
ಚಿಕ್ಕಮಗಳೂರು (ಜ.30): ಕಾಫಿನಾಡ ಬಯಲುಸೀಮೆ ಭಾಗದ ಅತ್ಯಂತ ದೊಡ್ಡ ಜಾತ್ರೆಯಾಗಿರುವ ಅಂತರಘಟ್ಟೆ ದುರ್ಗಾಂಬ ಜಾತ್ರಾ ಮಹೋತ್ಸವದಲ್ಲಿ ಇಂದು ಅನಿರೀಕ್ಷಿತ ಅವಘಡವೊಂದು ಸಂಭವಿಸಿದೆ. ಸಾವಿರಾರು ಎತ್ತಿನಗಾಡಿಗಳ ಮೂಲಕ ಭಕ್ತರು ಜಾತ್ರೆಗೆ ಆಗಮಿಸುತ್ತಿದ್ದ ವೇಳೆ, ಭದ್ರತಾ ಕರ್ತವ್ಯದಲ್ಲಿದ್ದ ಪೊಲೀಸ್ ಇನ್ಸ್ಪೆಕ್ಟರ್ ಮೇಲೆ ಎತ್ತಿನಗಾಡಿ ಹರಿದಿದೆ.
ಅಜ್ಜಂಪುರ ತಾಲೂಕಿನ ತಮಟದಹಳ್ಳಿ ಗೇಟ್ ಬಳಿ ಈ ಘಟನೆ ನಡೆದಿದೆ. ಜಾತ್ರೆಯ ಬಂದೋಬಸ್ತ್ಗಾಗಿ ನಿಯೋಜನೆಗೊಂಡಿದ್ದ ಅಜ್ಜಂಪುರ ಸರ್ಕಲ್ ಇನ್ಸ್ಪೆಕ್ಟರ್ (ಸಿಪಿಐ) ವೀರೇಂದ್ರ ಅವರು ರಸ್ತೆಯಲ್ಲಿ ವಾಹನಗಳ ನಿಯಂತ್ರಣ ಮಾಡುತ್ತಿದ್ದರು. ಈ ವೇಳೆ ಹಿಂದಿನಿಂದ ವೇಗವಾಗಿ ಬಂದ ಎತ್ತಿನಗಾಡಿಯನ್ನು ಕಂಡು ತಪ್ಪಿಸಿಕೊಳ್ಳಲು ಅವರು ಪ್ರಯತ್ನಿಸಿದ್ದಾರೆ. ಆದರೆ, ಓಡುವಷ್ಟರಲ್ಲಿ ನಿಯಂತ್ರಣ ತಪ್ಪಿದ ಎತ್ತಿನಗಾಡಿ ಅವರ ಮೈಮೇಲೆಯೇ ನುಗ್ಗಿದೆ.
ಇನ್ಸ್ಪೆಕ್ಟರ್ ವೀರೇಂದ್ರ ಅವರು ಕೆಳಗೆ ಬೀಳುತ್ತಿದ್ದಂತೆ ಎತ್ತಿನಗಾಡಿಯ ಚಕ್ರ ಅವರ ಮೇಲೆ ಹರಿದಿದೆ. ಅದೃಷ್ಟವಶಾತ್, ಅದು ಕಬ್ಬಿಣದ ಚಕ್ರದ ಗಾಡಿಯಾಗಿರದೆ ರಬ್ಬರ್ ಟೈರ್ ಗಾಡಿಯಾಗಿದ್ದರಿಂದ (ಟೈರ್ ಗಾಡಿ) ಇನ್ಸ್ಪೆಕ್ಟರ್ ಅವರಿಗೆ ಉಂಟಾಗಬಹುದಾದ ಭೀಕರ ಅನಾಹುತವೊಂದು ಕೂದಲೆಳೆ ಅಂತರದಲ್ಲಿ ತಪ್ಪಿದಂತಾಗಿದೆ. ಆದರೂ ಚಕ್ರ ಮೈಮೇಲೆ ಹರಿದ ಪರಿಣಾಮ ಅವರು ತೀವ್ರವಾಗಿ ಗಾಯಗೊಂಡಿದ್ದಾರೆ.
ಹೆಚ್ಚಿನ ಚಿಕಿತ್ಸೆಗಾಗಿ ಶಿವಮೊಗ್ಗಕ್ಕೆ ರವಾನೆ
ಘಟನೆ ನಡೆದ ತಕ್ಷಣವೇ ಸ್ಥಳೀಯರು ಸಹಾಯದಿಂದ ಗಾಯಾಳು ಸಿಪಿಐ ಅವರನ್ನು ಅಜ್ಜಂಪುರ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಪ್ರಾಥಮಿಕ ಚಿಕಿತ್ಸೆ ಬಳಿಕ ಹೆಚ್ಚಿನ ಚಿಕಿತ್ಸೆಯ ಅಗತ್ಯವಿದ್ದ ಹಿನ್ನೆಲೆಯಲ್ಲಿ ಅವರನ್ನು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ರವಾನಿಸಲಾಗಿದೆ. ಪ್ರಸ್ತುತ ಅಜ್ಜಂಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಪ್ರಕರಣ ದಾಖಲಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ