ಸ್ವತಂತ್ರ ಸಂಸ್ಥೆಯಿಂದ ಆದಷ್ಟು ಬೇಗ ಪಿಎಸ್‌ಐ ಪರೀಕ್ಷೆ: ಸಚಿವ ಪರಮೇಶ್ವರ್‌

By Kannadaprabha NewsFirst Published Nov 12, 2023, 10:41 AM IST
Highlights

ಪಿಎಸ್ಐ ನೇಮಕಾತಿ ಅಕ್ರಮದ ಹಿನ್ನೆಲೆಯಲ್ಲಿ ಕೋರ್ಟ್ ಹೊರಡಿಸಿರುವ ಸಂಪೂರ್ಣ ಆದೇಶವನ್ನು ನಾನು ನೋಡಿಲ್ಲ. ಈ ಬಗ್ಗೆ ಅಡ್ವೊಕೇಟ್ ಜನರಲ್ ಜೊತೆ ಮಾತನಾಡಿದ್ದೇನೆ. ಸ್ವತಂತ್ರ ಸಂಸ್ಥೆಯಿಂದ ಆದಷ್ಟು ಬೇಗ ಪರೀಕ್ಷೆ ಮಾಡಲು ಕ್ರಮ ಕೈಗೊಳ್ಳಲಾಗುವುದು: ಗೃಹ ಸಚಿವ ಡಾ.ಜಿ. ಪರಮೇಶ್ವರ್‌ 

ಬೆಂಗಳೂರು(ನ.11):  ಪಿಎಸ್‌ಐ ನೇಮಕಾತಿ ಪರೀಕ್ಷೆ ಬಗೆಗಿನ ಹೈಕೋರ್ಟ್ ಆದೇಶ ಪ್ರತಿ ನನ್ನ ಕೈ ಸೇರಿಲ್ಲ. ಸ್ವತಂತ್ರ ಸಂಸ್ಥೆ ಮೂಲಕ ಮರು ಪರೀಕ್ಷೆ ನಡೆಸಲು ಸೂಚಿಸಿರುವುದಾಗಿ ತಿಳಿದುಬಂದಿದೆ. ಪರೀಕ್ಷೆ ಸಿದ್ಧತೆಗಾಗಿ ಓದಲು ಸಮಯಾವಕಾಶ ಕೊಡುವಂತೆ ಅಭ್ಯರ್ಥಿಗಳು ಕೇಳುತ್ತಿದ್ದಾರೆ. ಇವೆಲ್ಲವನ್ನೂ ಪರಿಗಣಿಸಿ ಮರು ಪರೀಕ್ಷೆ ನಡೆಸುತ್ತೇವೆ ಎಂದು ಗೃಹ ಸಚಿವ ಡಾ.ಜಿ. ಪರಮೇಶ್ವರ್‌ ಹೇಳಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಿಎಸ್ಐ ನೇಮಕಾತಿ ಅಕ್ರಮದ ಹಿನ್ನೆಲೆಯಲ್ಲಿ ಕೋರ್ಟ್ ಹೊರಡಿಸಿರುವ ಸಂಪೂರ್ಣ ಆದೇಶವನ್ನು ನಾನು ನೋಡಿಲ್ಲ. ಈ ಬಗ್ಗೆ ಅಡ್ವೊಕೇಟ್ ಜನರಲ್ ಜೊತೆ ಮಾತನಾಡಿದ್ದೇನೆ. ಸ್ವತಂತ್ರ ಸಂಸ್ಥೆಯಿಂದ ಆದಷ್ಟು ಬೇಗ ಪರೀಕ್ಷೆ ಮಾಡಲು ಕ್ರಮ ಕೈಗೊಳ್ಳಲಾಗುವುದು ಎಂದರು.

"ಕನ್ನಡಪ್ರಭ" ಬಯಲಿಗೆಳೆದ ಪಿಎಸ್ಐ ಪರೀಕ್ಷೆ ಅಕ್ರಮ ಹಗರಣ ತಾರ್ಕಿಕ ಅಂತ್ಯ..!

ಇನ್ನು ನಮಗೆ ಓದಲು ಸಮಯ ಕೊಡಿ ಎಂದು ಅಭ್ಯರ್ಥಿಗಳು ಕೇಳುತ್ತಿದ್ದಾರೆ. ಅದನ್ನೂ ಪರಿಗಣಿಸುತ್ತೇವೆ. ನೇಮಕಾತಿ ಬಳಿಕ ಅವರಿಗೆ ತರಬೇತಿ ನೀಡಬೇಕಾಗುತ್ತದೆ. ಇವೆಲ್ಲವನ್ನೂ ಗಮನದಲ್ಲಿಟ್ಟುಕೊಂಡು ಯಾವ ರೀತಿ ಮಾಡಬೇಕೆಂದು ತೀರ್ಮಾನಿಸುತ್ತೇವೆ ಎಂದು ಮಾಹಿತಿ ನೀಡಿದರು.

ಪಿಎಸ್‌ಐ ಹಗರಣ ಮಾದರಿಯಲ್ಲೇ ಸಶಸ್ತ್ರ ಮೀಸಲು ಪೊಲೀಸ್ ನೇಮಕಾತಿಯಲ್ಲಿ ಅಕ್ರಮ: 400 ಹುದ್ದೆ ಗೋಲ್‌ಮಾಲ್

ತರಬೇತಿ ಮುಗಿಸಿಕೊಂಡು ನೂತನ ಪಿಎಸ್‌ಐಗಳು ಸೇವೆಗೆ ಲಭ್ಯವಾಗುವುದು ತಡವಾಗುತ್ತದೆ. ಹೀಗಾಗಿ 500-600 ಮಂದಿಗೆ ಬಡ್ತಿ ನೀಡಿ ಪಿಎಸ್ಐ ಸ್ಥಾನಕ್ಕೆ ನೇಮಿಸಿದ್ದೇವೆ. ಜತೆಗೆ ಈಗ ಪರೀಕ್ಷೆ ನಡೆಸಬೇಕಾದ 545 ಹುದ್ದೆ ಜತೆಗೆ ಇನ್ನೂ 400 ಹುದ್ದೆ ಖಾಲಿಯಿದ್ದು, ಆ ಹುದ್ದೆಗಳಿಗೆ ಒಟ್ಟಿಗೆ ಪರೀಕ್ಷೆ ನಡೆಸಬೇಕಾ? ಅಥವಾ ಪ್ರತ್ಯೇಕವಾಗಿ ಮಾಡಬೇಕಾ ಎಂಬ ಬಗ್ಗೆ ಚರ್ಚಿಸಿ ನಿರ್ಧರಿಸಲಾಗುವುದು ಎಂದರು.

ಕೆಇಎ ಪರೀಕ್ಷೆ ಅಕ್ರಮ ತನಿಖೆ ಸಿಐಡಿಗೆ ನೀಡುತ್ತೇವೆ:

ಕೆಇಎ ಪರೀಕ್ಷೆ ಅಕ್ರಮ ಕಿಂಗ್ ಪಿನ್ ಆರ್.ಡಿ. ಪಾಟೀಲ್ ಬಂಧನ ವಿಚಾರವಾಗಿ ಪ್ರತಿಕ್ರಿಯಿಸಿ, ‘ಆರೋಪಿ ಬಂಧನಕ್ಕಾಗಿ ಮೂರು ಟೀಮ್ ಒಟ್ಟಿಗೆ ಕೆಲಸ ಮಾಡಿವೆ. ಇನ್ನೂ 5ರಿಂದ 6 ಕೇಸುಗಳು ಅವರ‌ ಮೇಲಿದೆ. ಕೆಇಎ ಪರೀಕ್ಷೆಗಳ ಕೇಸ್ ಅನ್ನು ಸಿಐಡಿಗೆ ಕೊಡುತ್ತೇವೆ’ ಎಂದು ಹೇಳಿದರು.

click me!