ಕರಸೇವಕ ಶ್ರೀಕಾಂತ್ ಪೂಜಾರಿ ಬಂಧನ ಬೆನ್ನಲ್ಲೇ ದತ್ತಪೀಠ ಹಳೇ ಕೇಸ್‌ಗೂ ಮರುಜೀವ?: ಸಿಎಂ ಸಿದ್ಧರಾಮಯ್ಯ ಹೇಳಿದ್ದೇನು?

By Kannadaprabha NewsFirst Published Jan 5, 2024, 5:50 AM IST
Highlights

2017ರಲ್ಲಿ ನಡೆದಿರುವ ಪ್ರಕರಣ ಇದಾಗಿದೆ. ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದಾಗ ಅಂದರೆ, 2021ರಲ್ಲಿ ನಮ್ಮ ವಿರುದ್ಧದ ಈ ಕೇಸನ್ನು ರಾಜ್ಯ ಸರ್ಕಾರ ವಾಪಾಸ್ ತೆಗೆದುಕೊಂಡಿತ್ತು. ಆದರೆ, ಈಗಿನ ಸರ್ಕಾರ ರೀ ಓಪನ್‌ ಮಾಡಿದೆ. ನೊಟೀಸ್ ಜಾರಿ ಮಾಡಿದೆ. ಠಾಣೆಗೆ ಹಾಜರಾಗುವಂತೆ ಪೊಲೀಸರು ಮೊಬೈಲ್‌ಗೆ ಕರೆ ಮಾಡಿದ್ದರು ಎಂದು ಹೇಳಿದ್ದರು. ಇದು ಬಿಜೆಪಿ ಹಿಂದುಸಂಘಟನೆಗಳಿಂದ ಭಾರೀ ಆಕ್ರೋಶಕ್ಕೆ ಕಾರಣವಾಗಿದೆ.

ಚಿಕ್ಕಮಗಳೂರು (ಜ.5) ದತ್ತಪೀಠದ ಹೋರಾಟಗಾರರ ಮೇಲೆ ಹಾಕಿರುವ ಕೇಸ್ ರೀ ಓಪನ್.

- ಹುಬ್ಬಳ್ಳಿಯಲ್ಲಿ ಕರ ಸೇವಕ ಶ್ರೀಕಾಂತ್ ಪೂಜಾರಿ ಬಂಧನ ವಿರೋಧಿಸಿ ಹೋರಾಟ ನಡೆಯುತ್ತಿರುವ ಸಂದರ್ಭದಲ್ಲಿ ದತ್ತಪೀಠದ ಹೋರಾಟದ ಕೇಸ್ ರೀ ಓಪನ್ ಸುದ್ದಿ ಗುರುವಾರ ಬೆಳಿಗ್ಗೆಯಿಂದ ಮಧ್ಯಾಹ್ನದ ವರೆಗೆ ದೊಡ್ಡ ಸದ್ದು ಮಾಡಿತ್ತು.

ಪ್ರಕರಣಕ್ಕೆ ಸಂಬಂಧಿಸಿದಂತೆ ಜ. 8 ರಂದು ನ್ಯಾಯಾಲಯಕ್ಕೆ ಹಾಜರಾಗುವಂತೆ ಚಿಕ್ಕಮಗಳೂರಿನ ಮೊದಲ ಹೆಚ್ಚುವರಿ ಹಿರಿಯ ಸಿವಿಲ್ ಆ್ಯಂಡ್‌ ಜೆಎಂಎಫ್‌ಸಿ ನ್ಯಾಯಾಲಯದಿಂದ ಹೊರಡಿಸಲಾಗಿರುವ ಸಮನ್ಸ್‌ನ್ನು ಚಿಕ್ಕಮಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಿಂದ ಬಂದಿರುವ ನೊಟೀಸ್ ಎಂದು ಹೇಳುವ ಮೂಲಕ ಗೊಂದಲ ಹುಟ್ಟು ಹಾಕಲಾಗಿತ್ತು.

ಶ್ರೀಕಾಂತ್ ಪೂಜಾರಿ ಜೊತೆ ಪ್ರತಿಯೊಬ್ಬ ರಾಮಭಕ್ತನೂ ಇದ್ದಾನೆ; ಬಿಡುಗಡೆ ಮಾಡೋವರೆಗೆ ಹೋರಾಟ: ಕೋಟ ಶ್ರೀನಿವಾಸ ಪೂಜಾರಿ

ಏನಿದು ಪ್ರಕರಣ ?

ವಿಶ್ವಹಿಂದೂ ಪರಿಷತ್ ಹಾಗೂ ಭಜರಂಗದಳದಿಂದ ದತ್ತಪೀಠದಲ್ಲಿ 2017 ರ ಡಿಸೆಂಬರ್ 1 ರಿಂದ 3 ರವರೆಗೆ ದತ್ತಜಯಂತಿ ನಡೆಯಿತು. ಹೊರ ಜಿಲ್ಲೆಯಿಂದ ಡಿ. 3 ರಂದು ಬಂದಿರುವ ದತ್ತಮಾಲಾಧಾರಿಗಳು ಅಂದು ಮಧ್ಯಾಹ್ನ 12.25 ರ ವೇಳೆಗೆ ದತ್ತಪೀಠದ ಎಡ ಭಾಗದಲ್ಲಿರುವ ನಿಷೇಧಿತ ಪ್ರದೇಶದೊಳಗೆ ನುಗ್ಗಿ ಗೋರಿಗಳನ್ನು ಕೀಳಲು ಯತ್ನಿಸಿದರು. ಆ ವೇಳೆಯಲ್ಲಿ ತಡೆಯಲು ಹೋಗಿದ್ದ ಸ್ಥಳೀಯ ವಿಎಚ್‌ಪಿ ಹಾಗೂ ಭಜರಂಗದಳ ಮುಖಂಡರ ವಿರುದ್ಧ ಆಕ್ರೋಶ ಹಾಗೂ ಪ್ರತಿಭಟನೆ ವ್ಯಕ್ತಪಡಿಸಿದ್ದರು.

ಅಂದು ದತ್ತಪೀಠದಲ್ಲಿ ನಡೆದಿರುವ ಘಟನೆಗೆ ಸಂಬಂಧಿಸಿದಂತೆ ಚಿಕ್ಕಮಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ತುಡುಕೂರು ಮಂಜು, ಶಿವರಾಜ್, ಸಂದೇಶ್, ಅಶೋಕ್, ತೇಜು ಸೇರಿದಂತೆ 14 ಜನರ ವಿರುದ್ಧ ಕಲಂ 143, 447, 427, 298, 504, 153 (ಎ), 295 (ಎ), 353, 506, 114, 120(ಬಿ), 149 ಐಪಿಸಿ ಆ್ಯಂಡ್‌ ಪ್ರಿವೆಂಷನ್ ಆಫ್‌ ಡ್ಯಾಮೇಜ್ ಟು ಪಬ್ಲಿಕ್ ಪ್ರಾಪರ್ಟಿ ಆಕ್ಟ್ 1984 ರಡಿ ಪ್ರಕರಣ ದಾಖಲಾಗಿತ್ತು.

ಸಿಎಂ ಕಚೇರಿ ಸ್ಪಷ್ಟನೆ

ಬೆಂಗಳೂರು: ಕೆಲವು ಮಾಧ್ಯಮಗಳಲ್ಲಿ ಬಾಬಾಬುಡನ್‌ಗಿರಿಯಲ್ಲಿ ಗೋರಿ ದ್ವಂಸ ಪ್ರಕರಣವನ್ನು ರೀ ಓಪನ್ ಮಾಡಲಾಗಿದೆ ಎನ್ನುವ ಸುದ್ದಿ ಪ್ರಸಾರವಾಗುತ್ತಿದ್ದು, ಇದು, ಅಪ್ಪಟ ಸುಳ್ಳು ಎಂದು ಮುಖ್ಯಮಂತ್ರಿಯವರ ಕಚೇರಿ ಪ್ರಕಟಣೆ ತಿಳಿಸಿದೆ.

2017 ರಲ್ಲಿ ದಾಖಲಾಗಿದ್ದ ಪ್ರಕರಣದ ಸಹಜ ಕಾನೂನು ಪ್ರಕ್ರಿಯೆ ಭಾಗವಾಗಿ ಆರೋಪಿಗಳಿಗೆ ನ್ಯಾಯಾಲಯದ ಸಮನ್ಸ್ ಜಾರಿ ಆಗಿದೆ ಅಷ್ಟೆ. 2017 ರಲ್ಲಿ ದಾಖಲಾಗಿದ್ದ ಪ್ರಕರಣಕ್ಕೆ ಸಂಬಂಧಪಟ್ಟಂತೆ 2020 ರ ಮಾರ್ಚ್‌ 19 ರಂದು ವಿಚಾರಣೆಗೆ ಅನುಮತಿಗಾಗಿ ಸರ್ಕಾರಕ್ಕೆ ಮನವಿ ಮಾಡಲಾಗಿದೆ. ಅದರ ಆಧಾರದಲ್ಲಿ 2023 ರ ಸೆಪ್ಟಂಬರ್ 7 ರಂದು ಸರ್ಕಾರ ಅನುಮತಿ ನೀಡಿತ್ತು.

2023 ರ ಅಕ್ಟೋಬರ್ 24 ರಂದು ಆರೋಪಿಗಳ ವಿರುದ್ಧ ಆರೋಪ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಲಾಗಿತ್ತು. ಬಳಿಕ ಕಾನೂನು ಪ್ರಕ್ರಿಯೆ ಮುಂದುವರೆದ ಭಾಗವಾಗಿ ನ್ಯಾಯಾಲಯದಿಂದ ಸಮನ್ಸ್ ಜಾರಿಯಾಗಿದೆ. ಇದಿಷ್ಟೂ ಕೂಡ ಸಹಜವಾಗಿ ನಡೆಯುವ ಕಾನೂನು ಪ್ರಕ್ರಿಯೆ.

ಪ್ರಕರಣದ ಮರು ತನಿಖೆಗೆ ಸರ್ಕಾರ ಮುಂದಾಗಿದೆ ಎನ್ನುವುದು ತಪ್ಪು ಮತ್ತು ದುರುದ್ದೇಶ ಪೂರಿತ ಸುಳ್ಳು ಸಂಗತಿಯಾಗಿದೆ ಎಂದು ಪ್ರಕಟಣೆ ಸ್ಪಷ್ಟನೆ ನೀಡಿದೆ.

ಹೇಗಾಯ್ತಿ ಗಾಳಿ ಸುದ್ದಿ 

ಬಜರಂಗದಳದ ಮುಖಂಡರೋಬ್ಬರು ದೃಶ್ಯ ಮಾಧ್ಯಮದ ಮೂಲಕ ಹಬ್ಬಿಸಿದ ಗಾಳಿ ಸುದ್ದಿ ಇದಾಗಿದೆ.

2017ರಲ್ಲಿ ನಡೆದಿರುವ ಪ್ರಕರಣ ಇದಾಗಿದೆ. ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದಾಗ ಅಂದರೆ, 2021ರಲ್ಲಿ ನಮ್ಮ ವಿರುದ್ಧದ ಈ ಕೇಸನ್ನು ರಾಜ್ಯ ಸರ್ಕಾರ ವಾಪಾಸ್ ತೆಗೆದುಕೊಂಡಿತ್ತು. ಆದರೆ, ಈಗಿನ ಸರ್ಕಾರ ರೀ ಓಪನ್‌ ಮಾಡಿದೆ. ನೊಟೀಸ್ ಜಾರಿ ಮಾಡಿದೆ. ಠಾಣೆಗೆ ಹಾಜರಾಗುವಂತೆ ಪೊಲೀಸರು ಮೊಬೈಲ್‌ಗೆ ಕರೆ ಮಾಡಿದ್ದರು ಎಂದು ಹೇಳಿದ್ದರು. ಇದು, ಇಡೀ ಅರ್ಧ ದಿನ ಜನರನ್ನು ದಿಕ್ಕು ತಪ್ಪಿಸು ವಂತೆ, ಸಂಘಪರಿವಾರದಲ್ಲಿ ಕಿಚ್ಚು ಮೂಡಿಸುವಂತೆ ಮಾಡಿತ್ತು. ಜಿಲ್ಲಾ ರಕ್ಷಣಾಧಿಕಾರಿಗಳಿಂದ ಸ್ಪಷ್ಟನೆ ಬರುತ್ತಿದ್ದಂತೆ ಚರ್ಚೆಗೆ ಬ್ರೇಕ್ ಬಿದ್ದಿತು. 

ನಾನೂ ಕರಸೇವಕ; ನನ್ನನ್ನು ಬಂಧಿಸಿ: ಪ್ರತಿಭಟನೆಗಿಳಿದ ಶಾಸಕ ವಿ.ಸುನಿಲ್ ಕುಮಾರ್ ಪೊಲೀಸರ ವಶಕ್ಕೆ

ಕೆಲ ಮಾಧ್ಯಮಗಳಲ್ಲಿ ವರದಿಯಾಗುತ್ತಿರುವಂತೆ ದತ್ತಪೀಠ ಹೋರಾಟಗಾರರ ಸಂಬಂಧ ಯಾವುದೇ ಹಳೆಯ ಪ್ರಕರಣಗಳನ್ನು ಜಿಲ್ಲೆಯ ಯಾವುದೇ ಪೊಲೀಸ್ ಠಾಣೆಯಲ್ಲಿ ರೀ ಓಪನ್ ಮಾಡಿರುವುದಿಲ್ಲ ಅಥವಾ ಮರು ತನಿಖೆಗೆ ಒಳಪಡಿಸಿರುವುದಿಲ್ಲ. ಪ್ರಸ್ತುತ ಕೆಲ ಮಾಧ್ಯಮಗಳಲ್ಲಿ ಬಿತ್ತರಗೊಳ್ಳುತ್ತಿರುವ ಮಾಹಿತಿ ಸತ್ಯಕ್ಕೆ ದೂರವಾದದ್ದು ಆಗಿರುತ್ತದೆ.

- ಡಾ. ವಿಕ್ರಂ ಅಮಟೆ ಜಿಲ್ಲಾ ರಕ್ಷಣಾಧಿಕಾರಿಗಳು

click me!