Govt employee transfer guidelines 2026-27: ಏ.15ರಿಂದ ಮೇ 31ರವರೆಗೆ ನೌಕರರ ವರ್ಗಾವಣೆಗೆ ಅಸ್ತು, ಹೊಸ ಮಾರ್ಗಸೂಚಿಯಲ್ಲೇನಿದೆ?

Kannadaprabha News   | Kannada Prabha
Published : Apr 14, 2026, 06:15 AM IST
Approval for Government employee transfers from April 15 to May 31

ಸಾರಾಂಶ

ರಾಜ್ಯ ಸರ್ಕಾರವು 2026-27ನೇ ಸಾಲಿನ ಸರ್ಕಾರಿ ನೌಕರರ ವರ್ಗಾವಣೆಗಾಗಿ ಹೊಸ ಮಾರ್ಗಸೂಚಿಗಳನ್ನು ಪ್ರಕಟಿಸಿದೆ. ಏಪ್ರಿಲ್ 15 ರಿಂದ ಮೇ 31ರವರೆಗೆ ನಡೆಯುವ ಈ ಪ್ರಕ್ರಿಯೆಯಲ್ಲಿ, ವರ್ಗಾವಣೆಗಳ ಸಂಖ್ಯೆಯನ್ನು ಪ್ರತಿ ವೃಂದದ ಕಾರ್ಯನಿರತ ನೌಕರರ ಶೇ.6ಕ್ಕೆ ಸೀಮಿತಗೊಳಿಸಲಾಗಿದೆ. ಈ ಆದೇಶದಲ್ಲಿ ಏನಿದೆ ತಿಳಿಯಿರಿ

ಬೆಂಗಳೂರು (ಏ.14) ರಾಜ್ಯ ಸರ್ಕಾರ 2026-27ನೇ ಸಾಲಿನ ಸರ್ಕಾರಿ ನೌಕರರ ವರ್ಗಾವಣೆಗೆ ಸಂಬಂಧಿಸಿ ಹೊಸ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ.

ಏ.15ರಿಂದ ಮೇ 31ರವರೆಗೆ ವರ್ಗಾವಣೆಗಳನ್ನು ಕೈಗೊಳ್ಳಲು ಆದೇಶಿಸಲಾಗಿದ್ದು, ಗ್ರೂಪ್‌ ಎ, ಬಿ, ಸಿ ಮತ್ತು ಡಿ ವೃಂದಗಳಿಗೆ ನಡೆಸಲಾಗುವ ವರ್ಗಾವಣೆಗಳ ಸಂಖ್ಯೆ ಆಯಾ ವೃಂದಗಳ ಕಾರ್ಯನಿರತ ನೌಕರರ ಸಂಖ್ಯೆಯ ಶೇ.6 ಅನ್ನು ಮೀರುವಂತಿಲ್ಲ ಎಂದು ಸೂಚಿಸಲಾಗಿದೆ.

ಗ್ರೂಪ್‌ ಎ ಮತ್ತು ಬಿ ವೃಂದದ ಅಧಿಕಾರಿಗಳ ವರ್ಗಾವಣೆ ಅಧಿಕಾರವನ್ನು ಆಯಾ ಇಲಾಖಾ ಸಚಿವರಿಗೆ ಮತ್ತು ಗ್ರೂಪ್‌ ಸಿ ಮತ್ತು ಡಿ ವೃಂದದ ಸಿಬ್ಬಂದಿಯ ವರ್ಗಾವಣೆಯ ಅಧಿಕಾರವನ್ನು ಆಯಾ ಸಕ್ಷಮ ಪ್ರಾಧಿಕಾರಗಳು ಚಲಾಯಿಸಬಹುದಾಗಿದೆ. ಗ್ರೂಪ್‌ ಎ ಮತ್ತು ಬಿ ವೃಂದದ ಅಧಿಕಾರಿಗಳ ವರ್ಗಾವಣೆ ಪ್ರಸ್ತಾವನೆಗಳನ್ನು ಇಲಾಖಾ ಮುಖ್ಯಸ್ಥರು ಸಚಿವಾಲಯದ ಆಡಳಿತ ಇಲಾಖೆಗಳ ಮೂಲಕವೇ ಸಚಿವರಿಗೆ ಸಲ್ಲಿಸಬೇಕು ಎಂದು ಆದೇಶಿಸಲಾಗಿದೆ.

ಇನ್ನು, ಯಾವುದೇ ಸರ್ಕಾರಿ ನೌಕರರ ವಿರುದ್ಧ ಗಂಭೀರ ಸ್ವರೂಪದ ಆರೋಪಗಳಿದ್ದಲ್ಲಿ ಇಲಾಖಾ ವಿಚಾರಣೆ/ಕ್ರಿಮಿನಲ್‌ ನಡಾವಳಿ ಪ್ರಾರಂಭವಾಗಿದ್ದಲ್ಲಿ ಅಥವಾ ಬಾಕಿ ಇದ್ದಲ್ಲಿ/ ಆತನನ್ನು ಅಭಿಯೋಜನೆಗೊಳಪಡಿಸುವ ಉದ್ದೇಶವಿದ್ದಲ್ಲಿ ಅಂಥವರನ್ನು ಅವರು ಕೇಳುವ ಹುದ್ದೆಗಾಗಲಿ ಅಥವಾ ತನಿಖೆ ಮೇಲೆ ಪ್ರಭಾವ ಬೀರಬಹುದಾದ ಹುದ್ದೆಗಾಗಲಿ ನಿಯೋಜಿಸದೆ ಆಡಳಿತಾತ್ಮಕ ಅನುಕೂಲಕ್ಕೆ ಕಾರ್ಯಕಾರಿಯೇತರ ಹುದ್ದೆಗಳಿಗೆ ನೇಮಿಸಬೇಕೆಂದು ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ಆದೇಶಿಸಿದೆ.

ಒಂದು ಸ್ಥಳದಲ್ಲಿ ಎರಡು ವರ್ಷ ಸೇವಾ ಅವಧಿ ಪೂರೈಸದ ಎ ಮತ್ತು ಬಿ ವೃಂದದ ಅಧಿಕಾರಿಗಳು, 4 ವರ್ಷ ಸೇವಾವಧಿ ಪೂರೈಸದ ‘ಸಿ’ ವೃಂದದ ನೌಕರರು ಮತ್ತು ಏಳು ವರ್ಷ ಸೇವಾವಧಿ ಪೂರೈಸದ ಡಿ ವೃಂದದ ನೌಕರರನ್ನು ವರ್ಗಾವಣೆಗೆ ಪರಿಗಣಿಸಬಾರದು.

ವಿಶೇಷ ಚೇತನ ನೌಕರರಿಗೆ ವಿನಾಯಿತಿ:

ವಿಶೇಷಚೇತನ ನೌಕರರಿಗೆ ನಿಯತಕಾಲಿಕ ಮತ್ತು ಪುನರಾವರ್ತಿತ ವರ್ಗಾವಣೆಗಳಿಂದ ವಿನಾಯಿತಿ ನೀಡಲಾಗಿದೆ. ಅವರಿಗೆ ಆರಂಭಿಕ ಸ್ಥಳದ ನಿಯುಕ್ತಿ ಹಾಗೂ ಪದೋನ್ನತಿ ನಂತರ ಅವರ ವರ್ಗಾವಣೆ ಅವಶ್ಯವಿದ್ದಲ್ಲಿ ಸಾಧ್ಯವಾದಷ್ಟು ಹತ್ತಿರದ ಸ್ಥಳಕ್ಕೆ ನಿಯುಕ್ತಿಗೊಳಿಸುವುದು. ಸರ್ಕಾರಿ ನೌಕರನ ಅವಲಂಬಿತ ಮಕ್ಕಳು, ಪತಿ/ಪತ್ನಿ, ತಂದೆ, ತಾಯಿ ತೀವ್ರತರವಾದ ಅಂಗವೈಕಲ್ಯ ಹೊಂದಿದ್ದಲ್ಲಿ, ನೌಕರ ಅವರ ಜವಾಬ್ದಾರಿ ಹೊತ್ತಿದ್ದಲ್ಲಿ ಅಂತಹವರಿಗೆ ವರ್ಗಾವಣೆಯಿಂದ ವಿನಾಯಿತಿ ನೀಡಬಹುದು ಮತ್ತು ಸಾಧ್ಯವಾದಷ್ಟು ಹತ್ತಿರದ ಸ್ಥಳಕ್ಕೆ ನಿಯುಕ್ತಿಗೊಳಿಸಲು ಅವಕಾಶ ನೀಡಲಾಗಿದೆ.

ಮಾರ್ಗಸೂಚಿಯಲ್ಲೇನಿದೆ?

- ಗ್ರೂಪ್ ಎ, ಬಿ ವೃಂದದ ಅಧಿಕಾರಿಗಳ ವರ್ಗ ಪ್ರಸ್ತಾವನೆ ಸಚಿವರಿಗೆ ಸಲ್ಲಿಸಬೇಕು

- ಗಂಭೀರ ಸ್ವರೂಪದ ಆರೋಪಗಳಿದ್ದಲ್ಲಿ ಕೇಳಿದ ಹುದ್ದೆಗೆ ವರ್ಗ ಮಾಡಬಾರದು

- ಇಂಥ ನೌಕರರನ್ನು ಕಾರ್ಯಕಾರಿಯೇತರ ಹುದ್ದೆಗಳಿಗೆ ಮಾತ್ರ ನೇಮಿಸಬೇಕು

- 1 ಸ್ಥಳದಲ್ಲಿ 2 ವರ್ಷ ಸೇವಾವಧಿ ಪೂರೈಸದ ಅಧಿಕಾರಿಗಳು ವರ್ಗಕ್ಕೆ ಅರ್ಹರಲ್ಲ

- ಸರ್ಕಾರಿ ನೌಕರ ವರ್ಗಾವಣೆಗಳ ಸಂಖ್ಯೆ ಆಯಾ ವೃಂದದ ಶೇ.6 ಮೀರುವಂತಿಲ್ಲ

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಸರ್ಕಾರಿ ಸಭೆ, ಸಮಾರಂಭದಲ್ಲಿ ಇನ್ನು ಕರಿದ ತಿಂಡಿಗೆ ಬ್ರೇಕ್; ಹೊಸ ಮೇನು ಇಲ್ಲಿದೆ ನೋಡಿ!
ಸಿದ್ದಲಿಂಗ ಸ್ವಾಮೀಜಿ ಆಯ್ತು, ಕೂಡಲಸಂಗಮ ಶ್ರೀ ಆಯ್ತು, ಈಗ ನನ್ನ ಟಾರ್ಗೆಟ್: ಟ್ರಸ್ಟಿಗಳ ವಿರುದ್ಧ ವಚನಾನಂದ ಶ್ರೀ ಗಂಭೀರ ಆರೋಪ