
ಬೆಂಗಳೂರು(ಆ.22): ಮಾಜಿ ಪ್ರಧಾನಮಂತ್ರಿ ಜವಾಹರ ಲಾಲ್ ನೆಹರು ಹಾಗೂ ಅಟಲ್ ಬಿಹಾರಿ ವಾಜಪೇಯಿ ಅವರು ಮಾದರಿ ನಾಯಕರು ಎಂದಿರುವ ಕೇಂದ್ರ ಸಚಿವ ನಿತಿನ್ ಗಡ್ಕರಿ ಹೇಳಿಕೆ ಮುಂದಿಟ್ಟುಕೊಂಡು ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ವಿರುದ್ಧ ಕಿಡಿಕಾರಿದ್ದಾರೆ.
‘ನೆಹರು ಹೆಸರಿನಲ್ಲಿ ಹುಕ್ಕಾ ಬಾರ್ ತೆರೆಯಲಿ’ ಎಂದಿದ್ದ ಸಿ.ಟಿ. ರವಿ ಹೇಳಿಕೆಗೆ ತಿರುಗೇಟು ನೀಡಿದ ಸಿದ್ದರಾಮಯ್ಯ, ನೆಹರು ಹಾಗೂ ವಾಜಪೇಯಿ ಮಾದರಿ ನಾಯಕರು. ಪಕ್ಷಾತೀತವಾಗಿ ಇಬ್ಬರೂ ನಾಯಕರನ್ನು ಗೌರವಿಸಬೇಕು ಎಂದಿರುವ ಗಡ್ಕರಿ ಹೇಳಿಕೆ ಸತ್ಯ. ಇನ್ನಾದರೂ ಸಿ.ಟಿ. ರವಿ ಬುದ್ಧಿ ಕಲಿಯಿಲಿ ಎಂದು ಹೇಳಿದರು. ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಮಾತನಾಡಿ, ರಾಜಕಾರಣ ಏನೇ ಇರಬಹುದು. ಆದರೆ ಇಬ್ಬರು ಮಾಜಿ ಪ್ರಧಾನಮಂತ್ರಿಗಳ ಸೇವೆಯನ್ನು ನಾವು ಮರೆಯಲು ಸಾಧ್ಯವಿಲ್ಲ.
ಸಿ.ಟಿ.ರವಿ ಮನೆ ಮುತ್ತಿಗೆ ಯತ್ನ: ಕಾಂಗ್ರೆಸ್ ಕಾರ್ಯಕರ್ತರು ಪೊಲೀಸ್ ವಶಕ್ಕೆ
ನಾನು ಹಲವು ಬಾರಿ ವಾಜಪೇಯಿ ಅವರ ಕೆಲಸಗಳನ್ನು ಪ್ರಶಂಸೆ ಮಾಡಿದ್ದೇನೆ. ಹಿರಿಯ ನಾಯಕ ಗಡ್ಕರಿ ಅವರು ಇಬ್ಬರೂ ಆದರ್ಶ ನಾಯಕರು ಎಂದು ಹೇಳಿರುವುದು ಸ್ವಾಗತಾರ್ಹ. ಆದರೆ, ರಾಜಕಾರಣದಲ್ಲಿ ಈಗ ಕಣ್ಣು ಬಿಡುತ್ತಿರುವವರು ಏನೇನೋ ಮಾತನಾಡುತ್ತಿದ್ದಾರೆ ಎಂದು ಪರೋಕ್ಷವಾಗಿ ಸಿ.ಟಿ. ರವಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಬೆಂಗಳೂರು ಮತ್ತು ದೇಶಕ್ಕೆ ಅವರ ಕೊಡುಗೆ ಅಪಾರ. ನೆಹರು ಹಾಗೂ ವಾಜಪೇಯಿ ಅವರನ್ನು ಗೌರವಿಸಬೇಕು.
ಕನ್ನಡಿಗರ ರಕ್ಷಣೆ ಕೇಂದ್ರದ ಜವಾಬ್ದಾರಿ: ಅಷ್ಘಾನಿಸ್ತಾನದಲ್ಲಿ ಸಿಲುಕಿರುವ ಕನ್ನಡಿಗರ ರಕ್ಷಣೆ ವಿಚಾರವಾಗಿ ಮಾತನಾಡಿದ ಡಿ.ಕೆ.ಶಿವಕುಮಾರ್, ಕನ್ನಡಿಗರನ್ನು ರಕ್ಷಿಸಿ ಕರೆ ತರುವುದು ಕೇಂದ್ರ ಸರ್ಕಾರದ ಜವಾಬ್ದಾರಿ. ಈ ವಿಚಾರದಲ್ಲಿ ಕೇಂದ್ರ ಸರ್ಕಾರ ಅಕ್ಕ ಪಕ್ಕದ ದೇಶಗಳ ಜತೆ ಯಾವ ರೀತಿಯ ಸಂಬಂಧ ಬೆಳೆಸಿಕೊಂಡಿದೆ ಎಂಬುದು ಗೊತ್ತಾಗುತ್ತಿದೆ. ರಾಜೀವ್ ಗಾಂಧಿ ಅವರು ಸಾರ್ಕ್ ಸಮ್ಮೇಳನ ನಡೆಸಿ ಎಲ್ಲ ದೇಶಗಳ ಜತೆ ಉತ್ತಮ ಸಂಬಂಧ ಇಟ್ಟುಕೊಂಡಿದ್ದರು ಎಂದು ಹೇಳಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ