
ಬೆಂಗಳೂರು (ಫೆ.27): ಇತ್ತೀಚೆಗೆ ಹೊರತಂದಿರುವ ಕರ್ನಾಟಕ ಪ್ರವಾಸೋದ್ಯಮ ನೀತಿಯಿಂದ (2024-2029) ಮುಂದಿನ 5 ವರ್ಷಗಳಲ್ಲಿ ರಾಜ್ಯದ ಪ್ರವಾಸೋದ್ಯಮ ಕ್ಷೇತ್ರದಲ್ಲಿ 8,000 ಕೋಟಿ ರು. ನೇರ ಹೂಡಿಕೆ ಮತ್ತು ಒಂದೂವರೆ ಲಕ್ಷ ಉದ್ಯೋಗಗಳು ಸೃಷ್ಟಿಯಾಗುತ್ತವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ. ಪ್ರವಾಸೋದ್ಯಮ ಇಲಾಖೆ ನಗರದ ಬಿಐಇಸಿಯಲ್ಲಿ ಆಯೋಜಿಸಿರುವ 3 ದಿನಗಳ (ಫೆ.26-28) ‘ಕರ್ನಾಟಕ ಇಂಟರ್ನ್ಯಾಷನಲ್ ಟ್ರಾವೆಲ್ ಎಕ್ಸ್ಪೋ-2025’ (ಕೈಟ್) ಅನ್ನು ಉದ್ಘಾಟಿಸಿ ಮಾತನಾಡಿದರು.
ಕಳೆದ 2 ವರ್ಷಗಳಲ್ಲಿ ರಾಜ್ಯದ ಪ್ರವಾಸೋದ್ಯಮ ವಲಯದ ಮೂಲಸೌಕರ್ಯಗಳು, ಉತ್ಪನ್ನಗಳು ಹಾಗೂ ಮಾನವ ಸಂಪನ್ಮೂಲ ಅಭಿವೃದ್ಧಿಗಾಗಿ 440 ಕೋಟಿ ರು. ಹಂಚಿಕೆ ಮಾಡಲಾಗಿದೆ. ಪ್ರವಾಸೋದ್ಯಮ ನೀತಿ ಕಾರ್ಯರೂಪಕ್ಕೆ ತರಲು 1,350 ಕೋಟಿ ರು. ಬಜೆಟ್ ಒದಗಿಸಲಾಗಿದೆ ಎಂದು ಹೇಳಿದರು. ಡಿಜಿಟಲ್ ವೇದಿಕೆಗಳನ್ನು ಬಳಸಿಕೊಂಡು ರಾಜ್ಯದ ಪ್ರವಾಸಿ ತಾಣಗಳನ್ನು ಉದ್ಯಮ ಸ್ನೇಹಿ ಮತ್ತು ಗ್ರಾಹಕರಿಗೆ ಹತ್ತಿರವಾಗಿಸುತ್ತಿದ್ದೇವೆ. ಪ್ರವಾಸೋದ್ಯಮದ ಬೆಳವಣಿಗೆ, ಅನ್ವೇಷಣೆ ಮತ್ತು ಜವಾಬ್ದಾರಿಯುತ ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡಲಾಗುತ್ತಿದೆ.
ನಾನು ಬಿಜೆಪಿಗೆ ಹತ್ತಿರ ಎಂಬುದು ಸುಳ್ಳು, ನಾನು ಎಲ್ಲ ಧರ್ಮ ಪ್ರೀತಿಸುತ್ತೇನೆ: ಡಿಕೆಶಿ
ಪ್ರವಾಸಿ ತಾಣಗಳ ಮೂಲಸೌಕರ್ಯ ಅಭಿವೃದ್ಧಿ, ವಾಸ್ತವ್ಯ ಮತ್ತು ಉತ್ಪನ್ನಗಳಲ್ಲಿ ಹೂಡಿಕೆ ಮಾಡಲು ಖಾಸಗಿ-ಸಾರ್ವಜನಿಕ ಸಹಭಾಗಿತ್ವದ ಮೂಲಕ ಉದ್ಯಮ ಆರಂಭಿಸುವ ಪ್ರಕ್ರಿಯೆ ಸರಳೀಕರಿಸಲು ಸರ್ಕಾರ ಬದ್ಧವಾಗಿದೆ ಎಂದು ಮುಖ್ಯಮಂತ್ರಿಯವರು ಭರವಸೆ ನೀಡಿದರು. ನಾಲ್ಕು ಯುನೆಸ್ಕೋ ತಾಣಗಳು, 35 ರಾಷ್ಟ್ರೀಯ ರಾಷ್ಟ್ರೀಯ ಉದ್ಯಾನ ಮತ್ತು ವನ್ಯಜೀವಿ ತಾಣಗಳು ಸೇರಿ ಕರ್ನಾಟಕವು ಅಪೂರ್ವವಾದ ಭೌಗೋಳಿಕ ಪ್ರದೇಶಗಳು, ಪ್ರೇಕ್ಷಣೀಯ, ಐತಿಹಾಸಿಕ ಸ್ಥಳಗಳು, ವೈವಿಧ್ಯಮಯ ಸಂಸ್ಕೃತಿ ಮತ್ತು ವಿಫುಲ ಅವಕಾಶಗಳ ಭೂಮಿಯಾಗಿದೆ. ಈ ಪ್ರತಿಷ್ಠಿತ ಕಾರ್ಯಕ್ರಮದ ಮೂಲಕ ಕರ್ನಾಟಕವನ್ನು ಜಗತ್ತಿನ ನೆಚ್ಚಿನ ಮತ್ತು ಆಕರ್ಷಕ ಪ್ರವಾಸಿ ತಾಣವಾಗಿ ರೂಪಿಸಲಾಗುತ್ತದೆ ಎಂದು ಸಿದ್ದರಾಮಯ್ಯ ಘೋಷಿಸಿದರು.
ಹೂಡಿಕೆಗೆ ಹೆಚ್ಚು ಅವಕಾಶ-ಎಚ್ಕೆಪಿ: ಪ್ರವಾಸೋದ್ಯಮ ಸಚಿವ ಎಚ್.ಕೆ.ಪಾಟೀಲ್ ಮಾತನಾಡಿ, ದೇಶ-ವಿದೇಶಗಳ ಪ್ರವಾಸೋದ್ಯಮಿಗಳು, ಆಸಕ್ತರು ಒಂದೆಡೆ ಸೇರಿ ಕರ್ನಾಟಕದಲ್ಲಿನ ಅವಕಾಶ ಬಳಸಿಕೊಳ್ಳಲು ಕೈಟ್ ಒಂದು ಅದ್ಭುತವಾದ ವೇದಿಕೆ ಕಲ್ಪಿಸಿದೆ. ಪ್ರವಾಸಿ ಸ್ಥಳಗಳಲ್ಲಿ ಮೂಲಸೌಕರ್ಯ ಅಭಿವೃದ್ಧಿ, ಜಾಗತಿಕ ಮಟ್ಟದ ಸೌಲಭ್ಯಗಳನ್ನು ಒದಗಿಸಲು ರಾಜ್ಯ ಸರ್ಕಾರ ಶ್ರಮಿಸುತ್ತಿದೆ. ಉದ್ಯಮಿಗಳಿಗೆ ಪೂರಕವಾದ ನೀತಿ ಜಾರಿಗೆ ತಂದಿದ್ದೇವೆ. ಇದನ್ನು ಸದುಪಯೋಗಪಡಿಸಿಕೊಂಡು ಜನರಿಗೆ ಉತ್ತಮ ಪ್ರವಾಸದ ಅನುಭವ ಒದಗಿಸಬೇಕು. ರಾಜ್ಯದಲ್ಲಿ ಜೀವನೋಪಾಯ, ಆರ್ಥಿಕತೆ ಬೆಳವಣಿಗೆ, ಉದ್ಯೋಗವಕಾಶಗಳ ಸೃಷ್ಟಿಗೆ ಕೊಡುಗೆ ನೀಡಬೇಕು ಎಂದರು.
ಮುಂದಿನ ಎಲೆಕ್ಷನ್ ನಾಯಕತ್ವ ನಾನು ಹೊರುವೆ, ಯಾವುದೇ ಹುದ್ದೆಯಲ್ಲಿದ್ದರೂ ಪಕ್ಷ ಮುನ್ನಡೆಸುವೆ: ಡಿಕೆಶಿ
ಸಾಹಸಿ ಪ್ರವಾಸೋದ್ಯಮ, ಐತಿಹಾಸಿಕ ತಾಣ ಪ್ರವಾಸೋದ್ಯಮ, ನಮ್ಮ ಸ್ಮಾರಕ, ನಮ್ಮ ಹೆಮ್ಮೆ ಯೋಜನೆ ಸೇರಿದಂತೆ ಅನೇಕ ಹೊಸತನಗಳನ್ನು ಪರಿಚಯಿಸುತ್ತಿದೆ. ವಾಸ್ತವ್ಯ, ಆಹಾರ, ಮನೋರಂಜನಾ ಕ್ರೀಡೆಗಳು, ಕ್ಷೇಮ ಸೇವಾಧಾಮಗಳು, ಸಾರಿಗೆ ಸೇರಿ ಅನೇಕ ವಲಯಗಳಲ್ಲಿ ದೊಡ್ಡ ಮತ್ತು ಸಣ್ಣ ಗಾತ್ರದ ಹೂಡಿಕೆ ವಿಫುಲ ಅವಕಾಶಗಳು ಇವೆ. ಎಲ್ಲರಿಗೂ ಅವಕಾಶಗಳನ್ನು ಕಲ್ಪಿಸಲು ಸ್ಪರ್ಧಾತ್ಮಕ ವಾತಾವರಣ ನಿರ್ಮಿಸುತ್ತಿದ್ದೇವೆ ಎಂದು ಸಚಿವ ಪಾಟೀಲ್ ಹೇಳಿದರು. ಕಾರ್ಯಕ್ರಮದಲ್ಲಿ ಸಚಿವರಾದ ಕೆ.ಎಚ್. ಮುನಿಯಪ್ಪ, ಡಾ.ಎಂ.ಸಿ. ಸುಧಾಕರ್, ಭೋಸರಾಜು, ಶಾಸಕರಾದ ರಿಜ್ವಾನ್ ಅರ್ಷದ್ ಉಪಸ್ಥಿತರಿದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ