'ಪ್ಲೀಸ್ ಹೋಗ್ಬೇಡಿ ಸರ್' ವಿಧಾನಸೌಧದಲ್ಲಿ ಸಿಎಂ ಕಚೇರಿ ಸಿಬ್ಬಂದಿ ಕಣ್ಣೀರು, ಸಂತೈಸಿದ ಸಿದ್ದರಾಮಯ್ಯ

Published : May 27, 2026, 05:52 PM IST
Siddaramaiah Resignation

ಸಾರಾಂಶ

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ರಾಜೀನಾಮೆ ವದಂತಿಯ ಹಿನ್ನೆಲೆಯಲ್ಲಿ, ಅವರ ಕಚೇರಿ ಸಿಬ್ಬಂದಿ ಭಾವೋದ್ವೇಗದಿಂದ ಕಣ್ಣೀರಿಟ್ಟು ರಾಜೀನಾಮೆ ನೀಡದಂತೆ ಮನವಿ ಮಾಡಿದರು. ಇದೇ ವೇಳೆ, ಹಿರಿಯ ಸಚಿವರು ಸಹ ರಾಜೀನಾಮೆ ನಿರ್ಧಾರವನ್ನು ತಡೆಹಿಡಿದು, ಶಾಸಕಾಂಗ ಪಕ್ಷದ ಸಭೆ ಕರೆಯುವಂತೆ ಒತ್ತಡ ಹೇರುತ್ತಿದ್ದಾರೆ.

ಬೆಂಗಳೂರು (ಮೇ.27): ಕರ್ನಾಟಕದ ಮುಖ್ಯಮಂತ್ರಿ ಸ್ಥಾನಕ್ಕೆ ಸಿದ್ದರಾಮಯ್ಯ ಅವರು ರಾಜೀನಾಮೆ ನೀಡಲಿದ್ದಾರೆ ಎಂಬ ಸುದ್ದಿ ಅಧಿಕೃತಗೊಳ್ಳುತ್ತಿದ್ದಂತೆ, ಇಷ್ಟು ದಿನಗಳ ಕಾಲ ರಾಜಕೀಯ ವಲಯದಲ್ಲಿದ್ದ ಆತಂಕ ಈಗ ಸಿಎಂ ಕಚೇರಿಯ ನೌಕರರಲ್ಲಿ ಭಾವುಕತೆಗೆ ಕಾರಣವಾಗಿದೆ. ಇಂದು ಸಂಜೆ ಜಾತಿಗಣತಿ ವರದಿ ಸ್ವೀಕರಿಸಲು ವಿಧಾನಸೌಧಕ್ಕೆ ಆಗಮಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಕಂಡು ಸಿಬ್ಬಂದಿ ಕಣ್ಣೀರು ಹಾಕಿದ ಘಟನೆ ಜರುಗಿದೆ.

'ರಾಜೀನಾಮೆ ನೀಡಬೇಡಿ ಸರ್ ಪ್ಲೀಸ್' ಕಣ್ಣೀರಿಟ್ಟ ಸಿಬ್ಬಂದಿಗೆ ಸಿಎಂ ಕೈಸನ್ನೆ ಸಮಾಧಾನ!

ಇಂದು ಸಂಜೆ ನಿಗದಿಯಂತೆ ಹಿಂದುಳಿದ ವರ್ಗಗಳ ಆಯೋಗದಿಂದ ಜಾತಿಗಣತಿ ವರದಿ ಸ್ವೀಕರಿಸಲು ಸಿಎಂ ಸಿದ್ದರಾಮಯ್ಯ ಅವರು ವಿಧಾನಸೌಧಕ್ಕೆ ಆಗಮಿಸಿದರು. ಸಿಎಂ ಬರುತ್ತಿದ್ದಂತೆ ಅಲ್ಲಿ ನೆರೆದಿದ್ದ ಮುಖ್ಯಮಂತ್ರಿ ಕಚೇರಿಯ ನೌಕರರು ಹಾಗೂ ಪ್ರಮುಖವಾಗಿ ಗುತ್ತಿಗೆ (Contract) ಆಧಾರದ ಮೇಲೆ ಕೆಲಸ ಮಾಡುತ್ತಿರುವ ಸಿಬ್ಬಂದಿ ಸಿದ್ದರಾಮಯ್ಯ ಅವರನ್ನು ನೋಡಿ ತಡೆಯಲಾರದೆ ಕಣ್ಣೀರು ಹಾಕಲು ಆರಂಭಿಸಿದರು.

"ಸರ್, ಯಾವುದೇ ಕಾರಣಕ್ಕೂ ನೀವು ರಾಜೀನಾಮೆ ನೀಡಬೇಡಿ ಸರ್ ಪ್ಲೀಸ್..." ಎಂದು ಸಿಬ್ಬಂದಿ ಕಣ್ಣೀರಿಡುತ್ತಾ ಮುಖ್ಯಮಂತ್ರಿಗಳ ಮುಂದೆ ಕೈಮುಗಿದು ಬೇಡಿಕೊಂಡರು. ಸಿಬ್ಬಂದಿಯ ಈ ಭಾವುಕತೆಯನ್ನು ಕಂಡು ಕೊಂಚ ಭಾವುಕರಾದ ಸಿಎಂ ಸಿದ್ದರಾಮಯ್ಯ, ತಕ್ಷಣವೇ ತಮ್ಮ ವಿಶಿಷ್ಟ ಶೈಲಿಯ ಕೈಸನ್ನೆಯ ಮೂಲಕವೇ ಸಮಾಧಾನಪಡಿಸಿ, ಧೈರ್ಯ ತುಂಬಿ ಮುಂದೆ ಸಾಗಿದರು. ಸಿಎಂ ಕಚೇರಿ ಇತಿಹಾಸದಲ್ಲಿ ಇಂತಹದ್ದೊಂದು ಭಾವುಕ ನಡೆ ಕಂಡುಬಂದಿರುವುದು ಇದೇ ಮೊದಲು ಎನ್ನಲಾಗಿದೆ.

'ನಾಳೆ ರಾಜೀನಾಮೆ ಕೊಡಬೇಡಿ': ಸಚಿವರ ಒತ್ತಡ

ಇನ್ನೊಂದೆಡೆ, ಮುಖ್ಯಮಂತ್ರಿಗಳ ಅಧಿಕೃತ ನಿವಾಸ ‘ಕಾವೇರಿ’ಯಲ್ಲಿ ಸಿದ್ದರಾಮಯ್ಯ ಅವರ ರಾಜೀನಾಮೆ ನಿರ್ಧಾರವನ್ನು ತಡೆಯಲು ಸಚಿವರು ಹಾಗೂ ಶಾಸಕರು ಕೊನೆಕ್ಷಣದ ಭೀಕರ ಕಸರತ್ತು ನಡೆಸುತ್ತಿದ್ದಾರೆ. ಸಿದ್ದರಾಮಯ್ಯ ಅವರ ಆಪ್ತ ಸಚಿವರ ವಲಯ ಈಗ ಸಿಎಂ ಮೇಲೆ ತೀವ್ರ ಒತ್ತಡ ಹೇರಲು ಮುಂದಾಗಿದೆ. ಸಿಎಂ ಸಿದ್ದರಾಮಯ್ಯ ಅವರ ಅತ್ಯಾಪ್ತ ಒಡನಾಡಿಗಳಾಗಿರುವ ಸಚಿವ ಬೈರತಿ ಸುರೇಶ್ ಮತ್ತು ಹಿರಿಯ ಸಚಿವ ಕೆ.ಜೆ. ಜಾರ್ಜ್ ಅವರು ‘ಕಾವೇರಿ’ ನಿವಾಸಕ್ಕೆ ಧಾವಿಸಿ, ಸಿದ್ದರಾಮಯ್ಯ ಅವರನ್ನು ಪ್ರತ್ಯೇಕವಾಗಿ ಭೇಟಿ ಮಾಡಿ ಸುದೀರ್ಘ ಸಮಾಲೋಚನೆ ನಡೆಸಿದ್ದಾರೆ. ಸಿಎಂ ಮನವೊಲಿಸಲು ಇಬ್ಬರೂ ಸಚಿವರು ಅಂತಿಮ ಹಂತದ ರಣತಂತ್ರ ಹೂಡಿದ್ದಾರೆ.

ಶಾಸಕಾಂಗ ಪಕ್ಷದ ಸಭೆಯಲ್ಲೇ ತೀರ್ಮಾನವಾಗಲಿ: "ನೀವು ಹೈಕಮಾಂಡ್ ಮಾತಿಗೆ ಮಣಿದು ನಾಳೆಯೇ (ಗುರುವಾರ) ಯಾವುದೇ ಕಾರಣಕ್ಕೂ ರಾಜೀನಾಮೆ ಕೊಡಬಾರದು. ಮೊದಲು ಕಾಂಗ್ರೆಸ್ ಶಾಸಕಾಂಗ ಪಕ್ಷದ (CLP) ಸಭೆ ಕರೆಯೋಣ. ಶಾಸಕರ ಅಭಿಪ್ರಾಯ ಏನಿದೆ ಎಂಬುದು ಆ ಸಭೆಯಲ್ಲೇ ತೀರ್ಮಾನವಾಗಲಿ. ಅಲ್ಲಿಯವರೆಗೂ ಯಾವುದೇ ಅವಸರದ ನಿರ್ಧಾರ ಬೇಡ" ಎಂದು ಸಚಿವರು ಸಿಎಂ ಸಿದ್ದರಾಮಯ್ಯ ಅವರ ಮುಂದೆ ಬಲವಾದ ಬೇಡಿಕೆ ಇಟ್ಟಿದ್ದಾರೆ ಎನ್ನಲಾಗಿದೆ.

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ನಿಗದಿ ಆಯ್ತು ನಿರ್ಗಮನದ ಮುಹೂರ್ತ: ಅಧಿಕೃತವಾಗಿ ಲೋಕಭವನದ ಸಮಯ ಕೇಳಿದ ಸಿಎಂ ಸಿದ್ದರಾಮಯ್ಯ
ಹೌದು..ಸಿಎಂ ರಾಜೀನಾಮೆ ಕೊಡ್ತೀನಿ ಅಂತಾ ಹೇಳಿ ಬಂದಿದ್ದಾರೆ: ಆರ್‌ವಿ ದೇಶಪಾಂಡೆ