Covid Crisis: ಸತತ 2ನೇ ದಿನ 800+ ಕೋವಿಡ್‌ ಕೇಸ್‌: ಪಾಸಿಟಿವಿಟಿ ದರ ಶೇ.3.6ಕ್ಕೆ ಹೆಚ್ಚಳ

By Govindaraj SFirst Published Jun 25, 2022, 5:05 AM IST
Highlights

ರಾಜ್ಯದಲ್ಲಿ ಸತತ ಎರಡನೇ ದಿನ ಕೊರೋನಾ ಸೋಂಕು ಪ್ರಕರಣಗಳು 800ರ ಗಡಿ ದಾಟಿದ್ದು, ಪಾಸಿಟಿವಿಟಿ ದರ ಶೇ.3.6ಕ್ಕೆ ಹೆಚ್ಚಿದೆ. ಶುಕ್ರವಾರ 816 ಜನರಲ್ಲಿ ಸೋಂಕು ಕಾಣಿಸಿಕೊಂಡಿದೆ. 703 ಮಂದಿ ಗುಣಮುಖರಾಗಿದ್ದಾರೆ. ಸೋಂಕಿತರ ಸಾವಾಗಿಲ್ಲ. 

ಬೆಂಗಳೂರು (ಜೂ.25): ರಾಜ್ಯದಲ್ಲಿ ಸತತ ಎರಡನೇ ದಿನ ಕೊರೋನಾ ಸೋಂಕು ಪ್ರಕರಣಗಳು 800ರ ಗಡಿ ದಾಟಿದ್ದು, ಪಾಸಿಟಿವಿಟಿ ದರ ಶೇ.3.6ಕ್ಕೆ ಹೆಚ್ಚಿದೆ. ಶುಕ್ರವಾರ 816 ಜನರಲ್ಲಿ ಸೋಂಕು ಕಾಣಿಸಿಕೊಂಡಿದೆ. 703 ಮಂದಿ ಗುಣಮುಖರಾಗಿದ್ದಾರೆ. ಸೋಂಕಿತರ ಸಾವಾಗಿಲ್ಲ. ಗುರುವಾರ ಮೂರು ತಿಂಗಳ ಬಳಿಕ 30 ಸಾವಿರಕ್ಕೂ ಅಧಿಕ ಕೊರೋನಾ ಸೋಂಕು ಪರೀಕ್ಷೆಗಳು ನಡೆದಿದ್ದು, ಈ ಹಿನ್ನೆಲೆ ಸೋಂಕಿನ ಹೊಸ ಪ್ರಕರಣಗಳ ಸಂಖ್ಯೆ 800 ಗಡಿ ದಾಟಿದ್ದವು. ಆದರೆ, ಪರೀಕ್ಷೆಗಳು ಮತ್ತೆ 20 ಸಾವಿರ ಆಸುಪಾಸಿಗೆ ತಗ್ಗಿದ್ದು, ಹೊಸ ಪ್ರಕರಣಗಳು ಮಾತ್ರ ಸತತ ಎರಡನೇ ದಿನವೂ 800ಕ್ಕೂ ಹೆಚ್ಚು ವರದಿಯಾಗಿವೆ. 

ಇನ್ನು ಶೇ.2ರಷ್ಟಿದ್ದ ಪಾಸಿಟಿವಿಟಿ ದರವು ಮತ್ತೆ ಶೇ.3.6ಕ್ಕೆ ಏರಿಕೆಯಾಗಿದೆ. ಸದ್ಯ 5,180 ಸೋಂಕಿತರು ಆಸ್ಪತ್ರೆ/ಮನೆಯಲ್ಲಿ ಚಿಕಿತ್ಸೆ, ಆರೈಕೆಯಲ್ಲಿದ್ದಾರೆ. 22,527 ಸೋಂಕು ಪರೀಕ್ಷೆಗಳು ನಡೆದಿದ್ದು, ಪಾಸಿಟಿವಿಟಿ ದರ ಶೇ 3.6ರಷ್ಟುದಾಖಲಾಗಿದೆ. ಗುರುವಾರಕ್ಕೆ ಹೋಲಿಸಿದರೆ ಸೋಂಕು ಪರೀಕ್ಷೆಗಳನ್ನು 14 ಸಾವಿರದಷ್ಟು ಕಡಿಮೆ ನಡೆಸಲಾಗಿದೆ. ಹೀಗಾಗಿ, ಹೊಸ ಪ್ರಕರಣಗಳು 42 ಇಳಿಕೆಯಾಗಿವೆ. (ಗುರುವಾರ 858 ಕೇಸ್‌, ಸಾವು ಒಂದು). ಈ ಮೂಲಕ ಸೋಂಕಿನ ಆತಂಕ ಒಂದಿಷ್ಟು ಹೆಚ್ಚಳವಾಗಿದೆ.

Covid Crisis: 3 ತಿಂಗಳ ಬಳಿಕ ಕರ್ನಾಟಕದಲ್ಲಿ 36000 ಕೋವಿಡ್‌ ಪರೀಕ್ಷೆ: 800+ ಕೇಸ್‌

ಎಲ್ಲಿ ಎಷ್ಟುಮಂದಿಗೆ ಸೋಂಕು?: ಶುಕ್ರವಾರ ಹೊಸ ಪ್ರಕರಣಗಳ ಪೈಕಿ ಬೆಂಗಳೂರಿನಲ್ಲಿ 776 ಪತ್ತೆಯಾಗಿವೆ. ಉಳಿದಂತೆ ದಕ್ಷಿಣ ಕನ್ನಡ 11, ಮೈಸೂರು 8, ಧಾರವಾಡ 4, ಬಳ್ಳಾರಿ, ಕಲಬುರಗಿ ಹಾಗೂ ಉಡುಪಿ ತಲಾ 3, ಕೋಲಾರ, ರಾಮನಗರ, ಶಿವಮೊಗ್ಗ ತಲಾ ಇಬ್ಬರು, ದಾವಣಗೆರೆ ಮತ್ತು ಮಂಡ್ಯ ತಲಾ ಒಬ್ಬರಿಗೆ ಸೋಂಕು ತಗುಲಿದೆ. 18 ಜಿಲ್ಲೆಗಳಲ್ಲಿ ಹೊಸ ಪ್ರಕರಣಗಳು ಪತ್ತೆಯಾಗಿಲ್ಲ. ಸಕ್ರಿಯ ಸೋಂಕಿತರ ಪೈಕಿ 40 ಮಂದಿ ಮಾತ್ರ ಆಸ್ಪತ್ರೆಯಲ್ಲಿದ್ದು, ಉಳಿದ 5140 ಮಂದಿ ಮನೆಯ ಆರೈಕೆಯಲ್ಲಿದ್ದಾರೆ. ರಾಜ್ಯದಲ್ಲಿ ಈವರೆಗೆ 39.6 ಲಕ್ಷ ಮಂದಿಗೆ ಸೋಂಕು ತಗುಲಿದೆ. 39.1 ಲಕ್ಷ ಮಂದಿ ಗುಣಮುಖರಾಗಿದ್ದು, 40,072 ಮಂದಿ ಸಾವಿಗೀಡಾಗಿದ್ದಾರೆ ಎಂದು ಆರೋಗ್ಯ ಇಲಾಖೆ ಕೊರೋನಾ ಬುಲೆಟಿನ್‌ ತಿಳಿಸಿದೆ.

Covid Crisis: ಟೆಸ್ಟಿಂಗ್‌, ಜಿನೋಮ್‌ ಸೀಕ್ವೆನ್ಸಿಂಗ್‌ ಹೆಚ್ಚಿಸಿ: ಕೇಂದ್ರ

ಹೆಚ್ಚಿನ ನಿಗಾ: ‘ಒಮಿಕ್ರೋನ್‌ ಉಪತಳಿಗಳಾದ ಬಿಎ4, ಬಿಎ5 ಅಮೆರಿಕಾ ಮತ್ತು ಇಂಗ್ಲೆಂಡ್‌ನಲ್ಲಿ ಹೆಚ್ಚು ಪತ್ತೆಯಾಗಿದ್ದು, ಅಲ್ಲಿನ ಸರ್ಕಾರಗಳು ಈ ಉಪತಳಿಗಳ ಬಗ್ಗೆ ಹೆಚ್ಚಿನ ನಿಗಾ ವಹಿಸಿವೆ. ಒಮಿಕ್ರೋನ್‌ನ ಬಿಎ1.1.529, ಬಿಎ1, ಬಿಎ2 ಉಪತಳಿಗಳು ಶ್ವಾಸಕೋಶಕ್ಕೆ ನುಗ್ಗುವ ಸಾಮರ್ಥ್ಯ ಹೊಂದಿರಲಿಲ್ಲ. ಬಾಯಿ ಮತ್ತು ಮೂಗಿಗೆ ಸೀಮಿತವಾಗಿ ಕೆಮ್ಮು, ನೆಗಡಿಗೆ ಮಾತ್ರ ಉಂಟು ಮಾಡಿತು. ಹೀಗಾಗಿಯೇ ಮೂರನೇ ಅಲೆಯಲ್ಲಿ ಆಸ್ಪತ್ರೆ ದಾಖಲಾತಿ ಸಾವು, ನೋವು ಹೆಚ್ಚಿನ ಹಾನಿಯಾಗಲಿಲ್ಲ. ಆದರೆ, ಸದ್ಯ ಕಾಣಿಸಿಕೊಂಡಿರುವ ಉಪತಳಿಗಳಾದ ಬಿಎ4, ಬಿಎ5 ಸಾಕಷ್ಟು ತೀವ್ರವಾಗಿದ್ದು, ಶ್ವಾಸಕೋಶಕ್ಕೆ ದಾಳಿ ಮಾಡಬಹುದು. ಇವುಗಳಿಂದಲೇ ನಾಲ್ಕನೇ ಅಲೆಗೆ ಕಾರಣವಾಗಬಹುದು ಎಂದು ಅಂದಾಜಿಸಲಾಗಿದೆ’ ಎಂದು ರಾಜ್ಯ ಕೊರೋನಾ ವಂಶವಾಹಿ ಪರೀಕ್ಷೆಗಳ ಸಮಿತಿ ಸದಸ್ಯ ಡಾ.ವಿಶಾಲ್‌ ರಾವ್‌ ತಿಳಿಸಿದ್ದಾರೆ.

click me!