
ಬೆಂಗಳೂರು (ಫೆ.20): ತೆಲಂಗಾಣ, ಆಂಧ್ರದ ಮಾದರಿಯಲ್ಲಿ ನಮ್ಮ ರಾಜ್ಯದಲ್ಲೂ ರಂಜಾನ್ ತಿಂಗಳಲ್ಲಿ ಒಂದು ಗಂಟೆ ವಿನಾಯಿತಿ ನೀಡುವಂತೆ ಸಿಎಂ ಸಿದ್ದರಾಮಯ್ಯಗೆ ಇಬ್ಬರು ಕೆಪಿಸಿಸಿ ಉಪಾಧ್ಯಕ್ಷರು ಮನವಿ ಮಾಡಿದ್ದಾರೆ. ಕೆಪಿಸಿಸಿ ಉಪಾಧ್ಯಕ್ಷರಾದ ಎಆರ್ಎಂ ಹುಸೇನ್, ಸೈಯದ್ ಅಹಮದ್ ಈ ಕುರಿತಾಗಿ ಸಿಎಂ ಸಿದ್ದರಾಮಯ್ಯಗೆ ಪತ್ರ ಬರೆದಿದ್ದಾರೆ. ಈ ಬಗ್ಗೆ ಏಷ್ಯಾನೆಟ್ ಸುವರ್ಣನ್ಯೂಸ್ಗೆಮಾತನಾಡಿರುವ ಎಆರ್ಎಂ ಹುಸೇನ್, ತೆಲಂಗಾಣ, ಆಂಧ್ರದಲ್ಲಿ ಸರ್ಕಾರ ಸ್ವಯಂ ಪ್ರೇರಿತವಾಗಿ ಕೊಟ್ಟಿದೆ. ಇಲ್ಲಿ ನಮ್ಮದೇ ಸರ್ಕಾರ ಇದೆ. ಹೀಗಾಗಿ ರಂಜಾನ್ ನಲ್ಲಿ ಒಂದು ತಿಂಗಳು ಉಪವಾಸ ಇರುತ್ತಾರೆ. ಸಾಕಷ್ಟು ಸುಸ್ತಾಗುತ್ತೆ ಕೆಲಸ ಮಾಡೋದಕ್ಕೆ ಸಾಧ್ಯ ಆಗಲ್ಲ. ಹೀಗಾಗಿ ಒಂದು ಗಂಟೆ ಮುಂಚಿತವಾಗಿ ನೌಕರರಿಗೆ ಬಿಡುವು ಕೊಟ್ಟರೆ ಒಳ್ಳೆಯದು. ಇಫ್ತಿಯಾರ್ ಮಾಡಬಹುದು ನಮಾಜ್ ಮಾಡಲು ಕೂಡ ಅವಕಾಶ ಆಗಲಿದೆ ಎಂದು ಹೇಳಿದ್ದಾರೆ.
ಇದೇ ಕಾರಣಕ್ಕೆ ಸರ್ಕಾರಿ ಮುಸ್ಲಿಂ ನೌಕರರಿಗೆ ವಿನಾಯಿತಿ ಕೊಡಿ ಅಂತ ಕೇಳುತ್ತಿದ್ದೇವೆ. ಯಾವುದೇ ದುರುದ್ದೇಶದಿಂದ ಕೇಳುತ್ತಿಲ್ಲ. ಕಾಲಾವಕಾಶವನ್ನು ಕೊಟ್ಟರೆ ಒಳ್ಳೆ ಸಂದೇಶ ಹೋಗಬಹುದು. ಈಗಾಗಲೇ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿಗಳಿಗೆ ಪತ್ರ ನೀಡಿದ್ದೇವೆ. ಮುಖ್ಯಮಂತ್ರಿಗಳಿಗೆ ಮನವಿ ಮಾಡಬೇಕಿತ್ತು ಆದರೆ ಅವರು ಕ್ಯಾಬಿನೆಟ್ ಸಭೆಯಲ್ಲಿದ್ದರು. ರಾಜಕೀಯ ಕಾರ್ಯದರ್ಶಿ ನಜೀರ್ ಅಹಮದ್ ಅವರ ಮೂಲಕ ವಿಚಾರ ತಲುಪಿಸಿದ್ದೇವೆ. ವಿನಾಯತಿ ಕೊಟ್ಟರೆ ಸ್ವಾಗತ ಕೊಡದೆ ಇದ್ದರೂ ಸ್ವಾಗತ ಎಂದು ಹೇಳಿದ್ದಾರೆ.
ನಜೀರ್ ಅಹಮದ್ ಭೇಟಿಯಾದಾಗ ಮುಖ್ಯಮಂತ್ರಿಗಳಿಗೆ ಭೇಟಿಯಾದ ತಿಳಿಸುತ್ತೇವೆ ಎಂದಿದ್ದಾರೆ. ಮುಖ್ಯಮಂತ್ರಿಗಳ ಬಳಿ ಮಾತನಾಡುತ್ತೇವೆ ಅಂತ ನಜೀರ್ ಅಹ್ಮದ್ ತಿಳಿಸಿದ್ದಾರೆ. ತೀರ್ಮಾನ ಕೈಗೊಳ್ಳೋದು ಮುಖ್ಯಮಂತ್ರಿಗಳು ಬಿಟ್ಟಿದ್ದು. ಉಪಮುಖ್ಯಮಂತ್ರಿ ಡಿಸಿಎಂ ಡಿಕೆ ಶಿವಕುಮಾರ್ ಅವರಿಗೂ ಮನವಿಯನ್ನ ಕೊಡುತ್ತೇವೆ. ಈ ಹಿಂದೆ ಯಾವುದೇ ಮನವಿ ಕೊಟ್ಟಿಲ್ಲ ಈ ರೀತಿ ಎಂದಿಗೂ ಕೇಳಿರಲಿಲ್ಲ. ಆಂಧ್ರ ತೆಲಂಗಾಣದಲ್ಲಿ ಸ್ವಯಂ ಪ್ರೇರಿತವಾಗಿ ಕೊಟ್ಟಿರುವುದರಿಂದ ಇಲ್ಲಿ ವಿನಾಯಿತಿ ಕೊಡಿ ಅಂತ ಕೇಳಿದ್ದೇವೆ. ನಾವು ಕೊಡಿ ಅಂತ ಒತ್ತಾಯ ಏನು ಮಾಡ್ತಾ ಇಲ್ಲ. ಸರ್ಕಾರ ಕೊಡಬಹುದು ಎನ್ನುವ ವಿಶ್ವಾಸ ಇದೆ ಎಂದಿದ್ದಾರೆ.
ಏಪ್ರಿಲ್ನಲ್ಲಿ ಸಿದ್ಧರಾಮಯ್ಯ ರಾಜೀನಾಮೆ, ಲಕ್ಷ್ಮೀ ಹೆಬ್ಬಾಳ್ಕರ್ ಮುಂದಿನ ಸಿಎಂ ಎಂದ ಜ್ಯೋತಿಷಿ ಪ್ರಶಾಂತ್ ಕಿಣಿ!
ರಂಜಾನ್ ತಿಂಗಳಲ್ಲಿ ಉಪವಾಸ ಇರ್ತೀವಿ, ಒಂದು ಗಂಟೆ ವಿನಾಯಿತಿ ಕೊಡಿ ಅಂತ ಕೇಳ್ತಿದ್ದೇವೆ. ಇದು ವಿವಾದ ಆಗಬಾರದು ಎಂಬುದು ನನ್ನ ಅನಿಸಿಕೆ. ದಸರಾ ಹಬ್ಬಕ್ಕೆ ಹತ್ತು ದಿನ ಹದಿನೈದು ದಿನ ರಜೆ ಕೊಡುತ್ತಿದ್ದರು. ಮೊದಲೆಲ್ಲಾ ಒಂದು ತಿಂಗಳು ರಜೆ ಕೊಡುತ್ತಿದ್ದರು. ಅದಕ್ಕೆ ನಾವು ಅಪಸ್ವರ ಎತ್ತಿಲ್ಲ ಈಗಲೂ 10 ರಿಂದ 15 ದಿನ ರಜೆ ಕೊಡುತ್ತಿದ್ದಾರೆ. ನಾವು ಏನಾದ್ರು ಪ್ರಶ್ನೆ ಎತ್ತಿದ್ದೇವೆಯೇ? ನಾವು ರಂಜಾನ್ ತಿಂಗಳು ಅದರಲ್ಲೂ ಒಂದು ಗಂಟೆ ವಿನಾಯಿತಿ ಕೊಡಿ ಅಂತ ಕೇಳುತ್ತಿದ್ದೇವೆ. ಬಿಜೆಪಿಯವರು ಸಹಜವಾಗಿ ಟೀಕೆ ಟಿಪ್ಪಣಿ ಮಾಡುತ್ತಾರೆ. ಆಂಧ್ರದಲ್ಲಿ ಚಂದ್ರಬಾಬು ನಾಯ್ಡು ಮಾಡಿದ್ದಾರಲ್ಲ ಆಗ ಯಾಕೆ ಸುಮ್ಮನೆ ಇದ್ದಾರೆ, ಚಕ್ಕಾರ ಎತ್ತಲಿ. ವಿವಾದ ಮಾಡುವ ಅವಶ್ಯಕತೆ ಇಲ್ಲ ಎಂದು ಹೇಳಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ