
ಬೆಂಗಳೂರು (ಸೆ.29): ಕಾವೇರಿ ನೀರಿಗಾಗಿ ರೈತಪರ, ಕನ್ನಡ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿ ಇಡೀ ಕರ್ನಾಟಕ ಬಂದ್ ಮಾಡಿ ಕುಳಿತಿರುವ ದಿನವೇ ಮತ್ತೆ ಅಕ್ಟೋಬರ್ 15ರವರೆಗೆ ತಮಿಳನಾಡಿಗೆ ನೀರು ಬಿಡುವಂತೆ ಸಿಡಬ್ಲ್ಯುಎಂಎ ಆದೇಶಿಸಿರುವುದು ಕನ್ನಡಿಗರ ಹೊಟ್ಟೆಮೇಲೆ ಹೊಡೆದಂತಾಗಿದೆ.
ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ (ಸಿಡಬ್ಲ್ಯುಎಂಎ) ಆದೇಶ ನೀಡಿರುವ ಸಂಬಂಧ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ಆಕ್ರೋಶ ವ್ಯಕ್ತಪಡಿಸಿದರು.
ಕಾವೇರಿ ನಿರ್ವಹಣಾ ಸಮಿತಿಯ ಆದೇಶ ಪ್ರಾಧಿಕಾರ ಒಪ್ಪಿದೆ ಎಂದರೆ ಏನು ಮಾತಾಡಬೇಕೋ ಗೊತ್ತಾಗುತ್ತಿಲ್ಲ. ಕರ್ನಾಟಕ ಅಂದ್ರೆ ಅವರಿಗೆ ಬೇಕಾಗಿಲ್ಲ. ಈ ಆದೇಶದಿಂದ ಬಹಳಷ್ಟು ನೋವು ತಂದಿದೆ. ಕನಿಷ್ಠ ಒಂದು ದಿನವಾದರೂ ಖುದ್ದೂ ತಾವೇ ಬಂದು ತಮಿಳುನಾಡು ಕರ್ನಾಟಕ ಜಲಾಶಯ ಮಟ್ಟದ ನೀರನ್ನ ಅಳೆಯಬಹುದಿತ್ತು. ಪರಿಶೀಲನೆ ಮಾಡಿ ವಾಸ್ತವ ಪರಿಸ್ಥಿತಿ ಹೇಗಿದೆ ಎಂಬುದನ್ನು ನೋಡಬೇಕಿತ್ತು. ಅದ್ಯಾವುದೂ ಮಾಡದೆ ದೆಹಲಿಯಲ್ಲಿ ಕುಳಿತು ಇದೀಗ ಮತ್ತೆ 3 ಸಾವಿರ ಕ್ಯೂಸೆಕ್ ನೀರು ಬಿಡಬೇಕು ಎಂದು ಆದೇಶ ಮಾಡಿದೆ.ಕಾವೇರಿ ನಿರ್ವಹಣಾ ಮಂಡಳಿ , ಅಭಿವೃದ್ಧಿ ಪ್ರಾಧಿಕಾರ ಎರಡೂ ಒಂದೇ ಆಗಿವೆ ಎಂದು ಬೇಸರ ವ್ಯಕ್ತಪಡಿಸಿದರು.
ಕಾವೇರಿ ವಿಚಾರದಲ್ಲಿ ಕೆಟ್ಟ ಮೇಲೆ ಸರ್ಕಾರಕ್ಕೆ ಬುದ್ಧಿ ಬರುತ್ತಿದೆ! ಮಾಜಿ ಸಿಎಂ ಮಾತಿನ ಮರ್ಮವೇನು?
ಪ್ರಧಾನಿ ಮೋದಿ ಮಧ್ಯಪ್ರವೇಶ ಮಾಡಲೇಬೇಕು:
ಕಾವೇರಿ ನೀರಿನ ವಿಚಾರದಲ್ಲಿ ಕರ್ನಾಟಕ ಅನ್ಯಾಯವಾಗಿದೆ. ಪ್ರಧಾನ ಮಂತ್ರಿ ಮಾತುಕತೆ ನಡೆಸಬೇಕು ಇಂಥ ಸಮಯದಲ್ಲಿ ಪ್ರಧಾನ ಮಂತ್ರಿ ಅವರು ಮಧ್ಯಪ್ರವೇಶ ಮಾಡಲೇಬೇಕು. ಪ್ರಧಾನಿ ಮಾತುಕತೆ ನಡೆಸಬೇಕೆಂದರೆ ನಮ್ಮ ರಾಜ್ಯದ ಸಂಸದರು ರಾಜಕೀಯ ಮಾಡದೆ ಒಗ್ಗಟ್ಟಾಗಿ ನಮ್ಮ ಪರಿಸ್ಥಿತಿ ಬಗ್ಗೆ ಮನವರಿಕೆ ಮಾಡಿಕೊಡಬೇಕು. ಇನ್ನೂ ನಮಗೆ ಈಗ ಉಳಿದಿರೋದು ಒಂದೇ ಮಾರ್ಗ, ಇವತ್ತು ಪ್ರಧಾನ ಮಂತ್ರಿ ಬಂದು ಮಾತಾಡಿ ಅನ್ನುವಂಥ ಪರಿಸ್ಥಿತಿ ಬಂದಿದೆ ಎಂದು ಅಸಹಾಯಕತೆ ವ್ಯಕ್ತಪಡಿಸಿದರು.
ನೀರು ಬಿಡಿ ಅಂತಾ ಆದೇಶ ಮಾಡ್ತಿರಾ ಆದರೆ ಸಂಕಷ್ಟ ಪರಿಸ್ಥಿತಿಯಲ್ಲಿ ಕೈಗೊಳ್ಳಬಹುದಾದ ಕ್ರಮಗಳ ಬಗ್ಗೆ ಮಾತಾಡಬೇಕು. ಈ ಬಗ್ಗೆ ತುರ್ತು ಶಾಸನ ಸಭೆ ಮಾಡಿ ತೀರ್ಮಾನ ಮಾಡಲಿ. ಸರ್ವಾನುಮತದ ನಿರ್ಣಯ ಮಾಡಿದರೆ ಶಾಸನಸಭೆಯ ನಿರ್ಣಯವನ್ನ ದಿಕ್ಕರಿಸಲು ಸಾಧ್ಯವಾ? ನ್ಯಾಯಾಲಯ ತಿರಸ್ಕರಿಸುತ್ತದಾ? ಶಾಸನ ಸಭೆ ಲೋಕಸಭೆಯ ಮುಂದೆ ಯಾವ್ದೂ ಇಲ್ಲ. ಮೊದಲು ಮುಖ್ಯಮಂತ್ರಿಗಳು ಗಂಭೀರವಾಗಿ ಯೋಚನೆ ಮಾಡಿ ನಿರ್ಧಾರ ಕೈಗೊಳ್ಳಬೇಕು. ಆದೇಶದಂತೆ ಕಾವೇರಿ ನೀರು ಬಿಡುತ್ತಾ ಹೋದರೆ ನಾವು ಕೆಟ್ಟಂತೆ ಶೀಘ್ರ ಸಭೆ ಕರೆಯುವಂತೆ ಒತ್ತಾಯಿಸಿದರು.
ಕಮಿಷನರ್ ವಿರುದ್ಧ ವಾಟಾಳ ನಾಗರಾಜ ಆಕ್ರೋಶ:
ಪೊಲೀಸ್ ಕಮಿಷನರ್ ಪ್ರೆಸ್ ಮೀಟ್ ಮಾಡಿದ್ದಾರೆ. ಪ್ರೆಸ್ ಮೀಟ್ನಲ್ಲಿ ಮಾತಾಡ್ತಾ ಯಾರೋ ಸಂಘಟನೆಯವರು ಬಂದ್ಗೆ ಕರೆ ನೀಡಿದ್ದಾರಂತೆ ಎಂದು ಮಾತನಾಡಿದ್ದಾರೆ. ಯಾರೋ ಅಲ್ಲ, ನಾನು ವಾಟಾಳ್ ನಾಗರಾಜ್ ಎಂದು ಪೊಲೀಸ್ ಕಮಿಷನರ್ ನಡೆಗೆ ಕಿಡಿಕಾರಿದರು.
ನಾನು ಐದು ಬಾರಿ ಶಾಸಕನಾಗಿದ್ದೇನೆ. ಬಹಳಷ್ಟು ಭಾರಿ ಸೋತಿದ್ದೇನೆ. ನೀವು ಕಮಿಷನರ್ ಆದಮೇಲೆ ನಮ್ಮ ಒಕ್ಕೂಟ ಬಂದಿಲ್ಲ. ಬಹಳಷ್ಟು ವರ್ಷಗಳ ಹಿಂದೆ ನಮ್ಮ ಒಕ್ಕೂಟ ಬಂದಿದೆ. ನಾವೇನು ಬ್ಯಾವರ್ಸಿಗಳಾ? ನಮಗೆ ಗತೀ ಇಲ್ವಾ ,ನಾನು ಹೋರಾಟ ಶುರು ಮಾಡ್ದಾಗ ನೀವು ಯಾರೂ ಹುಟ್ಟೇ ಇರ್ಲಿಲ್ಲ. ಮಾತಿನ ಮೇಲೆ ಮಿತಿ ಇರ್ಲಿ ಎಂದು ಪೊಲೀಸ್ ಕಮಿಷನರ್ ದಯಾನಂದ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ನಾವು ಹೋರಾಟ ಮಾಡಿದ್ದೇವೆ, ಬಂದ್ ಮಾಡಿದ್ದೇವೆ ನಮ್ಮ ಜೊತೆ ಮಾತಾಡೋಕೆ ಯಾರೂ ಕರೆದಿಲ್ಲ.ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿಗಳು ,ಕಮಿಷನರ್, ಜಲಸಂಪನ್ಮೂಲ ಸಚಿವರು ಯಾರೂ ಕರೆದಿಲ್ಲ. ಈ ನಡೆ ಪಕ್ಷಗಳ ಅಧಿಕಾರದ ಆಸೆ, ದುರಾಹಂಕಾರ ತೋರ್ಸುತ್ತೆ ಎಂದು ವಾಗ್ದಾಳಿ ನಡೆಸಿದರು.
ಕುಮಾರಸ್ವಾಮಿ ಅವರು ಏನೆಲ್ಲಾ ಮಾತಾಡಿದ್ದಾರೆ, ಬಾಯಿಗೆ ಬಂದಾಗೆ ಮಾತಾಡಿದ್ದಾರೆ. ಆದರೆ ಅವರು ಇವತ್ತು ಒಂದಾಗಿ ಕೂತಿದ್ದಾರೆ. ಇವತ್ತು ಕಮಿಷನರ್ ನೋಡಿದ್ರೆ ಯಾರೋ ಸಂಘಟನೆ ಅನ್ನೋ ರೀತಿಯಲ್ಲಿ ಮಾತಾಡಿದ್ದಾರೆ. ಇದು ಗೌರವವಲ್ಲ, ನೀತಿಯಲ್ಲ. ಇವತ್ತಿನ ಬಂದ್ ಬೆಂಗಳೂರು ಜನರು ಉತ್ತಮವಾಗಿ ಪ್ರತಿಕ್ರಿಯಿಸಿದ್ದಾರೆ ಎಂದರು.
ಮಂಡ್ಯದಲ್ಲಿ ಕಾವೇರಿ, ಉತ್ತರ ಕರ್ನಾಟಕ ಮಹದಾಯಿ ಹೋರಾಟ:
ರೈತರು ಮಂಡ್ಯದಲ್ಲಿ ಕಾವೇರಿಗಾಗಿ ಹೊರಾಟ ಮಾಡ್ತಿದ್ದಾರೆ. ಇತ್ತ ಉತ್ತರ ಕರ್ನಾಟಕದ ರೈತರು ಮಹದಾಯಿಗೆ ಹೋರಾಟ ಮಾಡ್ತಿದ್ದಾರೆ. ಉತ್ತರ ಕರ್ನಾಟಕದಲ್ಲಿ ಬಹಳಷ್ಟು ಅದ್ಬುತವಾಗಿ ಬೆಂಬಲ ವ್ಯಕ್ತವಾಗಿದೆ. ಮುಂದೆ ಹೈದರಾಬಾದ್ ಕರ್ನಾಟಕ,ಬೆಳಗಾವಿಯಲ್ಲಿ ಮಹಾದಾಯಿಗಾಗಿ ಹೋರಾಟ ಮಾಡುತ್ತೇವೆ ಎಂದರು.
ಕಾವೇರಿ ನೀರನ್ನು ತಮಿಳುನಾಡಿಗೆ ಬಿಡದಿದ್ದರೆ ರಾಜ್ಯ ಸರ್ಕಾರ ಡಿಸ್ಮಿಸ್ ಆಗುತ್ತೆ: ಸಿಎಂ ಸಿದ್ದರಾಮಯ್ಯ
ಕೇಂದ್ರ ಪ್ರಾಧಿಕಾರದ ನಿರ್ಣಯ ನಾವು ತಿರಸ್ಕಾರ ಮಾಡಿದ್ದೇವೆ. ನಾಳೆ ಮೆಜೆಸ್ಟಿಕ್ ನಲ್ಲಿ ೧೧ ಕ್ಕೆ ಚಳುವಳಿ ಮಾಡುತ್ತೇವೆ.ನಿರ್ಣಯದ ವಿರುದ್ಧ ಮತ್ತೆ ಚಳುವಳಿ ಮಾಡುತ್ತೇವೆ ೫ ನೇ ತಾರೀಕಿಗೆ ಬೆಂಗಳೂರಿನಿಂದ ,ಮೈಸೂರು ಕೆಆರ್ಎಸ್ಗೆ ಬೈಕ್ ರ್ಯಾಲಿ ಮಾಡುತ್ತೇವೆ. ಸರ್ವೋಚ್ಚ ನ್ಯಾಯಾಲಯದ ತೀರ್ಪು ಅವರ ಪರವಾಗಿದೆ ಎಂದು ಯಾವುದೇ ಕಾರಣಕ್ಕೆ ನೀರು ಬಿಡ್ಬಾರದು. ಸರ್ಕಾರ ಸಮಿತಿ ರಚನೆ ಮಾಡಿ , ಮಧ್ಯ ಪ್ರವೇಶಿಸುವಂತೆ ಪ್ರಧಾನಿಗೆ ಮನವಿ ಮಾಡುವಂತೆ ಪುನಃ ಒತ್ತಾಯಿಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ