ರೇಣುಕಾಸ್ವಾಮಿ ಸಾವಿನ ಸಮಯ ಬಗ್ಗೆ ಗೊಂದಲ: ಪೊಲೀಸರ ಮನವಿಯಲ್ಲೇನಿದೆ?

By Kannadaprabha NewsFirst Published Jul 6, 2024, 10:54 AM IST
Highlights

ಚಿತ್ರದುರ್ಗದ ರೇಣುಕಾಸ್ವಾಮಿ ಸಾವಿನ ಸಮಯ ಖಚಿತಪಡಿಸುವಂತೆ ನಗರದ ವಿಕ್ಟೋರಿಯಾ ಆಸ್ಪತ್ರೆಯ ವಿಧಿ ವಿಜ್ಞಾನ ವಿಭಾಗದ ತಜ್ಞರಿಗೆ ಪೊಲೀಸರು ಮನವಿ ಮಾಡಿದ್ದಾರೆ. 

ಬೆಂಗಳೂರು (ಜು.06): ಚಿತ್ರದುರ್ಗದ ರೇಣುಕಾಸ್ವಾಮಿ ಸಾವಿನ ಸಮಯ ಖಚಿತಪಡಿಸುವಂತೆ ನಗರದ ವಿಕ್ಟೋರಿಯಾ ಆಸ್ಪತ್ರೆಯ ವಿಧಿ ವಿಜ್ಞಾನ ವಿಭಾಗದ ತಜ್ಞರಿಗೆ ಪೊಲೀಸರು ಮನವಿ ಮಾಡಿದ್ದಾರೆ. ಈ ಪ್ರಕರಣ ಸಂಬಂಧ ಎಫ್‌ಎಸ್‌ಎಲ್ ತಜ್ಞರು ಸಲ್ಲಿಸಿದ ವರದಿಯಲ್ಲಿ ರೇಣುಕಾಸ್ವಾಮಿ ಕೊನೆಯುಸಿರೆಳೆದ ವೇಳೆ ಬಗ್ಗೆ ಸ್ಪಷ್ಟವಾಗಿ ಉಲ್ಲೇಖಿಸದೆ ಗೊಂದಲ ಮೂಡಿಸಿದ್ದರು. ಹೀಗಾಗಿ ಹತ್ಯೆಯಾದ ದಿನ ರೇಣುಕಾಸ್ವಾಮಿ ಸೇವಿಸಿದ್ದ ಆಹಾರ ಆಧಾರಿಸಿ ನಿಖರವಾದ ಸಾವಿನ ಸಮಯ ಖಚಿತಪಡಿಸುವಂತೆ ಕೋರಿ ಪೊಲೀಸರು ಪತ್ರ ಬರೆದಿದ್ದಾರೆ ಎಂದು ತಿಳಿದು ಬಂದಿದೆ.

ರೇಣುಕಾಸ್ವಾಮಿ ಮರಣಕ್ಕೆ ಸಂಬಂಧಿಸಿದಂತೆ, ಮರಣ ಹೊಂದಿದ ವ್ಯಕ್ತಿಯು ಆಹಾರ ಸೇವಿಸಿದ ನಂತರ ಆತನ ಜಠರದಲ್ಲಿ ಎಷ್ಟು ಗಂಟೆಗಳವರೆಗೆ ಆಹಾರ ಇರುತ್ತದೆ? ಪ್ರಕರಣದಲ್ಲಿನ ಮೃತ ವ್ಯಕ್ತಿಯು ಸಾಯುವ ಮುಂಚೆ ಅಂದರೆ ಆ ದಿನ ಸಂಜೆ ಸುಮಾರು 4.30ರಿಂದ 5 ಗಂಟೆಗಳ ನಡುವಿನ ಸಮಯದಲ್ಲಿ ಆಹಾರ ಸೇವನೆ ಮಾಡಿರುವುದು ತನಿಖಾ ಕಾಲದಲ್ಲಿ ಸಂಗ್ರಹಿಸಿದ ಸಾಕ್ಷ್ಯಾಧಾರಗಳಿಂದ ಕಂಡು ಬಂದಿದೆ. 

Latest Videos

ರೇಣುಕಾಸ್ವಾಮಿ ಮನೆಗೆ ಮಾಜಿ ಸಚಿವ ಬಿ.ಸಿ.ಪಾಟೀಲ್ ಭೇಟಿ, ಸಾಂತ್ವನ

ಹೀಗಾಗಿ ಸಾವು ಎಷ್ಟು ಗಂಟೆಗೆ ಸಂಭವಿಸಿರಬಹುದು ಎಂಬ ಬಗ್ಗೆ ಮತ್ತು ರೇಣುಕಾಸ್ವಾಮಿಯ ಮರಣ ನಂತರ ಆತನ ದೇಹದಲ್ಲಿ ಉಂಟಾಗುವ ರಾಸಾಯನಿಕ, ಜೈವಿಕ ಮತ್ತು ಇತರೆ ಬದಲಾವಣೆ ಬಗ್ಗೆ ಕೂಲಂಕಷವಾಗಿ ಪರಿಶೀಲನೆ ಮಾಡಿ ದೇಹವನ್ನು ಫ್ರೀಜರ್‌ನಲ್ಲಿಟ್ಟಿರುವ ಸಮಯವನ್ನು ಸಹ ಪರಿಗಣನೆಗೆ ತೆಗೆದುಕೊಂಡು ವ್ಯಕ್ತಿಯು ಯಾವ ದಿನ ಮತ್ತು ಸಮಯಕ್ಕೆ ಮರಣ ಹೊಂದಿರುತ್ತಾನೆ ಎಂಬ ಬಗ್ಗೆ ಪರಿಶೀಲಿಸಿ ಸ್ಪಷ್ಟವಾದ ಅಭಿಪ್ರಾಯದ ವರದಿಯನ್ನು ನೀಡುವಂತೆ ವಿಕ್ಟೋರಿಯಾ ಆಸ್ಪತ್ರೆಯ ವಿಧಿವೈದ್ಯ ಶಾಸ್ತ್ರ ಸಹಾಯಕ ಪ್ರಾಧ್ಯಾಪಕರಿಗೆ ಪೊಲೀಸರು ಮನವಿ ಮಾಡಿದ್ದಾರೆ. 

ಈ ಬಗ್ಗೆ ರಿಮ್ಯಾಂಡ್ ಆಪ್ಲಿಕೇಷನ್‌ನಲ್ಲಿ ಪೊಲೀಸರು ಉಲ್ಲೇಖಿಸಿದ್ದಾರೆ. ಬೆಂಗಳೂರಿನ ಆರ್‌.ಆರ್‌.ನಗರದ ಪಟ್ಟಣಗೆರೆ ಶೆಡ್‌ನಲ್ಲಿ ಶನಿವಾರ ರೇಣುಕಾಸ್ವಾಮಿ ಹತ್ಯೆಯಾದ ಮರುದಿನ ಮಾಗಡಿ ರಸ್ತೆಯ ಸುಮನಹಳ್ಳಿ ಜಂಕ್ಷನ್ ಸಮೀಪದ ಮೋರಿಯಲ್ಲಿ ಆತನ ಮೃತದೇಹ ಪತ್ತೆಯಾಗಿತ್ತು. ಹೀಗಾಗಿ ಮೃತನ ಕೊನೆಯುಸಿರೆಳೆದ ಸಮಯದ ಬಗ್ಗೆ ನಿಖರವಾಗಿ ತಿಳಿಯಲು ಪೊಲೀಸರು ಮುಂದಾಗಿದ್ದಾರೆ.

ದರ್ಶನ್‌ಗೆ ₹40 ಲಕ್ಷ ನೀಡಿದ್ದ ಮೋಹನ್‌, ನಿರ್ದೇಶಕ ಮಿಲನ ಪ್ರಕಾಶ್‌ ವಿಚಾರಣೆ: ರೇಣುಕಾಸ್ವಾಮಿ ಪ್ರಕರಣದಲ್ಲಿ ಇಬ್ಬರಿಗೂ ಗ್ರಿಲ್‌

ಸಾವಿನ ಸಮಯ ಮುಖ್ಯವೇಕೆ?: ಹತ್ಯೆ ಪ್ರಕರಣದಲ್ಲಿ ಮೃತನ ಸಾವಿನ ಸಮಯ ಬಹುಮುಖ್ಯವಾಗಿದೆ. ಏಕೆಂದರೆ ಮೃತದೇಹ ಪತ್ತೆ ಮತ್ತು ಸಾವಿನ ಸಮಯದ ಅಂತರ ಗೊತ್ತಾದರೆ ಆ ಸಮಯದಲ್ಲಿ ಆರೋಪಿಗಳ ಉಪಸ್ಥಿತಿ ಬಗ್ಗೆ ಮಾಹಿತಿ ಗೊತ್ತಾಗಲಿದೆ. ಹೀಗಾಗಿ ರೇಣುಕಾಸ್ವಾಮಿ ಮೃತಪಟ್ಟಾಗ ಶೆಡ್‌ನಲ್ಲಿ ದರ್ಶನ್‌ ಉಪಸ್ಥಿತರಿದ್ದರೇ ಎಂಬುದು ಈಗ ಸಾವಿನ ಸಮಯವನ್ನು ಆಧರಿಸಿದೆ ಎನ್ನಲಾಗಿದೆ.

click me!