Chikkamagaluru: 2017ರ ದತ್ತಪೀಠ ಆವರಣದ ಗೋರಿ ಹಾನಿ ಪ್ರಕರಣ: 14 ಹಿಂದು ಕಾರ್ಯಕರ್ತರಿಗೆ ಕೋರ್ಟ್ ಸಮನ್ಸ್!

By Govindaraj SFirst Published Jan 4, 2024, 6:35 PM IST
Highlights

2017ರಲ್ಲಿ ಹಿಂದು ಸಂಘಟನೆ ಕಾರ್ಯಕರ್ತರ ಮೇಲೆ ದಾಖಲಾಗಿದ್ದ ದತ್ತಪೀಠ ಆವರಣದ ಗೋರಿ ಹಾನಿ ಪ್ರಕರಣದ ಚಾರ್ಜ್ ಶೀಟ್ ಸಲ್ಲಿಕೆಯಾಗಿದ್ದು ಎಲ್ಲಾ 14 ಜನ ಆರೋಪಿಗಳಿಗೆ ಪೊಲೀಸರು ಸಮನ್ಸ್ ನೀಡಿದ್ದಾರೆ. 

ವರದಿ: ಆಲ್ದೂರು ಕಿರಣ್, ಏಷ್ಯಾನೆಟ್ ಸುವರ್ಣ ನ್ಯೂಸ್, ಚಿಕ್ಕಮಗಳೂರು 

ಚಿಕ್ಕಮಗಳೂರು (ಜ.04): 2017ರಲ್ಲಿ ಹಿಂದು ಸಂಘಟನೆ ಕಾರ್ಯಕರ್ತರ ಮೇಲೆ ದಾಖಲಾಗಿದ್ದ ದತ್ತಪೀಠ ಆವರಣದ ಗೋರಿ ಹಾನಿ ಪ್ರಕರಣದ ಚಾರ್ಜ್ ಶೀಟ್ ಸಲ್ಲಿಕೆಯಾಗಿದ್ದು ಎಲ್ಲಾ 14 ಜನ ಆರೋಪಿಗಳಿಗೆ ಪೊಲೀಸರು ಸಮನ್ಸ್ ನೀಡಿದ್ದಾರೆ. 2017 ರ ದತ್ತಜಯಂತಿ ವೇಳೆ ದತ್ತಭಕ್ತರ ಮೇಲೆ ದಾಖಲಾಗಿದ್ದ ಗೋರಿ ಹಾನಿ ಪ್ರಕರಣದಲ್ಲಿ ಕಳೆದ ಡಿಸೆಂಬರ್ 6 ರಂದು ನ್ಯಾಯಾಲಯಕ್ಕೆ ಗ್ರಾಮಾಂತರ ಠಾಣೆ ಪೊಲೀಸರು ಚಾರ್ಜ್ ಶೀಟ್ ಸಲ್ಲಿಸಿದ್ದು , ಪ್ರಕರಣದ ಎಲ್ಲಾ 14 ಜನ ಆರೋಪಿತರಿಗೆ ಕೋರ್ಟ್ ಸಮನ್ಸ್ ನೀಡಿದೆ. 

ಕಳೆದ 6 ವರ್ಷಗಳ ಹಿಂದೆ ದಾಖಲಾಗಿದ್ದ ಕೇಸ್ ಗೆ ಇತ್ತೀಚೆಗೆ ರಾಜ್ಯ ಕಾಂಗ್ರೆಸ್ ಸರ್ಕಾರ ಚಾರ್ಜ್ ಶೀಟ್ ಸಲ್ಲಿಕೆಗೆ ಅನುಮತಿ ನೀಡಿತ್ತು. ಇದೀಗ 14 ಜನರ ಮೇಲಿನ ಕೇಸ್ ನ ಆರೋಪಿಗಳಾದ ತುಡುಕೂರು ಮಂಜು, ಶಿವರಾಜ್, ಸಂದೇಶ್, ಸುಮಂತ್, ನಾಗೇಂದ್ರ ಪೂಜಾರಿ, ಮೋಹನ್, ಅಶೋಕ್, ತೇಜು, ಶ್ರೀನಾಥ್, ಲೋಕೇಶ್, ಮಹೇಂದ್ರ, ಸಂದೀಪ್ ರಾಮುಗೆ ಪೊಲೀಸರು ಸಮನ್ಸ್ ನೀಡಿದ್ದು , ಎಲ್ಲಾ ಆರೋಪಿಗಳಿಗೂ ಇದೇ ಜನವರಿ 8 ನೇ ತಾರೀಖು ಕೋರ್ಟಿಗೆ ಹಾಜರಾಗುವಂತೆ ಸೂಚನೆ ಸಹಾ ನೀಡಲಾಗಿದೆ.

ಚರ್ಚ್ ಸ್ಟ್ರೀಟ್‌ನಲ್ಲಿ ಮತ್ತೆ ಹೊಸ ಅವತಾರದಲ್ಲಿ ತಲೆ ಎತ್ತುತ್ತಿದೆ ಬೆಂಗಳೂರಿನ ಜನಪ್ರಿಯ ರೆಸ್ಟೋರೆಂಟ್!

ಸರ್ಕಾರದ ವಿರುದ್ಧ ಸಿ.ಟಿ.ರವಿ ಅಸಮಾಧಾನ: ಹುಬ್ಬಳ್ಳಿಯಲ್ಲಿ ನೇರವಾಗಿ ಕರಸೇವಕರ ಮೇಲಿನ ಕೇಸ್ ರೀ ಓಪನ್ ಮಾಡಿರೋ ಸರ್ಕಾರ ಕಾಫಿನಾಡು ಚಿಕ್ಕಮಗಳೂರಿನಲ್ಲಿ  ಹಿಂದೂ ಕಾರ್ಯಕರ್ತರ ಮೇಲಿನ 6 ವರ್ಷದ ಹಿಂದಿನ ಕೇಸ್ ಗಳಿಗೆ ಚಾರ್ಜ್ ಶೀಟ್ ಸಲ್ಲಿಕೆ ಮಾಡಿಸಿ ಹಿಂದೂ ಕಾರ್ಯಕರ್ತರನ್ನ ಹತ್ತಿಕ್ಕಲು ಯತ್ನಿಸುತ್ತಿದೆ ಎಂದು ಮಾಜಿ ಸಚಿವ ಸಿ.ಟಿ.ರವಿ ಸರ್ಕಾರದ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ. ಚಿಕ್ಕಮಗಳೂರು ತಾಲೂಕಿನ ದತ್ತ ಪೀಠದಲ್ಲಿ ದತ್ತ ಜಯಂತಿ ವೇಳೆ ಹಿಂದೂ ಸಂಘಟನೆ ಕಾರ್ಯಕರ್ತರು ನಿಷೇಧಿತ ಪ್ರದೇಶದಲ್ಲಿ ಭಗವಧ್ವಜ ನೆಟ್ಟಿದ್ದರು. ಈ ಕುರಿತು 14 ಜನರ ವಿರುದ್ಧ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣ ಸಂಬಂಧ ಕಳೆದ ಏಳು ವರ್ಷಗಳ ಬಳಿಕ ಪೊಲೀಸರು ಚಾರ್ಜ್ ಶೀಟ್ ಸಲ್ಲಿಕೆ ಮಾಡಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. 

ನ್ಯಾಯಾಲಯಕ್ಕೆ ಚಾರ್ಜ್ ಶೀಟ್ ಸಲ್ಲಿಕೆ ಮಾಡಲು 90 ದಿನಗಳ ಕಾಲಾವಕಾಶ ಇರಲಿದೆ. ಆದರೆ, 2107 ರಲ್ಲಿ ನಡೆದ ಪ್ರಕರಣಕ್ಕೆ 2023ರಲ್ಲಿ ಚಾರ್ಜ್ ಶೀಟ್ ಸಲ್ಲಿಕೆ ಏಕೆಂದು ಹಿಂದೂ ಸಂಘಟನೆ ಕಾರ್ಯಕರ್ತರು ಸರ್ಕಾರದ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ. 2019ರಲ್ಲಿ ಬಿಜೆಪಿ ಸರ್ಕಾರ ಚಾರ್ಜ್ ಶೀಟ್ ಸಲ್ಲಿಕೆ ಮಾಡಲು ಅನುಮತಿ ನೀಡಿರಲಿಲ್ಲ. 2023ರಲ್ಲಿ ಕಾಂಗ್ರೆಸ್ ಸರ್ಕಾರ ಚಾರ್ಜ್ ಶೀಟ್ ಸಲ್ಲಿಕೆ ಮಾಡಲು ಅನುಮತಿ ನೀಡಿದ್ದು ಪೊಲೀಸರು ಏಳು ವರ್ಷಗಳ ಬಳಿಕ ಚಾರ್ಜ್ ಶೀಟ್ ಸಲ್ಲಿಕೆ ಮಾಡಿದ್ದಾರೆ. ಸರ್ಕಾರದ ಈ ನಡೆ ಬಗ್ಗೆ ಅಸಮಾಧಾನ ಹೊರಹಾಕಿರೋ ಬಿಜೆಪಿ ಹಿಂದೂ ಕಾರ್ಯಕರ್ತರರನ್ನ ಹತ್ತಿಕ್ಕಲು ಸರ್ಕಾರ ಈಗ ಚಾರ್ಜ್ ಶೀಟ್ ಮಾಡಿಸಿದೆ ಅಂತ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.

ನಗರ ನಕ್ಸಲರ ಒಂದು ಗ್ಯಾಂಗ್ ಪರೋಕ್ಷವಾಗಿ ಸರ್ಕಾರಕ್ಕೆ ಸಲಹೆ: ದತ್ತಪೀಠಕ್ಕೆ ಸಂಬಂಧಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ 6 ವರ್ಷದ ನಂತರ ಬಜರಂಗದಳದ ಕಾರ್ಯಕರ್ತರ ವಿರುದ್ಧ ಚಾರ್ಜ್ ಶೀಟ್ ಸಲ್ಲಿಸಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ಇವರಿಗೆ ರಾಜ್ಯದ ಜನ ನೆಮ್ಮದಿಯಲ್ಲಿರಬಾರದು ಎನ್ನುವ ಬಯಕೆ ಇದ್ದಂತಿದೆ ಎಂದು ಸಿ.ಟಿ ರವಿ ಕಿಡಿಕಾರಿದ್ದಾರೆ..ಈ ಹಿಂದೆ ಎಸ್ಡಿಪಿಐ, ಪಿಎಫ್ಐ ಕಾರ್ಯಕರ್ತರ ಮೇಲಿನ ಮೊಕದ್ದಮೆ ಹಿಂದಕ್ಕೆ ಪಡೆದಿದ್ದರು. ಇದೀಗ ಬಜರಂಗದಳ, ಹಿಂದೂ ಜಾಗರಣ ವೇದಿಕೆ ಸೇರಿದಂತೆ ಹಿಂದೂ ಸಂಘಟನೆಗಳನ್ನು ತುಳಿಯುವ ಪ್ರಯತ್ನ ಮಾಡುತ್ತಿದ್ದಾರೆ. 

ಹಿಂದೂ ವಿರೋಧಿ ಕಾಂಗ್ರೆಸ್ ಜಾತಿ ಜಾತಿಗಳನ್ನು ಒಡೆಯುವ ಸಲುವಾಗಿ ಲಿಂಗಾಯತರು, ಹಿಂದುಳಿದ ವರ್ಗ, ಎಸ್ಸಿ,ಎಸ್ಟಿ ಹೀಗೆ ಎಲ್ಲಾ ಸಮಾಕ್ಕೂ ಪ್ರತ್ಯೇಕ ನೇತೃತ್ವ ವಹಿಸಿಕೊಡುವ ಹುನ್ನಾರ ನಡೆಸಿದೆ ಎಂದು ದೂರಿದರು. ದಿನೇಶ್ ಅಮೀನ್ ಮಟ್ಟು ತರದ ಹಲವು ಜನರ ನಗರ ನಕ್ಸಲರ ಒಂದು ಗ್ಯಾಂಗ್ ಪರೋಕ್ಷವಾಗಿ ಸರ್ಕಾರಕ್ಕೆ ಸಲಹೆ ಕೊಡುವುದು, ಯಾರ್ಯಾರನ್ನ ಹೇಗೆ ತುಳಿಯುವುದು ಎನ್ನುವ ಯೋಜನೆ ರೂಪಿಸುವುದು, ಸರ್ಕಾರದ ಯಂತ್ರಗಳನ್ನು ಬಳಸಿಕೊಂಡು ಸಂಘಟನೆಗಳನ್ನು ತುಳಿಯುವುದು, ಸಕ್ರೀಯವಾಗದಂತೆ ನೋಡಿಕೊಳ್ಳುವುದು ಇದೆಲ್ಲವೂ ಷಡ್ಯಂತ್ರದ ಭಾಗ ಇದರ ಭಾಗವಾಗಿ ಈ ಕೇಸ್ ಓಪನ್ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ಸಿರಿಧಾನ್ಯ ಉತ್ಪಾದನೆಯಲ್ಲಿ ರಾಜ್ಯವನ್ನು ನಂ.1 ಮಾಡುವ ಸಂಕಲ್ಪ: ಸಚಿವ ಚಲುವರಾಯಸ್ವಾಮಿ

ಕೇಸುಗಳಿಗೆ ಹೆದರುವುದಿಲ್ಲ: ಬಂದೂಕಿನ ಗುಂಡಿಗೇ ಹೆದರದವರು ನಾವು, ಸಾವಿಗೆ ಅಂಜದವರು, ಈ ಕೇಸುಗಳಿಗೆ ಹೆದರುವವರಲ್ಲ. ಅದನ್ನು ಎದುರಿಸುತ್ತೇವೆ. ಹೋರಾಟವನ್ನೂ ಮಾಡುತ್ತೇವೆ. ಸರ್ಕಾರದ ಬಣ್ಣವನ್ನೂ ಬಯಲು ಮಾಡುತ್ತೇವೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ದತ್ತಪೀಠಕ್ಕೆ ಸಂಬಂಧಿಸಿದಂತೆ 2017 ರಲ್ಲಿ ಹಾಕಿದ ಮೊಕದ್ದಮೆ ಹಿಂದಕ್ಕೆ ಪಡೆದ ನಂತರವೂ ರೀ ಓಪನ್ ಮಾಡುತ್ತಿರುವುದು ದುರುದ್ದೇಶದ್ದು ಎನ್ನಿಸುತ್ತಿದೆ. ದತ್ತಪೀಠದ ವಿವಾದದವನ್ನು ಒಂದು ಹಂತದ ವರೆಗೆ ಬಗೆಹರಿಸಿದ್ದೇವೆ. ಈ ವರ್ಷದ ದತ್ತ ಜಯಂತಿ ಅತ್ಯಂತ ಶಾಂತಿಯುತವಾಗಿ ನಡೆದಿದೆ. ಇದರ ನಡುವೆ ದತ್ತಪೀಠದ ಕೇಸುಗಳನ್ನು ರೀ ಓಪನ್ ಮಾಡುತ್ತಾರೆ ಎಂದರೆ ಇವರಿಗೆ ಚಿಕ್ಕಮಗಳೂರು ಸೇರಿದಂತೆ ರಾಜ್ಯಾದ್ಯಂತ ಶಾಂತಿಯುತ ವಾತಾವರಣ ಉಳಿಯುವುದು ಬೇಕಿಲ್ಲ ಎನಿಸುತ್ತದೆ ಎಂದರು.

click me!