
ಬೆಂಗಳೂರು (ಮಾ.14): ವಾಣಿಜ್ಯ ಬಳಕೆಯ ಎಲ್ಪಿಜಿ ಸಿಲಿಂಡರ್ಗಳ ಅಲಭ್ಯತೆಯಿಂದ ನಗರದ ಹೋಟೆಲ್ ಉದ್ಯಮ ತತ್ತರಿಸಿದ್ದು, ಕಾಳಸಂತೆಯಲ್ಲಿ ವಾಣಿಜ್ಯ ಸಿಲಿಂಡರ್ಗಳು 4,000 ರು.ಗೂ ಮೇಲ್ಪಟ್ಟಿನ ದರಕ್ಕೆ ಮಾರಾಟವಾಗುತ್ತಿವೆ.
ಮತ್ತೊಂದೆಡೆ ದುಬಾರಿ ಬೆಲೆಗೆ ಸಿಲಿಂಡರ್ ಖರೀದಿಸಲಾಗದೆ ಹೋಟೆಲಿಗರು ಸೌದೆ ಒಲೆ ಹಚ್ಚಿದ್ದಾರೆ. ಆದರೆ, ಸೌದೆ ಒಲೆ ಬಳಕೆ ಅನುಭವದ ಕೊರತೆಯಿಂದ ಅಡುಗೆ ಮಾಡಲು ಸಿಬ್ಬಂದಿ ಪರದಾಡುವಂತಾಗಿದೆ.
ಸ್ವಲ್ಪ ಸ್ಥಳಾವಕಾಶ ಲಭ್ಯ ಇರುವ ಹೋಟೆಲ್ ಗಳಲ್ಲಿ ತಾತ್ಕಾಲಿಕ ಕ್ರಮವಾಗಿ ಸೌದೆ ಒಲೆ ಬಳಕೆ ಆರಂಭಿಸಲಾಗಿದೆ. ಆದರೆ, ಈ ಬದಲಾವಣೆಯು ಹೊಸ ಸವಾಲುಗಳನ್ನು ತಂದೊಡ್ಡಿದೆ. ಆಧುನಿಕ ಹೋಟೆಲ್ ಅಡುಗೆ ಮನೆಗಳು ಕೇವಲ ಗ್ಯಾಸ್ ಒಲೆಗಳಿಗೆ ಅನುಗುಣವಾಗಿ ವಿನ್ಯಾಸಗೊಂಡಿರುವುದರಿಂದ, ಅಲ್ಲಿ ಸೌದೆ ಒಲೆಗಳನ್ನು ಬಳಸಲು ಅಗತ್ಯವಿರುವ ಹೊಗೆ ಹೊರಹೋಗುವ ವ್ಯವಸ್ಥೆ ಇಲ್ಲದಿರುವುದು ಉಸಿರುಗಟ್ಟಿಸುವ ವಾತಾವರಣ ನಿರ್ಮಾಣವಾಗಿದೆ.
ನಗರದ ಪಶ್ಚಿಮ ಭಾಗದಲ್ಲಿರುವ ಹೋಟೆಲ್ವೊಂದರಲ್ಲಿ ದುಬಾರಿ ಬೆಲೆ ತೆತ್ತು ಸಿಲಿಂಡರ್ ತರಲಾಗದೆ ಶುಕ್ರವಾರ ಸೌದೆ ಒಲೆಯನ್ನು ಹಚ್ಚಲಾಗಿತ್ತು. ಆದರೆ, ಹೋಟೆಲ್ನಲ್ಲಿ ಹೊಗೆ ತುಂಬಿಕೊಂಡಿತ್ತು. ಅಡುಗೆ ತಯಾರಿಸುವ ಸಿಬ್ಬಂದಿ ಒಲೆಯ ಮುಂದೆ ನಿಂತು ಅಡುಗೆ ಮಾಡಲು ಪರದಾಡುತ್ತಿದ್ದರು.
ಅನೇಕ ವರ್ಷಗಳಿಂದ ಗ್ಯಾಸ್ ಬಳಸುತ್ತಿದ್ದೇವೆ. ಒಲೆಯನ್ನು ಬಳಸಿ ಅನುಭವ ಇಲ್ಲ. ಹೀಗಾಗಿ, ಸಿಬ್ಬಂದಿಗೆ ತಾತ್ಕಾಲಿಕವಾಗಿ ಮಾಡಿಕೊಂಡಿರುವ ಒಲೆ ಹಚ್ಚಲು ಮತ್ತು ನಿರ್ವಹಿಸಲು ಕಷ್ಟವಾಗುತ್ತಿದೆ. ಅಡುಗೆ ಬೇಯಲು ಹೆಚ್ಚು ಸಮಯ ಹಿಡಿಯುತ್ತಿದೆ. ಕಟ್ಟಿಗೆ ಒಲೆಯಲ್ಲಿ ಹೊಗೆ ಹೆಚ್ಚು ಹೊರಸೂಸುತ್ತದೆ. ಆದರೆ, ಅಷ್ಟು ಹೊಗೆ ಹೋಗಲು ಸೂಕ್ತ ವೆಂಟಿಲೇಷನ್ ವ್ಯವಸ್ಥೆ ಇಲ್ಲ. ಹೀಗಾಗಿ, ಹೊಗೆ ಹೆಚ್ಚಾಗಿದೆ ಎಂದು ಹೋಟೆಲ್ನ ಮಾಲೀಕರು ಅಳಲು ತೋಡಿಕೊಂಡರು.
ಹೊಗೆಯಿಂದ ಹೆಚ್ಚು ಹೊತ್ತು ಒಲೆ ಮುಂದೆ ನಿಲ್ಲಲು ಆಗುವುದಿಲ್ಲ. ದೊಡ್ಡ ಪ್ರಮಾಣದಲ್ಲಿ ಅಡುಗೆ ತಯಾರಿಸಬೇಕಿರುವ ಕಾರಣ ಉಷ್ಣತೆ ಕೂಡ ಹೆಚ್ಚು ಇದೆ. ಬೇಸಿಗೆ ಬಿಸಿಲು ಕೂಡ ಅಡುಗೆ ಮಾಡುವುದನ್ನು ಇನ್ನು ಕಷ್ಟ ಆಗಿಸಿದೆ. ಗ್ಯಾಸ್ಗೆ ಹೋಲಿಸಿದರೆ ಒಲೆಯಲ್ಲಿ ಅಡುಗೆ ಮಾಡಲು ಹೆಚ್ಚು ಸಮಯ ತೆಗೆದುಕೊಳ್ಳುತ್ತಿದೆ ಎಂದು ಹೋಟೆಲ್ ಸಿಬ್ಬಂದಿ ಹೇಳಿದರು.
ವಾಣಿಜ್ಯ ಬಳಕೆಯ ಗ್ಯಾಸ್ ಸಿಲಿಂಡರ್ಗಳು ಕಾಳ ಸಂತೆಯಲ್ಲಿ 4000 ರು. ಹಾಗೂ ಮೇಲ್ಪಟ್ಟು ದರಕ್ಕೆ ಮಾರಾಟವಾಗುತ್ತಿವೆ. ಹೋಟೆಲ್ಗಳಲ್ಲಿ ವಾಣಿಜ್ಯ ಸಿಲಿಂಡರ್ ಬಳಕೆ ಅನಿವಾರ್ಯ. ಸಣ್ಣ ಗಾತ್ರದ ಹೋಟೆಲ್ಗಳು ಹಾಗೂ ಸ್ಥಳಾವಕಾಶ ಇರುವ ಹೋಟೆಲ್ಗಳಲ್ಲಿ ಮಾತ್ರ ಸೌದೆ ಒಲೆ ಬಳಸಲಾಗುತ್ತಿದೆ.
ಹೇಗಾದರೂ ಮಾಡಿ ಸಿಲಿಂಡರ್ ಪಡೆದು ಒಂದೆರಡು ದಿನ ಹೋಟೆಲ್ ನಡೆಸೋಣಾ ಎಂದು ವಿಚಾರಿಸಿದರೆ 4 ಸಾವಿರ ರು. ಹೇಳುತ್ತಿದ್ದಾರೆ ಎಂದು ಹೋಟೆಲ್ ಸಿಬ್ಬಂದಿಯೊಬ್ಬರು ಹೇಳಿದರು.
ಹೋಟೆಲ್ಗಳಿಗೆ ಸಿಲಿಂಡರ್ ಸಮಸ್ಯೆ ತೀವ್ರವಾಗಿದೆ. ಎಲ್ಲಾ ಮಾದರಿಯ ಹೋಟೆಲ್ಗಳು ಸಮಸ್ಯೆ ಎದುರಿಸುತ್ತಿವೆ. ಇಂಧನ ಟ್ಯಾಂಕರ್ಗಳು ಭಾರತಕ್ಕೆ ಬಂದಿವೆ ಎಂದು ಮಾಧ್ಯಮಗಳಿಂದ ತಿಳಿದುಕೊಂಡೆ. ಹೀಗಾಗಿ, ಇನ್ನು ಒಂದೆರೆಡು ದಿನಗಳಲ್ಲಿ ಪರಿಸ್ಥಿತಿ ಸುಧಾರಿಸಿ ಸಿಲಿಂಡರ್ ಸಿಗಬಹುದು ಎಂಬ ನಂಬಿಕೆ ಇದೆ ಎಂದು ಹೋಟೆಲ್ ಮಾಲೀಕರ ಸಂಘದ ಗೌರವಾಧ್ಯಕ್ಷ ಪಿ.ಸಿ. ರಾವ್ ಹೇಳಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ