ಆದಾಯ ಮೀರಿ ಆಸ್ತಿ ಪ್ರಕರಣ: 20 ವರ್ಷಗಳ ಲೆಕ್ಕ ಹಾಕಿದ ಪೊಲೀಸರು! ಜಮೀರ್‌ಗೆ ಲೋಕಾಯುಕ್ತ ಶಾಕ್

Kannadaprabha News   | Kannada Prabha
Published : Jul 11, 2026, 09:28 AM IST
Zameer Ahmed Khan

ಸಾರಾಂಶ

ಆದಾಯಕ್ಕಿಂತ ಹೆಚ್ಚು ಆಸ್ತಿ ಸಂಪಾದನೆ ಆರೋಪದ ಮೇಲೆ ಮಾಜಿ ಸಚಿವ ಜಮೀರ್ ಅಹಮದ್ ಖಾನ್ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ಕೋರಿ ಲೋಕಾಯುಕ್ತ ಪೊಲೀಸರು ರಾಜ್ಯಪಾಲರಿಗೆ ಮನವಿ ಸಲ್ಲಿಸಿದ್ದಾರೆ. ಐಎಂಎ ವಂಚನೆ ಪ್ರಕರಣದ ತನಿಖೆ ವೇಳೆ  ಜಮೀರ್ ಅವರು ಸುಮಾರು 25 ಕೋಟಿ ರೂ. ಮೌಲ್ಯದ ಅಕ್ರಮ ಆಸ್ತಿ ಪತ್ತೆ.

ಏನಿದು ಕೇಸ್‌?

2018ರಲ್ಲಿ ಐಎಂಎ ಕಂಪನಿ ವಂಚನೆ ಸಂಬಂಧ ಜಮೀರ್‌ ಅಹಮದ್‌ ಖಾನ್‌ ಮೇಲೆ ಇ.ಡಿ. ದಾಳಿ

ಅಕ್ರಮ ಆಸ್ತಿ ಸಂಪಾದನೆ ಶಂಕೆ ಇದ್ದು, ತನಿಖೆ ನಡೆಸಿ ಎಂದು ಅಂದಿನ ಎಸಿಬಿಗೆ ಸೂಚಿಸಿದ್ದ ಇ.ಡಿ.

  • ತನಿಖೆ ಪ್ರಾರಂಭ, ಎಸಿಬಿ ರದ್ದಾದ ಬಳಿಕ ಲೋಕಾಯುಕ್ತ ಪೊಲೀಸರಿಂದ ತನಿಖೆ ಮುಂದುವರಿಕೆ
  • ಆದಾಯಕ್ಕೂ ಮೀರಿ 25 ಕೋಟಿ ರು. ಆಸ್ತಿಯನ್ನು ಜಮೀರ್‌ ಗಳಿಸಿರುವುದಕ್ಕೆ ತನಿಖೆಯಲ್ಲಿ ಪುರಾವೆ
  •  ಚಾರ್ಜ್‌ಶೀಟ್‌ ಸಲ್ಲಿಸಲು ಪ್ರಾಸಿಕ್ಯೂಷನ್‌ ಅನುಮತಿ ಕೋರಿ ರಾಜ್ಯಪಾಲರಿಗೆ ಲೋಕಾಯುಕ್ತ ಮೊರೆ

ಗಿರೀಶ್ ಮಾದೇನಹಳ್ಳಿ 

ಆದಾಯಕ್ಕಿಂತ ಹೆಚ್ಚು ಆಸ್ತಿ ಸಂಪಾದನೆ ಆರೋಪ ಪ್ರಕರಣದಲ್ಲಿ ಮಾಜಿ ಸಚಿವ, ಕಾಂಗ್ರೆಸ್ ಪ್ರಭಾವಿ ಮುಖಂಡ ಜಮೀರ್‌ ಅಹಮ್ಮದ್ ಖಾನ್ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪಪಟ್ಟಿ ಸಲ್ಲಿಸುವ ಸಂಬಂಧ ಅಭಿಯೋಜನೆಗೆ (ಪ್ರಾಸಿಕ್ಯೂಷನ್‌) ಅನುಮತಿ ಕೋರಿ ರಾಜ್ಯಪಾಲ ಥಾವರ್ ಚಂದ್ ಗೆಹಲೋತ್‌ ಅವರಿಗೆ ಲೋಕಾಯುಕ್ತ ಪೊಲೀಸರು ಮನವಿ ಸಲ್ಲಿಸಿದ್ದಾರೆ.

ಈ ಸಂಬಂಧ ಲೋಕಭವನಕ್ಕೆ ಸಾವಿರಾರು ಪುಟಗಳ ದಾಖಲೆ ಸಹಿತ ಲೋಕಾಯುಕ್ತ ಪೊಲೀಸರು ಗುರುವಾರ ಕೋರಿಕೆ ಸಲ್ಲಿಸಿದ್ದು, ಜಮೀರ್‌ ಅವರು ವಾರ್ಷಿಕ ಆದಾಯ ಮೀರಿ ಸುಮಾರು 25 ಕೋಟಿ ರು. ಮೌಲ್ಯದ ಸಂಪತ್ತನ್ನು ಅಕ್ರಮವಾಗಿ ಗಳಿಸಿರುವುದಕ್ಕೆ ಪುರಾವೆ ಸಿಕ್ಕಿದೆ ಎಂದು ಮನವಿಯಲ್ಲಿ ಉಲ್ಲೇಖಿಸಿರುವುದಾಗಿ ತಿಳಿದು ಬಂದಿದೆ.

ಇದರಿಂದ ಮಾಜಿ ಸಚಿವ ಜಮೀರ್ ಅವರ ಮೇಲಿನ ಕಾನೂನು ಸಂಕಷ್ಟದ ಚೆಂಡು ಲೋಕಭವನದ ಅಂಗಳಕ್ಕೆ ಬಿದ್ದಂತಾಗಿದ್ದು, ಪ್ರಾಸಿಕ್ಯೂಷನ್‌ಗೆ (ಪಿಎಸ್‌ಓ) ರಾಜ್ಯಪಾಲರು ಸಮ್ಮತಿಸಿದರೆ ಲೋಕಾಯುಕ್ತ ವಿಶೇಷ ನ್ಯಾಯಾಲಯಕ್ಕೆ ಅವರ ವಿರುದ್ಧ ಆರೋಪಪಟ್ಟಿ ಸಲ್ಲಿಕೆಯಾಗಲಿದೆ ಎಂದು ರಾಜ್ಯ ಗೃಹ ಇಲಾಖೆಯ ಉನ್ನತ ಮೂಲಗಳು ‘ಕನ್ನಡಪ್ರಭ’ಕ್ಕೆ ಮಾಹಿತಿ ನೀಡಿವೆ.

ಜಮೀರ್ ಆದಾಯ ಮಿರಿ ಆಸ್ತಿ?  ಏನಿದು ಪ್ರಕರಣ?: 

2018ರಲ್ಲಿ ಐ ಮಾನಿಟರಿ ಅಡ್ವೈಸರಿ (ಐಎಂಎ) ವಂಚನೆ ಹಗರಣ ಸಂಬಂಧ ಅಂದಿನ ವಕ್ಫ್‌ ಸಚಿವ ಜಮೀರ್ ಅಹಮ್ಮದ್ ಖಾನ್ ಅವರಿಗೆ ಸೇರಿದ ಮನೆ ಹಾಗೂ ಕಚೇರಿಗಳ ಮೇಲೆ ಜಾರಿ ನಿರ್ದೇಶನಾಲಯ (ಇ.ಡಿ.) ದಾಳಿ ನಡೆಸಿತ್ತು. ಬಳಿಕ ಜಮೀರ್ ಅವರು ಅಧಿಕಾರ ದುರ್ಬಳಕೆ ಮಾಡಿಕೊಂಡು ಅಪಾರ ಪ್ರಮಾಣದ ಆಸ್ತಿ ಸಂಪಾದಿಸಿರುವ ಶಂಕೆ ಇದ್ದು, ಈ ಬಗ್ಗೆ ಎಫ್‌ಐಆರ್ ಪ್ರಕರಣ ದಾಖಲಿಸಿ ತನಿಖೆ ನಡೆಸುವಂತೆ ಅಂದಿನ ಭ್ರಷ್ಟಾಚಾರ ನಿಗ್ರಹ ದಳಕ್ಕೆ (ಎಸಿಬಿ) ಇ.ಡಿ. ಶಿಫಾರಸು ಮಾಡಿತ್ತು. ಅಂತೆಯೇ ಎಸಿಬಿ ತನಿಖೆ ಆರಂಭಿಸಿತ್ತು.

ಎಸಿಬಿ ರದ್ದಾದ ಬಳಿಕ ಆ ಪ್ರಕರಣ ಲೋಕಾಯುಕ್ತ ಪೊಲೀಸರಿಗೆ ವರ್ಗಾವಣೆಯಾಯಿತು. ಮಾಜಿ ಸಚಿವರ ಸಂಪತ್ತಿನ ತನಿಖೆಯನ್ನು ಲೋಕಾಯುಕ್ತ ಐಜಿಪಿ ಸುಬ್ರಹ್ಮಣ್ಯೇಶ್ವರ ರಾವ್ ಮಾರ್ಗದರ್ಶನದಲ್ಲಿ ಎಸ್ಪಿ ಶಿವಪ್ರಕಾಶ್ ದೇವರಾಜ್ ಹಾಗೂ ಡಿವೈಎಸ್ಪಿ ಎಚ್.ಎಂ.ಸತೀಶ್ ನೇತೃತ್ವದ ತಂಡ ನಡೆಸಿತು.

2 ದಶಕಗಳ ಆಸ್ತಿ ಲೆಕ್ಕ ಹಾಕಿದ ಪೊಲೀಸರು

ಶಾಸಕರಾಗುವ ಮುನ್ನ ಸಾರಿಗೆ, ರಿಯಲ್ ಎಸ್ಟೇಟ್ ಬ್ಯುಸಿನೆಸ್‌ನಲ್ಲಿ ಜಮೀರ್ ತೊಡಗಿದ್ದರು. 2005ರಲ್ಲಿ ಚಾಮರಾಜಪೇಟೆ ಕ್ಷೇತ್ರದ ಉಪ ಚುನಾವಣೆಯಲ್ಲಿ ಮೊದಲ ಬಾರಿಗೆ ಜೆಡಿಎಸ್ ಪಕ್ಷದಿಂದ ಗೆದ್ದು ವಿಧಾನಸಭೆ ಪ್ರವೇಶಿಸಿದ್ದರು. ಅಂತೆಯೇ ಶಾಸಕರಾಗಿ ಆಯ್ಕೆಯಾದ ವರ್ಷದಿಂದ ಜಮೀರ್ ಅವರ ಎರಡು ದಶಕಗಳ ಸಂಪತ್ತಿನ ಲೆಕ್ಕವನ್ನು ಲೋಕಾಯುಕ್ತ ಪೊಲೀಸರು ಶೋಧಿಸಿದ್ದಾರೆ. 2005ರಿಂದ 2025ರ ವರೆಗೆ ಐದು ಬಾರಿ ಶಾಸಕ ಹಾಗೂ ಮೂರು ಬಾರಿ ಸಚಿವರಾಗಿ ಜಮೀರ್ ಕಾರ್ಯನಿರ್ವಹಿಸಿದ್ದಾರೆ. ಈ ಅವಧಿಯಲ್ಲಿ ತಮ್ಮ ಅಧಿಕಾರ ದುರ್ಬಳಕೆ ಮಾಡಿಕೊಂಡು ಆಕ್ರಮವಾಗಿ ಆಸ್ತಿ ಸಂಪಾದಿಸಿರುವುದು ತನಿಖೆಯಲ್ಲಿ ರುಜುವಾತಾಗಿದೆ ಎಂದು ಸರ್ಕಾರದ ಮೂಲಗಳು ಹೇಳಿವೆ.

ಎಷ್ಟು ಆಸ್ತಿ ಸಂಪಾದನೆ?:

ಶಾಸಕರಾಗುವ ಮುನ್ನ ಬೆಂಗಳೂರಿನ ಸದಾಶಿವನಗರದ ಅಪಾರ್ಟ್‌ಮೆಂಟ್‌ನಲ್ಲಿ ಫ್ಲ್ಯಾಟ್‌, ಮೈಸೂರಿನಲ್ಲಿ ನಿವೇಶನ ಹಾಗೂ ಲಕ್ಷದ ಲೆಕ್ಕದಲ್ಲಿ ಅವರ ಖಾತೆಯಲ್ಲಿ ಹಣವಿತ್ತು. ಆದರೆ ಶಾಸಕರಾದ ನಂತರ ಶಿವಾಜಿನಗರದಲ್ಲಿ 20 ಕೋಟಿ ರು.ಗೂ ಅಧಿಕ ಮೌಲ್ಯದ ವೈಭೋಪೇತ ಬಂಗಲೆ ಕಟ್ಟಿದ್ದಾರೆ. ಅದೇ ರೀತಿ ಕೋಟ್ಯಂತರ ರು. ವಿನಿಯೋಗಿಸಿ ಮಗಳ ಮದುವೆಯನ್ನು ಅದ್ಧೂರಿಯಾಗಿ ಜಮೀರ್ ಮಾಡಿದ್ದರು. ವಿದೇಶ ಪ್ರವಾಸ ಹಾಗೂ ತಮ್ಮ ಬಳಿ ನೆರವು ಕೇಳಿ ಬರುವ ಜನರಿಗೆ ಕೈ ಬಿಚ್ಚಿ ಹಣ ದಾನ ಕೊಟ್ಟಿದ್ದಾರೆ.

ಇನ್ನು ನಟಿ ರಾಧಿಕಾ ಕುಮಾರಸ್ವಾಮಿ, ಮಾಜಿ ಸಚಿವರಾದ ದಿನೇಶ್ ಗುಂಡೂರಾವ್, ಚೆಲುವರಾಯಸ್ವಾಮಿ, ಶಾಸಕ ಎಚ್‌.ಸಿ.ಬಾಲಕೃಷ್ಣ, ಮಾಜಿ ರಾಜ್ಯಸಭಾ ಸದಸ್ಯ ಕುಪೇಂದ್ರ ರೆಡ್ಡಿ ಹಾಗೂ ಮಾಜಿ ವಿಧಾನಪರಿಷತ್ ಸದಸ್ಯ ಮಲ್ಲಿಕಾರ್ಜನ್ ಸೇರಿ ಸುಮಾರು 30ಕ್ಕೂ ಹೆಚ್ಚಿನ ಪರಿಚಿತರಿಂದ ಕೋಟ್ಯಂತರ ರು. ಕೈ ಸಾಲ ಪಡೆದಿದ್ದಾರೆ. ಆದರೆ ಈ ಸಾಲ ಮರಳಿಸಿರುವ ಬಗ್ಗೆ ದಾಖಲೆ ಸಿಕ್ಕಿಲ್ಲ.

ಅದೇ ರೀತಿ ತಮ್ಮ ಕೆಲ ಸ್ನೇಹಿತರಿಗೆ ಜಮೀರ್ ಕೂಡ ಕೈ ಸಾಲ ಕೊಟ್ಟಿರುವುದಕ್ಕೂ ಲೆಕ್ಕಪತ್ರವಿಲ್ಲ. ಇನ್ನು ಈ ಪ್ರಕರಣ ಸಂಬಂಧ ಜಮೀರ್ ಹಾಗೂ ಅವರ ಕುಟುಂಬ ಸದಸ್ಯರು, ಸ್ನೇಹಿತರು ಹಾಗೂ ವ್ಯವಹಾರಿಕ ಪಾಲುದಾರರನ್ನು ಲೋಕಾಯುಕ್ತ ಪೊಲೀಸರು ವಿಚಾರಣೆ ನಡೆಸಿದ್ದರು. ಅಂತಿಮವಾಗಿ ತನಿಖೆಯಲ್ಲಿ ಆದಾಯಕ್ಕಿಂತ ಹೆಚ್ಚು ಆಸ್ತಿ ಸಂಪಾದನೆ ಖಚಿತವಾಗಿದೆ ಎಂದು ತಿಳಿದು ಬಂದಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಕಲ್ಯಾಣ ಕರ್ನಾಟಕ ಜೀವನಾಡಿ ತುಂಗಭದ್ರಾ ಡ್ಯಾಂಗೆ 4 ಟಿಎಂಸಿಗಿಂತ ಅಧಿಕ ನೀರು! ಜಲಾಶಯಗಳ ಇಂದಿನ ನೀರಿನ ಮಟ್ಟ ಎಷ್ಟು?
Karnataka News Live: ಆದಾಯ ಮೀರಿ ಆಸ್ತಿ ಪ್ರಕರಣ - 20 ವರ್ಷಗಳ ಲೆಕ್ಕ ಹಾಕಿದ ಪೊಲೀಸರು! ಜಮೀರ್‌ಗೆ ಲೋಕಾಯುಕ್ತ ಶಾಕ್