Latest Videos

ಕರಾವಳಿ, ಮಲೆನಾಡಿನಲ್ಲಿ ಭಾರೀ ಮಳೆ: 4 ಜನ ಬಲಿ, ಇಂದೂ ಕೂಡ ರೆಡ್‌ ಅಲರ್ಟ್‌..!

By Kannadaprabha NewsFirst Published Jun 27, 2024, 7:02 AM IST
Highlights

ಇಂದೂ ಕೂಡ ಭಾರೀ ಮಳೆ ನಿರೀಕ್ಷೆಯಿದ್ದು, ಮುನ್ನೆಚ್ಚರಿಕಾ ಕ್ರಮವಾಗಿ ಕೊಡಗಿನ ವಿರಾಜಪೇಟೆ, ಪೊನ್ನಂಪೇಟೆ ತಾಲೂಕುಹಾಗೂ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅಂಗನವಾಡಿ ಮತ್ತು ಸರ್ಕಾರಿ ಶಾಲೆಗಳಿಗೆ ರಜೆ ಘೋಷಿಸ ಲಾಗಿದೆ. ಭಾರೀ ಗಾಳಿ ಮಳೆಯಿಂದಾಗಿ ಮೀನುಗಾರರಿಗೂ ಕಡಲಿಗಿಳಿಯದಂತೆ ಜಿಲ್ಲಾಡಳಿತಗಳು ಸೂಚಿಸಿದೆ.

ಬೆಂಗಳೂರು(ಜೂ.27): ಹಲವು ದಿನಗಳ ಬಳಿಕ ರಾಜ್ಯದ ಕರಾವಳಿ ಮತ್ತು ಮಲೆನಾಡು ಜಿಲ್ಲೆಗಳಲ್ಲಿ ಮತ್ತೆ ಮುಂಗಾರು ಮಳೆ ಆರ್ಭಟಿಸಿದ್ದು, ಭಾರೀ ಗಾಳಿಗೆ ಹಲವೆಡೆ ಮರ ಮತ್ತು ವಿದ್ಯುತ್ ಕಂಬ ಉರುಳಿಬಿದ್ದು, 30ಕ್ಕೂ ಹೆಚ್ಚು ಮನೆಗಳಿಗೆ ಹಾನಿಯಾಗಿದೆ. ಮಂಗಳೂರಲ್ಲಿ ಮನೆಯೊಂದರ ಮೇಲೆ ಕಾಂಪೌಂಡ್ ಕುಸಿದು ಒಂದೇ ಕುಟುಂಬದ ನಾಲ್ವರು ಅವಶೇಷಗಳಡಿ ಸಿಲುಕಿ ಮೃತಪಟ್ಟಿದ್ದಾರೆ.

ಇನ್ನು ಗುರುವಾರವೂ ಭಾರೀ ಮಳೆ ನಿರೀಕ್ಷೆಯಿದ್ದು, ಮುನ್ನೆಚ್ಚರಿಕಾ ಕ್ರಮವಾಗಿ ಕೊಡಗಿನ ವಿರಾಜಪೇಟೆ, ಪೊನ್ನಂಪೇಟೆ ತಾಲೂಕುಹಾಗೂ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅಂಗನವಾಡಿ ಮತ್ತು ಸರ್ಕಾರಿ ಶಾಲೆಗಳಿಗೆ ರಜೆ ಘೋಷಿಸ ಲಾಗಿದೆ. ಭಾರೀ ಗಾಳಿ ಮಳೆಯಿಂದಾಗಿ ಮೀನುಗಾರರಿಗೂ ಕಡಲಿಗಿಳಿಯದಂತೆ ಜಿಲ್ಲಾಡಳಿತಗಳು ಸೂಚಿಸಿದೆ.

ಮುಂದಿನ 3 ಗಂಟೆಗಳಲ್ಲಿ ಕರ್ನಾಟಕದ ಹಲವೆಡೆ ಬಿರುಗಾಳಿ‌ ಸಹಿತ ಭಾರೀ ಮಳೆ..!

ಮಲಗಿದ್ದಲ್ಲೇ ಸಮಾಧಿಯಾದ್ರು: 

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಳೆದೆರಡು ದಿನದಿಂದ ಭಾರಿ ಮಳೆಯಾಗುತ್ತಿದ್ದು ಉಳ್ಳಾಲ ತಾಲೂಕಿನ ಮುನ್ನೂರು ಗ್ರಾಮದ ಮದನಿನಗರದಲ್ಲಿ ಬುಧವಾರ ಮುಂಜಾನೆ ಕಾಂಪೌಂಡ್ ಗೋಡೆ ಮನೆ ಮೇಲೆ ಬಿದ್ದು ಒಂದೇ ಕುಟುಂಬದ ನಾಲ್ವರು ಮಲಗಿ ದಲ್ಲೇ ಸಜೀವ ಸಮಾಧಿಯಾದರು. ಯಾಸಿರ್ (45), ಅವರ ಪತ್ನಿ ಮರಿಯಮ್ಮ (40) ಮಕ್ಕಳಾದ ರಿಹಾನ (11) ಮತ್ತು ರಿಫಾನ (17) ಮೃತರು. ಹಿರಿಯ ಮಗಳು ಬಕ್ರೀದ್‌ಗೆಂದು ತಾಯಿ ಮನೆಗೆ ಬಂದವರು ಹಿಂದಿನ ದಿನವಷ್ಟೇ ಕೇರಳದ ಗಂಡನ ಮನೆಗೆ ತೆರಳಿದ್ದರಿಂದ ಬದುಕುಳಿದಿದ್ದಾರೆ.

ಮಂಗಳವಾರ ರಾತ್ರಿಯಿಡೀ ಭಾರಿ ಮಳೆ ಸುರಿದ ಪರಿಣಾಮ ಅಬೂಬಕ್ಕರ್ ಎಂಬವರಿಗೆ ಸೇರಿದ ಮನೆಯ ಕಾಂಪೌಂಡ್ ಗೋಡೆ ಹಾಗೂ ಎರಡು ಅಡಕೆ ಮರಗಳು ಯಾಸಿರ್‌ಅವರ ಮನೆ ಮೇಲೆ ಉರುಳಿಬಿದ್ದಿದ್ದು, ಅದರಡಿ ಸಿಲುಕಿ ನಾಲ್ವರೂ ಮೃತಪಟ್ಟಿದ್ದಾರೆ. ಭಾರೀ ಶಬ್ದ ಕೇಳಿ ಓಡಿ ಬಂದ ಸ್ಥಳೀಯರು ಮತ್ತು ಅಗ್ನಿಶಾಮಕ ಸಿಬ್ಬಂದಿ ಮೂರು ಗಂಟೆಗಳ ನಿರಂತರ ಕಾರ್ಯಾಚರಣೆ ಬಳಿಕ ನಾಲ್ಕು ಮೃತದೇಹಗಳನ್ನು ಹೊರತೆಗೆದಿದ್ದಾರೆ.

ಇಂದಿನಿಂದ ಮೂರು ದಿನ ದ.ಕ, ಉಡುಪಿ, ಕೊಡಗಿನಲ್ಲಿ ಭಾರೀ ಮಳೆ: ರೆಡ್ ಅಲರ್ಟ್

ಬೆಳಗ್ಗೆ 6 ಗಂಟೆಗೆ ಭಾರೀ ಶಬ್ದ ಕೇಳಿ ಹೊರಗೆ ಬಂದು ನೋಡಿದೆವು. ಆಗ ಮನೆ ಮೇಲೆ ಗೋಡೆ ಕುಸಿದು ಬಿದ್ದಿತ್ತು. ತಕ್ಷಣ ಸ್ಥಳೀಯರೆಲ್ಲ ಸೇರಿ ಮನೆ ಬಾಗಿಲು ಒಡೆದೆವು. ಒಳ ಹೋದಾಗ ನಮಗೆ ಕರೆಂಟ್ ಶಾಕ್ ಹೊಡೆಯಿತು. ಬಳಿಕ ನಮ್ಮಲ್ಲೇ ಇದ್ದ ಎಲೆಕ್ನಿಶಿಯನ್ ಒಬ್ಬರು ಲೈನ್ ಆಫ್ ಮಾಡಿದ್ರು. ಆ ಬಳಿಕ ನಾವು ಕಾರ್ಯಾಚರಣೆ ನಡೆಸಲು ಶುರು ಮಾಡಿದೆವು. ಮೂವರು ಹಾಲ್‌ನಲ್ಲಿ ಮಲಗಿದ್ದರು. ಒಬ್ಬಳು ಕೋಣೆಯಲ್ಲಿದ್ದಳು. ನಾವು ಮೊದಲು ಮೂವರನ್ನು ಮಣ್ಣಿನ ಅಡಿಯಿಂದ ತೆಗೆದಾಗ ಬಾಲಕಿಯ ಕೈ ಅಲುಗಾಡ್ತಿತ್ತು. ಆದರೆ ರಸ್ತೆ ಕಿರಿದಾಗಿ ಆಂಬ್ಯುಲೆನ್ಸ್ ಬರಲಾಗದೆ ಆಸ್ಪತ್ರೆಗೆ ಸಾಗಿಸುವ ದಾರಿ ಮಧ್ಯೆ ಮೃತಪಟ್ಟಿದ್ದಾಳೆ ಎಂದು ರಕ್ಷಣಾ ಕಾರ್ಯದಲ್ಲಿ ಪಾಲ್ಗೊಂಡಿದ್ದ ಸ್ಥಳೀಯರು ತಿಳಿಸಿದ್ದಾರೆ.

ನದಿ ನೀರಿಮಟ್ಟ ಏರಿಕೆ: 

ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ಕೊಡಗು ಮತ್ತು ಚಿಕ್ಕಮಗಳೂರು ಜಿಲ್ಲೆಯಲ್ಲಿ ಕಳೆದ ಎರಡೂರು ದಿನಗಳಿಂದ ಉತ್ತಮ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಹಲವು ಮನೆಗಳಿಗೆ ಹಾನಿಯಾಗಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ.
ಕೊಡಗಿನಲ್ಲಿ ಕಾವೇರಿ ನದಿ ನೀರಿನ ಪ್ರಮಾಣ ಏರಿಕೆಯಾಗಿದ್ದು, ಭಾಗಮಂಡಲದ ತ್ರಿವೇಣಿ ಸಂಗಮ ಬಹುತೇಕ ಭರ್ತಿಯಾಗುವ ಹಂತ ತಲುಪಿದೆ. ಮರಾ ಬಿದ್ದು ಹಲವೆಡೆ ಸಂಚಾರ ಅಸ್ತವ್ಯಸ್ತಗೊಂಡಿದೆ. ಚಿಕ್ಕಮಗಳೂರಿನ ಶೃಂಗೇರಿಯಲ್ಲಿ ತುಂಗಾ ನದಿ ನೀರಿನ ಮಟ್ಟ ಏರಿಕೆಯಾಗಿದೆ. ಕಳಸ-ಮಂಗಳೂರು ರಾಜ್ಯ ಹೆದ್ದಾರಿಯ ಕುದುರೆಮುಖ ಸಮೀಪದ ನೆಲ್ಲಿಬೀಡು ಗ್ರಾಮದ ಬಳಿ ಮರವೊಂದು ಬಿದ್ದಿದೆ.

click me!