
ಶಿವಮೊಗ್ಗ(ಮೇ.14): ಕೃಷಿ ಮಾರುಕಟ್ಟೆ(ಎಪಿಎಂಸಿ) ಕಾಯ್ದೆ ತಿದ್ದುಪಡಿ ಸಂಬಂಧ ರಾಜ್ಯಪಾಲರ ಮುಂದಿರುವ ಕಡತ ವಾಪಾಸು ಪಡೆದು ರೈತರಿಗೆ ಶಾಪವಾಗುವಂಥ ಈ ಮರಣ ಕಾಯ್ದೆ ಹಿಂಪಡೆಯಬೇಕೆಂದು ಆಗ್ರಹಿಸಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯಿಂದ ಬುಧವಾರ ಜಿಲ್ಲಾಡಳಿತ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.
ಕಾಯ್ದೆ ತಿದ್ದುಪಡಿಯಿಂದ ಯಾವುದೇ ಖರೀದಿದಾರ ರಾಜ್ಯದಲ್ಲಿ ಎಲ್ಲಿ ಬೇಕಾದರೂ ಖರೀದಿ ಮಾಡಬಹುದು. ಅವರಿಗೆ ಈ ಮಾರುಕಟ್ಟೆಯ ಕಾಯ್ದೆ ಅನ್ವಯಿಸುವುದಿಲ್ಲ. ಖಾಸಗಿ ಮಾರುಕಟ್ಟೆಯನ್ನು ನಿರ್ಮಿಸಿ ಕೊಳ್ಳಬಹುದಾಗಿದೆ. ರೈತರ ಉತ್ಪಾದನೆಗೆ ಸರಕಾರದ ಕನಿಷ್ಠ ಬೆಂಬಲ ಬೆಲೆ ಗೊತ್ತಾಗುವುದು ಎಪಿಎಂಸಿ ಮೂಲಕ. ಆದರೆ ಖಾಸಗಿ ಮಾರುಕಟ್ಟೆಆರಂಭಗೊಂಡರೆ ಸರ್ಕಾರದ ಕೃಷಿ ಮಾರುಕಟ್ಟೆಗಳು ಸಂಪೂರ್ಣ ನಶಿಸಿ ಹೋಗಲಿದೆ ಎಂದು ಆತಂಕ ವ್ಯಕ್ತಪಡಿಸಿದರು.
ರಾಜ್ಯ ಸರ್ಕಾರ ಸಂಪುಟ ಸಭೆಯಲ್ಲಿ ಚರ್ಚಿಸದೆ ಸುಗ್ರೀವಾಜ್ಞೆ ಹೊರಡಿಸಲು ರಾಜ್ಯಪಾಲರಿಗೆ ತರಾತುರಿಯಲ್ಲಿ ಕಳುಹಿಸಿರುವ ಉದ್ದೇಶವೇನು ಎಂದು ಪ್ರಶ್ನಿಸಿದರು. ದೇಶದಲ್ಲಿಂದು ಲಕ್ಷಾಂತರ ಕೋಟಿ ರು. ಬೆಲೆ ಬಾಳುವಂತಹ ಮಾರುಕಟ್ಟೆಹೊಂದಲಾಗಿದೆ. ಎಲ್ಲ ಬೆಳೆಗಳಿಗೆ ಮಾರುಕಟ್ಟೆಕಲ್ಪಿಸಲಾಗಿದೆ. ಮಾರುಕಟ್ಟೆಗಳಲ್ಲಿ ರೈತ ತಾನು ಬೆಳೆದ ಉತ್ಪನ್ನವನ್ನು ತಂದಾಗ ಅದರ ತೂಕ, ಅಳತೆಯನ್ನು ಕೃಷಿ ಮಾರುಕಟ್ಟೆಸಮಿತಿ ನೋಡಿಕೊಂಡು ರೈತರಿಗೆ ಉತ್ತಮ ಬೆಲೆ ಕೊಡಿಸುವ ಕೆಲಸ ಮಾಡುತ್ತಿದೆ.
ವಿರೋಧದ ನಡುವೆಯೂ ಎಪಿಎಂಸಿ ಸುಗ್ರೀವಾಜ್ಞೆಗೆ ಸಂಪುಟ ಅಸ್ತು?
ಹಲವು ಶತಮಾನಗಳ ಹಳೆಯದಾದ ಮಾರುಕಟ್ಟೆಯನ್ನು ಸುಧಾರಿಸುವುದರ ಜತೆಗೆ, ಅಂತಾರಾಷ್ಟ್ರೀಯ ಮಾರುಕಟ್ಟೆಒದಗಿಸಿ ಕೃಷಿಕರಿಗೆ ಸ್ಪರ್ಧಾತ್ಮಕ ಬೆಲೆ ಕೊಡಿಸಲು ಸರ್ಕಾರ ಕ್ರಮ ಕೈಗೊಳ್ಳಬೇಕಿತ್ತು. ಆದರೆ ಅಂತಾರಾಷ್ಟ್ರೀಯ ವ್ಯಾಪಾರಿಗಳು, ದೇಶದ ಕಾರ್ಪೊರೇಟ್ ಕಂಪನಿಗಳಿಗೆ ಅನುಕೂಲವಾಗುವಂತೆ ಕೃಷಿ ಮಾರುಕಟ್ಟೆಒದಗಿಸಲು ಅನುಕೂಲವಾಗುವಂತೆ ಕಾಯ್ದೆಗೆ ತಿದ್ದುಪಡಿ ಮಾಡಲು ಹೊರಟಿರುವುದು ಸರಿಯಾದ ಕ್ರಮವಲ್ಲ ಇದು ದೂರಿದರು.
ಕೇಂದ್ರ ಸರ್ಕಾರ ದೊಡ್ಡ ದೊಡ್ಡ ಖರೀದಿದಾರರಿಗೆ ಬೇಕಾಗುವ ಕಾನೂನು ರಚನೆ ಮಾಡಲು ತಾನೇ ಮುಂದಾಗಿದೆ. ಆದರೆ ಎಪಿಎಂಸಿ ರಾಜ್ಯ ಸರ್ಕಾರದ ವ್ಯಾಪ್ತಿಗೆ ಬರುವುದೆಂದು ತಿಳಿದ ಮೇಲೆ ಎಲ್ಲ ರಾಜ್ಯ ಸರ್ಕಾರಗಳ ಕೃಷಿ ಮಾರುಕಟ್ಟೆಯ ಪ್ರಧಾನ ಕಾರ್ಯದರ್ಶಿಗೆ ಪತ್ರದ ಮೂಲಕ ಹೊಸ ಎಪಿಎಂಸಿ ತಿದ್ದುಪಡಿ ಜಾರಿಗೆ ತರಲು ರಾಜ್ಯ ಸರ್ಕಾರದ ಸಚಿವ ಸಂಪುಟದಲ್ಲಿ ತೀರ್ಮಾನ ಮಾಡಿ ಅದನ್ನು ತಕ್ಷಣವೇ ರಾಜ್ಯಪಾಲರಿಗೆ ಕಳಿಸಬೇಕೆಂದು ತಾಕೀತು ಮಾಡಿತು. ಅದರಂತೆ ರಾಜ್ಯ ಸರ್ಕಾರ ತಿದ್ದುಪಡಿಗಳಿಗೆ ತೀರ್ಮಾನಿಸಿ ರಾಜ್ಯಪಾಲರ ಮುಂದೆ ಕಡತ ಹಾಜರುಪಡಿಸಲಾಗಿದೆ.ವಅವರ ಸಹಿ ಬಿದ್ದಮೇಲೆ ಸುಗ್ರೀವಾಜ್ಞೆ ಜಾರಿಗೆ ಬರಲಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಕೃಷಿ ಮತ್ತು ಮಾರುಕಟ್ಟೆರಾಜ್ಯಗಳ ಜವಾಬ್ದಾರಿ. ಹೀಗಾಗಿ ಕೇಂದ್ರ ಸರ್ಕಾರ ಒತ್ತಡ ಹಾಕಿದರು ಸಹ ರಾಜ್ಯ ಸರ್ಕಾರ ಈ ಕಾಯ್ದೆಗೆ ಬೆಂಬಲ ಮಾಡಬಾರದು. ರೈತರ ಹಿತದೃಷ್ಟಿಗಮನದಲ್ಲಿಟ್ಟುಕೊಂಡು ರಾಜ್ಯಪಾಲರ ಮುಂದಿರುವ ತಿದ್ದುಪಡಿ ಕಡತ ಹಿಂದಕ್ಕೆ ಪಡೆಯ ಬೇಕು ಎಂದು ಆಗ್ರಹಿಸಿದರು. ರೈತ ಸಂಘದ ಮುಖಂಡರಾದ ಎಚ್.ಆರ್. ಬಸವರಾಜಪ್ಪ, ಶಿವಮೂರ್ತಿ, ನಹಿಟ್ಟೂರು ರಾಜು, ರಾಘವೇಂದ್ರ, ರಾಮಚಂದ್ರಪ್ಪ, ಚೇತನ್, ಮಂಜಪ್ಪ ಇತರರು ಇದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ