪ್ರಶಂಸಿಸಿದರು.
ಕೋಲ್ಕತ್ತದ ಭಾರತೀಯ ರಾಷ್ಟ್ರೀಯ ಗ್ರಂಥಾಲಯದ ಮಾಜಿ ಮಹಾನಿರ್ದೇಶಕ ಹಾಗೂ ಲೇಖಕ ಪಿ.ವೈ.ರಾಜೇಂದ್ರಕುಮಾರ ಮಾತನಾಡಿ, ಗ್ರಂಥಾಲಯ ಇಲಾಖೆಯ ಎಲ್ಲ ಸಿಬ್ಬಂದಿಯರ ಸಹಕಾರದಿಂದ ಇಲಾಖೆಗೆ ಒಳ್ಳೆಯ ಕೆಲಸ ಮಾಡಲು ಸಾಧ್ಯವಾಗಿದೆ. ತುಮಕೂರು ವಿಶ್ವವಿದ್ಯಾಲಯಕ್ಕೆ ಸಲ್ಲಿಸಿದ ಡಿಲಿಟ್ ಪದವಿ ಪ್ರಬಂಧವನ್ನು ಈಗ ಪುಸ್ತಕ ರೂಪದಲ್ಲಿ ಪ್ರಕಟಿಸಿದ್ದು, ಗ್ರಂಥಾಲಯದ ಮಹತ್ವವನ್ನು ಇದು ತಿಳಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಎಲ್ಐಎಸ್ ಅಕಾಡೆಮಿ ಅಧ್ಯಕ್ಷ ಡಾ.ಪಿ.ವಿ.ಕೊಣ್ಣೂರ ಮಾತನಾಡಿ, ಇಡೀ ರಾಷ್ಟ್ರದಲ್ಲಿ ಗ್ರಂಥಾಲಯ ದಿನಾಚರಣೆಯನ್ನು ಆರಂಭಿಸಿದ್ದೆ ಕರ್ನಾಟಕದಲ್ಲಿ ಎಂಬುವುದು ಹೆಮ್ಮೆಯ ವಿಚಾರ. ಈ ದಿನಾಚರಣೆ ಆರಂಭದಲ್ಲಿ ಡಾ.ರಾಜೇಂದ್ರಕುಮಾರ್ ಅವರು ಕಾರಣಕರ್ತರಲ್ಲಿ ಒಬ್ಬರು. ಅವರು ಅಂತಹ ಸಂದರ್ಭಕ್ಕೆ ಸದಾ ಸ್ಮರಿಸಬೇಕು. ಗ್ರಾಮೀಣ ಭಾಗದಲ್ಲಿ ಗ್ರಂಥಾಲಯಗಳಿಗೆ ಹೆಚ್ಚುಪ್ರಚಲಿತಕ್ಕೆ ಬರಲು ಇವರು ಒಬ್ಬರು. ಹೀಗಾಗಿ ಗ್ರಾಮೀಣ ಗ್ರಂಥಾಲಯಗಳಿಗೆ ಹೆಚ್ಚು ತಲಸ್ಪರ್ಶಿ ನೀಡಿದ್ದು ಹೆಮ್ಮೆಯ ವಿಚಾರ ಎಂದರು.
ಸಮಗ್ರ ಶಿಕ್ಷಣ ನಿರ್ದೇಶಕ ಡಾ.ಸತೀಶ್ ಕುಮಾರ್ ಹೊಸಮನಿ ಮಾತನಾಡಿ, ಲೇಖಕ ಪಿ.ವೈ.ರಾಜೇಂದ್ರಕುಮಾರ ಅವರ ಬರೆದ ಪುಸ್ತಕವು ಕೇವಲ ಗ್ರಂಥಾಲಯ ಇಲಾಖೆಗಷ್ಟೇ ಸಿಮೀತವಾಗಿಲ್ಲ, ನಾನು ಸದ್ಯ ಕಾರ್ಯ ನಿರ್ವಹಿಸುತ್ತಿರುವ ಶಿಕ್ಷಣ ಇಲಾಖೆಯಲ್ಲಿಯೂ ಇದನ್ನು ಅಳವಡಿಸುವ ಅಗತ್ಯತೆ ಇದೆ ಎಂದು ಇಲಾಖೆಯ ಹತ್ತಾರು ಯೋಜನೆಗಳ ಕುರಿತು ವಿಸ್ತೃತವಾಗಿ ವಿವರಿಸಿದರು.
ನಿವೃತ್ತ ಪ್ರಾಂಶುಪಾಲ ಕೆ.ಈ.ರಾಧಾಕೃಷ್ಣ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಗೌರವ ಅತಿಥಿಗಳಾಗಿ ಕೆಜೆಎ ಅಧ್ಯಕ್ಷ ಎಸ್.ಜಿತೇಂದ್ರಕುಮಾರ್, ಶಾಸಕ ಮತ್ತು ಕೈಗಾರಿಕೋದ್ಯಮಿ ಕೆ.ಎಚ್.ಪುಟ್ಟಸ್ವಾಮಿಗೌಡ, ಬೆಂಗಳೂರಿನ ಡಿಪಿಎಲ್ ಆಯುಕ್ತರು ಬಸವರಾಜೇಂದ್ರ, ನವದೆಹಲಿಯ ಇಂಡಿಕಾ ಪಬ್ಲಿಷರ್ಸ್ ಪ್ರಶಾಂತ್ ಜೈನ್ ಆಗಮಿಸಿದ್ದರು. ಡಾ.ಜಿನಶ್ರೀ ರಾಜೇಂದ್ರಕುಮಾರ್, ಡಾ.ದಿವ್ಯಶ್ರೀ ರಾಜೇಂದ್ರಕುಮಾರ್ ಅವರು ಸ್ವಾಗತಿಸಿ ವಂದಿಸಿದರು.
ನನ್ನ ಅವಧಿಯಲ್ಲಿ 2600 ಗ್ರಾಮೀಣ ಗ್ರಂಥಾಲಯ ಆರಂಭಿಸಿ ಓದುವ ಸಂಸ್ಕೃತಿಗೆ ಬಲ ತುಂಬಲಾಗಿತ್ತು. ಆ.12 ರಂದು ರಾಷ್ಟ್ರೀಯ ಗ್ರಂಥಾಲಯ ದಿನ ಆಚರಣೆಗೆ ಆದ್ಯತೆ ನೀಡಲಾಗಿತ್ತು. ಪಿ.ವೈ.ರಾಜೇಂದ್ರ ಕುಮಾರ್ ಅವರು ನಿವೃತ್ತಿ ನಂತರವೂ ಸಕ್ರಿಯರಾಗಿ ಕೆಲಸ ಮಾಡುತ್ತಿರುವುದು ಮಾದರಿಯಾಗಿದೆ.
-ಬಸವರಾಜ ಹೊರಟ್ಟಿ, ವಿಧಾನಪರಿಷತ್ ಸಭಾಪತಿ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ