
ಬೆಳಗಾವಿ (ಮೇ.15): ಬೆಳಗಾವಿ ಜಿಲ್ಲೆಯ ದಾಸೋಹ ಪರಂಪರೆಗೆ ಹೆಸರಾದ ನಿಡಸೋಸಿಯ ದುರದುಂಡೇಶ್ವರ ಸಿದ್ದಸಂಸ್ಥಾನ ಮಠದಲ್ಲಿ ಕಳೆದ ಒಂದು ತಿಂಗಳಿಂದ ಮಠದ ಪಟ್ಟಕ್ಕಾಗಿ ಹಿರಿಯ ಮತ್ತು ಕಿರಿಯ ಸ್ವಾಮೀಜಿಗಳ ನಡುವೆ ನಡೆಯುತ್ತಿದ್ದ ತೀವ್ರ ಸಂಘರ್ಷಕ್ಕೆ ತಾತ್ಕಾಲಿಕ ವಿರಾಮ ಸಿಕ್ಕಿದೆ. ಇನ್ನೂರು ವರ್ಷಗಳ ಇತಿಹಾಸ ಹೊಂದಿರುವ, ನೂರಾರು ಕೋಟಿ ರೂಪಾಯಿ ಆಸ್ತಿಯ ಈ ಮಠದ ಉತ್ತರಾಧಿಕಾರ ವಿವಾದ ಲಿಂಗಾಯತ ಸಮಾಜದ ನಾಯಕರ ಮಧ್ಯಸ್ಥಿಕೆಯಿಂದ ಶಮನಗೊಂಡಿದೆ.
ಮಠದ ಹಿರಿಯ ಶ್ರೀ ಪಂಚಮಶಿವಲಿಂಗೇಶ್ವರ ಸ್ವಾಮೀಜಿ ಮತ್ತು ಕಿರಿಯ ಶ್ರೀ ನಿಜಲಿಂಗೇಶ್ವರ ಸ್ವಾಮೀಜಿ ನಡುವಿನ ಅಂತರ್ಯುದ್ಧ ತಾರಕಕ್ಕೇರಿತ್ತು. ಹಿರಿಯ ಶ್ರೀಗಳು ಪಟ್ಟವನ್ನು ಬಿಟ್ಟುಕೊಡಲು ನಿರಾಕರಿಸಿದರೆ, ಕಿರಿಯ ಶ್ರೀಗಳು ಪಟ್ಟಕ್ಕಾಗಿ ಒಂದು ತಿಂಗಳ ಕಾಲ ಉಪವಾಸ ಸತ್ಯಾಗ್ರಹ ನಡೆಸಿದ್ದರು. ಈ ವಿವಾದವನ್ನು ಇತ್ಯರ್ಥಗೊಳಿಸಲು ಕೆಎಲ್ಇ ಕಾರ್ಯಾಧ್ಯಕ್ಷ ಡಾ ಪ್ರಭಾಕರ ಕೋರೆ ನೇತೃತ್ವದಲ್ಲಿ ಲಿಂಗಾಯತ ನಾಯಕರು ಮಧ್ಯಪ್ರವೇಶಿಸಿದರು.
ಬೆಳಗಾವಿಯ ಜೀರಗೆ ಸಭಾಭವನದಲ್ಲಿ ನಡೆದ ಲಿಂಗಾಯತ ನಾಯಕರ ಸಭೆಯ ಬಳಿಕ ನಾಯಕರು ನಿಡಸೋಸಿ ಮಠಕ್ಕೆ ದೌಡಾಯಿಸಿ, ಉಪವಾಸದಲ್ಲಿದ್ದ ಶ್ರೀ ನಿಜಲಿಂಗೇಶ್ವರ ಸ್ವಾಮೀಜಿಯನ್ನು ಮನವೊಲಿಸುವಲ್ಲಿ ಯಶಸ್ವಿಯಾದರು. ಎಳೆನೀರು ಕುಡಿಸುವ ಮೂಲಕ ಉಪವಾಸ ಸತ್ಯಾಗ್ರಹವನ್ನು ನಿಲ್ಲಿಸಲಾಯಿತು. ಸಮಸ್ಯೆಯನ್ನು ಶಾಶ್ವತವಾಗಿ ಪರಿಹರಿಸುವ ಭರವಸೆಯನ್ನು ನಾಯಕರು ನೀಡಿದ್ದಾರೆ.
ಇದನ್ನೂ ಓದಿ: ಬೆಳಗಾವಿಯಲ್ಲಿ ಮಠದ ಪಟ್ಟಕ್ಕಾಗಿ ಸ್ವಾಮೀಜಿಗಳ ಸಮರ
ವಿವಾದದ ಹಿನ್ನೆಲೆ:
ಹಿರಿಯ ಶ್ರೀ ಪಂಚಮಶಿವಲಿಂಗೇಶ್ವರ ಸ್ವಾಮೀಜಿ, ವಯಸ್ಸಿನ ಕಾರಣದಿಂದ ಶ್ರೀ ನಿಜಲಿಂಗೇಶ್ವರ ಸ್ವಾಮೀಜಿಯನ್ನು ಉತ್ತರಾಧಿಕಾರಿಯಾಗಿ ನೇಮಿಸಿ, ಎರಡು ವರ್ಷಗಳಲ್ಲಿ ಪಟ್ಟಾಭಿಷೇಕ ಮಾಡುವ ಭರವಸೆ ನೀಡಿದ್ದರು. ಆದರೆ ಕಿರಿಯ ಶ್ರೀ ಭಕ್ತರೊಂದಿಗೆ ಸರಿಯಾಗಿ ಬೆರೆಯುತ್ತಿಲ್ಲ ಎಂಬ ಕಾರಣ ನೀಡಿ, ಹಿರಿಯ ಶ್ರೀಗಳು ಪಟ್ಟಾಭಿಷೇಕಕ್ಕೆ ವಿರೋಧ ವ್ಯಕ್ತಪಡಿಸಿದ್ದರು. ಇದರಿಂದ ಕಿರಿಯ ಶ್ರೀಗಳು ಉಪವಾಸ ಸತ್ಯಾಗ್ರಹಕ್ಕೆ ಮುಂದಾಗಿದ್ದರು.
ಲಿಂಗಾಯತ ನಾಯಕರು ಉಭಯ ಸ್ವಾಮೀಜಿಗಳೊಂದಿಗೆ ಪ್ರತ್ಯೇಕ ಸಭೆ ನಡೆಸಿ, ಮೇ 21, 2025ರಂದು ಉಭಯ ಸ್ವಾಮೀಜಿಗಳ ಸಮ್ಮುಖದಲ್ಲಿ ಮತ್ತೊಂದು ಸಭೆ ನಡೆಸಲು ತೀರ್ಮಾನಿಸಿದ್ದಾರೆ. ಈ ನಿರ್ಧಾರಕ್ಕೆ ಇಬ್ಬರೂ ಸ್ವಾಮೀಜಿಗಳು ಒಪ್ಪಿಗೆ ಸೂಚಿಸಿದ್ದಾರೆ. ಮೇ 21ರ ಸಭೆಯ ಫಲಿತಾಂಶದತ್ತ ಭಕ್ತರ ಚಿತ್ತ ನೆಟ್ಟಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ