
ಕಲಬುರಗಿ(ಏ.24): ಪಿಎಸ್ಐ ಪರೀಕ್ಷಾ ಹಗರಣದ ಬೆನ್ನಲ್ಲೇ ಕಳೆದ ವರ್ಷ ನಡೆದಿದ್ದ ಎಫ್ಡಿಎ(ಪ್ರಥಮ ದರ್ಜೆ ಸಹಾಯಕರು) ಪರೀಕ್ಷೆಯಲ್ಲೂ ಅಕ್ರಮ ನಡೆದಿರುವ ಅನುಮಾನ ಇದೀಗ ಕಾಡಲು ಶುರುವಾಗಿದೆ.
ಎಫ್ಡಿಎ ನೇಮಕಾತಿಗೆ ನಡೆದ ಪರೀಕ್ಷೆಯಲ್ಲಿ 1,010 ಜನರ ಹೆಸರಿರುವ ತಾತ್ಕಾಲಿಕ ಆಯ್ಕೆ ಪಟ್ಟಿಪ್ರಕಟಿಸಲಾಗಿದೆ. ಈ ಪೈಕಿ ಆಯ್ಕೆಯಾದ 202 ಮಂದಿ ಅಫಜಲ್ಪುರ ತಾಲೂಕಿಗೆ ಸೇರಿದವರು ಎಂಬುದೇ ಕುತೂಹಲದ ವಿಚಾರ. ಪಿಎಸ್ಐ ಪರೀಕ್ಷೆಯಲ್ಲಿ ಅಫಜಲ್ಪುರವೇ ಅಕ್ರಮದ ಕೇಂದ್ರ ಬಿಂದುವಾಗಿತ್ತು. ಹೀಗಾಗಿ ಪಿಎಸ್ಐ ನೇಮಕಾತಿ ರೀತಿಯಲ್ಲೇ ಎಫ್ಡಿಎ ಪರೀಕ್ಷೆಯಲ್ಲೂ ಅಕ್ರಮ ನಡೆದಿದೆಯೇ ಎಂಬ ಶಂಕೆ ಕಾಡಲಾರಂಭಿಸಿದೆ.
ಎಫ್ಡಿಎ ಹುದ್ದೆಗಳ ನೇಮಕಾತಿಗಾಗಿ 2021ರಲ್ಲೇ ಪರೀಕ್ಷೆ ನಡೆದಿದ್ದು, ಈ ಪರೀಕ್ಷೆಯ ಆಯ್ಕೆ ಪಟ್ಟಿಯ ಬಗ್ಗೆಯೂ ಪರಾಮರ್ಶೆ, ವಿಚಾರಣೆ ನಡೆಯಬೇಕು ಎಂಬ ಆಗ್ರಹ ಅಭ್ಯರ್ಥಿಗಳಿಂದ ಕೇಳಿಬರುತ್ತಿದೆ.
ಪಿಎಸ್ಐ ಪರೀಕ್ಷೆ ಅಕ್ರಮದಲ್ಲಿ ಹೈಟೆಕ್ ದಾರಿ ಬಳಸಿ ನಕಲಿಗೆ ಸಹಕರಿಸುವ ಜಾಲವೇ ಈ ಪರೀಕ್ಷೆಯಲ್ಲೂ ಕರಾಮತ್ತು ತೋರಿರುವ ಶಂಕೆಗಳಿವೆ. ಈಗಾಗಲೇ ಪಿಎಸ್ಐ ಪರೀಕ್ಷೆಯಲ್ಲಿನ ಅಕ್ರಮದಲ್ಲಿ ಆರೋಪಿಯಾಗಿರುವ ಸೊನ್ನದ ಮಹಾಂತೇಶ ಪಾಟೀಲ್, ರುದ್ರಗೌಡ ಪಾಟೀಲ್ ಸೋದರರನ್ನು ಸಿಐಡಿ ಬಂಧಿಸಿ ವಿಚಾರಣೆ ನಡೆಸುತ್ತಿದೆ. ಇವರ ಮನೆಯಲ್ಲಿ ಅನೇಕ ಹಾಲ್ಟಿಕೆಟ್ ದೊರಕಿರುವ ಮಾಹಿತಿ ಇದ್ದು, ಇವೆಲ್ಲವೂ ಬೇರೆ ಬೇರೆ ಪರೀಕ್ಷೆಗಳ ಹಾಲ್ಟಿಕೆಟ್ ಆಗಿದ್ದವು ಎಂದು ಮೂಲಗಳಿಂದ ತಿಳಿದು ಬಂದಿದೆ. ಹೀಗಾಗಿ ಪರೀಕ್ಷಾ ಅಕ್ರಮದ ತನಿಖೆ ವ್ಯಾಪ್ತಿ ಪಿಎಸ್ಐ ಪರೀಕ್ಷೆಗೆ ಸೀಮಿತವಾಗದೆ ಇತ್ತೀಚೆಗೆ ನಡೆದ ಇತರೆ ಪರೀಕ್ಷೆಗಳಿಗೂ ವಿಸ್ತರಿಸುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.
ಎಸ್ಐ ಪರೀಕ್ಷೆ ಅಕ್ರಮ: ಕಾಂಗ್ರೆಸ್ ಮುಖಂಡನ ಸೋದರ ಅರೆಸ್ಟ್!
ಪಿಎಸ್ಐ ನೇಮಕಾತಿ ಪರೀಕ್ಷೆ ಅಕ್ರಮದ ತನಿಖೆಯಲ್ಲಿ ಶನಿವಾರ ಸಿಐಡಿ ಪೊಲೀಸರು ಮಹತ್ವದ ಪ್ರಗತಿ ಸಾಧಿಸಿದ್ದಾರೆ. ಬ್ಲೂಟೂತ್ ಮೂಲಕ ಪರೀಕ್ಷಾರ್ಥಿಗಳಿಗೆ ನೆರವಾದ ಹಗರಣದ ‘ಕಿಂಗ್ಪಿನ್’ ಎಂದೇ ಹೇಳಲಾಗಿರುವ ಅಫಜಲ್ಪುರದ ರುದ್ರಗೌಡ ಪಾಟೀಲ್(ಆರ್.ಡಿ.ಪಾಟೀಲ)ನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಈಗಾಗಲೇ ಬಂಧನಕ್ಕೊಳಗಾಗಿ ಸಿಐಡಿ ವಶದಲ್ಲಿರುವ ಅಫಜಲ್ಪುರ ಕಾಂಗ್ರೆಸ್ ಮುಖಂಡ ಮಹಾಂತೇಶ್ ಪಾಟೀಲ್ನ ಕಿರಿಯ ಸಹೋದರ ಈ ರುದ್ರಗೌಡ ಪಾಟೀಲ್. ಈತನನ್ನು ಹುಡುಕಿಕೊಂಡು ಸಿಐಡಿ ಶುಕ್ರವಾರ ಅಫಜಲ್ಪುರಕ್ಕೆ ಹೋಗಿದ್ದಾಗ ಬಂಧನ ಭೀತಿಯಲ್ಲಿ ತಲೆ ಮರೆಸಿಕೊಂಡಿದ್ದ. ಮಹಾಂತೇಶ್ನÜನ್ನು ವಶಕ್ಕೆ ಪಡೆದ ವಿಷಯ ಅರಿತು ವ್ಯಗ್ರಗೊಂಡಿದ್ದ ರುದ್ರಗೌಡ, ಡಿವೈಎಸ್ಪಿ ಶಂಕರಗೌಡ ಪಾಟೀಲ್ ಸೇರಿ ತಂಡದಲ್ಲಿದ್ದ ಸಿಐಡಿ ಅಧಿಕಾರಿಗಳಿಗೆ ಕರೆ ಮಾಡಿ ಆವಾಜ್ ಕೂಡ ಹಾಕಿದ್ದ.
ಮೊಬೈಲ್ ಲೊಕೇಷನ್ ಪತ್ತೆ ಹಚ್ಚಿ ಸೆರೆ: ರುದ್ರಗೌಡನ ಆವಾಜ್ನಿಂದ ಸಿಟ್ಟಿಗೆದ್ದಿದ್ದ ಸಿಐಡಿ ತಂಡ ಮೊಬೈಲ್ ಲೊಕೇಷನ್ ಪತ್ತೆ ಹಚ್ಚಿ ಬಂಧನಕ್ಕೆ ಬಲೆ ಬೀಸಿತ್ತು. ಶನಿವಾರ ಮಹಾಂಂತೇಶ್ ಹಾಗೂ ರುದ್ರಗೌಡ ಸಹೋದರರ ನೇತೃತ್ವದಲ್ಲಿ ಅಫಜಲ್ಪುರ ಪಟ್ಟಣದಲ್ಲಿ 101 ಜೋಡಿ ಸಾಮೂಹಿಕ ವಿವಾಹ ಸಮಾರಂಭ ಆಯೋಜಿಸಲಾಗಿತ್ತು. ಈ ಸಮಾರಂಭದಲ್ಲಿ ರುದ್ರಗೌಡ ಪಾಲ್ಗೊಳ್ಳಲು ಪಾಲ್ಗೊಳ್ಳಬಹುದೆಂದು ಸಿಐಡಿ ಇಲ್ಲೂ ನಿಗಾ ಇಟ್ಟಿತ್ತು. ಅಫಜಲ್ಪುರ ಪೊಲೀಸರೂ ಸಮಾರಂಭದಲ್ಲಿ ಗಸ್ತಿನಲ್ಲಿ ಭಾಗಿಯಾಗಿದ್ದರು. ಈ ಮಧ್ಯೆ, ಮೊಬೈಲ್ ಲೊಕೇಶನ್ ಆಧಾರದ ಮೇರೆಗೆ ರುದ್ರಗೌಡ ಮಹಾರಾಷ್ಟ್ರದ ಸೊಲ್ಲಾಪುರ ಆಸುಪಾಸಲ್ಲಿರುವುದನ್ನು ಖಚಿತಪಡಿಸಿಕೊಂಡು ಶನಿವಾರ ಖೆಡ್ಡಾಗೆ ಬೀಳಿಸುವಲ್ಲಿ ಯಶಸ್ವಿಯಾಯಿತು.
ಅಫಜಲ್ಪುರ ತಾಲೂಕಿನ ಸೊನ್ನ ಮೂಲದ, ಗೌರ ಬಿ. ಗ್ರಾಪಂ ಮಾಜಿ ಅಧ್ಯಕ್ಷನೂ ಆದ ರುದ್ರಗೌಡ ಪಾಟೀಲ್ (ಗೌರ ಬಿ ಗ್ರಾಪಂ ಮಾಜಿ ಅಧ್ಯಕ್ಷ) ಬಂಧನದೊಂದಿಗೆ ಪಿಎಸ್ಐ ಪರೀಕ್ಷಾ ಅಕ್ರಮದಲ್ಲಿ ಬಂಧಿತರ ಸಂಖ್ಯೆ 14ಕ್ಕೇರಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ