
ಬಾರ್ಕೂರುಜೂ.23): ಬಾಲಕಿಯೊಬ್ಬಳ ಸಮಯಪ್ರಜ್ಞೆಯಿಂದಾಗಿ ಅಪಘಾತದಿಂದ ಜೀವನ್ಮರಣ ಸ್ಥಿತಿಯಲ್ಲಿದ್ದ ಯುವತಿ ಬದುಕಿದ ಘಟನೆ ಭಾನುವಾರ ಇಲ್ಲಿನ ಚೌಳಿಕೆರೆ ಎಂಬಲ್ಲಿ ನಡೆದಿದೆ.
ಭಾನುವಾರ ಮಧ್ಯಾಹ್ನ 2 ಗಂಟೆ ಸುಮಾರಿಗೆ ಉದ್ಯಮಿ ವಕ್ವಾಡಿ ಸಂತೋಷ್ ಶೆಟ್ಟಿ(40), ಖಾಸಗಿ ಸಂಸ್ಥೆ ಉದ್ಯೋಗಿ ಶ್ವೇತಾ (23) ಅವರೊಂದಿಗೆ ಕಾರಿನಲ್ಲಿ ಹೋಗುತ್ತಿದ್ದಾಗ, ಕಾರು ನಿಯಂತ್ರಣ ತಪ್ಪಿ ಆವರಣ ಗೋಡೆ ಇಲ್ಲದ ಚೌಳಿ ಕೆರೆಗೆ ಬಿತ್ತು. ತಕ್ಷಣ ಸ್ಥಳೀಯರು ಹರಸಾಹಸ ಪಟ್ಟು ಕಾರಿನಲ್ಲಿದ್ದ ಇಬ್ಬರನ್ನು ಹೊರಗೆ ತೆಗೆದಿದ್ದರು. ಆದರೆ ಇಬ್ಬರೂ ಪ್ರಜ್ಞೆ ಕಳೆದುಕೊಂಡಿದ್ದರು.
ಕಾರು ಕೆರೆಗೆ ಬಿದ್ದ ಶಬ್ದ ಕೇಳಿ ಸಮೀಪದ ಮನೆಯ 10ನೇ ತರಗತಿಯ ನಮನಾ (15), ಮನೆಯವರೊಂದಿಗೆ ಕೆರೆಯ ಬಳಿ ಓಡಿ ಬಂದರು. ಪ್ರಜ್ಞೆ ಕಳೆದುಕೊಂಡಿದ್ದ ಯುವತಿ ಶ್ವೇತಾ ಅವರನ್ನು ನೋಡಿ, ತಕ್ಷಣ ಅವರ ಎದೆಯನ್ನು ಕೈಗಳಿಂದ ಒತ್ತಿ ಕೃತಕ ಉಸಿರಾಟವಾಗುವಂತೆ ಮಾಡಿದರು. ನಂತರ ಇಬ್ಬರನ್ನೂ ಆಸ್ಪತ್ರೆಗೆ ಸಾಗಿಸಲಾಯಿತು. ದಾರಿ ಮಧ್ಯೆ ಸಂತೋಷ್ ಶೆಟ್ಟಿಕೊನೆಯುಸಿರೆಳೆದಿದ್ದಾರೆ. ಶ್ವೇತಾ ಮಣಿಪಾಲದ ಕೆಎಂಸಿಯಲ್ಲಿ ಚೇತರಿಸಿಕೊಂಡಿದ್ದಾರೆ.
ಶ್ವೇತಾ ಅವರಿಗೆ ಸಕಾಲದಲ್ಲಿ ಪ್ರಥಮ ಚಿಕಿತ್ಸೆ ನೀಡಿದ್ದರಿಂದ ಅವರು ಬದುಕಿದರು ಎಂದು ವೈದ್ಯರು ಅಭಿಪ್ರಾಯಪಟ್ಟಿದ್ದಾರೆ. ಅವರಿಗೆ ಪ್ರಥಮ ಚಿಕಿತ್ಸೆ ನೀಡಿದ ನಮನಾ ಅವರೀಗ ಸಾರ್ವಜನಿಕ ಪ್ರಸಂಶೆಗೆ ಪಾತ್ರರಾಗಿದ್ದಾರೆ. ಆಕೆ ಪ್ರಥಮ ಚಿಕಿತ್ಸೆ ನೀಡಿದ ವಿಡಿಯೋ ಈಗ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ.
ತಾನು ಶಾಲೆಯಲ್ಲಿ ಎನ್ಸಿಸಿಯಲ್ಲಿ ಪ್ರಥಮ ಚಿಕಿತ್ಸೆ ಕಲಿತ್ತಿದ್ದರಿಂದ ತನಗೆ ಸಮಯಕ್ಕೆ ಸರಿಯಾಗಿ ಶ್ವೇತಾ ಅವರಿಗೆ ಉಸಿರಾಟಕ್ಕೆ ಸಹಾಯ ಮಾಡಲು ಸಾಧ್ಯವಾಯಿತು ಎಂದು ನಮನಾ ತಿಳಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ