
ದಕ್ಷಿಣ ಕನ್ನಡ (ಡಿ.10): ಶ್ರೀಕ್ಷೇತ್ರ ಧರ್ಮಸ್ಥಳದಲ್ಲಿ 'ನೂರಾರು ಮಹಿಳೆಯರ ಶವಗಳನ್ನು ಹೂಳಲಾಗಿದೆ' ಎಂಬ ಆಘಾತಕಾರಿ ಸುಳ್ಳು ಆರೋಪದ ಪ್ರಕರಣಕ್ಕೆ ಸಂಬಂಧಿಸಿದಂತೆ, ವಿಶೇಷ ತನಿಖಾ ತಂಡ (SIT) ಬೆಳ್ತಂಗಡಿ ನ್ಯಾಯಾಲಯಕ್ಕೆ ತನ್ನ ಮಹತ್ವದ ಪ್ರಾಥಮಿಕ ವರದಿಯನ್ನು ಸಲ್ಲಿಸಿದೆ. ಈ ವರದಿಯು ಧರ್ಮಸ್ಥಳದ ಮಾನಹಾನಿಗೆ ಯತ್ನಿಸಿದ 'ಬುರುಡೆ ಗ್ಯಾಂಗ್'ನ ಷಡ್ಯಂತ್ರವನ್ನು ಬಯಲು ಮಾಡಿದೆ. ಇದರಲ್ಲಿ ಒಬ್ಬರಿಗೆ ಕ್ಲೀನ್ ಚಿಟ್ ನೀಡಲಾಗಿದೆ.
SIT ಸಲ್ಲಿಸಿರುವ ಪ್ರಾಥಮಿಕ ವರದಿಯು, ಧರ್ಮಸ್ಥಳದ ವ್ಯವಸ್ಥಾಪಕರಿಗೆ ಮತ್ತು ಮೇಲ್ವಿಚಾರಕರಿಗೆ ಕ್ಲೀನ್ಚಿಟ್ ನೀಡಿದ್ದು, ಧರ್ಮಸ್ಥಳದಲ್ಲಿ ಅಂತಹ ಯಾವುದೇ ಕೃತ್ಯಗಳು ನಡೆದಿಲ್ಲ ಎಂದು ಸ್ಪಷ್ಟಪಡಿಸಿದೆ. ಈ ಮೂಲಕ ಶ್ರೀಕ್ಷೇತ್ರದ ಕುರಿತು ಹಬ್ಬಿದ್ದ ವದಂತಿಗಳಿಗೆ ತೆರೆ ಎಳೆದಿದೆ. ಇನ್ನು ಈ ವರದಿಯ ಪ್ರಕಾರ, ಇದು ಆರು ಮಂದಿ ಆರೋಪಿಗಳು ನಡೆಸಿರುವ ಸಂಪೂರ್ಣ ಅಪರಾಧ ಒಳಸಂಚು ಎಂಬುದು ಧೃಡಪಟ್ಟಿದೆ.
ಆರೋಪಿಗಳಾದ ಚಿನ್ನಯ್ಯ, ಮಹೇಶ್ ತಿಮರೋಡಿ, ಗಿರೀಶ್ ಮಟ್ಟಣ್ಣನವರ್, ವಿಠ್ಠಲ ಗೌಡ, ಟಿ ಜಯಂತ್ ಮತ್ತು ಸುಜಾತಾ ಭಟ್ ಅವರು ಅಪರಾಧ ಕೃತ್ಯದಲ್ಲಿ ನೇರವಾಗಿ ಶಾಮೀಲಾಗಿದ್ದಾರೆ ಎಂದು SIT ತನಿಖೆಯಲ್ಲಿ ದೃಢಪಟ್ಟಿದೆ. ಈ ಗ್ಯಾಂಗ್, A1 ಆರೋಪಿ ಚಿನ್ನಯ್ಯ ಅಲಿಯಾಸ್ ಚಿನ್ನಯ್ಯನಿಗೆ ಹಣದ ಆಮಿಷ ತೋರಿಸಿ, ಆತನಿಂದ 'ಅಪರಿಚಿತ ಶವಗಳನ್ನು ಹೂತಿದ್ದೇನೆ' ಎಂದು ಸುಳ್ಳು ಹೇಳಿಸಿ, ಅದನ್ನು ವಿಡಿಯೋ ರೆಕಾರ್ಡ್ ಮಾಡಿಕೊಂಡಿರುವುದು ಬಯಲಾಗಿದೆ. ಹಣದ ಆಸೆಗೆ ಬಲಿಯಾದ ಚಿನ್ನಯ್ಯ ಬುರುಡೆ ಕಥೆ ಕಟ್ಟಿ, ಈ ಷಡ್ಯಂತ್ರಕ್ಕೆ ಸಹಕರಿಸಿದ್ದಾನೆ.
ಬಲವಾದ ಸಾಕ್ಷ್ಯಾಧಾರಗಳು:
SIT ಯು ಪ್ರಕರಣದ ಕುರಿತು ಚಿನ್ನಯ್ಯನ ವಿಚಾರಣೆ, ಸಾಕ್ಷಿದಾರ ಪ್ರದೀಪ್ ಹೇಳಿಕೆ, FSL ವರದಿ, ಬ್ಯಾಂಕ್ ಖಾತೆಗಳ ಪರಿಶೀಲನೆ, ಎಲೆಕ್ಟ್ರಾನಿಕ್ ಪುರಾವೆಗಳು ಮತ್ತು ವೈದ್ಯಕೀಯ ವರದಿಗಳು ಸೇರಿದಂತೆ ಸಮಗ್ರ ಸಾಕ್ಷ್ಯಾಧಾರಗಳನ್ನು ಸಂಗ್ರಹಿಸಿ ತನಿಖೆ ನಡೆಸಿದೆ. ಈ ಸಾಕ್ಷ್ಯಾಧಾರಗಳ ಆಧಾರದ ಮೇಲೆ 'ಬುರುಡೆ ಗ್ಯಾಂಗ್' ವಿರುದ್ಧ ದೋಷಾರೋಪ ಮಾಡಲಾಗಿದೆ.
ಇನ್ನು ಧರ್ಮಸ್ಥಳದ ಮೇಲ್ವಿಚಾರಕರ ಕುಮ್ಮಕ್ಕಿನ ಮೇರೆಗೆ ಹಾಗೂ ಅವರ ಕುಟುಂಬ ಸದಸ್ಯರು ನೂರಾರು ಮಹಿಳೆಯರನ್ನು, ಮಕ್ಕಳನ್ನು ಅತ್ಯಾ*ಚಾರ, ದೌರ್ಜನ್ಯ ಹಾಗೂ ಇತರೆ ಕಾರಣಗಳಿಗೆ ಕೊಲೆ ಮಾಡಿ ನೇತ್ರಾವತಿ ನದಿ ದಂಡೆ ಸೇರಿದಂತೆ ವಿವಿಧಡೆ ಹೂಳಲಾಗಿದೆ ಎಂದು ಮೇಲ್ವಿಚಾರಕರ ವಿರುದ್ಧ ಆರೋಪ ಮಾಡಲಾಗಿತ್ತು. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಸರ್ಕಾರ ವಿಶೇಷ ತನಿಖಾ ತಂಡವನ್ನು ರಚಿಸಿ, ಶವ ಹೂತಿದ್ದೇನೆ ಎಂದು ಬಂದಿದ್ದ ವ್ಯಕ್ತಿ ತೋರಿಸದ ಸ್ಥಳದಲ್ಲಿ ಶೋಧನೆ ಮಾಡಿದರೂ ಯಾವುದೇ ಕಳೇಬರ ಸಿಕ್ಕಿಲ್ಲ. ನಂತರ ಈ ಪ್ರಕರಣವೇ ಸುಳ್ಳು ಎಂಬ ಮಾಹಿತಿ ಬಯಲಾಗಿದ್ದು, ಸುಳ್ಳು ಆರೋಪ ಮತ್ತು ಸುಳ್ಳು ಸಾಕ್ಷಿಗಳನ್ನು ಹುಟ್ಟುಹಾಕಲು ಯತ್ನಿಸಿದವರೇ ಇದೀಗ ಆರೋಪಿಗಳಾಗಿದ್ದಾರೆ. ಆದರೆ, ಈ ಪ್ರಕರಣದಲ್ಲಿ ಧರ್ಮಸ್ಥಳದ ಮೇಲ್ವಿಚಾರಕರಿಗೆ ಕ್ಲೀನ್ ಚಿಟ್ ನೀಡಲಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ