MLA Satish Krishna Sail ಬೇಲೇಕೇರಿ ಅದಿರು ಕೇಸಲ್ಲಿ ಸತೀಶ್ ಸೈಲ್‌ಗೆ 7 ದಿನಗಳ ವೈದ್ಯಕೀಯ ಜಾಮೀನು ಮಂಜೂರು

Published : Sep 11, 2025, 05:15 PM IST
MLA Satish Sail get interim medical bail

ಸಾರಾಂಶ

ಅಕ್ರಮ ಕಬ್ಬಿಣದ ಅದಿರು ರಫ್ತು ಪ್ರಕರಣದಲ್ಲಿ ಬಂಧಿತರಾಗಿರುವ ಶಾಸಕ ಸತೀಶ್ ಸೈಲ್ ಅವರಿಗೆ 7 ದಿನಗಳ ವೈದ್ಯಕೀಯ ಮಧ್ಯಂತರ ಜಾಮೀನು ಮಂಜೂರು. ಲಿವರ್ ಸೈರೋಸಿಸ್ ಮತ್ತು ಸ್ಲೀಪ್ ಆಪ್ನಿಯಾ ಸಮಸ್ಯೆಯಿಂದ ಬಳಲುತ್ತಿರುವ ಹಿನ್ನೆಲೆ ನ್ಯಾಯಾಲಯ ಜಾಮೀನು ನೀಡಿದೆ.  

ಕಾರವಾರ: ಬೇಲೆಕೇರಿ ಬಂದರಿನಿಂದ ಅಕ್ರಮವಾಗಿ ಕಬ್ಬಿಣದ ಅದಿರು ರಫ್ತು ಮಾಡಿದ ಪ್ರಕರಣಕ್ಕೆ ಸಂಬಂಧಿಸಿ, ಕಾರವಾರ–ಅಂಕೋಲಾ ಕ್ಷೇತ್ರದ ಕಾಂಗ್ರೆಸ್ ಶಾಸಕ ಸತೀಶ್ ಕೃಷ್ಣ ಸೈಲ್ ಅವರಿಗೆ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ಏಳು ದಿನಗಳ ಕಾಲ ವೈದ್ಯಕೀಯ ಮಧ್ಯಂತರ ಜಾಮೀನು ಮಂಜೂರು ಮಾಡಿದೆ. ಸತೀಶ್ ಸೈಲ್ ಅವರು ದೀರ್ಘಕಾಲದಿಂದ ಲಿವರ್ ಸೈರೋಸಿಸ್ ಮತ್ತು ಸ್ಲೀಪ್ ಆಪ್ನಿಯಾ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ, ಅವರ ಪರ ವಕೀಲರು ವೈದ್ಯಕೀಯ ಮಧ್ಯಂತರ ಜಾಮೀನು ಕೋರಿದರು. ಕೋರ್ಟ್ ವಿಚಾರಣೆ ನಡೆಸಿ, ಅವರ ಆರೋಗ್ಯ ಸ್ಥಿತಿಯನ್ನು ಗಮನಿಸಿ ಏಳು ದಿನಗಳ ಕಾಲ ಜಾಮೀನು ನೀಡಲು ಒಪ್ಪಿಗೆ ನೀಡಿತು.

ಇಡಿ ಬಂಧನ ಮತ್ತು ತನಿಖೆ

ಇದಕ್ಕೂ ಮುನ್ನ, ಜಾರಿ ನಿರ್ದೇಶನಾಲಯ (ಇಡಿ) ಸತೀಶ್ ಸೈಲ್ ಅವರನ್ನು ಬಂಧಿಸಿತ್ತು. ಬೇಲೆಕೇರಿ ಬಂದರಿನಲ್ಲಿ ವಶಕ್ಕೆ ಪಡೆದು ಸಂಗ್ರಹಿಸಿದ್ದ ಸಾವಿರಾರು ಟನ್‌ಗಳಷ್ಟು ಕಬ್ಬಿಣದ ಅದಿರನ್ನು ಕದ್ದು, ಅಕ್ರಮವಾಗಿ ಸಾಗಣೆ ಮಾಡಿದ ಪ್ರಕರಣದಲ್ಲಿ ಅವರಿಗೆ ಮೊದಲು ಏಳು ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿತ್ತು.

ಈ ಪ್ರಕರಣಕ್ಕೆ ಸಂಬಂಧಿಸಿ ಇಸಿಐಆರ್ ದಾಖಲಿಸಿಕೊಂಡ ಇಡಿ, ತಮ್ಮ ತನಿಖೆಯ ಭಾಗವಾಗಿ ಆಗಸ್ಟ್ 13 ಮತ್ತು 14ರಂದು ಸತೀಶ್ ಸೈಲ್ ಅವರ ಕಾರವಾರ ಮತ್ತು ಬೆಂಗಳೂರಿನ ನಿವಾಸಗಳ ಮೇಲೆ ದಾಳಿ ನಡೆಸಿತ್ತು. ಈ ದಾಳಿಯ ವೇಳೆ, ಅಧಿಕಾರಿಗಳು ₹13 ಕೋಟಿಗೂ ಹೆಚ್ಚು ನಗದು ಹಾಗೂ ಚಿನ್ನಾಭರಣ ವಶಪಡಿಸಿಕೊಂಡಿದ್ದರು.

ಕೋರ್ಟ್ ಸೂಚನೆಗಳು

  • ಸೈಲ್ ಅವರ ಆರೋಗ್ಯದ ಹಿನ್ನೆಲೆ, ಕೋರ್ಟ್ ಕೆಲವು ವಿಶೇಷ ಸೌಲಭ್ಯಗಳನ್ನು ಒದಗಿಸಲು ಸೂಚನೆ ನೀಡಿದೆ:
  • ಅವರಿಗೆ ಅಗತ್ಯವಿರುವ ಸ್ಲೀಪ್ ಆಪ್ನಿಯಾ ಮಷಿನ್ ಬಳಕೆಗೆ ಅವಕಾಶ
  • ಮನೆಯಿಂದ ಆಹಾರ ತಲುಪುವಂತೆ ಅನುಮತಿ
  • ಮಲಗಲು ಪ್ರತ್ಯೇಕ ಕಾಟ್ ವ್ಯವಸ್ಥೆ
  • ತಡರಾತ್ರಿಯ ವಿಚಾರಣೆ ನಡೆಸದಂತೆ ಇಡಿ ಅಧಿಕಾರಿಗಳಿಗೆ ಸೂಚನೆ

ಸತೀಶ್ ಸೈಲ್ ಅವರಿಗೆ ನೀಡಲಾದ ಈ ಮಧ್ಯಂತರ ಜಾಮೀನು ಕೇವಲ ಏಳು ದಿನಗಳ ಕಾಲ ಮಾತ್ರ ಮಾನ್ಯವಾಗಿದ್ದು, ನಂತರದ ವಿಚಾರಣೆ ಹಾಗೂ ಇಡಿ ತನಿಖೆಯ ಆಧಾರದ ಮೇಲೆ ಮುಂದಿನ ನಿರ್ಧಾರ ಕೈಗೊಳ್ಳಲಾಗುವುದು.

ಪ್ರಕರಣದ ಹಿನ್ನೆಲೆ

ಬೇಲೇಕೇರಿ ಬಂದರಿನ ಅಕ್ರಮ ಕಬ್ಬಿಣದ ಅದಿರು ಸಾಗಣೆ ಪ್ರಕರಣದಲ್ಲಿ ಅಕ್ರಮ ಹಣ ವರ್ಗಾವಣೆ ಆರೋಪದಡಿ, ಜಾರಿ ನಿರ್ದೇಶನಾಲಯ (ಇಡಿ) ಅಧಿಕಾರಿಗಳು ಆಗಸ್ಟ್ 13 ಮತ್ತು 14ರಂದು ಕಾಂಗ್ರೆಸ್ ಶಾಸಕ ಸತೀಶ್ ಸೈಲ್ ಅವರ ಮನೆಗಳು ಹಾಗೂ ಕಚೇರಿಗಳ ಮೇಲೆ ದಾಳಿ ನಡೆಸಿದರು. ಕಾರವಾರ, ಗೋವಾ, ಮುಂಬೈ ಮತ್ತು ದೆಹಲಿಯಲ್ಲಿರುವ ಮನೆಗಳು, ಕಚೇರಿಗಳು ಮತ್ತು ಕಂಪನಿಗಳ ಮೇಲೆ ನಡೆದ ಶೋಧದ ವೇಳೆ ₹1.68 ಕೋಟಿ ನಗದು, 6.75 ಕಿಲೋ ಚಿನ್ನಾಭರಣ ಹಾಗೂ ಹಲವಾರು ಪ್ರಮುಖ ದಾಖಲೆಗಳನ್ನು ವಶಪಡಿಸಿಕೊಳ್ಳಲಾಯಿತು. ಜೊತೆಗೆ, ಸೈಲ್ ಹಾಗೂ ಅವರ ಕಂಪನಿಗಳ ₹14.13 ಕೋಟಿ ಮೌಲ್ಯದ ಬ್ಯಾಂಕ್ ಖಾತೆಗಳನ್ನು ಫ್ರೀಜ್ ಮಾಡಲಾಯಿತು.

ಈ ದಾಳಿ ಆಶಾಪುರ ಮಿನೆಕೆಮ್ ಲಿಮಿಟೆಡ್, ಶ್ರೀ ಲಾಲ್ ಮಹಲ್ ಲಿಮಿಟೆಡ್, ಸ್ವಸ್ತಿಕ್ ಸ್ಟೀಲ್ಸ್ (ಹೊಸಪೇಟೆ) ಪ್ರೈವೇಟ್ ಲಿಮಿಟೆಡ್, ಐಎಲ್‌ಸಿ ಇಂಡಸ್ಟ್ರೀಸ್ ಲಿಮಿಟೆಡ್, ಹಾಗೂ ಶ್ರೀ ಲಕ್ಷ್ಮಿ ವೆಂಕಟೇಶ್ವರ ಮಿನರಲ್ಸ್ ಲಿಮಿಟೆಡ್ ಸೇರಿದಂತೆ ಸೈಲ್ ಅವರಿಗೆ ಸೇರಿದ ಕಂಪನಿಗಳ ಮೇಲೂ ನಡೆದಿತ್ತು.

ಇಡಿ ತನಿಖೆಯ ಪ್ರಕಾರ, ಸತೀಶ್ ಸೈಲ್ ಅವರು ಬೇಲೇಕೇರಿ ಬಂದರು ಅಧಿಕಾರಿಗಳ ಸಹಕಾರದಿಂದ 2010ರ ಏಪ್ರಿಲ್ 19ರಿಂದ ಜೂನ್ 10ರ ಅವಧಿಯಲ್ಲಿ ₹86.78 ಕೋಟಿ ಮೌಲ್ಯದ 1.25 ಲಕ್ಷ ಮೆಟ್ರಿಕ್ ಟನ್ ಕಬ್ಬಿಣದ ಅದಿರನ್ನು ಅಕ್ರಮವಾಗಿ ರಫ್ತು ಮಾಡಿದ್ದಾರೆಂಬುದು ಬಹಿರಂಗವಾಗಿದೆ.

ಈ ಹಿನ್ನೆಲೆಯಲ್ಲಿ, ಇತ್ತೀಚೆಗೆ ನಡೆದ ದಾಳಿಯ ವೇಳೆ ಪತ್ತೆಯಾದ ₹1.68 ಕೋಟಿ ನಗದು, 6.75 ಕೆ.ಜಿ. ಚಿನ್ನ, ಮತ್ತು ₹14 ಕೋಟಿ ಮೌಲ್ಯದ ಬ್ಯಾಂಕ್ ಖಾತೆಗಳನ್ನು ಇಡಿ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ಮಂಗಳವಾರ ವಿಚಾರಣೆಗೆ ಹಾಜರಾದ ಸೈಲ್ ಅವರನ್ನು ವಿಚಾರಣೆ ಬಳಿಕ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಬಂಧಿಸಲಾಗಿತ್ತು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಸ್ತ್ರಿರೋಗ ತಜ್ಞೆ, ಪುತ್ರನ ದುರಂತ ಅಂತ್ಯ, ರಾತ್ರಿ ಜಗಳವಾಡಿದ ಇಬ್ಬರು ಬೆಳಗ್ಗೆ ಶವವಾಗಿ ಪತ್ತೆ
ಶ್ರೀರಂಗಪಟ್ಟಣ ಮಸೀದಿ ಕೆಡವುತ್ತೇವೆಂದರೆ? ನಾವು ಕೈಗೆ ಬಳೆ ತೊಟ್ಟು ಕೂತಿಲ್ಲ-ಅಬ್ದುಲ್ ರಜಾಕ್!