ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮೊದಲ ‘ಜನಸ್ಪಂದನ’ ಕಾರ್ಯಕ್ರಮ ಅಭೂತ ಪೂರ್ವ ಯಶಸ್ಸು ಕಂಡ ಎರಡೂವರೆ ತಿಂಗಳ ಬಳಿಕ ಫೆ.8ರಂದು ವಿಧಾನಸೌಧದ ಮುಂಭಾಗ ರಾಜ್ಯಮಟ್ಟದ 2ನೇ ಜನಸ್ಪಂದನ ಕಾರ್ಯಕ್ರಮಕ್ಕೆ ಸಿದ್ಧತಾ ಕಾರ್ಯ ಆರಂಭಿಸಲಾಗಿದೆ.
ಬೆಂಗಳೂರು (ಫೆ.6): ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮೊದಲ ‘ಜನಸ್ಪಂದನ’ ಕಾರ್ಯಕ್ರಮ ಅಭೂತ ಪೂರ್ವ ಯಶಸ್ಸು ಕಂಡ ಎರಡೂವರೆ ತಿಂಗಳ ಬಳಿಕ ಫೆ.8ರಂದು ವಿಧಾನಸೌಧದ ಮುಂಭಾಗ ರಾಜ್ಯಮಟ್ಟದ 2ನೇ ಜನಸ್ಪಂದನ ಕಾರ್ಯಕ್ರಮಕ್ಕೆ ಸಿದ್ಧತಾ ಕಾರ್ಯ ಆರಂಭಿಸಲಾಗಿದೆ. ಕಾರ್ಯಕ್ರಮಕ್ಕೆ ಅತಿ ಹೆಚ್ಚು ಜನರು ಬರುವ ಸಾಧ್ಯತೆ ಹಿನ್ನೆಲೆ ಮುನ್ನೆಚ್ಚರಿಕೆ ಕ್ರಮವಾಗಿ ಎರಡು ದಿನಗಳ ಮೊದಲೇ ವಿಧಾನಸೌಧದ ಗೇಟ್ ನಂ-1ನ್ನ ಮುಚ್ಚಿದ ವಿಧಾನಸೌಧದ ಪೊಲೀಸರು. ಇದೇ ಗೇಟ್ನಿಂದ ಸಿಎಂ, ಸಚಿವರು, ಶಾಸಕರು, ಅಧಿಕಾರಿಗಳು ಸಂಚಾರ ಮಾಡುತ್ತಿದ್ದರು. ಇದೀಗ ಯಾರೇ ವಿಧಾನಸಸೌಧಕ್ಕೆ ಎಂಟ್ರಿ ಕೊಡಬೇಕಾದ್ರೂ ಗೇಟ್ ನಂ.2ರ ಮೂಲಕವೇ ಹೋಗಬೇಕು
ಗುರುವಾರ ನಡೆಯಲಿರುವ ಜನಸ್ಪಂದನ ಕಾರ್ಯಕ್ರಮಕ್ಕೆ ಈಗಾಗಲೇ ಸಿದ್ಧತೆ ಭರದಿಂದ ಸಾಗಿದೆ. ಇದೇ ಮೊದಲ ಬಾರಿಗೆ ವಿಧಾನಸೌಧದ ಆವರಣದಲ್ಲಿ ಸಿಎಂ ಜನಸ್ಪಂದನ ಕಾರ್ಯಕ್ರಮ ನಡೆಯುತ್ತಿದೆ. ವಿಧಾನಸೌಧದ ಆವರಣದ ಗ್ರ್ಯಾಂಡ್ ಸ್ಟಪ್ಸ್ ಬಳಿ ವೇದಿಕೆ ನಿರ್ಮಾಣ ಮಾಡಲಾಗ್ತಿದೆ. ಬೃಹತ್ ಜರ್ಮನ್ ಟೆಂಟ್ ಹಾಕಲಾಗುತ್ತಿದೆ. ಇಲ್ಲಿ ಏಕಕಾಲಕ್ಕೆ ಸುಮಾರು ಸುಮಾರು 10,000 ಜನರು ಕುಳಿತುಕೊಳ್ಳಬಹುದಾದಷ್ಟು ಚೇರ್ಗಳ ವ್ಯವಸ್ಥೆ ಮಾಡಲಾಗ್ತಿದೆ ಎಂದು ತಿಳಿಸಿದ್ದಾರೆ. ಇದೇ ವೇದಿಕೆಯಲ್ಲಿ ಕೂತು ಸಿಎಂ ಸಾರ್ವಜನಿಕರ ಅರ್ಜಿಗಳನ್ನ ಸ್ವೀಕರಿಸಲಿದ್ದಾರೆ. ಒಟ್ಟಿನಲ್ಲಿ ಗುರುವಾರ ನಡೆಯಲಿರುವ ಜನಸ್ಪಂದನ ಕಾರ್ಯಕ್ರಮ ಎಲ್ಲಾ ಸಿದ್ದತೆಗಳು ಇಂದಿನಿಂದಲೇ ಆರಂಭಿಸಲಾಗಿದೆ.
ಪ್ರತಿಭಟನೆ ವೇಳೆ ರಸ್ತೆ ತಡೆ ನಡೆಸಿ ಸಾರ್ವಜನಿಕರಿಗೆ ತೊಂದರೆ: ಸಿಎಂಗೆ ದಂಡ ವಿಧಿಸಿದ ಹೈಕೋರ್ಟ್
ಜನಸ್ಪಂದನ ಕಾರ್ಯಕ್ರಮಕ್ಕೆ ಬಸ್ ವ್ಯವಸ್ಥೆ
ಗುರುವಾರ ನಡೆಯಲಿರುವ 2ನೇ ಜನಸ್ಪಂದನ ಕಾರ್ಯಕ್ರಮದಲ್ಲಿ ಎಲ್ಲ ಇಲಾಖೆಗಳ ಕಾರ್ಯದರ್ಶಿಗಳು, ಇಲಾಖಾ ಮುಖ್ಯಸ್ಥರು ಹಾಜರಿದ್ದು ವಿಶೇಷ ಆಸಕ್ತಿ ವಹಿಸಿ ಸ್ಥಳದಲ್ಲೇ ಕುಂದು ಕೊರತೆ ನಿವಾರಿಸಬೇಕು. ಆಗಮಿಸುವ ವಿಶೇಷಚೇತನರು, ಹಿರಿಯ ನಾಗರಿಕರಿಗೆ ವಿಶೇಷ ವ್ಯವಸ್ಥೆ, ಜೊತೆಗೆ ಜನರ ಅನುಕೂಲಕ್ಕಾಗಿ ಮೆಜೆಸ್ಟಿಕ್ ಬಸ್ ನಿಲ್ದಾಣ ಹಾಗೂ ಸಂಗೊಳ್ಳಿ ರಾಯಣ್ಣ ಕೇಂದ್ರ ರೈಲ್ವೆ ನಿಲ್ದಾಣಕ್ಕೆ ಉಚಿತ ಬಸ್ ವ್ಯವಸ್ಥೆ, ಕುಡಿಯುವ ನೀರು, ಉಪಾಹಾರಕ್ಕೆ ವ್ಯವಸ್ಥೆ ಮಾಡಲು ಸೂಚಿಸಲಾಗಿದೆ.
ಮುಖ್ಯಮಂತ್ರಿಗಳ ಗೃಹ ಕಚೇರಿ ಕೃಷ್ಣಾದಲ್ಲಿ ನ.27ರಂದು ಮೊದಲ ಜನಸ್ಪಂದನ ಕಾರ್ಯಕ್ರಮದ ವೇಳೆ ಸಿಎಂ ಸಿದ್ದರಾಮಯ್ಯನವರು ಬರೋಬ್ಬರಿ 3,812 ಮಂದಿ ಸಾರ್ವಜನಿಕರ ಅಹವಾಲು ಸ್ವೀಕರಿಸಿ ಹಲವು ಅರ್ಜಿಗಳಿಗೆ ಸ್ಥಳದಲ್ಲೇ ಪರಿಹಾರ ಕಲ್ಪಿಸಿದ್ದರು. ಈ ಬಾರಿ ಅದಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಥಳದಲ್ಲೇ ಪರಿಹರಿಸಲಿದ್ದಾರೆ.