Corona Crisis: ಕರ್ನಾಟಕದಲ್ಲಿ 306 ಮಂದಿಗೆ ಕೊರೋನಾ ಸೋಂಕು: ಇಬ್ಬರ ಸಾವು

By Govindaraj SFirst Published Sep 19, 2022, 4:45 AM IST
Highlights

ರಾಜ್ಯದಲ್ಲಿ ಭಾನುವಾರ 306 ಮಂದಿಯಲ್ಲಿ ಕೊರೋನಾ ಸೋಂಕು ದೃಢಪಟ್ಟಿದೆ. ಇಬ್ಬರು ಮೃತಪಟ್ಟಿದ್ದಾರೆ. 293 ಮಂದಿ ಚೇತರಿಸಿಕೊಂಡಿದ್ದಾರೆ. ಜೂನ್‌ 6ರಂದು 230 ಮಂದಿಯಲ್ಲಿ ಸೋಂಕು ಪತ್ತೆಯಾದ ಬಳಿಕದ ಕನಿಷ್ಠ ಪ್ರಕರಣ ಇಂದು ವರದಿಯಾಗಿದೆ. 

ಬೆಂಗಳೂರು (ಸೆ.19): ರಾಜ್ಯದಲ್ಲಿ ಭಾನುವಾರ 306 ಮಂದಿಯಲ್ಲಿ ಕೊರೋನಾ ಸೋಂಕು ದೃಢಪಟ್ಟಿದೆ. ಇಬ್ಬರು ಮೃತಪಟ್ಟಿದ್ದಾರೆ. 293 ಮಂದಿ ಚೇತರಿಸಿಕೊಂಡಿದ್ದಾರೆ. ಜೂನ್‌ 6ರಂದು 230 ಮಂದಿಯಲ್ಲಿ ಸೋಂಕು ಪತ್ತೆಯಾದ ಬಳಿಕದ ಕನಿಷ್ಠ ಪ್ರಕರಣ ಇಂದು ವರದಿಯಾಗಿದೆ. 20,255 ಮಂದಿ ಕೋವಿಡ್‌ ಪರೀಕ್ಷೆಗೆ ಒಳಗಾಗಿದ್ದು ಶೇ.1.51ರಷ್ಟುಪಾಸಿಟಿವಿಟಿ ದರ ದಾಖಲಾಗಿದೆ. ಶಿವಮೊಗ್ಗ ಹಾಗೂ ತುಮಕೂರಿನಲ್ಲಿ ತಲಾ ಒಬ್ಬರು ಮರಣವನ್ನಪ್ಪಿದ್ದಾರೆ. 

ಬೆಂಗಳೂರು ನಗರದಲ್ಲಿ 145 ಮಂದಿ, ಮೈಸೂರು 28, ಶಿವಮೊಗ್ಗ 25, ರಾಮನಗರ 15, ಬೆಳಗಾವಿ, ದಕ್ಷಿಣ ಕನ್ನಡ ತಲಾ 14, ಚಿಕ್ಕಮಗಳೂರು ಜಿಲ್ಲೆಯಲ್ಲಿ 11 ಮಂದಿಯಲ್ಲಿ ಸೋಂಕು ಪತ್ತೆಯಾಗಿದೆ. ಬಾಗಲಕೋಟೆ, ಬೀದರ್‌, ದಾವಣಗೆರೆ, ಕೊಡಗು ಮತ್ತು ಯಾದಗಿರಿಯಲ್ಲಿ ಹೊಸ ಪ್ರಕರಣ ವರದಿಯಾಗಿಲ್ಲ. ರಾಜ್ಯದಲ್ಲಿ ಈವರೆಗೆ 40.61 ಲಕ್ಷ ಮಂದಿಯಲ್ಲಿ ಕೋವಿಡ್‌ ಪತ್ತೆಯಾಗಿದ್ದು, 40.17 ಲಕ್ಷ ಮಂದಿ ಚೇತರಿಸಿಕೊಂಡಿದ್ದಾರೆ. 40,234 ಮಂದಿ ಮರಣವನ್ನಪ್ಪಿದ್ದಾರೆ. 3,746 ಸಕ್ರಿಯ ಪ್ರಕರಣಗಳಿವೆ.

ಕೋವಿಡ್‌ ಲಸಿಕೆ ಉಚಿತ 3ನೇ ಡೋಸ್‌ ಪಡೆಯಲು ಇನ್ನು 12 ದಿನ ಬಾಕಿ

ಲಸಿಕೆ ಅಭಿಯಾನ: ಭಾನುವಾರ 2,127 ಮಂದಿ ಕೋವಿಡ್‌ ವಿರುದ್ಧದ ಲಸಿಕೆ ಪಡೆದುಕೊಂಡಿದ್ದಾರೆ. 1,964 ಮಂದಿ ಮುನ್ನೆಚ್ಚರಿಕೆ ಡೋಸ್‌ ಸ್ವೀಕರಿಸಿದ್ದಾರೆ. 125 ಮಂದಿ ಎರಡನೇ ಡೋಸ್‌ ಮತ್ತು 38 ಮಂದಿ ಮೊದಲ ಡೋಸ್‌ ಪಡೆದಿದ್ದಾರೆ. ಈವರೆಗೆ 11.94 ಕೋಟಿ ಡೋಸ್‌ ಲಸಿಕೆ ರಾಜ್ಯದಲ್ಲಿ ನೀಡಲಾಗಿದೆ.

ದ.ಕ.ದಲ್ಲಿ 14 ಮಂದಿಗೆ ಕೊರೋನಾ: ಜಿಲ್ಲೆಯಲ್ಲಿ ಭಾನುವಾರ 14 ಮಂದಿಗೆ ಕೊರೋನಾ ಸೋಂಕು ದೃಢಪಟ್ಟಿದೆ. 11 ಮಂದಿ ಗುಣಮುಖರಾಗಿದ್ದಾರೆ. ಜಿಲ್ಲೆಯಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 65 ಆಗಿದೆ. ಜಿಲ್ಲೆಯಲ್ಲಿ ಇದುವರೆಗೆ 1,36,948 ಮಂದಿ ಸೋಂಕಿತರಾಗಿದ್ದು, ಅವರಲ್ಲಿ 1,35,023 ಮಂದಿ ಗುಣಮುಖರಾಗಿದ್ದಾರೆ. ಇದುವರೆಗೆ ಒಟ್ಟು ಒಟ್ಟು 1860 ಮಂದಿ ಮೃತಪಟ್ಟಿದ್ದಾರೆ ಎಂದು ಜಿಲ್ಲಾ ಆರೋಗ್ಯ ಬುಲೆಟಿನ್‌ ತಿಳಿಸಿದೆ.

ಶೇ.75 ರಷ್ಟು ಮಕ್ಕಳಲ್ಲಿ ಕೊರೋನಾ ಪ್ರತಿಕಾಯ: ರಾಜ್ಯ ಆರೋಗ್ಯ ಇಲಾಖೆ ನಡೆಸಿದ 6-14 ವರ್ಷದ ಮಕ್ಕಳ ಕೊರೋನಾ ಸಿರೋ ಸಮೀಕ್ಷೆಯಲ್ಲಿ ಶೇ.75 ರಷ್ಟು ಮಕ್ಕಳಿಗೆ ಸೋಂಕು ತಗುಲಿದ್ದು ಪತ್ತೆಯಾಗಿದೆ. ವಿಶೇಷವೆಂದರೆ, ಈ ಮಕ್ಕಳಿಗೆ ಲಸಿಕೆ ಪಡೆಯದೇ ರೋಗ ಪ್ರತಿಕಾಯಗಳು ಕೂಡಾ ಉತ್ಪತ್ತಿಯಾಗಿವೆ.

ರಾಜ್ಯದ ಜನರ ರೋಗ ನಿರೋಧಕ ಶಕ್ತಿ ಮತ್ತು ಲಸಿಕೆ ಪರಿಣಾಮ ತಿಳಿದುಕೊಳ್ಳುವ ನಿಟ್ಟಿನಲ್ಲಿ ಆರೋಗ್ಯ ಇಲಾಖೆ ಸಿರೋ ಸಮೀಕ್ಷೆಯನ್ನು ನಡೆಸುತ್ತಿತ್ತು. ಆದರೆ, ಲಸಿಕೆ ಪಡೆಯದ ಮಕ್ಕಳಲ್ಲಿ ಸಿರೋ ಸಮೀಕ್ಷೆ ನಡೆಸಲು ರಾಜ್ಯ ಕೊರೋನಾ ತಾಂತ್ರಿಕ ಸಲಹಾ ಸಮಿತಿ ಶಿಫಾರಸು ಮಾಡಿತ್ತು. ಅದರಂತೆ ಆರೋಗ್ಯ ಇಲಾಖೆಯು ರಾಜ್ಯಾದ್ಯಂತ 6 ರಿಂದ 14 ವರ್ಷದೊಳಗಿನ 5358 ಮಕ್ಕಳನ್ನು ಸಮೀಕ್ಷೆಗೆ ಒಳಪಡಿಸಿತ್ತು. ಆಗ ಶೇ.75.38 ಮಕ್ಕಳಲ್ಲಿ ಕೊರೋನಾ ವಿರುದ್ಧ ಹೋರಾಡುವ ರೋಗ ಪ್ರತಿಕಾಯ ಪತ್ತೆಯಾಗಿದೆ. ಅಂದರೆ, ಇವರೆಲ್ಲರಿಗೂ ಸೋಂಕು ತಗುಲಿ ಅದರಿಂದಲೇ ರೋಗಪ್ರತಿಕಾಯಗಳು ಉತ್ಪತ್ತಿಯಾಗಿರುವುದು ಸಮೀಕ್ಷೆಯಿಂದ ತಿಳಿದುಬಂದಿದೆ.

Corona Crisis: ಕರ್ನಾಟಕದಲ್ಲಿ 476 ಜನರಿಗೆ ಕೋವಿಡ್‌ ಸೋಂಕು: ಒಂದು ಸಾವು

ಚಿಕ್ಕಮಗಳೂರು ನಂ.1: ಜಿಲ್ಲಾವಾರು ಸಮೀಕ್ಷೆ ನಡೆಸಿದ್ದು, ಅತಿ ಹೆಚ್ಚು ಚಿಕ್ಕಮಗಳೂರು ಶೇ. 100, ಬಾಗಲಕೋಟೆ ಶೇ. 91.12, ಉತ್ತರ ಕನ್ನಡ ಶೇ. 89.61, ಗದಗ ಶೇ. 88.62 ಮಕ್ಕಳಲ್ಲಿ ಪ್ರತಿಕಾಯ ಪತ್ತೆಯಾಗಿದೆ. ಸೋಂಕಿನ ತೀವ್ರತೆ ಹೆಚ್ಚಿದ್ದ ಬಿಬಿಎಂಪಿ ವ್ಯಾಪ್ತಿಯಲ್ಲಿ ಶೇ. 86.88 ಮಕ್ಕಳಲ್ಲಿ ಪ್ರತಿಕಾಯ ಇರುವುದು ಪತ್ತೆಯಾಗಿದೆ. ಅತೀ ಕಡಿಮೆ ಪ್ರತಿಕಾಯ ಹೊಂದಿರುವ ಜಿಲ್ಲೆಗಳ ಪೈಕಿ ಕೊನೆಯಿಂದ ಐದು ಸ್ಥಾನಗಳಲ್ಲಿ ಕಲಬುರಗಿ ಶೇ. 43.24, ಯಾದಗಿರಿ ಶೇ. 48.20, ಉಡುಪಿ ಶೇ. 52.31, ಹಾವೇರಿ ಶೇ. 59.47 ಹಾಗೂ ರಾಮನಗರ ಶೇ. 62.72 ಮಕ್ಕಳಲ್ಲಿ ಪ್ರತಿಕಾಯಗಳು ಕಂಡುಬಂದಿವೆ.

click me!