Bridge to Bengaluru ನಾಳೆ ದೆಹಲಿಯಲ್ಲಿ ಬ್ರಿಡ್ಜ್‌ ಟು ಬೆಂಗ್ಳೂರು ಸಮಾವೇಶ; ರಾಜ್ಯಕ್ಕೆ ಹರಿದುಬರಲಿದೆ ಸಾವಿರಾರು ಕೋಟಿ ಬಂಡವಾಳ!

Kannadaprabha News   | Kannada Prabha
Published : Apr 16, 2026, 09:43 AM IST
Bridge to Bengaluru Summit in Delhi Tomorrow GIA 2 0 to be Unveiled Massive Global Investments in Karnataka

ಸಾರಾಂಶ

ರಾಜ್ಯ ಸರ್ಕಾರವು ನವದೆಹಲಿಯಲ್ಲಿ 'ಬ್ರಿಡ್ಜ್‌ ಟು ಬೆಂಗಳೂರು' ಸಂವಾದ ಸಮಾವೇಶವನ್ನು ಆಯೋಜಿಸಿದ್ದು, ಇದರಲ್ಲಿ ಜಾಗತಿಕ ನಾವೀನ್ಯತಾ ಮೈತ್ರಿಕೂಟದ ಎರಡನೇ ಆವೃತ್ತಿಯನ್ನು ಅನಾವರಣಗೊಳಿಸಲಿದೆ. ಬೆಂಗಳೂರು ಟೆಕ್ ಸಮಿಟ್‌ಗೆ ಪೂರ್ವಭಾವಿ ಕಾರ್ಯಕ್ರಮದಿಂದಾಗಿ, ರಾಜ್ಯಕ್ಕೆ ಜಾಗತಿಕ ಬಂಡವಾಳ ಹರಿದು ಬರಲಿದೆ

ಬೆಂಗಳೂರು (ಏ.16): ರಾಜ್ಯ ಸರ್ಕಾರವು ಇದೇ 17ರಂದು ನವದೆಹಲಿಯಲ್ಲಿ ನಡೆಯಲಿರುವ ರಾಜತಾಂತ್ರಿಕರ ಜೊತೆಗಿನ ‘ಬ್ರಿಡ್ಜ್‌ ಟು ಬೆಂಗಳೂರು’ ಸಂವಾದ ಸಮಾವೇಶದಲ್ಲಿ ಜಾಗತಿಕ ನಾವೀನ್ಯತಾ ಮೈತ್ರಿಕೂಟದ (ಜಿಐಎ-2.0) ಎರಡನೇ ಆವೃತ್ತಿಯನ್ನು ಅನಾವರಣಗೊಳಿಸಲಿದೆ ಎಂದು ರಾಜ್ಯ ಮಾಹಿತಿ ಮತ್ತು ಜೈವಿಕ ತಂತ್ರಜ್ಞಾನ ಸಚಿವ ಪ್ರಿಯಾಂಕ್‌ ಖರ್ಗೆ ತಿಳಿಸಿದ್ದಾರೆ.

ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಈ ಸಂಬಂಧ ಮಾಹಿತಿ ಹಂಚಿಕೊಂಡ ಅವರು, ಕಳೆದ ಒಂದು ವರ್ಷದಿಂದ ನಾವು ಜಾಗತಿಕ ಕಂಪನಿಗಳ ಜೊತೆಗೆ ಮೈತ್ರಿ ಸಹಭಾಗಿತ್ವ ಸಾಧಿಸುವ ದಿಸೆಯಲ್ಲಿ ಮತ್ತು ಪ್ರತಿಫಲ ಆಧಾರಿತ ಕಾರ್ಯಕ್ರಮಗಳನ್ನು ರೂಪಿಸುತ್ತಿದ್ದು ಈ ಯೋಜನೆಗಳು ಈಗಾಗಲೇ ಸಾಕಷ್ಟು ಫಲ ನೀಡಿವೆ. ಇದು ಜಾಗತಿಕ ನಾವೀನ್ಯತಾ ಮೈತ್ರಿಕೂಟದ ನೆರವಿನೊಂದಿಗೆ ರಾಜ್ಯದ ಕಂಪನಿಗಳಿಗೆ ಜಾಗತಿಕ ಮಾರುಕಟ್ಟೆಯನ್ನು ಕಲ್ಪಿಸುವ ದಿಸೆಯಲ್ಲಿ ಕೆಲಸ ಮಾಡುತ್ತಿದೆ. ಇದೀಗ ಏ.17ರಂದು ನಡೆಯುವ ಬ್ರಿಡ್ಜ್‌ ಟು ಬೆಂಗಳೂರು ಎಂಬ ಸಂವಾದ ಸಮಾವೇಶದ ಮೂಲಕ ಮುಂದಿನ ತಲೆಮಾರುಗಳಿಗೆ ಅನುಕೂಲವಾಗುವಂತೆ ಕ್ಷೇತ್ರವಾರು ಸಹಭಾಗಿತ್ವ ಸಾಧಿಸುವಿಕೆ, ಜಾಗತಿಕ ಮಾರುಕಟ್ಟೆಯನ್ನು ವಿಸ್ತರಿಸುವುದು ಮತ್ತು ಇನ್ನಷ್ಟು ರಚನಾತ್ಮಕ ಮತ್ತು ಮುಂದಾಳತ್ವದ ಪ್ರತಿಫಲಗಳನ್ನು ನೀಡುವಂತಹ ಸಹಭಾಗಿತ್ವಕ್ಕೆ ರಾಜ್ಯವು ಮುಂದಾಗಿದೆ ಎಂದರು.

ಈ ಸಮಾವೇಶದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪಾಲ್ಗೊಳ್ಳಲಿದ್ದಾರೆ. ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಸಚಿವ ಪ್ರಿಯಾಂಕ್ ಖರ್ಗೆ, ಅಲ್ಲದೇ ಕಿರಣ್ ಮಜುಂದಾರ್ ಷಾ ಅವರು ಸಮ್ಮೇಳನದಲ್ಲಿ ಭಾಗವಹಿಸಲಿದ್ದಾರೆ.ಇದು ಬೆಂಗಳೂರಿನಲ್ಲಿ ಬರುವ ನವೆಂಬರ್ 17ರಿಂದ 19ರವರೆಗೆ ನಡೆಯಲಿರುವ ಬೆಂಗಳೂರು ಟೆಕ್ ಸಮಿಟ್‌ಗೆ ಪೂರ್ವಭಾವಿಯಾಗಿ ನಡೆಯುತ್ತಿದೆ ಎಂದು ಅವರು ಹೇಳಿದರು.

ಮುಂದಿನ ಒಂದು ದಶಕದಲ್ಲಿ ರಾಜ್ಯವು ಡೀಪ್‌ ಟೆಕ್‌ ಕ್ಷೇತ್ರದಲ್ಲಿ ಅಗ್ರಗಣ್ಯ ರಾಜ್ಯವಾಗಿ ಹೊರಹೊಮ್ಮಬೇಕೆಂಬ ಕನಸು ನನಸು ಮಾಡುವ ದಿಸೆಯಲ್ಲಿ ಸಂಶೋಧನೆ ಮತ್ತು ಪ್ರತಿಭೆಗಳನ್ನು ಜೋಡಿಸುವ ಕೆಲಸದಲ್ಲಿ ನಿರತವಾಗಿದೆ. ನಮ್ಮ ಕಾರ್ಯಕ್ರಮಗಳು ಡೀಪ್ ಟೆಕ್, ಫಿನ್‌ಟೆಕ್, ಹೆಲ್ತ್‌ಟೆಕ್‌, ಕ್ಲೀನ್ ಟೆಕ್, ಬಯೋಟೆಕ್ ಮತ್ತು ಟ್ರಾವೆಲ್‌ಟೆಕ್ ಕ್ಷೇತ್ರಗಳಲ್ಲಿ ಜಾಗತಿಕ ಹೂಡಿಕೆದಾರರು, ಕಾರ್ಪೋರೇಟ್ ಸಂಸ್ಥೆಗಳು, ಮತ್ತು ನಿಯಂತ್ರಣಾ ಸಂಸ್ಥೆಗಳ ಜತೆ ಸಂಪರ್ಕ ಸಾಧಿಸಿ ಅಂತರರಾಷ್ಟ್ರೀಯ ಮಟ್ಟದಲ್ಲಿ ಪ್ರಬಲ ಸಂಪರ್ಕ ಸೇತುವೆಯನ್ನು ಕಲ್ಪಿಸಲು ನೆರವಾಗಿವೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಮಾಹಿತಿ ನೀಡಿದರು.

2025ರಲ್ಲಿ ನಡೆದ ವಿವಾ ಟೆಕ್ ಸಮ್ಮೇಳನದಲ್ಲಿ ಯುರೋಪ್- ಬೆಂಗಳೂರು ಮಧ್ಯೆ ನಾವೀನ್ಯತಾ ಕಾರಿಡಾರ್ ಒಪ್ಪಂದಕ್ಕೆ ಸಹಿ ಹಾಕಲಾಗಿದೆ. ಅದೇ ರೀತಿ ಬರುವ ಏಪ್ರಿಲ್ 2027ರಲ್ಲಿ ಬೆಂಗಳೂರಿನಲ್ಲಿ ಜಿಟೆಕ್ಸ್ ಏಐ ಇಂಡಿಯಾ- ಜಾಗತಿಕ ಮಟ್ಟದ ಸಮ್ಮೇಳನವನ್ನು ಹಮ್ಮಿಕೊಳ್ಳಲು ನಿರ್ಧರಿಸಲಾಗಿದೆ. ನುರ್ನ್ಬದ ಮೆಸ್ಸೆ ಇಂಡಿಯಾ ಜತೆ ಒಡಂಬಡಿಕೆ ಪತ್ರಕ್ಕೆ ಸಹಿ ಹಾಕಲಾಗಿದ್ದು ಬೆಂಗಳೂರು ಟೆಕ್ ಶೃಂಗದ ಜತೆ ಜತೆಗೆ ಇದು ನಡೆಯಲಿದೆ. ಇವೆಲ್ಲ ಕಾರ್ಯಕ್ರಮ ಗಳ ಫಲವಾಗಿ ರಾಜ್ಯಕ್ಕೆ ಸುಮಾರು 5,500 ಕೋಟಿ ರು. ಮೊತ್ತದ ಜಾಗತಿಕ ಬಂಡವಾಳವು ಹರಿದು ಬರಲಿದ್ದು ಸುಮಾರು 7200 ಉದ್ಯೋಗಗಳು ಸೃಷ್ಟಿಯಾಗಲಿವೆ. 6350 ಕೋಟಿ ರು. ಬಂಡವಾಳವು ಡಾಟಾ ಕೇಂದ್ರಗಳ ಸ್ಥಾಪನೆಗೆ ಹೂಡಿಕೆಯಾಗಲಿವೆ ಎಂದು ಸಚಿವರು ತಿಳಿಸಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ರಾಯರ ದರ್ಶನಕ್ಕೆ ಹೊರಟವರ ವಾಹನ ಅಪಘಾತ; ಸ್ಥಳದಲ್ಲಿಯೇ 8 ಭಕ್ತರ ದುರ್ಮರಣ, 13 ಮಂದಿಗೆ ಗಾಯ
ವನ್ಯಜೀವಿ ಪ್ರೇಮಿಗಳಿಗೆ ಗುಡ್ ನ್ಯೂಸ್: ಹುಲಿ ಸಂರಕ್ಷಿತ ಪ್ರದೇಶಗಳಲ್ಲಿ ಸಫಾರಿ ನಿಷೇಧದ ಬಗ್ಗೆ ಹೈಕೋರ್ಟ್ ಹೇಳಿದ್ದೇನು?