
ದಾಬಸ್ಪೇಟೆ: ರಾಷ್ಟ್ರೀಯ ಹೆದ್ದಾರಿಯ ವಾಹನ ಸವಾರರಿಗೆ ಮತ್ತೊಂದು ದರ ಏರಿಕೆ ಶಾಕ್ ಎದುರಾಗಿದೆ. ಬೆಂಗಳೂರು ಹೊರವಲಯದ ನೆಲಮಂಗಲ-ಹಾಸನ ರಾಷ್ಟ್ರೀಯ ಹೆದ್ದಾರಿ-75ರಲ್ಲಿ ಸೆಪ್ಟೆಂಬರ್ 1ರಿಂದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಟೋಲ್ ದರ ಏರಿಕೆ ಮಾಡಿದೆ.
ನೆಲಮಂಗಲ ದೇವಿಹಳ್ಳಿ ಎಕ್ಸ್ಪ್ರೆಸ್ ಪ್ರೈವೇಟ್ ಲಿಮಿಟೆಡ್ ಟೋಲ್ಗಳಲ್ಲಿ ಸೆ.1ರಂದು ಮಧ್ಯರಾತ್ರಿಯಿಂದ 5 ರುಪಾಯಿ ದರ ಏರಿಕೆಯಾಗಲಿದೆ. ದೊಡ್ಡಕರೇನಹಳ್ಳಿ ಟೋಲ್ ಹಾಗೂ ಕಾರಬೈಲು ಟೋಲ್ ಪ್ಲಾಜಾಗಳಲ್ಲಿಯೂ ದರ ಏರಿಕೆಯಾಗಿದೆ.
ಕಾರು, ಜೀಪ್, ವ್ಯಾನ್ ಹಾಗೂ ಲಘು ವಾಹನಗಳಿಗೆ ಫಾಸ್ಟ್ಟ್ಯಾಗ್ ಬಳಕೆದಾರರಿಗೆ ಏಕಮುಖ ಸಂಚಾರಕ್ಕೆ 60 ರು., ಅದೇ ದಿನದ ಮರು ಸಂಚಾರದ (ರಿಟರ್ನ್ ಪಾಸ್) ದರ 85 ರು. ನಿಂದ 90 ರು.ಗಳಿಗೆ ಏರಿಕೆಯಾಗಿದೆ. ಲಘು ವಾಣಿಜ್ಯ ಹಾಗೂ ಸರಕು ವಾಹನಗಳಿಗೆ ಏಕಮುಖ ಸಂಚಾರ ದರ 100ರಿಂದ 105 ರು.ಗಳಿಗೆ ಹಾಗೂ ದಿನದ ಸಂಚಾರದ ದರ 155 ರು.ಗಳಿಗೆ ಹೆಚ್ಚಳವಾಗಿದೆ. ಬಸ್ ಮತ್ತು ಟ್ರಕ್ಗಳಿಗೆ ಏಕಮುಖ ಸಂಚಾರಕ್ಕೆ 205 ರು. ಹಾಗೂ ದಿನದ ಸಂಚಾರಕ್ಕೆ 310 ರು. ನಿಗದಿಪಡಿಸಲಾಗಿದೆ. ಮಲ್ಟಿ ಆಕ್ಸಲ್ ಹಾಗೂ ಬೃಹತ್ ವಾಹನಗಳಿಗೆ ಏಕಮುಖ ಸಂಚಾರಕ್ಕೆ 330 ರು. ಹಾಗೂ ದಿನದ ಸಂಚಾರಕ್ಕೆ 495 ರು. ಶುಲ್ಕ ನಿಗದಿ ಮಾಡಲಾಗಿದೆ.
ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಪ್ರಕಾರ, ಟೋಲ್ ಶುಲ್ಕದ ಏರಿಕೆ ವಾರ್ಷಿಕ ದರ ಪರಿಷ್ಕರಣೆಯ ಭಾಗವಾಗಿದ್ದು, ಹಣದುಬ್ಬರ ಮತ್ತು ರಸ್ತೆ ನಿರ್ವಹಣೆಯ ವೆಚ್ಚದ ಏರಿಕೆಗೆ ಅನುಗುಣವಾಗಿ ಮಾಡಲಾಗುತ್ತದೆ. ಈ ಮಾರ್ಗದ ನಿರ್ವಹಣೆ ಮತ್ತು ದುರಸ್ತಿಗಾಗಿ ಹೆಚ್ಚಿನ ಹಣಕಾಸು ಅಗತ್ಯವಿದೆ ಎಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ತಿಳಿಸಿದೆ.
ವಾಹನ ಸವಾರರ ಆಕ್ರೋಶ
ಪ್ರತಿನಿತ್ಯ ಅಗತ್ಯ ವಸ್ತುಗಳ ಬೆಲೆ ಗಗನಕ್ಕೆ ಹೋಗುತ್ತಿದೆ. ಅದಲ್ಲದೆ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆಯಿಂದ ಈಗಾಗಲೇ ಜೀವನ ನಡೆಸುವುದಕ್ಕೆ ದುಸ್ತರವಾಗಿದೆ. ಇದೀಗ ಟೋಲ್ ದರ ಏರಿಕೆಯಿಂದ ನಮ್ಮ ಜೇಬಿಗೆ ಕತ್ತರಿ ಬಿದ್ದಿದೆ ಎಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ವಿರುದ್ಧ ವಾಹನ ಸವಾರರು ಆಕ್ರೋಶ ಹೊರಹಾಕಿದ್ದಾರೆ.
ಇದನ್ನೂ ಓದಿ: Bengaluru: 3 ಸಾವಿರ ಎಕರೆಯ ಕಾರಂತ ಬಡಾವಣೆ; 3200 ರೈತರಿಗೆ ಹಂಚಿಕೆಯಾದ BDA ನಿವೇಶನ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ