
ಮದ್ದೂರು (ಜೂ.7) : ಪಟ್ಟಣದ ಚನ್ನೇಗೌಡನದೊಡ್ಡಿಯಲ್ಲಿ ರಾಗಿ ಒಕ್ಕಣೆ ವೇಳೆ ಯಂತ್ರಕ್ಕೆ ಕೈ ಸಿಲುಕಿ ತೀವ್ರವಾಗಿ ಗಾಯಗೊಂಡಿದ್ದ ರೈತ ಚಿಕಿತ್ಸೆ ಫಲಕಾರಿಯಾಗದೆ ಶುಕ್ರವಾರ ಮೃತಪಟ್ಟಿದ್ದಾನೆ. ಗ್ರಾಮದ ನಿವಾಸಿ ನಾಗೇಶ್ (50) ಮೃತಪಟ್ಟ ರೈತ. ಗುರುವಾರ ಮಧ್ಯಾಹ್ನ ರೈತರೊಬ್ಬರ ಜಮೀನಿನಲ್ಲಿ ರಾಗಿ ಒಕ್ಕಣೆ ಕೂಲಿ ಕೆಲಸಕ್ಕೆ ಹೋಗಿದ್ದ ವೇಳೆ ಒಕ್ಕಣೆ ಯಂತ್ರದೊಳಗೆ ಗೋಣಿಚೀಲ ಹೋಗುತ್ತಿರುವುದನ್ನು ಕಂಡು ಅದನ್ನು ತೆಗೆಯಲು ಹೋಗಿದ್ದಾನೆ. ಚೀಲದ ಜೊತೆಗೆ ನಾಗೇಶ್ನ ಬಲಗೈ ಯಂತ್ರದೊಳಗೆ ಸಿಲುಕಿ ತುಂಡಾಗಿದೆ.
ಘಟನೆಯನ್ನು ಕಂಡು ಸ್ಥಳದಲ್ಲಿದ್ದ ರೈತರು ಗಾಯಾಳು ನಾಗೇಶನನ್ನು ಮದ್ದೂರು ಆಸ್ಪತ್ರೆ ಕರೆತಂದು ಪ್ರಥಮ ಚಿಕಿತ್ಸೆ ನೀಡಿದ ನಂತರ ಮಂಡ್ಯ ಜಿಲ್ಲಾ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಈತನ ಪರಿಸ್ಥಿತಿ ಗಂಭೀರಗೊಂಡ ನಂತರ ವೈದ್ಯರ ಸಲಹೆ ಮೇರೆಗೆ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು.
ಚಿಕಿತ್ಸೆ ಫಲಕಾರಿಯಾಗದೆ ನಾಗೇಶ್ ಶುಕ್ರವಾರ ಬೆಳಗಿನ ಜಾವ ಕೊನೆ ಉಸಿರೆಳೆದಿದ್ದಾನೆ. ಈ ಸಂಬಂಧ ಮದ್ದೂರು ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.
ಸೂಕ್ತ ಪರಿಹಾರ ಮನವಿ:
ರೈತ ನಾಗೇಶ್ ಕೂಲಿ ಕೆಲಸದೊಂದಿಗೆ ತಮ್ಮ ಕುಟುಂಬದ ನಿರ್ವಹಣೆ ಮಾಡುತ್ತಿದ್ದರು. ಕುಟುಂಬದ ಆಧಾರ ಸ್ಥಂಭವಾಗಿದ್ದ ನಾಗೇಶ್ ಮೃತಪಟ್ಟಿದ್ದು, ಸರ್ಕಾರದ ವತಿಯಿಂದ ಸೂಕ್ತ ಪರಿಹಾರ ಕೊಡಿಸುವಂತೆ ಕುಟುಂಬಸ್ಥರು ಮನವಿ ಮಾಡಿದ್ದಾರೆ.
ಅಪರಿಚಿತ ಶವಗಳ ಪತ್ತೆ
ಪಾಂಡವಪುರ: ಪಟ್ಟಣದಲ್ಲಿ ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಅಪರಿಚಿತ ಪುರುಷ ಹಾಗೂ ಮಹಿಳೆ ಶವಗಳು ಪತ್ತೆಯಾಗಿವೆ.
ಪಟ್ಟಣದ ಉಪ ವಿಭಾಗಿಯ ಆಸ್ಪತ್ರೆ ಒಳಭಾಗದ ಹೊಂಗೆ ತೋಪಿನಲ್ಲಿ ಅಪರಿಚಿತ ವ್ಯಕ್ತಿ ಶವ ಪತ್ತೆಯಾಗಿದ್ದು, ಸುಮಾರು 60 ರಿಂದ 65 ವರ್ಷವಾಗಿದೆ. 5.5 ಅಡಿ ಎತ್ತರ, ಕಪ್ಪು, ಬಿಳಿ ಮತ್ತು ನೀಲಿ ಬಣ್ಣದ ಪಟಾಪಟ್ಟೆಯಿರುವ ತುಂಬು ತೋಳಿನ ಶರ್ಟ್, ನೀಲಿ ಬಣ್ಣದ ಜಾಕಿಂಗ್ ನಿಕ್ಕರ್, ಹಳೆಲುಂಗಿ ಧರಿಸಿದ್ದು, ಗಡ್ಡಮೀಸೆ ಬಿಟ್ಟಿದ್ದಾನೆ. ಈ ಸಂಬಂಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ವಾರಸುದಾರರಿದ್ದಲ್ಲಿ ದೂ-08232-224200/ ಮೊ-9480804800/ ದೂ-08236-255131/ ಮೊ-9480804874/ ಮೊ-9480804858 ಅನ್ನು ಸಂಪರ್ಕಿಸಬಹುದು ಎಂದು ಪಾಂಡವಪುರ ಪೋಲಿಸ್ ಠಾಣೆಯ ಆರಕ್ಷಕ ಉಪ ನೀರಿಕ್ಷಕರು ತಿಳಿಸಿದ್ದಾರೆ.
ಮನೆಯಲ್ಲಿಯೇ ಮಹಿಳೆ ಸಾವು
ಪಾಂಡವಪುರ: ಪಟ್ಟಣದ ಶಾಂತಿನಗರ ನಿವಾಸಿ ವಿ.ಚಂದ್ರಿಕ ಎಂಬ ಮಹಿಳೆ ಮನೆಯಲ್ಲಿಯೆ ಮೃತಪಟ್ಟಿದ್ದು, ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮೃತ ಹೆಂಗಸಿಗೆ ಸುಮಾರು 70 ವರ್ಷವಾಗಿದೆ. ಸುಮಾರು 5 ಅಡಿ ಎತ್ತರವಿದ್ದಾರೆ. ವಾರಸುದಾರರಿದ್ದಲ್ಲಿ ದೂ-08232-224200/ ಮೊ-9480804800/ , ದೂ-08236-255131/ ಮೊ-9480804874/ ಮೊ-9480804858 ಅನ್ನು ಸಂಪರ್ಕಿಸಬಹುದು ಎಂದು ಪಾಂಡವಪುರ ಪೋಲಿಸ್ ಠಾಣೆ ಆರಕ್ಷಕ ಉಪ ನೀರಿಕ್ಷಕರು ತಿಳಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ