
ಬೆಂಗಳೂರು (ಡಿ.17): ಹೊಸ ವರ್ಷಾಚರಣೆಯ ಸಂಭ್ರಮಕ್ಕೆ ಕೌಂಟ್ಡೌನ್ ಶುರುವಾಗಿರುವ ಬೆನ್ನಲ್ಲೇ ಬೆಂಗಳೂರು ಪೊಲೀಸರು (Bengaluru Police) ಮಹತ್ವದ ನಿರ್ಧಾರ ಕೈಗೊಂಡಿದ್ದಾರೆ. ಗೋವಾದ ಪಬ್ ಒಂದರಲ್ಲಿ ಇತ್ತೀಚೆಗೆ ಸಂಭವಿಸಿದ ದುರ್ಘಟನೆಯ ಹಿನ್ನೆಲೆಯಲ್ಲಿ ಎಚ್ಚೆತ್ತಿರುವ ಪೊಲೀಸರು, ಡಿ.31ರಂದು ನಡೆಯಲಿರುವ ಹೊಸ ವರ್ಷಾಚರಣೆಯ ಕಾರ್ಯಕ್ರಮಗಳಿಗೆ ಕಟ್ಟುನಿಟ್ಟಿನ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದ್ದಾರೆ. ಹೋಟೆಲ್, ಬಾರ್, ಪಬ್, ರೆಸ್ಟೋರೆಂಟ್ಗಳು ಸೇರಿದಂತೆ ಕಾರ್ಯಕ್ರಮಗಳನ್ನು ಆಯೋಜಿಸುವ ಎಲ್ಲಾ ಸ್ಥಳಗಳಿಗೆ ಈ ಗೈಡ್ಲೈನ್ಸ್ಗಳು ಅನ್ವಯವಾಗಲಿವೆ.
ಬೆಂಗಳೂರು ನಗರ ಪೊಲೀಸರು ಸುಮಾರು 19 ಅಂಶಗಳ ಮಾರ್ಗಸೂಚಿಗಳನ್ನು ಪ್ರಕಟಿಸಿದ್ದು, ಪ್ರಮುಖವಾಗಿ ಕಾರ್ಯಕ್ರಮ ಸ್ಥಳಗಳಲ್ಲಿ ಪಟಾಕಿ ಸಿಡಿಸುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಈ ನಿಯಮಗಳನ್ನು ಉಲ್ಲಂಘಿಸಿದರೆ ಕಠಿಣ ಕ್ರಮದ ಎಚ್ಚರಿಕೆಯನ್ನು ಪೊಲೀಸರು ನೀಡಿದ್ದಾರೆ. ಗೋವಾ ಪಬ್ ದುರಂತದ ನಂತರ ಮತ್ತಷ್ಟು ಬಿಗಿ ಕ್ರಮಗಳನ್ನು ಜಾರಿಗೆ ತರಲು ಖಾಕಿ ಪಡೆ ಮುಂದಾಗಿದೆ.
ಕಡ್ಡಾಯ ಅನುಮತಿ ಮತ್ತು ಸಮಯ ಪಾಲನೆ: ಕಾರ್ಯಕ್ರಮಗಳಿಗೆ ಸಂಬಂಧಪಟ್ಟ ಇಲಾಖೆಗಳಿಂದ ಅನುಮತಿ ಕಡ್ಡಾಯ. ಅಲ್ಲದೆ, ಹೊಸ ವರ್ಷಾಚರಣೆಗೆ ನಿಗದಿಪಡಿಸಿದ ಸಮಯ ಮತ್ತು ಶಬ್ದ ಮಿತಿಯನ್ನು ಕಡ್ಡಾಯವಾಗಿ ಪಾಲಿಸಬೇಕು.
ಸ್ಥಳಾವಕಾಶದ ನಿರ್ಬಂಧ: ಸ್ಥಳಾವಕಾಶಕ್ಕೆ ತಕ್ಕಂತೆ ಟಿಕೆಟ್/ಪಾಸ್ಗಳನ್ನು ವಿತರಿಸಬೇಕು. ನೆಲಮಹಡಿ, ಪಾರ್ಕಿಂಗ್ ಸ್ಥಳ, ಅಥವಾ ಟೆರೆಸ್ನಲ್ಲಿ ಕಾರ್ಯಕ್ರಮಗಳನ್ನು ಆಯೋಜಿಸುವಂತಿಲ್ಲ.
ತಪಾಸಣೆ ಮತ್ತು ಮಾದಕ ವಸ್ತು ನಿಷೇಧ: ಕಾರ್ಯಕ್ರಮಕ್ಕೆ ಬರುವವರ ತಪಾಸಣೆ ನಡೆಸಿ, ಸಂಶಯಾಸ್ಪದ ವ್ಯಕ್ತಿಗಳ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಬೇಕು. ಸ್ಥಳದಲ್ಲಿ ಮಾದಕ ವಸ್ತುಗಳ ಬಳಕೆ ಕಂಡುಬಂದಲ್ಲಿ ತಕ್ಷಣವೇ ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡಬೇಕು. ಪೊಲೀಸರ ದಾಳಿಯಲ್ಲಿ ಮಾದಕ ವಸ್ತು ಸಿಕ್ಕಿಬಿದ್ದರೆ, ಕಟ್ಟಡದ ಮಾಲೀಕರು/ಮ್ಯಾನೇಜರ್ ವಿರುದ್ಧವೂ ಕೇಸ್ ದಾಖಲಾಗುತ್ತದೆ.
ಸುರಕ್ಷತಾ ಕ್ರಮ: ಅಗ್ನಿ ನಂದಿಸುವ ವಸ್ತುಗಳನ್ನು ಅಳವಡಿಸಬೇಕು ಮತ್ತು ನಿರ್ಗಮನ ದ್ವಾರಗಳು ದೊಡ್ಡದಾಗಿರಬೇಕು.
ಸಿಸಿಟಿವಿ ಮತ್ತು ಭದ್ರತೆ: ಕಾರ್ಯಕ್ರಮದ ಪ್ರತಿ ಜಾಗದಲ್ಲಿ ಸಿಸಿ ಕ್ಯಾಮೆರಾಗಳನ್ನು ಅಳವಡಿಸಿ, ಕನಿಷ್ಠ 30 ದಿನಗಳವರೆಗೆ ದೃಶ್ಯಗಳನ್ನು ಸಂಗ್ರಹಿಸಬೇಕು. ಮಹಿಳೆಯರಿರುವ ಸ್ಥಳಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳಾ ಖಾಸಗಿ ಭದ್ರತಾ ಸಿಬ್ಬಂದಿಗಳನ್ನು ನೇಮಿಸಬೇಕು.ಸೆಕ್ಯೂರಿಟಿ ಸಿಬ್ಬಂದಿ ಹಾಗೂ ಬೌನ್ಸರ್ಗಳನ್ನು ನಿಯೋಜಿಸಿಕೊಳ್ಳುವ ಏಜೆನ್ಸಿಗಳು ‘PSARA’ ದಲ್ಲಿ ನೊಂದಣಿ ಮಾಡಬೇಕು.
ವಿಶೇಷ ಅತಿಥಿಗಳ ಮಾಹಿತಿ: ಸೆಲೆಬ್ರಿಟಿಗಳು, ಡಿಜೆಗಳು, ಅಥವಾ ನಟ-ನಟಿಯರನ್ನು ಆಹ್ವಾನಿಸಿದ್ದಲ್ಲಿ ಅವರ ಮಾಹಿತಿಯನ್ನು ಸ್ಥಳೀಯ ಪೊಲೀಸ್ ಠಾಣೆಗೆ ಕಡ್ಡಾಯವಾಗಿ ನೀಡಬೇಕು.
ಇತರೆ ನಿರ್ಬಂಧಗಳು: ಲೈಸೆನ್ಸ್ ಇಲ್ಲದ ಔಟ್ ಡೋರ್ ಸ್ಥಳಗಳಲ್ಲಿ ಮದ್ಯ ಸರಬರಾಜಿಗೆ ಅವಕಾಶವಿಲ್ಲ. ಹೋಟೆಲ್ಗಳ ರೂಮ್ಗಳಲ್ಲಿ ಗುಂಪು ಸೇರಿ ನಿಯಮಬಾಹಿರವಾಗಿ ಖಾಸಗಿ ಪಾರ್ಟಿ ನಡೆಸಲು ಅವಕಾಶ ನೀಡಬಾರದು. ಯಾವುದೇ ಅಹಿತಕರ ಘಟನೆ ನಡೆದರೆ ತಕ್ಷಣ ಪೊಲೀಸರಿಗೆ ಮಾಹಿತಿ ನೀಡಬೇಕು.
ಹೊಸ ವರ್ಷಾಚರಣೆಗೆ ಬಿಗಿ ಕ್ರಮ: ಕಠಿಣ ಕ್ರಮದ ಎಚ್ಚರಿಕೆ
ಬೆಂಗಳೂರು ಪೊಲೀಸರು ಹೊಸ ವರ್ಷಾಚರಣೆಯ ಕಾರ್ಯಕ್ರಮಗಳಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ತಡೆಯಲು ಈ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಂಡಿದ್ದಾರೆ. ನಿಯಮಗಳ ಉಲ್ಲಂಘನೆಯು ಕಠಿಣ ಕಾನೂನು ಕ್ರಮಕ್ಕೆ ಕಾರಣವಾಗಲಿದೆ ಎಂದು ಆಯೋಜಕರಿಗೆ ಸ್ಪಷ್ಟವಾಗಿ ಎಚ್ಚರಿಕೆ ನೀಡಲಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ