ಲಾಲ್‌ಬಾಗ್ ಫಲಪುಷ್ಪ ಪ್ರದರ್ಶನಕ್ಕೆ ವೀಕೆಂಡ್ ರಶ್; ಇಂದು ಟಿಕೆಟ್‌ ದರ ಎಷ್ಟು?

Kannadaprabha News   | Kannada Prabha
Published : Aug 18, 2025, 07:14 AM IST
6 lakh people visit Lalbagh flower show on in a week rav

ಸಾರಾಂಶ

ಲಾಲ್‌ಬಾಗ್‌ನಲ್ಲಿ 11 ದಿನಗಳ ಕಾಲ ನಡೆದ 'ವೀರ ರಾಣಿ ಕಿತ್ತೂರು ಚನ್ನಮ್ಮ ಮತ್ತು ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ' ಫಲಪುಷ್ಪ ಪ್ರದರ್ಶನಕ್ಕೆ ಸೋಮವಾರ ತೆರೆ ಬಿದ್ದಿದೆ. 5.80 ಲಕ್ಷಕ್ಕೂ ಹೆಚ್ಚು ಜನರು ಭೇಟಿ ನೀಡಿದ್ದು, 2.50 ಕೋಟಿಗೂ ಅಧಿಕ ಟಿಕೆಟ್‌ ಮಾರಾಟವಾಗಿದೆ.

ಬೆಂಗಳೂರು (ಆ.18): ಸ್ವಾತಂತ್ರ್ಯೋತ್ಸವದ ಅಂಗವಾಗಿ ಲಾಲ್‌ಬಾಗ್‌ನ ಗಾಜಿನಮನೆಯಲ್ಲಿ ಕಳೆದ 11 ದಿನಗಳಿಂದ ನಡೆಯುತ್ತಿದ್ದ ‘ವೀರ ರಾಣಿ ಕಿತ್ತೂರು ಚನ್ನಮ್ಮ ಮತ್ತು ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ವಿಷಯಾಧಾರಿತ ಫಲಪುಷ್ಪ ಪ್ರದರ್ಶನಕ್ಕೆ ಸೋಮವಾರ ತೆರೆ ಬೀಳಲಿದೆ.

ಭಾನುವಾರದ ಅಂತ್ಯಕ್ಕೆ ಬರೋಬ್ಬರಿ 5.80 ಲಕ್ಷಕ್ಕೂ ಹೆಚ್ಚು ಮಂದಿ ಫಲಪುಷ್ಪ ಪ್ರದರ್ಶನಕ್ಕೆ ಭೇಟಿ ನೀಡಿದ್ದು 11 ದಿನಗಳಲ್ಲಿ ಟಿಕೆಟ್‌ಗಳಿಂದ 2.50 ಕೋಟಿ ರು.ಗಳಿಗೂ ಅಧಿಕ ಮೊತ್ತ ಸಂಗ್ರಹವಾಗಿದೆ. ಸೋಮವಾರವೂ (ಆ.18) ಅಂತಿಮ ದಿನದ ಪುಷ್ಪ ಪ್ರದರ್ಶನ ಇರಲಿದ್ದು ವೀಕ್ಷಕರ ಸಂಖ್ಯೆ 6 ಲಕ್ಷ ದಾಟಲಿದೆ ಎಂದು ತೋಟಗಾರಿಕೆ ಇಲಾಖೆ ಅಧಿಕಾರಿಗಳು ‘ಕನ್ನಡಪ್ರಭ’ಕ್ಕೆ ಮಾಹಿತಿ ನೀಡಿದರು.

ಕಳೆದ ಮೂರು ದಿನಗಳಿಂದ ರಜೆ ಮೂಡ್‌ನಲ್ಲಿದ್ದ ಜನರು ಸಹಸ್ರಾರು ಸಂಖ್ಯೆಯಲ್ಲಿ ಲಾಲ್‌ಬಾಗ್‌ಗೆ ಆಗಮಿಸಿ ಫಲಪುಷ್ಪ ಪ್ರದರ್ಶನದ ಸೊಬಗನ್ನು ಕಣ್ತುಂಬಿಕೊಂಡರು. ಭಾನುವಾರವೂ 67 ಸಾವಿರಕ್ಕೂ ಹೆಚ್ಚು ಜನರು ಫಲಪುಷ್ಪ ಪ್ರದರ್ಶನ ವೀಕ್ಷಣೆಗೆ ಆಗಮಿಸಿದ್ದರು.ಮಧ್ಯಾಹ್ನ ಹೊತ್ತಿಗೆ ಮಳೆ ಆಗಮಿಸಿದ್ದರಿಂದ ಸ್ವಲ್ಪ ಜನರ ಉತ್ಸಾಹಕ್ಕೆ ತಣ್ಣೀರೆರಚಿತು.

ಫಲಪುಷ್ಪ ಪ್ರದರ್ಶನದ ಮುಕ್ತಾಯಕ್ಕೆ ಒಂದು ದಿನ ಬಾಕಿ ಇದ್ದುದ್ದರಿಂದ ಸಾವಿರಾರು ಸಂಖ್ಯೆಯಲ್ಲಿ ನೋಡುಗರು ಆಗಮಿಸಿದ್ದರಿಂದ ಸಂಚಾರ ದಟ್ಟಣೆ ಉಂಟಾಗಿತ್ತು. ಆರ್‌ವಿ ರಸ್ತೆ, ಸಿದ್ದಾಪುರ ರಸ್ತೆ, ಡಬ್ಬಲ್‌ರೋಡ್, ಲಾಲ್‌ಬಾಗ್ ಮುಖ್ಯ ದ್ವಾರದ ಬಳಿ ಸೇರಿದಂತೆ ಉದ್ಯಾನದ ಸುತ್ತಮುತ್ತಲಿನ ರಸ್ತೆಗಳು ವಾಹನ ದಟ್ಟಣೆಯಿಂದ ತುಂಬಿದ್ದವು. ಸಂಜೆಯ ಹೊತ್ತಿಗೆ ವಾಹನಗಳು ಮಂದಗತಿಯಲ್ಲಿ ಸಾಗುತ್ತಿದ್ದು, ಹಲವರಿಗೆ ತೀವ್ರ ತೊಂದರೆಯಾಯಿತು.

ಯುವಸಮೂಹ ಸೇರಿದಂತೆ ಆಗಮಿಸಿದ್ದ ಪುಷ್ಪ ಪ್ರಿಯರು ವೈವಿಧ್ಯಮಯ ಹೂವುಗಳ ಕಲರವವನ್ನು ಕಣ್ತುಂಬಿಕೊಂಡು ಆನಂದಿಸಿದರು. ಗಾಜಿನಮನೆ ಕೇಂದ್ರ ಭಾಗದಲ್ಲಿರುವ ಕೋಟೆ, ರಾಣಿ ಚೆನ್ನಮ್ಮನವರ ಐಕ್ಯಸ್ಮಾರಕ ಪುಷ್ಪ ಮಾದರಿಗಳ ಮುಂದೆ ಅನೇಕರು ಸೆಲ್ಪೀ ಮತ್ತು ಪೋಟೊ ಕ್ಲಿಕ್ಕಿಸಿಕೊಂಡು ಸಂಭ್ರಮಿಸಿದರು.

ಇಂದು ಟಿಕೆಟ್‌ ದರ ₹80

ಸೋಮವಾರ ವಯಸ್ಕರಿಗೆ ₹80, ಮಕ್ಕಳಿಗೆ ₹30 ಪ್ರವೇಶ ಶುಲ್ಕವಿರುತ್ತದೆ. ಸಮಯ: ಬೆಳಗ್ಗೆ 9 ರಿಂದ ಸಂಜೆ 6.30 ರವರೆಗೆ ಉದ್ಯಾನದ ನಾಲ್ಕು ಗೇಟ್‌ಗಳಲ್ಲಿ ಟಿಕೆಟ್‌ ವಿತರಣೆ ನಡೆಯಲಿದೆ ಎಂದು ತೋಟಗಾರಿಕೆ ಜಂಟಿ ನಿರ್ದೇಶಕ(ಲಾಲ್‌ಬಾಗ್‌) ಡಾ.ಎಂ.ಜಗದೀಶ್‌ ತಿಳಿಸಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಬಾರ್ ಆಗಿ ಮಾರ್ಪಟ್ಟ KSRTC ಬಸ್: ಪ್ರಯಾಣದ ಮಧ್ಯೆಯೇ ಮದ್ಯ ಸೇವನೆ!
ಬೆಳಗಾವಿ ಅಧಿವೇಶನ: ವಿರೋಧ ಪಕ್ಷಗಳು ಅವಿಶ್ವಾಸ ಮಂಡಿಸಿದರೆ ಕಾಂಗ್ರೆಸ್ ಒಗ್ಗಟ್ಟಿನ ಹೋರಾಟ