
ಉಡುಪಿ (ಜ.18): 'ಹಿಂದೂಗಳ ಭಾವನೆಗೆ ಅಪಮಾನ ಮಾಡುವ ಸರ್ಕಾರ ರಾಜ್ಯದಲ್ಲಿದೆ. ಹಿಂದೂಗಳಿಗೆ ಅವಮಾನ ಮಾಡುವ ಮೂಲಕವೇ ಮುಸ್ಲಿಂ ಮತ ಗಳಿಸುವ ಹುನ್ನಾರ ನಡೆಸುತ್ತದೆ' ಜ.22ರಂದು ಅಯೋಧ್ಯಾ ರಾಮಮಂದಿರ ಉದ್ಘಾಟನಾ ಕಾರ್ಯಕ್ರಮ ರಜೆ ಘೋಷಿಸದ ರಾಜ್ಯ ಸರ್ಕಾರದ ವಿರುದ್ಧ ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಕಿಡಿಕಾರಿದರು.
ವಿಜಯಪುರದಲ್ಲಿ ಮಾಧ್ಯಮ ಪ್ರತಿನಿಧಿಯೊಂದಿಗೆ ಮಾತನಾಡಿದ ಅವರು, ದೇಶಾದ್ಯಂತ ಹಬ್ಬದ ವಾತಾವರಣವಿದೆ. ಪ್ರತಿಯೊಬ್ಬನ ಮನಸಲ್ಲಿ ರಾಮ ಮಂದಿರದ ಸಂಭ್ರಮ ಇದೆ. ನಂಬಿಕೆಗೆ ಅಪಮಾನ ಮಾಡುವುದು ಒಂದು ಸಂಘಟನೆಯ ನಾಶದ ಸಂಕೇತ. ಸಿದ್ದರಾಮಯ್ಯ ನಿಜವಾಗಲೂ ಜಾತ್ಯಾತೀತರಾದರೆ ರಜೆ ಘೋಷಿಸಲಿ. ಒಂದೇ ಕೋಮಿನ ವ್ಯವಸ್ಥೆಯಿಂದ ಹೊರಗೆ ಬರಲು ಅವಕಾಶ ಇದೆ. ರಜೆ ಕೊಡುವ ಸದ್ಬುದ್ಧಿಯನ್ನು ಪ್ರಭು ಶ್ರೀರಾಮ ಚಂದ್ರ ನೀಡಲಿ. ಈಗಾಗಲೇ ರಾಮ ಹಲವರಿಗೆ ಒಳ್ಳೇ ಬುದ್ದಿ ಕೊಟ್ಟಿದ್ದಾರೆ. ಸಿದ್ದರಾಮಯ್ಯರಿಗೆ ಕೊಡಲಿ ಎಂದರು.
ಅಯೋಧ್ಯೆ ರಾಮಮಂದಿರ ನಿರ್ಮಾಣ ಬಳಿಕ ಹೊಸ ಹಿಂದೂ ಯುಗ ಆರಂಭವಾಗಲಿದೆ: ಯತ್ನಾಳ್
ನಾನು ಸೈಲೆಂಟ್ ಇಲ್ಲ:
ಇತ್ತೀಚೆಗೆ ಸೈಲೆಂಟ್ ಆಗಿದ್ದೀರಲ್ಲ ಎಂಬ ಮಾತಿಗೆ ಪ್ರತಿಕ್ರಿಯಿಸಿದ ಯತ್ನಾಳ್ ನಾವು ಸೈಲೆಂಟ್ ಇಲ್ಲ. ವರಿಷ್ಠರು ಕರೆದಾಗ ನನ್ನ ಭಾವನೆ ಅವರಿಗೆ ಹೇಳಿದ್ದೇನೆ. ಮೋದಿ ಮತ್ತೆ ಪ್ರಧಾನಿ ಆಗಬೇಕು. ಅದೇ ನಮ್ಮ ಮುಂದಿರುವ ಗುರಿ. ಇಂಡಿ ಒಕ್ಕೂಟದ ಕೈಗೆ ಅಧಿಕಾರ ಸಿಕ್ಕರೆ ಹೇಗೆ ಎಂಬ ಆತಂಕವಾಗಿದೆ. ಭಿನ್ನಮತ ಅಪಸ್ವರಗಳಿಗೆ ಲೋಕಸಭಾ ಚುನಾವಣೆವರೆಗೆ ಬ್ರೇಕ್ ಹಾಕಲಾಗಿದೆ. ಲೋಕಸಭಾ ಚುನಾವಣೆಯಲ್ಲಿ ಪಕ್ಷದ್ರೋಹ ಮಾಡದೆ ಒಗ್ಗಟ್ಟಾಗಿ ಕೆಲಸ ಮಾಡಲು ನಿರ್ಧಾರ ಮಾಡಲಾಗಿದೆ. ಲೊಕಸಭಾ ಚುನಾವಣೆ ಮುಗಿಯುವವರೆಗೆ ಯಾವುದೇ ತಗಾದೆ ಇಲ್ಲ. ಮೇಲಿನವರೇ ಎಲ್ಲಾ ರಿಪೇರಿ ಮಾಡಿದರೆ ಸರಿಯಾಗುತ್ತೆ. ಚುನಾವಣೆ ಮುಗಿದ ಬಳಿಕ ಚೆನ್ನಾಗಿ ರಿಪೇರಿ ಮಾಡ್ತಾರೆ ಅನ್ನೋ ವಿಶ್ವಾಸ ಇದೆ ಎಂದರು.
ನಾನು ಯಾವುದೇ ಸ್ಥಾನದ ಆಕಾಂಕ್ಷಿ ಅಲ್ಲ:
ನಾನು ಯಾವುದೇ ಸ್ಥಾನದ ಆಕಾಂಕ್ಷಿ ಅಲ್ಲ, ಪಕ್ಷದ ಸಿದ್ಧಾಂತ ದೃಷ್ಟಿಯಿಂದ ಮಾತಾನಾಡುತ್ತೇನೆ. ವಂಶವಾದ, ಭ್ರಷ್ಟಾಚಾರ, ಸಿದ್ದಾಂತ ತಪ್ಪಿದರೆ ಮಾತ್ರ ನಾನು ಮಾತನಾಡೋದು. ಡೆಲ್ಲಿ ಗೆ ಹೋದಾಗಲೂ ನಾನು ಯಾವುದೇ ಬೇಡಿಕೆ ಇಟ್ಟಿಲ್ಲ. ಕೇಂದ್ರಕ್ಕೆ ಹೋಗುವ ಯೋಚನೆ ಇಲ್ಲ. ರಾಜ್ಯ ರಾಜಕಾರಣದಲ್ಲಿ ರೋಸಿ ಹೋಗಿಲ್ಲ. ಬಹಳ ಸೂಕ್ಷ್ಮವಾಗಿ ನಾನು ಯೋಚನೆ ಮಾಡಿದ್ದೇನೆ. ನನಗೆ ಅಧಿಕಾರ ಕೊಡಿ ಎಂದು ನಾನು ಯಡಿಯೂರಪ್ಪ, ಬೊಮ್ಮಾಯಿಯಾಗಲಿ, ಕೇಂದ್ರ ನಾಯಕರ ಕಾಲು ಹಿಡಿದಿಲ್ಲ. ವಿಪಕ್ಷ ನಾಯಕ ಮಾಡಬೇಕು ಎಂದು ಬಹಳಷ್ಟು ಶಾಸಕರು ಹೇಳಿದ್ದರು. ಕೇಂದ್ರ , ಚುನಾವಣೆ ಉದ್ದೇಶದಿಂದ ಕೆಲವು ನಿರ್ಧಾರಗಳನ್ನು ಮಾಡಿದೆ. ಅದನ್ನು ಒಪ್ಪಿಕೊಂಡು ನಾನು ಸುಮ್ಮನಿದ್ದೇನೆ ಎಂದರು.
ಅವನು ಏನಾದ್ರೂ ಹೇಳಲಿ, ಅವನಿಗೆ ಸೋಲ್ತೀನಿ ಅನ್ನೋ ಹೆದರಿಕೆ ಶುರು ಆಗಿದೆ: ಪ್ರತಾಪ್ ಸಿಂಹ ವಿರುದ್ಧ ಸಿಎಂ ಕಿಡಿ
ರಾಮಮಂದಿರಕ್ಕೆ ಅಡಿಪಾಯ ಹಾಕಿದವರು ಪೇಜಾವರಶ್ರೀ:
ರಾಮಮಂದಿರಕ್ಕೆ ಅಡಿಪಾಯ ಹಾಕಿದವರು ಪೇಜಾವರಶ್ರೀಗಳು ಆ ಮೂಲಕ ದೇಶದಲ್ಲಿ ಹಿಂದೂತ್ವ ಜಾಗೃತಗೊಳಿಸಿದರು. ಅಡ್ವಾಣಿ ಅಯೋಧ್ಯಾ ರಥ ಪ್ರಾರಂಭಿಸಲು ಇದುವೇ ಪ್ರೇರಣೆಯಾಯ್ತು. ಅಯೋಧ್ಯೆ ಮಂದಿರ ಪ್ರತಿಷ್ಠಾಪನೆ ಮೋದಿಯಿಂದ ಆಗಬೇಕಂಬ ಸಂಕಲ್ಪ ಇತ್ತು ಎಂದು ಅಡ್ವಾಣಿಯವರೇ ಹೇಳಿದ್ದಾರೆ. ಇಂದು ಇಡೀ ದೇಶ ಜಾಗೃತ ವಾಗಲು ಕಾರಣ ಉಡುಪಿ ಪೇಜಾವರ ಮಠ ಎಂದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ