ಆವಿಷ್ಕಾರದಲ್ಲಿ ಕ್ಯಾಲಿಫೋರ್ನಿಯಾವನ್ನು ಬೆಂಗಳೂರು ಹಿಂದಿಕ್ಕಿದೆ: ಡಾ.ಸಿ.ಎನ್.ಅಶ್ವತ್ಥನಾರಾಯಣ

By Suvarna NewsFirst Published Jun 25, 2022, 8:43 PM IST
Highlights

* ಆವಿಷ್ಕಾರದಲ್ಲಿ ಕ್ಯಾಲಿಫೋರ್ನಿಯಾವನ್ನು ಬೆಂಗಳೂರು ಹಿಂದಿಕ್ಕಿದೆ
* ಉನ್ನತ ಶಿಕ್ಷಣ ಹಾಗೂ ಐಟಿ/ಬಿಟಿ ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ ಹೇಳಿಕೆ
* ಅಂಕನಹಳ್ಳಿ ಮಠದ ಆಶ್ರಯಕ್ಕೆ ಕೃತಜ್ಞತೆ ಸಲ್ಲಿಸಿದ ಉನ್ನತ ಶಿಕ್ಷಣ ಸಚಿವ

ಅಂಕನಹಳ್ಳಿ ಗವಿಮಠ (ಕುಣಿಗಲ್ ತಾಲ್ಲೂಕು), (ಜೂನ್.25): ತಂತ್ರಜ್ಞಾನ ಹಾಗೂ ಆವಿಷ್ಕಾರದಲ್ಲಿ ನಮ್ಮ ಬೆಂಗಳೂರು ನಗರವು ಅಮೆರಿಕಾದ ಕ್ಯಾಲಿಫೋರ್ನಿಯಾವನ್ನು ಕೂಡ ಹಿಂದಿಕ್ಕಿದೆ. ಆದರೆ, ನಾವು ಎಷ್ಟು ಮುಂದಿದ್ದೇವೆ ಎಂದು ನಮಗೇ ಗೊತ್ತಿಲ್ಲ ಎಂದು ಉನ್ನತ ಶಿಕ್ಷಣ ಹಾಗೂ ಐಟಿ/ಬಿಟಿ ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ ಅಭಿಪ್ರಾಯಪಟ್ಟರು.

ಹುಲಿಯೂರುದುರ್ಗ ಹೋಬಳಿ ಅಂಕನಹಳ್ಳಿ ಗವಿಮಠದಲ್ಲಿ ಇಂದು (ಶನಿವಾರ) ಏರ್ಪಡಿಸಿದ್ದ ಶ್ರೀ ಫಿರಂಗೀಶ್ವರ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಈಗ ಜಗತ್ತಿನ ಯಾವುದೇ ದೇಶದಲ್ಲಿ ಯಾವುದೇ ಉತ್ಪನ್ನ ಕೊಂಡರೂ ಅದರ ಹಿಂದೆ ನಮ್ಮ ಬೆಂಗಳೂರಿಗರ ತಾಂತ್ರಿಕ ಸಹಕಾರ ಬಹುತೇಕ ಇದ್ದೇ ಇರುತ್ತದೆ ಎಂದು ತಿಳಿಸಿದರು.

ನಮ್ಮ ತಂದೆಯವರು ಪ್ರತಿಭಾವಂತ ವಿದ್ಯಾವಂತರಾಗಿದ್ದು, ಒಳ್ಳೆಯ ಕ್ರೀಡಾಪಟುವಾಗಿದ್ದರೂ ವ್ಯವಸಾಯಗಾರಬೇಕೆಂಬ ಗೀಳು ಹತ್ತಿಸಿಕೊಂಡು ಸರ್ಕಾರಿ ನೌಕರಿಗಳನ್ನೆಲ್ಲಾ ತೊರೆದು ಬಂದಿದ್ದರು. ಆದರೆ ಕೌಟುಂಬಿಕ ಕಟ್ಟುಪಾಡುಗಳಿಂದ ಅವರು ಪುನಃ ಉದ್ಯೋಗಕ್ಕೆ ಸೇರಬೇಕಾದ ಸಂದರ್ಭ ಬಂದಾಗ ಅಂಕನಹಳ್ಳಿ ಮಠದ ಶಾಲೆಯಲ್ಲಿ ಅವರು ಮೇಷ್ಟ್ರಾಗಿ ಕೆಲಸಕ್ಕೆ ಸೇರಿದರು. ಆನಂತರ, ನಮ್ಮ ತಂದೆಯವರಿಗೆ ಹಾಗೂ ಕುಟುಂಬದವರಿಗೆ ಅಂಕನಹಳ್ಳಿ ಸ್ವಾಮೀಜಿಗಳ ಮಾರ್ಗದರ್ಶನ ನಿರಂತರವಾಗಿ ಸಿಗುತ್ತಾ ಬಂದಿದೆ. ಅದರಿಂದಾಗಿಯೇ ಇಂದು ನಾವು ಈ ಹಂತಕ್ಕೆ ಬೆಳೆಯಲು ಸಾಧ್ಯವಾಗಿದೆ ಎಂದು ಸಚಿವರು ವಿವರಿಸಿದರು.

ನಮ್ಮ ತಂದೆಯವರು ನನಗೆ ಯಾವತ್ತೂ ಈ ಕೆಲಸವನ್ನೇ ಮಾಡು ಎಂದು ನಿರ್ಬಂಧ ಹೇರಲಿಲ್ಲ. ಆದರೆ ಯಾವುದೇ ಒಳ್ಳೆಯ ಕೆಲಸ ಮಾಡಿದರೂ ನಿನ್ನ ಬೆಂಬಲಕ್ಕೆ ಇರುತ್ತೇನೆ ಎಂದು ವಿಶ್ವಾಸ ತುಂಬುವ ಮಾತುಗಳನ್ನಾಡಿದರು. ಅದಕ್ಕೆ ಜೊತೆಯಾಗಿ ನಮ್ಮ ತಾಯಿಯೂ ಕುಟುಂಬದ ಶಕ್ತಿಯಾಗಿ ದುಡಿದರು. ಸಮಾಜಕ್ಕೆ ಋಣಿಯಾಗಿ ಕೆಲಸ ಮಾಡಬೇಕೆಂಬುದೇ ನಮ್ಮ ಅಪೇಕ್ಷೆಯಾಗಿದೆ. ಯಾವುದೇ ನಿರೀಕ್ಷೆಯಿಲ್ಲದೆ ಈ ಕೆಲಸವನ್ನು ಮಾಡುತ್ತೇವೆ ಎಂದು ಸಚಿವರು ಹೇಳಿದರು.

ಶಿಕ್ಷಣದ ಮೂಲಕ ಸದೃಢ ದೇಶ ನಿರ್ಮಾಣಕ್ಕೆ ಭದ್ರ ಬುನಾದಿ ಹಾಕುವ ಕೆಲಸ ನಡೆಯುತ್ತಿದೆ. ಇದಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಅವರ ಮಾರ್ಗದರ್ಶನದಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಜಾರಿಗೆ ತರಲಾಗಿದೆ. ಇದು ಪರಿಣಾಮಕಾರಿಯಾಗಿ ಅನುಷ್ಠಾನವಾಗುವಂತೆ ನಾವು ನೋಡಿಕೊಂಡರೆ ಅದರ ಸಿಹಿಫಲಗಳನ್ನು ಇನ್ನು ಕೆಲವಾರು ವರ್ಷಗಳಲ್ಲಿ ನಮ್ಮ ಕಣ್ಣ ಮುಂದೆಯೇ ನೋಡಲಿದ್ದೇವೆ. ಭಾರತವು ವಿಶ್ವಗುರುವಿನ ಸ್ಥಾನಮಾನಕ್ಕೆ ಪಾತ್ರವಾಗಲಿದೆ ಎಂದು ಹೇಳಿದರು.

ನಿವೃತ್ತ ಪ್ರಭಾರ ದೈಹಿಕ ಶಿಕ್ಷಣ ಅಧೀಕ್ಷಕರಾದ ಶ್ರೀ ಟಿ.ಕೆ.ನಾರಾಯಣಪ್ಪ ಅವರಿಗೆ ಶ್ರೀ ಫಿರಂಗೀಶ್ವರ ಪ್ರಶಸ್ತಿ ಪ್ರದಾನ ಮಾಡಲಾಯಿತು. ಇವರು ಸಚಿವ ಅಶ್ವತ್ಥನಾರಾಯಣ ಅವರ ತಂದೆ. 

ಶ್ರೀ ಫಿರಂಗೀಶ್ವರ ಸ್ವಾಮೀಜಿಗಳು, ಶಾಸಕ ಅ.ದೇವೇಗೌಡ ಮತ್ತಿತರರು ಈ ಸಂದರ್ಭದಲ್ಲಿ ಇದ್ದರು.

click me!