
ಬೆಂಗಳೂರು (ಡಿ./26): ರಾಜ್ಯದ ಐಟಿ ಮತ್ತು ಬಿಟಿ ಸಚಿವ ಪ್ರಿಯಾಂಕ್ ಖರ್ಗೆ ಅವರು ಸಾಮಾಜಿಕ ಜಾಲತಾಣದಲ್ಲಿ ಸುಳ್ಳು ಸುದ್ದಿ (Fake News) ಹರಡುತ್ತಿದ್ದಾರೆ ಎಂದು ಬಿಜೆಪಿ ಕರ್ನಾಟಕ ಘಟಕವು ಗಂಭೀರ ಆರೋಪ ಮಾಡಿದೆ. ಪ್ರಧಾನಿ ನರೇಂದ್ರ ಮೋದಿ ಅವರನ್ನು ಟೀಕಿಸುವ ಭರದಲ್ಲಿ ಖರ್ಗೆ ಅವರು ಎಐ (AI) ಸೃಷ್ಟಿತ ನಕಲಿ ಚಿತ್ರವನ್ನು ಬಳಸಿ ಸಾರ್ವಜನಿಕರನ್ನು ದಾರಿ ತಪ್ಪಿಸುತ್ತಿದ್ದಾರೆ ಎಂದು ಬಿಜೆಪಿ ಆಕ್ರೋಶ ವ್ಯಕ್ತಪಡಿಸಿದೆ.
ವಿವಾದದ ಹಿನ್ನೆಲೆ
ಸಚಿವ ಪ್ರಿಯಾಂಕ್ ಖರ್ಗೆ ಅವರು ತಿಹಾರ್ ಜೈಲಿನ ಮುಂಭಾಗ ವ್ಯಕ್ತಿಯೊಬ್ಬರಿಗೆ ಹಾರ ಹಾಕುತ್ತಿರುವ ಚಿತ್ರವೊಂದನ್ನು ಹಂಚಿಕೊಂಡು, 'ಬೇಟಿ ಬಚಾವೋ ಬೇಟಿ ಪಢಾವೋ ಯೋಜನೆಗೆ ಈಗ ಹೊಸ ಅರ್ಥ ಸಿಕ್ಕಿದೆ' ಎಂದು ವ್ಯಂಗ್ಯವಾಗಿ ಪೋಸ್ಟ್ ಮಾಡಿದ್ದರು. ಈ ಪೋಸ್ಟ್ ಪ್ರಧಾನಿ ಮೋದಿ ಅವರನ್ನು ಗುರಿಯಾಗಿಸಿಕೊಂಡಿತ್ತು. ಆದರೆ, ಈ ಚಿತ್ರವು ಕೃತಕ ಬುದ್ಧಿಮತ್ತೆ (AI) ಬಳಸಿ ಸೃಷ್ಟಿಸಲಾದ ನಕಲಿ ಚಿತ್ರವಾಗಿದ್ದು, ಸಚಿವರು ದುರುದ್ದೇಶಪೂರ್ವಕವಾಗಿ ಇದನ್ನು ಹರಡುತ್ತಿದ್ದಾರೆ ಎಂಬುದು ರಾಜ್ಯ ಬಿಜೆಪಿ ಘಟಕದಿಂದ ಆರೋಪ ಮಾಡಲಾಗಿದೆ.
ರಾಜ್ಯದಲ್ಲಿ ಜವಾಬ್ದಾರಿಯುತ ಐಟಿ ಸಚಿವರಾಗಿದ್ದರೂ ಪ್ರಿಯಾಂಕ್ ಖರ್ಗೆ ಅವರು ನ್ಯಾಯಾಲಯದ ಆದೇಶದ ಬಗ್ಗೆ ಸುಳ್ಳು ಮಾಹಿತಿ ನೀಡುತ್ತಿದ್ದಾರೆ. ಜೈಲಿನಿಂದ ಬಿಡುಗಡೆಯಾಗಿರುವುದು ನ್ಯಾಯಾಲಯದ ಆದೇಶದ ಮೇರೆಯೇ ಹೊರತು ಸರ್ಕಾರದ ನಿರ್ಧಾರದಿಂದಲ್ಲ. ಈ ಆದೇಶವನ್ನು ಸಿಬಿಐ ಈಗಾಗಲೇ ಪ್ರಶ್ನಿಸುತ್ತಿದೆ. ಇಷ್ಟಿದ್ದರೂ ಕೋಮು ಭಾವನೆ ಪ್ರಚೋದಿಸುವಂತಹ ಚಿತ್ರಗಳನ್ನು ಬಳಸಿ ನ್ಯಾಯಾಂಗ ಪ್ರಕ್ರಿಯೆಯನ್ನು ಅಪಹಾಸ್ಯ ಮಾಡುತ್ತಿದ್ದಾರೆ' ಎಂದು ಬಿಜೆಪಿ ಕರ್ನಾಟಕ ತನ್ನ ಎಕ್ಸ್ (X) ಖಾತೆಯಲ್ಲಿ ಕಿಡಿಕಾರಿದೆ.
ಸರ್ಕಾರದ ಬಿಲ್ ಉಲ್ಲಂಘನೆ
ಸಚಿವರ ಈ ನಡೆ ರಾಜ್ಯ ಸರ್ಕಾರದ 'ದ್ವೇಷ ಭಾಷಣ ತಡೆ ಬಿಲ್' (Hate Speech Bill)ನ ಸ್ಪಷ್ಟ ಉಲ್ಲಂಘನೆಯಾಗಿದೆ. ಹೆಣ್ಣು ಮಕ್ಕಳ ಸಬಲೀಕರಣಕ್ಕಾಗಿ ಜಾರಿಗೆ ತಂದಿರುವ 'ಬೇಟಿ ಬಚಾವೋ ಬೇಟಿ ಪಢಾವೋ' ಯೋಜನೆಯನ್ನು ಅಗ್ಗದ ರಾಜಕಾರಣಕ್ಕಾಗಿ ಹೀಯಾಳಿಸಿರುವುದು ನಾಚಿಕೆಗೇಡಿನ ಸಂಗತಿ ಎಂದು ಬಿಜೆಪಿ ಹೇಳಿದೆ. ಈ ಕೂಡಲೇ ಸಚಿವರು ಬೇಷರತ್ ಕ್ಷಮೆಯಾಚಿಸಬೇಕು ಮತ್ತು ಅವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಎಂದು ಬಿಜೆಪಿ ಆಗ್ರಹಿಸಿದೆ. ಸತ್ಯವನ್ನು ಎತ್ತಿ ಹಿಡಿಯಬೇಕಾದ ಸಚಿವರೇ ಸುಳ್ಳು ಸುದ್ದಿಯ ಪ್ರಚಾರಕರಾಗಿರುವುದು ದುರದೃಷ್ಟಕರ ಎಂದು ಬಿಜೆಪಿ ಟೀಕಿಸಿದ್ದು, ಈ ಪ್ರಕರಣ ಈಗ ರಾಜಕೀಯ ವಲಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ