
ಬೆಂಗಳೂರು (ಮಾ.29): ಸಾಮಾನ್ಯವಾಗಿ ಪತ್ನಿಯ ಮೇಲೆ ಪತಿ ಹಲ್ಲೆ ನಡೆಸಿದ ಅಥವಾ ವರದಕ್ಷಿಣೆ ಕಿರುಕುಳ ನೀಡಿದ ಪ್ರಕರಣಗಳನ್ನು ನಾವು ದಿನನಿತ್ಯ ಕೇಳುತ್ತಿರುತ್ತೇವೆ. ಆದರೆ ಸಿಲಿಕಾನ್ ಸಿಟಿಯಲ್ಲಿ ಇದರ ಉಲ್ಟಾ ಎನ್ನುವಂತಹ ಪ್ರಕರಣವೊಂದು ಬೆಳಕಿಗೆ ಬಂದಿದೆ. ಪತ್ನಿಯ ಲೈಂಗಿಕ ವಾಂಛೆ ಹಾಗೂ ಆಕೆಯ ವಿಕೃತ ನಡವಳಿಕೆಯಿಂದ ಬೇಸತ್ತ ಪತಿಯೊಬ್ಬರು ಅನ್ಯಾಯದ ವಿರುದ್ಧ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.
ಬೆಂಗಳೂರಿನ ಅಮೃತಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ವಿಚಿತ್ರ ಹಾಗೂ ಆಘಾತಕಾರಿ ಘಟನೆ ನಡೆದಿದೆ. ಪತ್ನಿಯಿಂದ ನಿರಂತರವಾಗಿ ಲೈಂಗಿಕವಾಗಿ ಮತ್ತು ಮಾನಸಿಕವಾಗಿ ಟಾರ್ಚರ್ ಅನುಭವಿಸುತ್ತಿದ್ದೇನೆ ಎಂದು ಪತಿ ದೂರಿನಲ್ಲಿ ಆರೋಪಿಸಿದ್ದಾರೆ. ಮದುವೆಯಾದ ಹೊಸತರಲ್ಲಿ ಎಲ್ಲವೂ ಚೆನ್ನಾಗಿಯೇ ಇತ್ತು. ಆದರೆ ದಿನ ಕಳೆದಂತೆ ಪತ್ನಿಯ ಅಸಲಿ ಮುಖವಾಡ ಕಳಚತೊಡಗಿತು ಎಂದು ಪತಿ ನೋವು ತೋಡಿಕೊಂಡಿದ್ದಾರೆ.
ಪತಿಯ ಆರೋಪದ ಪ್ರಕಾರ, ಪತ್ನಿ ಕೇವಲ ತನ್ನೊಂದಿಗೆ ಮಾತ್ರವಲ್ಲದೆ, ತನ್ನ ಸ್ನೇಹಿತೆಯ ಜೊತೆಗೂ ಕೂಡ ದೈಹಿಕ ಸಂಬಂಧ ಹೊಂದುವಂತೆ ಪತಿಯನ್ನು ಒತ್ತಾಯಿಸುತ್ತಿದ್ದಳಂತೆ. ಈ ವಿಕೃತ ದೈಹಿಕ ಸಂಪರ್ಕಕ್ಕೆ ಪತಿ ಒಪ್ಪದಿದ್ದಾಗ ಆತನಿಗೆ ದೈಹಿಕವಾಗಿ ಹಾಗೂ ಮಾನಸಿಕವಾಗಿ ಕಿರುಕುಳ ನೀಡಲು ಆರಂಭಿಸಿದ್ದಾಳೆ. ಅಷ್ಟೇ ಅಲ್ಲದೆ, ಅಶ್ಲೀಲ ವೀಡಿಯೋಗಳು ಹಾಗೂ ರೆಕಾರ್ಡಿಂಗ್ಗಳನ್ನು ಪತಿಗೆ ಕಳುಹಿಸಿ ವಿಕೃತಿ ಮೆರೆಯುತ್ತಿದ್ದಳು ಎನ್ನಲಾಗಿದೆ. ಇನ್ನು ಪತ್ನಿಯ ಸ್ನೇಹಿತೆಯರ ಜೊತೆ ಕಳೆದ 'ಸ್ವೀಟ್ ಮೆಮೋರಿಗಳನ್ನು' ಹಂಚಿಕೊಳ್ಳುವಂತೆ ಆಕೆ ಪೀಡಿಸುತ್ತಿದ್ದಳು. ಈಕೆಯ ಈ ನಡೆ ಪತಿಗೆ ತೀವ್ರ ಮುಜುಗರವನ್ನುಂಟು ಮಾಡಿದೆ.
ಮದುವೆಯ ನಂತರ ಆಕೆ ತನ್ನ ಹಳೆಯ ಸಂಬಂಧಗಳ ಬಗ್ಗೆ ಪತಿಯ ಬಳಿ ಹೇಳಿಕೊಂಡು ಪೀಡಿಸುತ್ತಿದ್ದಳು. ತನಗೆ ಹಲವು ಜನರೊಂದಿಗೆ ಸಂಬಂಧವಿತ್ತು ಎಂಬ ವಿಷಯವನ್ನು ಪದೇ ಪದೇ ಪ್ರಸ್ತಾಪಿಸಿ ಪತಿಯ ನೆಮ್ಮದಿ ಕೆಡಿಸುತ್ತಿದ್ದಳು. ಇದಲ್ಲದೆ, ಪ್ರತಿದಿನ ಕುಡಿದು ಬರುವುದು, ತಡರಾತ್ರಿವರೆಗೂ ಸ್ನೇಹಿತರ ಜೊತೆ ಸುತ್ತುವುದು ತನಗೆ ಸಾಮಾನ್ಯ ಎಂದು ಪತ್ನಿ ವಾದಿಸುತ್ತಿದ್ದಳು ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಪತ್ನಿಯ ಈ ಕರಾಳ ಮುಖದ ಬಗ್ಗೆ ತಿಳಿಯುವ ಮುನ್ನ ಪತಿ ಆಕೆಯನ್ನು ಅಪಾರವಾಗಿ ನಂಬಿದ್ದರು. ಈ ನಂಬಿಕೆಯ ಮೇಲೆ ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣಗಳನ್ನು ಆಕೆಗೆ ನೀಡಿದ್ದರು. ಆದರೆ ಈಗ ಆ ಒಡವೆಗಳನ್ನು ವಾಪಸ್ ನೀಡದೆ ಪತ್ನಿ ಸತಾಯಿಸುತ್ತಿದ್ದಾಳೆ. ಈ ಹಿಂದೆ ಈ ವಿಷಯದ ಬಗ್ಗೆ ಕುಟುಂಬದ ಹಿರಿಯರ ಸಮ್ಮುಖದಲ್ಲಿ ರಾಜಿ ಪಂಚಾಯ್ತಿ ಕೂಡ ನಡೆದಿತ್ತು. ಆದರೆ ಪಂಚಾಯ್ತಿಯ ನಂತರವೂ ಪತ್ನಿಯ ವರ್ತನೆಯಲ್ಲಿ ಯಾವುದೇ ಬದಲಾವಣೆ ಕಂಡುಬರಲಿಲ್ಲ.
ಪತ್ನಿಯ ಕಾಟ ತಾಳಲಾರದೆ ಕೊನೆಗೆ ಪತಿ ಬೆಂಗಳೂರಿನ ಅಮೃತಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪತ್ನಿಯ ಅಶ್ಲೀಲ ಚಾಟ್ಗಳು, ವೀಡಿಯೋಗಳು ಹಾಗೂ ಆಕೆ ನೀಡುತ್ತಿದ್ದ ಕಿರುಕುಳದ ಬಗ್ಗೆ ಪತಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸದ್ಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಮುಂದುವರಿಸಿದ್ದಾರೆ. ಈ ಪ್ರಕರಣವು ಸಮಾಜದಲ್ಲಿ ಗಂಡಸರಿಗೂ ಕೂಡ ಕೌಟುಂಬಿಕ ದೌರ್ಜನ್ಯ ಮತ್ತು ಲೈಂಗಿಕ ಕಿರುಕುಳ ಎದುರಾಗಬಹುದು ಎಂಬುದಕ್ಕೆ ಸಾಕ್ಷಿಯಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ