ಸಿಎಂ ಬೊಮ್ಮಾಯಿ ಮಹತ್ವದ ಘೋಷಣೆ: ರಾಜ್ಯ ಸರ್ಕಾರಿ ನೌಕರರಿಗೆ ಗುಡ್‌ ನ್ಯೂಸ್

By Suvarna NewsFirst Published Sep 6, 2022, 7:39 PM IST
Highlights

ರಾಜ್ಯ ಸರ್ಕಾರಿ ನೌಕರ ಬಹುದಿನಳ ಬೇಡಿಕೆ ಈಗ ಈಡೇರುವ ಸಮಯ ಬಂದಂತಿದೆ.ಬಹುನಿರೀಕ್ಷಿತ ಏಳನೇ ವೇತನ ಆಯೋಗದ ಬಗ್ಗೆ ಸಿಎಂ ಬೊಮ್ಮಾಯಿ ಮಹತ್ವದ ಘೋಷಣೆ ಮಾಡಿದ್ದಾರೆ.

ಬೆಂಗಳೂರು, (ಸೆಪ್ಟೆಂಬರ್.06): ಕರ್ನಾಟಕ ರಾಜ್ಯ ಸರ್ಕಾರಿ ನೌಕರರಿಗೆ ಕೊಟ್ಟ ಮಾತಿನಂತೆ ನಡೆದುಕೊಳ್ಳುವೆ. ಅಕ್ಟೋಬರ್‌ನಲ್ಲಿ ಏಳನೇ ವೇತನ ಆಯೋಗವನ್ನು ರಚಿಸುವೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ‌ ಘೋಷಿಸಿದರು.

ಇಂದು(ಮಂಗಳವಾರ) ವಿಧಾನಸೌಧ ಬ್ಯಾಂಕ್ವೆಟ್ ಹಾಲ್‌ನಲ್ಲಿ ಆಯೋಜಿಸಿದ್ದ ರಾಜ್ಯ ಸರ್ಕಾರಿ ನೌಕರರ ದಿನ ಉದ್ಘಾಟಿಸಿದ ಬಳಿಕ ಸರ್ವೋತ್ತಮ ಸೇವಾ‌ ಪ್ರಶಸ್ತಿ ಪ್ರದಾನ ಮಾಡಿದ ಸಿಎಂ, ವೇತನ ಪರಿಷ್ಕರಣೆಗೆ ಸಂಬಂಧಿಸಿದ ಶಿಫಾರಸ್ಸು ಹಾಗೂ ವರದಿ ಸಲ್ಲಿಸಲು ಈ ಆಯೋಗ ರಚಿಸಲಿದ್ದು, ನೌಕರರ ಇನ್ನುಳಿದ ಬೇಡಿಕೆಗಳನ್ನು ಈಡೇರಿಸಲು ಪ್ರಯತ್ನಿಸಲಾಗುವುದು ಭರವಸೆ ನೀಡಿದರು.

ಆರ್ಥಿಕತೆ ಬಲದ ಆಧಾರದ ಮೇಲೆ ಅಭಿವೃದ್ಧಿ, ‌ಜನರ‌ ಆಶೋತ್ತರಗಳಿಗೆ ಸ್ಪಂದನೆ ಜತೆಗೆ ನೌಕರರ ಬೇಡಿಕೆಗಳನ್ನು ಈಡೇರಿಸಲು ಸರ್ಕಾರ ಶಕ್ತವಾಗಲಿ ಎಂದು ಸಿಎಂ ಬೊಮ್ಮಾಯಿ‌ ತಿಳಿಸಿದರು.

 ಪ್ರಧಾನಿ ನರೇಂದ್ರ ಮೋದಿ ಅವರು 2025ರ ವೇಳೆಗೆ ಭಾರತ ಐದು ಟ್ರಿಲಿಯನ್ ಆರ್ಥಿಕತೆ ಸಾಧಿಸುವ ಗುರಿ ಇಟ್ಟುಕೊಂಡಿದೆ,‌ ಇದರಲ್ಲಿ ಒಂದು ಟ್ರಿಲಿಯನ್ ಕರ್ನಾಟಕದ ಪಾಲು ಇರಬೇಕು ಎನ್ನುವ ರಾಜ್ಯ ಸರ್ಕಾರದ ಸಂಕಲ್ಪಕ್ಕೆ ಸರ್ಕಾರಿ ನೌಕರರ ಸಹಭಾಗಿತ್ವ ಕೂಡ ಮುಖ್ಯ ಎಂದು ಹೇಳಿದರು.

ಪುಣ್ಯಕೋಟಿಗೆ ಕೈಜೋಡಿಸಿ: ಗೋವು ಸಂಪತ್ತು ಉಳಿಸಿ ಬೆಳೆಸುವ ಉದ್ದೇಶದಿಂದ ಹಸುಗಳನ್ನು ದತ್ತು ಸ್ವೀಕರಿಸುವ ಪುಣ್ಯಕೋಟಿ ಯೋಜನೆಗೆ‌ ಕೈಜೋಡಿಸಬೇಕು. ಇದು ಒತ್ತಾಯವಲ್ಲ. ನನ್ನ ಮನವಿ. ಒಂದು ಹಸು ದತ್ತು ಪಡೆಯಲು ವಾರ್ಷಿಕ 11,000 ರೂ. ಶುಲ್ಕ ನಿಗದಿಪಡಿಸಿದ್ದು, ನಾನು 100 ಗೋವುಗಳನ್ನು ದತ್ತು ಸ್ವೀಕರಿಸಲು ನಿರ್ಧರಿಸಿರುವೆ. ಅದೇ ರೀತಿ ಸಚಿವರು, ಸಂಸದರು, ಶಾಸಕರು ಸೇರಿ‌ ಜ‌ನಪ್ರತಿನಿಧಿಗಳು ಈ ಯೋಜನೆಗೆ ಸಹಕರಿಸಬೇಕು. ಸರ್ಕಾರಿ ನೌಕರರು ಗೋವು ದತ್ತು ಪಡೆಯುವುದು ಪುಣ್ಯದ ಕೆಲಸವೆಂದು ಭಾವಿಸಬೇಕು ಎಂದರು.

click me!