
ಬೆಂಗಳೂರು (ಜು.05): ಬಿಜೆಪಿ ಸರ್ಕಾರದ ಅವಧಿಯಲ್ಲಿ ನಡೆದಿದೆ ಎನ್ನಲಾದ ‘ಬಿಟ್ ಕಾಯಿನ್ ಹಗರಣ’ದ ತನಿಖೆಗೆ ವಿಶೇಷ ತನಿಖಾ ತಂಡ (ಎಸ್ಐಟಿ) ರಚನೆ ಬೆನ್ನಲ್ಲೇ ಮುಂದಿನ ಹಂತದ ಕಾರ್ಯಾಚರಣೆ ಕುರಿತು ರಾಜ್ಯ ಪೊಲೀಸ್ ಮಹಾನಿರ್ದೇಶಕ ಅಲೋಕ್ ಮೋಹನ್ ನೇತೃತ್ವದಲ್ಲಿ ಮಂಗಳವಾರ ಉನ್ನತ ಮಟ್ಟದ ಮಹತ್ವದ ಸಭೆ ನಡೆದಿದೆ.
ನಗರದ ನೃತುಪತುಂಗ ರಸ್ತೆಯಲ್ಲಿರುವ ರಾಜ್ಯ ಪೊಲೀಸ್ ಇಲಾಖೆಯ ಕೇಂದ್ರ ಕಚೇರಿಯಲ್ಲಿ ಡಿಜಿಪಿ-ಐಜಿಪಿ ಅವರು, ಸಿಐಡಿ ಡಿಜಿಪಿ ಡಾ.ಎಂ.ಸಲೀಂ, ಎಸ್ಐಟಿ ಮುಖ್ಯಸ್ಥ ಮನೀಷ್ ಕರ್ಬೀಕರ್, ಡಿಐಜಿ ಕೃಷ್ಣ ವಂಶಿ, ಸದಸ್ಯರಾದ ಡಿಸಿಪಿ ಅನೂಪ್ ಶೆಟ್ಟಿಹಾಗೂ ಎಂ.ಡಿ.ಶರತ್ ಜತೆ ಸುದೀರ್ಘವಾಗಿ ಸಮಾಲೋಚಿಸಿದ್ದಾರೆ ಎಂದು ತಿಳಿದು ಬಂದಿದೆ.
ಬಿಜೆಪಿಯಲ್ಲಿ ಆಂತರಿಕ ಕಚ್ಚಾಟ: ಸ್ವಪಕ್ಷದ ನಾಯಕರ ವಿರುದ್ದ ಮಾಜಿ ಸಚಿವ ರಾಜೂಗೌಡ ಗರಂ
ಬಿಟ್ ಕಾಯಿನ್ ಹಗರಣದ ಕುರಿತು ಇದುವರೆಗೆ ನಡೆದಿರುವ ತನಿಖೆ ಬಗ್ಗೆ ಸಭೆಯಲ್ಲಿ ಚರ್ಚೆ ನಡೆದಿದ್ದು, ಮುಂದಿನ ಹಂತದ ತನಿಖೆ ಹೇಗಿರಲಿದೆ. ಯಾವ ಮಾನದಂಡದಲ್ಲಿ ತನಿಖೆ ದಿಕ್ಕು ಸಾಗಬೇಕು. ಇಡೀ ಹಗರಣದ ಕೇಂದ್ರ ಬಿಂದು ಅಂತಾರಾಷ್ಟ್ರೀಯ ಮಟ್ಟದ ಹ್ಯಾಕರ್ ಶ್ರೀಕೃಷ್ಣ ಅಲಿಯಾಸ್ ಶ್ರೀಕಿ ಪತ್ತೆ ಹೇಗೆ ಎಂಬುದರ ಕುರಿತು ಎಸ್ಐಟಿ ಅಧಿಕಾರಿಗಳ ಜತೆ ಚರ್ಚಿಸಿದ್ದಾರೆ. ಹಲವು ತಿಂಗಳುಗಳಿಂದ ತನ್ನ ಕುಟುಂಬದವರ ಸಂಪರ್ಕಕ್ಕೂ ಸಿಗದೆ ಶ್ರೀಕಿ ನಾಪತ್ತೆಯಾಗಿದ್ದಾನೆ. ಹೀಗಾಗಿ ಆತನ ಹುಡುಕಾಟಕ್ಕೆ ಡಿಜಿಪಿ ಸೂಚಿಸಿದ್ದಾರೆ ಎನ್ನಲಾಗಿದೆ.
ಕಡತಗಳ ವರ್ಗಾವಣೆಗೆ ಕೋರಿಕೆ: ಅಲ್ಲದೆ ಬಿಟ್ ಕಾಯಿನ್ ಹಗರಣದ ಸಂಬಂಧಿಸಿದ ಎಫ್ಐಆರ್ ಪ್ರತಿ, ಆರೋಪ ಪಟ್ಟಿಹಾಗೂ ವಿಧಿವಿಜ್ಞಾನ ಪ್ರಯೋಗಾಲಯದ ವರದಿಗಳು ಸೇರಿದಂತೆ ಸಿಸಿಬಿ ಬಳಿಯಿರುವ ದಾಖಲೆಗಳನ್ನು ಪಡೆಯಲು ನ್ಯಾಯಾಲಯಕ್ಕೆ ಎಸ್ಐಟಿ ಮನವಿ ಸಲ್ಲಿಸಲಿದೆ. ಇದಕ್ಕೂ ಮುನ್ನ ಮಂಗಳವಾರ ಔಪಚಾರಿಕವಾಗಿ ಸಿಸಿಬಿ ಜಂಟಿ ಆಯುಕ್ತ ಡಾ.ಎಸ್.ಡಿ.ಶರಣಪ್ಪ ಅವರಿಂದ ಹಗರಣದ ಕುರಿತು ಮಾಹಿತಿಯನ್ನು ಎಸ್ಐಟಿ ಅಧಿಕಾರಿಗಳು ಪಡೆದಿದ್ದಾರೆ ಎಂದು ತಿಳಿದು ಬಂದಿದೆ.
ನನಗೂ ಸ್ಥಾನಮಾನ ಬೇಕು: ಅಧಿಕಾರದ ಆಸೆ ಬಹಿರಂಗಪಡಿಸಿದ ಸಿಎಂ ಪುತ್ರ ಯತೀಂದ್ರ ಸಿದ್ದರಾಮಯ್ಯ!
ತನಿಖಾಧಿಕಾರಿ ನೇಮಕ: ಈ ಪ್ರಕರಣದ ತನಿಖೆಗೆ ಸಿಐಡಿ ಡಿವೈಎಸ್ಪಿ ಶ್ರೀನಿವಾಸ್ ಅವರನ್ನು ತನಿಖಾಧಿಕಾರಿಯಾಗಿ ಎಸ್ಐಟಿ ಮುಖ್ಯಸ್ಥ ಹಾಗೂ ಎಡಿಜಿಪಿ ಮನೀಷ್ ಕರ್ಬೀಕರ್ ನೇಮಿಸಿದ್ದಾರೆ. ಈ ಪ್ರಕರಣದ ಕುರಿತು ಪ್ರಾಥಮಿಕ ಹಂತದ ಮಾಹಿತಿಯನ್ನು ಸೈಬರ್ ಹಾಗೂ ಸಿಸಿಬಿ ಅಧಿಕಾರಿಗಳಿಂದ ಶ್ರೀನಿವಾಸ್ ಪಡೆದಿದ್ದು, ಬುಧವಾರ ನ್ಯಾಯಾಲಯಕ್ಕೆ ಬಿಟ್ ಕಾಯಿನ್ ಹಗರಣದ ಮುಂದುವರೆದ ತನಿಖೆ ಬಗ್ಗೆ ತನಿಖಾಧಿಕಾರಿ ಮಾಹಿತಿ ನೀಡಲಿದ್ದಾರೆ ಎಂದು ಮೂಲಗಳು ಹೇಳಿವೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ