ಬಡವರ ಪರ ದಿಟ್ಟ ನಿರ್ಧಾರ ಕಾಂಗ್ರೆಸ್ ಸರ್ಕಾರದಿಂದ ಮಾತ್ರ ಸಾಧ್ಯ: ಸಚಿವ ಮುನಿಯಪ್ಪ

By Kannadaprabha NewsFirst Published Aug 30, 2023, 6:54 PM IST
Highlights

ಸಮಾಜದಲ್ಲಿ ತುಳಿತಕ್ಕೆ ಒಳಗಾದ ಕೆಳಸ್ತರದ ಸಮುದಾಯಗಳು ಪ್ರಸ್ತುತ ಕಾಲದಲ್ಲಿ ರಾಜಕೀಯ, ಆರ್ಥಿಕ, ಶೈಕ್ಷಣಿಕವಾಗಿ ಮುಂದಿವೆ ಎಂದರೆ ಅದು ಡಾ.ಬಿ.ಆರ್‌.ಅಂಬೇಡ್ಕರ್‌ ಆ ಸಮುದಾಯಗಳಿಗೆ ನೀಡಿರುವ ಮೀಸಲಾತಿಯೇ ಕಾರಣ ಎಂದು ಆಹಾರ ನಾಗರಿಕ ಸರಬರಾಜು ಸಚಿವ ಕೆ.ಎಚ್‌.ಮುನಿಯಪ್ಪ ಅಭಿಪ್ರಾಯಪಟ್ಟರು.

ಚನ್ನಗಿರಿ (ಆ.30) : ಸಮಾಜದಲ್ಲಿ ತುಳಿತಕ್ಕೆ ಒಳಗಾದ ಕೆಳಸ್ತರದ ಸಮುದಾಯಗಳು ಪ್ರಸ್ತುತ ಕಾಲದಲ್ಲಿ ರಾಜಕೀಯ, ಆರ್ಥಿಕ, ಶೈಕ್ಷಣಿಕವಾಗಿ ಮುಂದಿವೆ ಎಂದರೆ ಅದು ಡಾ.ಬಿ.ಆರ್‌.ಅಂಬೇಡ್ಕರ್‌ ಆ ಸಮುದಾಯಗಳಿಗೆ ನೀಡಿರುವ ಮೀಸಲಾತಿಯೇ ಕಾರಣ. ಅವರು ರಚಿಸಿದ ಸಂವಿಧಾನದಿಂದಲೇ ನನ್ನಂತ ಅನೇಕರು ರಾಜಕೀಯವಾಗಿ ಉನ್ನತ ಸ್ಥಾನಮಾನಗಳಿಗೆ ಏರಲು ಸಾಧ್ಯವಾಗಿದೆ ಎಂದು ಆಹಾರ ನಾಗರಿಕ ಸರಬರಾಜು ಸಚಿವ ಕೆ.ಎಚ್‌.ಮುನಿಯಪ್ಪ ಅಭಿಪ್ರಾಯಪಟ್ಟರು.

ತಾಲೂಕಿನ ಹಿರೇಗಂಗೂರು ಗ್ರಾಮದಲ್ಲಿ ತಾಲೂಕು ದಲಿತ ಸಂಘರ್ಷ ಸಮಿತಿ ವತಿಯಿಂದ ಹಮ್ಮಿಕೊಂಡಿದ್ದ ಸಂವಿಧಾನ ಶಿಲ್ಪಿ ಡಾ.ಬಿ.ಆರ್‌.ಅಂಬೇಡ್ಕರ್‌ ನೂತನ ಪುತ್ಥಳಿ ಅನಾವರಣ ಹಾಗೂ 132ನೇ ಜಯಂತ್ಯುತ್ಸವ ಮತ್ತು ಎಸ್ಸೆಸ್ಸೆಲ್ಸಿ, ಪಿಯುಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕಗಳ ಪಡೆದ ವಿದ್ಯಾರ್ಥಿಗಳಿಗೆ ಏರ್ಪಡಿಸಿದ್ದ ಪ್ರತಿಭಾ ಪುರಸ್ಕಾರ, ಡಾ.ಬಿ.ಆರ್‌.ಅಂಬೇಡ್ಕರ್‌ ಪುತ್ಥಳಿ ಅನಾವರಣ ಸಮಾರಂಭದಲ್ಲಿ ಮಾತನಾಡಿದರು. ವಿಧಾನಸಭೆ ಚುನಾವಣೆ ಪೂರ್ವದಲ್ಲಿ ರಾಜ್ಯದ ಜನರಿಗೆ ಕಾಂಗ್ರೆಸ್‌ ಪಕ್ಷ ಘೋಷಿಸಿದ್ದ 5 ಗ್ಯಾರಂಟಿಗಳಲ್ಲಿ ಮೂರನ್ನು ಈಡೇರಿಸಿದ್ದು ಇಂದು ಗೃಹಲಕ್ಷ್ಮಿ ಯೋಜನೆಗೆ ಚಾಲನೆ ದೊರೆಯಲಿದ್ದು, ಪ್ರತಿಮನೆ ಯಜಮಾನಿಗೆ 2 ಸಾವಿರ ರುಪಾಯಿ ನೇರವಾಗಿ ಅವರ ಖಾತೆಗೆ ಜಮಾ ಆಗಲಿದೆ. ಕಾಂಗ್ರೆಸ್‌ ಸರ್ಕಾರ ನುಡಿದಂತೆ ನಡೆದ ಸರ್ಕಾರ ಎನ್ನುವುದಕ್ಕೆ ಗ್ಯಾರಂಟಿಗಳೇ ಸಾಕ್ಷಿ. ಇಂತಹ ದಿಟ್ಟನಿರ್ಧಾರಗಳ ತೆಗೆದುಕೊಳ್ಳಲು ಕಾಂಗ್ರೆಸ್‌ ಸರ್ಕಾರದಿಂದ ಮಾತ್ರ ಸಾಧ್ಯ. ಕಾಂಗ್ರೆಸ್‌ ಸರ್ವ ಜನರ ಹಿತ ಕಾಪಾಡುವ ಸರ್ಕಾರವಾಗಿದ್ದು, ಬಡವರ ಪರ ಕೆಲಸ ಮಾಡಲಾಗುತ್ತಿದೆ ಎಂದರು.

 

ಹೊಸ ರೇಷನ್‌ ಕಾರ್ಡ್‌ಗೆ ಅರ್ಜಿ ಇಲ್ಲ ; ಮುಂದಿನ ತಿಂಗಳೂ ಉಚಿತ 5 ಕೇಜಿ ಅಕ್ಕಿ ಬದಲು ಹಣ : ಮುನಿಯಪ್ಪ

ಅನ್ನಭಾಗ್ಯಕ್ಕೆ ಕೇಂದ್ರ ಸರ್ಕಾರ ಅಕ್ಕಿ ನೀಡಿಲ್ಲ:

ಗಣಿ ಮತ್ತು ಭೂ ವಿಜ್ಞಾನ ತೋಟಗಾರಿಕೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಸ್‌.ಎಸ್‌.ಮಲ್ಲಿಕಾರ್ಜುನ್‌(Minister SS Mallikarjun) ಮಾತನಾಡಿ ಡಾ.ಬಿ.ಆರ್‌.ಅಂಬೇಡ್ಕರ್‌(Dr BR Ambedkar) ಹಾಕಿಕೊಟ್ಟಮಾರ್ಗದಲ್ಲಿ ನಾವೆಲ್ಲರೂ ಸಾಗಬೇಕಿದ್ದು ಮುಖ್ಯಮಂತ್ರಿ ಸಿದ್ದರಾಮಯ್ಯ(CM Siddaramaiah)ನವರು ಆರ್ಥಿಕವಾಗಿ ಹಿಂದುಳಿದ ಬಡವರು ಹಸಿವಿನಿಂದ ಬಳಲಬಾರದು ಎಂಬ ಉದ್ದೇಶದಿಂದ ಅನ್ನಭಾಗ್ಯ ಯೋಜನೆ ಜಾರಿ ತಂದು ಪ್ರತಿಯೊಬ್ಬರಿಗೂ 10ಕೆ.ಜಿ ಅಕ್ಕಿ ನೀಡಬೇಕು ಎಂಬ ಉದ್ದೇಶ ಹೊಂದಿದ್ದರು. ಆದರೆ ಕೇಂದ್ರ ಸರ್ಕಾರ ಈ ಯೋಜನೆ ವಿಫಲಗೊಳಿಸಲು ರಾಜ್ಯಕ್ಕೆ ಅಕ್ಕಿ ನೀಡಲಿಲ್ಲ ಅದಕ್ಕಾಗಿ ಪ್ರತಿ ಯುನೀಟ್‌ ಗೆ 5ಕೆ.ಜಿ ಅಕ್ಕಿ ನೀಡಿ ಉಳಿದ 5ಕೆ.ಜಿಯ ಅಕ್ಕಿ ಬದಲು ಹಣವನ್ನು ನೇರವಾಗಿ ಪಡಿತರದಾರರ ಖಾತೆಗೆ ಹಣವನ್ನು ಜಮೆ ಮಾಡಲಾಗುತ್ತಿದೆ ಎಂದರು.

ಸಮಾರಂಭದ ಉದ್ಘಾಟನೆಯ ರಾಜ್ಯ ಡಿಎಸ್ಸೆಸ್‌ ಸಂಚಾಲಕ ಗುರುಮೂರ್ತಿ ನೆರವೇರಿಸಿದರು. ಸಮಾರಂಭದ ಅಧ್ಯಕ್ಷತೆಯ ತಾಲೂಕು ಡಿಎಸ್‌ಎಸ್‌ ಸಂಚಾಲಕ ಗಾಂಧಿನಗರ ಚಿತ್ರಲಿಂಗಪ್ಪ ವಹಿಸಿದ್ದರು. ಎ.ಬಿ.ರಾಮಚಂದ್ರಪ್ಪ ಅತಿಥಿ ಉಪನ್ಯಾಸ ನೀಡಿದರು. ಮುಖ್ಯ ಅತಿಥಿಗಳಾಗಿ ಚನ್ನಗಿರಿ ಕ್ಷೇತ್ರದ ಶಾಸಕ ಬಸವರಾಜು ವಿ.ಶಿವಗಂಗಾ, ಮಾಯಕೊಂಡ ಶಾಸಕ ಬಸವಂತಪ್ಪ, ಮಾಜಿ ಸಂಸದ ಚಂದ್ರಪ್ಪ, ವಿಧಾನ ಪರಿಷತ್‌ ಸದಸ್ಯ ಡಿ.ಎಸ್‌.ಅರುಣ್‌, ತಾಲೂಕು ಕಾಂಗ್ರೆಸ್‌ ಮುಖಂಡರಾದ ಸಿ.ನಾಗರಾಜ್‌, ಹೊದಿಗೆರೆ ರಮೇಶ್‌, ವೀರೇಶ್‌ ನಾಯ್‌್ಕ, ಬುಳಸಾಗರ ಸಿದ್ರಾಮಪ್ಪ, ಮಾಚನಾಯ್ಕನಹಳ್ಳಿ ಮಂಜುನಾಥ್‌, ತಾ.ಪಂ ಮಾಜಿ ಸದಸ್ಯ ಶ್ರೀಕಾಂತ್‌, ಮಹೇಶ್ವರಪ್ಪ ಸೇರಿ ಮುಂತಾದವರಿದ್ದರು.

 

ಮುಂದಿನ ತಿಂಗಳೂ ಉಚಿತ 5 ಕೇಜಿ ಅಕ್ಕಿ ಬದಲು ಹಣ: ಸಚಿವ ಮುನಿಯಪ್ಪ

ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಎಲ್ಲಾ ವರ್ಗದ ಜನರು ಸಮಾನವಾಗಿ ಜೀವಿಸುವ ಅವಕಾಶ ಕಲ್ಪಿಸಲಾಗಿದೆ. ಬಡ ಜನರ ಆರ್ಥಿಕವಾಗಿ ಸಬಲರಾಗಿ ಮಾಡಲು 200 ಯೂನಿಟ್‌ವರೆಗೆ ಉಚಿತ ವಿದ್ಯುತ್‌, ಸರ್ಕಾರಿ ಬಸ್‌ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ, ಗೃಹಲಕ್ಷ್ಮಿ ಯೋಜನೆಯಲ್ಲಿ ಎರಡು ಸಾವಿರ ಹಣ ನೀಡುವ ಯೋಜನೆಗೆ ಆ.30ರಂದು ಚಾಲನೆ ನೀಡಲಿದ್ದು ವಿದ್ಯಾವಂತ ನಿರುದ್ಯೋಗಿ ಯುವಕರಿಗೆ ಯುವ ನಿಧಿ ನೀಡುವ ಯೋಜನೆಗೆ ಶೀಘ್ರವೇ ಚಾಲನೆ ದೊರೆಯಲಿದೆ.

ಎಸ್‌.ಎಸ್‌.ಮಲ್ಲಿಕಾರ್ಜುನ್‌, ಜಿಲ್ಲಾ ಉಸ್ತುವಾರಿ ಸಚಿವ

ಮೀಸಲಾತಿ ಕೇವಲ ಪರಿಶಿಷ್ಠ ಜಾತಿ, ಪಂಗಡಗಳಿಗೆ ನೀಡಿಲ್ಲ ಸಮಾಜದ ಎಲ್ಲಾ ವರ್ಗದ ಜನರಿಗೂ ಮೀಸಲಾತಿ ಇದೆ. ಆದರೆ ಶೋಷಿತರಿಗೆ, ಬಡ ವರ್ಗದ ಜನರಿಗೆ ವಿಶೇಷ ಮೀಸಲಾತಿ ಅಂಬೇಡ್ಕರ್‌ ಕಲ್ಪಿಸಿದ್ದರಿಂದ ಕೆಳ ಸಮುದಾಯಗಳು ಸಮಾಜದ ಮುಖ್ಯವಾಹಿನಿಗೆ ಬರಲು ಸಾಧ್ಯವಾಗಿದೆ.

ಎಚ್‌.ಆಂಜನೇಯ, ಮಾಜಿ ಸಚಿವ

click me!